Advertisement

ಮಳೆ ನೀರಿನ ಸೇವನೆಯ ಮಹತ್ವ

06:00 AM Jul 20, 2018 | |

ಮಳೆ ನೀರು ಹಿಂದಿನಿಂದ ಇಂದಿನವರೆಗೆ ನೀರಿನ ಶುದ್ಧ ಮೂಲವಾಗಿ ಪರಿಗಣಿಸಲ್ಪಟ್ಟಿದೆ. ಆಸ್ಟ್ರೇಲಿಯಾದಲ್ಲಿ ನಡೆಸಲಾದ ಸಂಶೋಧನೆಯ ಪ್ರಕಾರ ಮಳೆಯ ನೀರು ಭುವಿಗೆ ಬೀಳುವ ಮೊದಲೇ ಶೇಖರಿಸಿ (ಶುದ್ಧ ಪಾತ್ರೆಯಲ್ಲಿ) ತದನಂತರ ಮತ್ತೆ ಫಿಲ್ಟರ್‌ ಮಾಡುವ ಅಥವಾ ಬಿಸಿ ಮಾಡುವ ವಿಧಾನಗಳಿಂದ ಬಳಸಿದರೆ ಆರೋಗ್ಯಕ್ಕೆ ಉತ್ತಮ. ಮಳೆ ನೀರಿನ ಮಹತ್ವವೆಂದರೆ, ಇದರಲ್ಲಿ ನೆಲದ ಮೇಲೆ ಬಿದ್ದ ಬಳಿಕ ಹರಿದ ನೀರಿನಲ್ಲಿ ಇರುವ ಖನಿಜಗಳು, ಲವಣಾಂಶಗಳು ಹಾಗೂ ದೂಷಿತ ಅಂಶಗಳು ಇರುವುದಿಲ್ಲ. ಮಳೆಯ ನೀರನ್ನು ಸಂಗ್ರಹಿಸಿದ ಬಳಿಕ ಒಂದು ತಿಂಗಳವರೆಗೆ ಉಪಯೋಗಿಸಬಹುದು.

Advertisement

ಮಳೆನೀರು ಆರೋಗ್ಯವರ್ಧಕ. ಮಳೆನೀರಿನ ರೆಸಿಪಿಗಳ ಕುರಿತು ಪ್ರಾಚೀನ ಆಯುರ್ವೇದೀಯ ಹಾಗೂ ಆಧುನಿಕ ವಿಜ್ಞಾನದ ಕುರಿತಾದ ವಿವರಗಳನ್ನು ಈ ಕೆಳಗೆ ನೀಡಲಾಗಿದೆ.
.ಮಳೆಯ ನೀರಿನಲ್ಲಿ ಭಟ್ಟಿ ಇಳಿಸಿದ ನೀರಿನಂತೆ (distilled water) ಪರಿಶುದ್ಧತೆ ಇದ್ದು , ಇದರ ಪಿಎಚ್‌ ಕ್ಷಾರೀಯವಾಗಿರುತ್ತದೆ. ಕ್ಷಾರೀಯ ಗುಣದಿಂದಾಗಿ ಜೀರ್ಣಾಂಗ ವ್ಯೂಹದ ಆರೋಗ್ಯಕ್ಕೆ ಹಾಗೂ ದೇಹವನ್ನು ಶುದ್ಧೀಕರಿಸಲು ಉಪಯುಕ್ತ.

.ಫ್ಲೋರೈಡ್‌ ಹಾಗೂ ಕ್ಲೋರಿನ್‌ ಅಂಶವಿಲ್ಲದಿರುವುದರಿಂದ ನಲ್ಲಿ  ನೀರು ಅಥವಾ ಇತರ ಮೂಲದಿಂದ ಬಳಸುವ ಶುದ್ಧೀಕರಿಸಿದ ನೀರಿನಲ್ಲಿರುವಂತೆ ಅಧಿಕ ಆಮ್ಲಿಯ ಗುಣ, ತೀಕ್ಷ್ಣ ವಾಸನೆ ಇರುವುದಿಲ್ಲ.

.ಮೊದಲ ಮುಂಗಾರಿನ ಮಳೆ, ಕ್ಯಾನ್ಸರ್‌ ನಿರೋಧಕ ಗುಣ ಹೊಂದಿದೆ. ಹಲವಾರು ಆಯುರ್ವೇದ ತಜ್ಞರು ಈ ನೀರು (ಅಂತರಿಕ್ಷ ಜಲ/ ಐಂದ್ರಾé ಜಲ)ವನ್ನು ಹಾಗೆಯೇ ಅಥವಾ ಇತರ ಗಿಡಮೂಲಿಕೆಗಳಿಂದ ಸಂಸ್ಕರಿಸಿ ಶುದ್ಧೀಕರಿಸಿ ಬಳಸುವ ಮೂಲಕ ಕ್ಯಾನ್ಸರ್‌ನಾಶಕ ಗುಣವನ್ನು ಕಂಡುಹಿಡಿದ್ದಾರೆ. 

ಪ್ರಾಚೀನ ಆಯುರ್ವೇದ ಸಂಹಿತೆಗಳಾದ ಚರಕ ಹಾಗೂ ಸುಶ್ರುತ ಸಂಹಿತೆಯಲ್ಲಿಯೂ ಮಳೆಯ ನೀರಿನಿಂದ ರೋಗ ನಿವಾರಣೆಗೆ ಬಳಸುವ ವಿವಿಧ ವಿಧಾನಗಳನ್ನು ತಿಳಿಸಿದ್ದಾರೆ. ಡಾ| ಪಂಕಜ್‌ ಓಝಾ ಅವರು ನಡೆಸಿದ ಪ್ರಯೋಗಗಳ ಮೂಲಕ ಮಳೆನೀರಿನಲ್ಲಿನ ಔಷಧೀಯ ಗುಣಗಳನ್ನು ದೃಢೀಕರಿಸಲಾಗಿದೆ. ಅಲ್ಸರ್‌ನಂತಹ ತೊಂದರೆಯಲ್ಲಿ , ಮುಖದಲ್ಲಿ ಮೊಡವೆ ನಿವಾರಣೆಗೆ, ಕೂದಲು ಸೊಂಪಾಗಿ ಬೆಳೆಯಲು, ಚರ್ಮದ ಕಾಂತಿ ವರ್ಧನೆಗೆ ಮಳೆನೀರಿನ ಸ್ನಾನ ಹಾಗೂ ಪಾನ ಪರಿಣಾಮಕಾರಿ.

Advertisement

ಮಳೆಯ ನೀರು ನೆಲಕ್ಕೆ ಸೋಕುವ ಮುನ್ನವೇ ಶುದ್ಧವಾಗಿರುವ ಪ್ರದೇಶಗಳಲ್ಲಿ ತಾಮ್ರದ ಪಾತ್ರೆಯಲ್ಲಿ ಅಥವಾ ಮಣ್ಣಿನ ಪಾತ್ರೆಯಲ್ಲಿ ಹಿಡಿದಿಡಬೇಕು. ಇದನ್ನು ಶೇಖರಿಸಿ, ಹಾಗೆಯೇ ಇಟ್ಟಾಗ ಸ್ವಲ್ಪ ಹೊತ್ತಿನ ಬಳಿಕ ಮೇಲಿನ ನೀರು ತಿಳಿಯಾಗುತ್ತದೆ. ಇದನ್ನು ಫಿಲ್ಟರ್‌ನಲ್ಲಿ ಹಾಕಿ ಶುದ್ಧೀಕರಿಸಿ, ಕುದಿಸಿ ಉಪಯೋಗಿಸಬಹುದು. ಅಥವಾ ಲಿನನ್‌ ಬಟ್ಟೆಯ ಮೂಲಕ ಸೋಸಿ, ಬಿಸಿ ಮಾಡಿ ಉಪಯೋಗಿಸಬಹುದು.

ತೂಕ ಕಡಿಮೆ ಮಾಡುವ ಮಳೆ ನೀರಿನ ಪಾಕ ಪ್ರಕಾರಗಳು
ಶೇಖರಿಸಿ, ಶೋಧಿಸಿಟ್ಟ ಮಳೆ ನೀರಿನಿಂದ ನಿತ್ಯವೂ ಉಪಯೋಗಿಸುವಂತಹ ಸರಳವಾದ ಬೊಜ್ಜು ಕರಗಿಸುವ ಪಾಕ ವೈವಿಧ್ಯಗಳನ್ನು ತಯಾರಿಸಬಹುದು. 

ಹುರುಳಿ ಪೇಯ: 20-25 ಗ್ರಾಂ ಹುರುಳಿಯನ್ನು ಈ ಮಳೆನೀರಿನಲ್ಲಿ ಬೇಯಿಸಿ. ಬಳಿಕ ಮಿಕ್ಸರ್‌ನಲ್ಲಿ ತಿರುವಿ, ತೆಳ್ಳಗೆ ಮಾಡಿ ಇದಕ್ಕೆ ಉಪ್ಪು ಸೇರಿಸಿ, ಈರುಳ್ಳಿ , ಬೆಳ್ಳುಳ್ಳಿ , ಮೆಣಸಿನ ಚೂರುಗಳಿಂದ ಒಗ್ಗರಣೆ ನೀಡಬೇಕು. ಇದನ್ನು ಬೆಳಿಗ್ಗೆ ಸಂಜೆ ಸೇವಿಸಿದರೆ ತೂಕ ಕಡಿಮೆ ಮಾಡಲು ಹಿತಕರ.

ಮೊದಲು 20-25 ಗ್ರಾಂ ಹುರುಳಿಯನ್ನು ಬಳಸಿ ಆರಂಭಿಸಿ, ತದನಂತರ 50-100 ಗ್ರಾಂ ವರೆಗೆ ಉಪಯೋಗಿಸಬಹುದು. ದೇಹದಲ್ಲಿ ಉಷ್ಣಾಧಿಕ್ಯತೆ ಉಳ್ಳವರು ಇದನ್ನು ತಂಪಿನ ಬೀಜದ ನೀರು, ಬಾರ್ಲಿ ನೀರು, ಸಿಹಿಮಜ್ಜಿಗೆ ಜೊತೆಗೆ ಸೇವಿಸಬಹುದು.ಹೊಟ್ಟೆಯ ಭಾಗದ ಬೊಜ್ಜು ಕರಗಲು ಈ ಪೇಯ ಉಪಯುಕ್ತ. ಅದೇ ರೀತಿಯಲ್ಲಿ ಹುರುಳಿಕಾಳನ್ನು ಹುರಿದು, ನಯವಾಗಿ ಹುಡಿಮಾಡಿ, ಎಳ್ಳೆಣ್ಣೆ  ಹಾಗೂ ಮಳೆನೀರಿನೊಂದಿಗೆ ಬೆರೆಸಿ ಪೇಸ್ಟ್‌ ತಯಾರಿಸಿ ಸ್ನಾನಕ್ಕೆ ಮೊದಲು ಹೊಟ್ಟೆಯ ಭಾಗಕ್ಕೆ ಲೇಪಿಸಿ ವರ್ತುಲಾಕಾರದಲ್ಲಿ ಮಾಲೀಶು ಮಾಡಿದರೆ ಹೊಟ್ಟೆಯ ಭಾಗದ ಬೊಜ್ಜು ಕರಗುತ್ತದೆ.

ಅರಸಿನ ನೀರು: 1/2 ಕಪ್‌ ಶುದ್ಧ ಮಳೆನೀರಿಗೆ ಕಾಲು-ಅರ್ಧ ಚಮಚ ಶುದ್ಧ ಅರಸಿನ ಹುಡಿ ಅಥವಾ ಅರಸಿನ ಕೊಂಬು ತೇದಿ ಮಾಡಿದ ಪೇಸ್ಟ್‌ ಬೆರೆಸಬೇಕು. ಇದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ, ತದನಂತರ ಒಂದು ಗಂಟೆಯ ಕಾಲ ನೀರು ಇಲ್ಲವೆ ಆಹಾರ ಯಾವುದನ್ನೂ ಸೇವಿಸಕೂಡದು. ಇದರಿಂದ 3-6 ತಿಂಗಳೊಳಗೆ ಅಧಿಕ ತೂಕ ಮತ್ತು ಬೊಜ್ಜು ಕರಗುತ್ತದೆ.

ಈ ಪಾಕ ಪ್ರಕಾರಗಳೊಂದಿಗೆ ಅಧಿಕ ನೀರು ಹಾಗೂ ಜಲೀಯ ಅಂಶದ ತೆಳ್ಳಗಿನ ಆಹಾರ ಸೇವಿಸಿದರೆ ಪಥ್ಯ.

ಆಹಾರದಲ್ಲಿ ಹಳೆಯ ಅಕ್ಕಿ, ಹಳೆ ಗೋಧಿ, ಹೆಸರು, ಹುರುಳಿ, ಬಾರ್ಲಿ ಇವುಗಳಿಂದ ತಯಾರಿಸಿದ ರೋಟಿ, ರೊಟ್ಟಿ ಅಥವಾ ದೋಸೆ ಸೇವಿಸಿದರೆ ಹಿತಕಾರಿ. ಶುದ್ಧ ಮಳೆ ನೀರಿನಿಂದ ಈ ಧಾನ್ಯಗಳನ್ನು ಸಮಪ್ರಮಾಣದಲ್ಲಿ ರಾತ್ರಿ ನೆನೆಸಿಡಬೇಕು. ಮರುದಿನ ಒಣಗಿಸಿ, ತದನಂತರ ಹುರಿದು ಹುಡಿಮಾಡಿ ಇಡಬೇಕು. ಇದರಿಂದ ರಾತ್ರಿ ರೋಟಿ, ರೊಟ್ಟಿ  ದೋಸೆ ಇತ್ಯಾದಿ ತಯಾರಿಸಿ ಸೇವಿಸಿದರೆ ತೂಕ, ಬೊಜ್ಜು ಕಡಿವೆ‌ು ಮಾಡಲು ಹಿತಕರ.

ತ್ರಿಫ‌ಲಾ ಪ್ರಯೋಗ : ಮಳೆನೀರಿನಲ್ಲಿ (1 ಕಪ್‌) 1/4 ಚಮಚ ತ್ರಿಫ‌ಲಾ ಪುಡಿ (ನೆಲ್ಲಿಕಾಯಿ, ತಾರೇಕಾಯಿ ಹಾಗೂ ಅಳಲೇಕಾಯಿ) ಬೆರೆಸಿ ಬೆಚ್ಚಗೆ ಮಾಡಿ ರಾತ್ರಿ ಮಲಗುವ ಸಮಯದಲ್ಲಿ ಸೇವಿಸಬೇಕು. ಅರ್ಧ-ಒಂದು ಚಮಚದವರೆಗಿನಿಂದ ಪ್ರಾರಂಭಿಸಿ ನಂತರ ಪ್ರಮಾಣ ಹೆಚ್ಚಿಸಬೇಕು. ಜೊತೆಗೆ ವಾರಕ್ಕೊಮ್ಮೆ ತ್ರಿಫ‌ಲಾ ಹುಡಿ ಮತ್ತು ಜೇನು ಬೆರೆಸಿ ಸೇವಿಸಬೇಕು.

ಈ ವಿಧಾನಗಳಲ್ಲಿ ತೂಕ ಹಾಗೂ ಬೊಜ್ಜು ಕರಗಿಸುವ ವಿವಿಧ ರೆಸಿಪಿಗಳನ್ನು ಮಳೆಗಾಲದಲ್ಲಿ ಪ್ರಯೋಗಿಸಿದರೆ ದೋಷಾಧಿಕ್ಯವಿರುವ ಈ ಋತುವಿನಲ್ಲಿ ದೇಹ ಶುದ್ಧೀಕರಣ (ಶೋಧನಾ ಚಿಕಿತ್ಸೆಯ ರೂಪ) ಆಗುವುದರೊಂದಿಗೆ, ಮಳೆನೀರಿನ ಗುಣಗಳೊಂದಿಗೆ ಬೊಜ್ಜು ಸಹ ಕಡಿಮೆಯಾಗಲು ಹಿತಕಾರಿ.

ಅಂತರಿಕ್ಷ ಜಲ ಚಿಕಿತ್ಸೆ
ಆರ್ಯುವೇದದಲ್ಲಿ ನೀರಿಗೆ “ಜೀವನಂ’ ಎನ್ನುತ್ತಾರೆ. ಜೀವನೀಯ ಗುಣವುಳ್ಳ ಮಳೆಯ ನೀರು ಇಳೆಯನ್ನು ತಂಪಾಗಿಸುವುದು ಮಾತ್ರವಲ್ಲ, ಜೊತೆಗೆ ಸಕಲ ಜೀವಚರಾಚರಗಳಿಗೂ ಜೀವನೀಯವಾಗಿದೆ. ಚರಕಾಚಾರ್ಯ ಹಾಗೂ ಸುಶ್ರುತಾಚಾರ್ಯರು ಮಳೆಯ ನೀರಿಗೆ ಅಂತರಿಕ್ಷ ಜಲ ಅಥವಾ ಐಂದ್ರéಜಲ ಎಂದು ಕರೆದಿದ್ದಾರೆ.

ಚರಕ ಸಂಹಿತೆಯಲ್ಲಿ ತಿಳಿಸಿರುವಂತೆ ಮಳೆನೀರು ಶೀತಲ, ತಂಪು, ರುಚಿಕರ, ಶುದ್ಧ ಹಾಗೂ ಲಘು ಗುಣಗಳನ್ನು ಹೊಂದಿದೆ.  ಈ ನೀರು ಭುವಿಯ ಮೇಲೆ ಬಿದ್ದು , ಮಣ್ಣಿನೊಳಗೆ ಮಿಳಿತವಾದಾಗ ಆಯಾ ಮಣ್ಣಿಗೆ ತಕ್ಕಂತೆ ಗುಣ ಪಡೆದುಕೊಳ್ಳುತ್ತದೆ.

ಸ್ನಾನ ಮಾಡುವ ನೀರಿಗೆ 4-6 ನೀಲಗಿರಿ ಎಣ್ಣೆ ಸೇರಿಸಿದರೆ ಮಕ್ಕಳಿಗೆ ನೆಗಡಿ, ಕೆಮ್ಮು ಉಂಟಾಗುವುದಿಲ್ಲ. ಮಳೆಗಾಲದಲ್ಲಿ ಫಿಲ್ಟರ್‌ ಮಾಡಿದ ನೀರಿಗೆ ಶುದ್ಧ ಪಚ್ಚಕರ್ಪೂರವನ್ನು  (ಒಂದು ಲೀಟರ್‌ ನೀರಿಗೆ 1-2 ಚಿಟಿಕೆ) ಬೆರೆಸಿ ಸೇವಿಸಿದರೂ ಕೆಮ್ಮು , ಕಫ‌ ಉಂಟಾಗುವುದಿಲ್ಲ.

ಶಡಂಗ ಪಾನೀಯ ಜಲ : ಚಂದನ, ಶುಂಠಿ, ಉದೀಚ್ಯ, ಲಾವಂಚ, ಕೊನ್ನಾರಿಗಡ್ಡೆ , ಪರ್ಪಟಕ ಎಂಬ ಆರು ಮೂಲಿಕೆಗಳನ್ನು ಬೆರೆಸಿ ಕುದಿಸಿ ತಯಾರಿಸಿದ ನೀರು ಜ್ವರ, ಕಫ‌ ಮತ್ತು ಪಿತ್ತ ರೋಗಗಳಲ್ಲಿ ಪರಿಣಾಮಕಾರಿ.

ದಶಮೂಲ ಜಲ: ವಾತ ಸಂಬಂಧೀ ಅಥವಾ ಸಂಧಿಶೂಲ ಊತ, ಮಾಂಸಖಂಡಗಳಲ್ಲಿ ಸೆಳೆತ, ನೋವು ಇರುವವರಿಗೆ ಅಂತರಿಕ್ಷ ಜಲದಲ್ಲಿ ದಶಮೂಲಗಳನ್ನು ಬೆರೆಸಿ ಕುದಿಸಿ ಸೇವಿಸಿದರೆ ನೋವು, ಸೆಳೆತ, ಊತ ನಿವಾರಣೆಯಾಗುತ್ತದೆ.

ಜಲ್‌ಜೀರಾ: ಜೀರಿಗೆ, ಕಾಲಾನಮಕ್‌, ಕಾಳುಮೆಣಸು, ಒಣ ಶುಂಠಿ, ಇಂಗು, ಪುದೀನಾ- ಇತ್ಯಾದಿಗಳನ್ನು ಬೆರೆಸಿ ಹುಡಿಮಾಡಿ ಜಲ್‌ಜೀರಾ ಹುಡಿ ತಯಾರಿಸಬೇಕು. ಇದನ್ನು ಅಜೀರ್ಣ, ಹಸಿವೆ, ರುಚಿ ಇಲ್ಲದಿರುವುದು ಹಾಗೂ ಪಚನಶಕ್ತಿ ವರ್ಧಿಸಲು ಅಂತರಿಕ್ಷ ಜಲದೊಂದಿಗೆ ಎರಡು ಚಮಚ ಬೆರೆಸಿ ಸೇವಿಸಿದರೆ ಪರಿಣಾಮಕಾರಿ.

ಇಂದಿಗೂ ಏಷ್ಯಾ ಹಾಗೂ ಆಫ್ರಿಕಾ ಖಂಡದ ಹಲವು ದೇಶಗಳಲ್ಲಿ ಮಳೆಯ ನೀರು ಮುಖ್ಯ ಜಲಮೂಲವಾಗಿದೆ. ಅಲ್ಲದೆ ಬಾವಿ, ಕೆರೆ, ಸರೋವರ, ನದಿಗಳ ಮೂಲಕ ಮನುಷ್ಯರ, ಜೀವರಾಶಿಗಳ ಜೀವನಾಡಿಯಾಗಿದೆ. ಇದರ ಸದುಪಯೋಗ ಹಿಂದಿಗಿಂತಲೂ ಇಂದು ಮಹತ್ವ ಪೂರ್ಣವಾಗಿದೆ.

ಡಾ. ಅನುರಾಧಾ ಕಾಮತ್‌

Advertisement

Udayavani is now on Telegram. Click here to join our channel and stay updated with the latest news.

Next