Advertisement

ಆಸ್ಪತ್ರೆಯೆಂಬ ಸುರಕ್ಷಾ ತಂಗುದಾಣ!

12:30 AM Nov 02, 2018 | |

ಅಲ್ಲಿ ಯಾರೂ ಇರಲಿಲ್ಲ…ರೋಗಿಯಾಗಲಿ, ಅವನ ಸಂಬಂಧಿಕರಾಗಲಿ, ಕೊನೆಗೆ ನಮ್ಮ ಸಿಬ್ಬಂದಿಯಾಗಲಿ ಒಬ್ಬರೂ ಇಲ್ಲ. ಆದರೆ ಅವರ ಲಗೇಜುಗಳಿವೆ! ನನಗೆ ಗಾಬರಿ, ಏನಾದರೂ ಅನಾಹುತ ಆಗಿರಬಹುದೇ ಎಂದು. ಆದರೆ ನಮ್ಮ ಸಿಬ್ಬಂದಿ ನನಗೆ ಹೇಳಿಲ್ಲವಲ್ಲ? ಅಸಮಾಧಾನದಿಂದ ನಮ್ಮವರನ್ನು ಕರೆದು ಕೇಳಿದಾಗ ಅವರು ಒದಗಿಸಿದ ಸುದ್ದಿ ನನ್ನನ್ನು ಆಶ್ಚರ್ಯಚಕಿತನನ್ನಾಗಿಸಿತ್ತು.

Advertisement

ಅದೊಂದು ಸಾಯಂಕಾಲ ಎಲ್ಲ ಪೇಷಂಟ್‌ಗಳನ್ನೂ ನೋಡಿ ಮುಗಿಸಿ ಇನ್ನೇನು ಮನೆಗೆ ಹೊರಡಬೇಕು, ಆಗ ನನಗೆ ಅಲ್ಪ ಪರಿಚಯದ, ಖಾದಿ ಇತ್ಯಾದಿ ಧರಿಸಿ ಮುಖಂಡರ ಹಾಗೆ ಕಾಣುವ ನಾಲ್ಕು ಜನ ನನ್ನ ಚೇಂಬರ್‌ಗೆ ನುಗ್ಗಿ ಸುಖಾಸೀನರಾದರು. ನನಗೋ ಮುಂಜಾನೆಯಿಂದ ಎಡೆಬಿಡದೆ ಕೆಲಸ ಮಾಡಿ ಯಾವಾಗ ಮನೆಗೆ ಹೋದೇನೋ ಅನ್ನುವ ತವಕ. ಆದರೆ ಇವರು ಬಂದು ಕುಳಿತ ರೀತಿ ಹೇಗಿತ್ತೆಂದರೆ, “ನನಗೆ ಸುಸ್ತಾಗಿದೆ’ ಎಂದು ಹೇಳುವ ಧೈರ್ಯ ಕೂಡ ನನಗೆ ಬಂದಿರಬಾರದು, ಹಾಗಿತ್ತು. ಕೆಲವೊಮ್ಮೆ ಹೀಗೆಯೇ ಆಗುತ್ತದೆ. ಇಷ್ಟವಿರಲಿ ಇಲ್ಲದಿರಲಿ, ಇಂಥವರ ಮರ್ಜಿ ಕಾಯುವುದು ಅನಿವಾರ್ಯವಾಗುತ್ತದೆ. ಇಲ್ಲವೇ ಎಷ್ಟು ಕಾಳಜಿ ಮಾಡುವ ವೈದ್ಯನಾದರೂ, ಎಂಥ ಜಾಣನಾದರೂ ಅವರ ಬಗ್ಗೆ ಇಲ್ಲಸಲ್ಲದ ಕತೆ ಕಟ್ಟಿ ಹಲವಾರು ವರ್ಷ ಕಷ್ಟಪಟ್ಟು ಗಳಿಸಿದ ಹೆಸರನ್ನು ನೆಲಸಮ ಮಾಡಿ ಗಹಗಹಿಸಿ ಬಿಡುತ್ತಾರೆ.

ಮುಖದ ಮೇಲೊಂದು ಬಲವಂತದ ನಗೆ ತಂದುಕೊಂಡು, “ಏನು?’ ಅನ್ನುವಂತೆ ನೋಡಿದೆ. ಅದರಲ್ಲಿಯೇ ಲೀಡರ್‌ ಹಾಗೆ ಕಾಣುವವನೊಬ್ಬ, ಬಾಯಿ ತುಂಬ ತುಂಬಿದ ಎಲೆ-ತಂಬಾಕಿನ ಅಧ್ವಾನ ಮಿಶ್ರಣವನ್ನು ಸಪ್ಪಳ ಮಾಡುತ್ತ ನುಂಗಿ, ಧೋತರದ ಅಂಚಿನಿಂದ ಕಟಬಾಯಿ ಒರೆಸಿಕೊಂಡು ಹೇಳತೊಡಗಿದ…

“ಏನಿಲ್ರಿ ಸಾಹೇಬ್ರ…ಇಲ್ಲಿ ಕುಂತಾನಲ್ರಿ, ಇವರಪ್ಪಗ ಸ್ವಲ್ಪ ಆರಾಮ ತಪ್ಪೆ ತ್ರಾ(ಹುಷಾರಿಲ್ಲ). ಮಿರಜ್‌, ಬೆಳಗಾಂವ್‌ ಎಲ್ಲಾ ಕಡೆ ತೋರಿಸಿ ಸಾಕಾಗೈತ್ರಿ. ಈಗ ಅಂವ ನಿಮ್ಮ ದವಾಖಾನಿಗೇ ಹೋಗೂನಂತ ಹಠ ಹಿಡದಾನ್ರಿ. ಅದಕ್ಕ ಕರಕೊಂಡ ಬಂದೀವ್ರಿ. ಅಡ್ಮಿಟ್‌ ಮಾಡಿ ಆರಾಮ ಮಾಡಿದ್ರ ನಿಮಗ ಪುಣ್ಯ ಬರತೈತ್ರಿ. ಭಾಳ ಬಡವರ ಅದಾರ್ರೀ, ಜರಾ ಕಾಳಜಿ ಮಾಡ್ರಿ…’

ನನಗೆ ಬರುವ ಪುಣ್ಯದ ವಾರಸುದಾರನಂತೆ ಅವನು ಹೇಳುವುದನ್ನು ಕೇಳಿ ಸ್ವಲ್ಪ ಪಿಚ್ಚೆನಿಸಿತು. ಬಡವರು ಎಂದು ಹೇಳುವ ಇವರು ಅಷ್ಟೆಲ್ಲಾ ಆಸ್ಪತ್ರೆಗಳನ್ನು ಸುತ್ತಿದ್ದು ಹೇಗೆ ಎನಿಸಿತಾದರೂ, ರೋಗಿಯನ್ನು ನೋಡೋಣವೆಂದು ತುರ್ತು ಚಿಕಿತ್ಸಾ ವಾರ್ಡಿನತ್ತ ಹೊರಟೆ. ಅಲ್ಲಿ ಹೋಗಿ ನೋಡಿದರೆ 70-75 ವರ್ಷ ವಯೋಮಾನದ, ಮೈಯೆಲ್ಲಾ ಬಾತುಕೊಂಡ, ಒಂದೊಂದು ಉಸಿರಿಗೂ ಕಷ್ಟಪಡುತ್ತ ಏದುಸಿರು ಬಿಡುತ್ತಿದ್ದ ವ್ಯಕ್ತಿ. ಕಣ್ಣು ತೆಗೆಯಲೂ ಸಾಧ್ಯವಾಗದಷ್ಟು ನಿಶ್ಶ‌ಕ್ತ. ನಾಲಿಗೆ ಒಣಗಿದೆ. ನಾಡಿ ಸಿಗುತ್ತಿಲ್ಲ. ಮೊದಲು ಅವನಿಗೆ ಆಮ್ಲಜನಕದ ಮಾಸ್ಕ್ ಹಾಕಿ, ಆಮೇಲೆ ಡೀಟೇಲ್‌ ಆಗಿ ಪರೀಕ್ಷೆ ಮಾಡಿದರೆ ತನ್ನ ಕೊನೆಯ ಕ್ಷಣಕ್ಕಾಗಿ ಕಾಯುತ್ತಿರುವ, ಮೂತ್ರಪಿಂಡಗಳ ನಿಷ್ಕ್ರಿಯೆಯಿಂದ ಸಾವಿನಂಚಿನಲ್ಲಿದ್ದ ಹತಭಾಗ್ಯ ಎನ್ನುವುದು ತಿಳಿಯಿತು.

Advertisement

ಆಶ್ಚರ್ಯವೆಂದರೆ ಈ ಮೊದಲು ಒಂದು ಬಾರಿಯೂ ನಮ್ಮ ಆಸ್ಪತ್ರೆಗೆ ಆತ ಬಂದಿರಲಿಲ್ಲ. ಆದರೆ, ಕೊನೆಗಾಲದಲ್ಲಿ ಇಲ್ಲೇಕೆ ಬಂದರು ಎಂಬ ಭಾವ ಒಂದು ಕ್ಷಣ ಬಂದಿತಾದರೂ, ಬಂದ ರೋಗಿಗಳನ್ನು ಸೇವಾಭಾವದಿಂದ ನೋಡಬೇಕೆಂಬ “ಹಿಪೋಕ್ರಿಟಿಕ್‌  ಶಪಥಕ್ಕೆ’ ಜೋತುಬಿದ್ದವರಾದ ನಮಗೆ ಆ ರೀತಿ ಯೋಚಿಸುವ “ಹಕ್ಕೂ’ ಕೂಡ ಇಲ್ಲವಲ್ಲ. ಆತನ ಹಳೆಯ ಕಡತಗಳನ್ನೆಲ್ಲ ತೆಗೆದು ನೋಡಿದರೆ, ಅದಾಗಲೇ ಆತ ಸಾವಿನಂಚಿನಲ್ಲಿ ಇದ್ದಾನೆಂದೂ, ಇನ್ನು ಏನೂ ಮಾಡಲು ಸಾಧ್ಯವಿಲ್ಲವೆಂದೂ, ರೋಗಿಯ ಸಂಬಂಧಿಕರು ಕೊನೆಗಾಲದವರೆಗೆ ಆಸ್ಪತ್ರೆಯಲ್ಲಿ ಉಳಿಯಲು ಉತ್ಸುಕರಾಗಿಲ್ಲವೆಂದೂ ಅದಕ್ಕಾಗಿ ಮನೆಗೆ ತೆಗೆದುಕೊಂಡು ಹೋದರೂ ನಡೆದೀತೆಂದೂ ಬರೆದ ವೈದ್ಯರ ಟಿಪ್ಪಣಿಗಳಿದ್ದವು. ಅಂದರೆ ಇವರೆಲ್ಲ ಈತನ ಸಾವನ್ನು ನಿರ್ಧರಿಸಿಕೊಂಡು ಆಸ್ಪತ್ರೆಗಳಿಂದ ಡಿಸಾcರ್ಜ್‌ ಮಾಡಿಕೊಂಡು ಬಂದಿದ್ದಾರೆ. ಆದರೆ ನಮ್ಮಲ್ಲಿಗೇ ಏಕೆ ಬಂದರು? ಗೊತ್ತಾಗಲಿಲ್ಲ. ನನಗೆ ಸ್ವಲ್ಪ ರೇಗಿತು. ಈ ಮೊದಲು ಎಂದೂ ಬಾರದವರು, ರೋಗಿಯ ಕೊನೆಗಾಲದಲ್ಲಿ ನಮ್ಮಲ್ಲಿ ತರುವ ಉದ್ದೇಶವೇನು ಎನ್ನುವಂತೆ ಕೇಳಿದೆ.

“ಸಾಹೇಬ್ರ, ಎರಡ ದಿನಾ ಆತು. ಅವ ನಿಮ್ಮನ್ನ ಬಗಸಾಕಹತ್ಯಾನ್ರಿ. ಏನರ ಆಗಲಿ ಅವರ ದವಾಖಾನಿಗೆ ಹೋಗುದು ಅಂತ ಕುಂತ್ರಿ(ಒತ್ತಾಯ ಮಾಡಿದ), ಅದಕ್ಕ ನಿಮ್ಮ ಮ್ಯಾಲೆ ಭಾಳ ಆಸೆ-ಭಕ್ತಿ ಇಟ್ಕೊಂಡ ಬಂದೀವ್ರಿ. ಏನರ ಮಾಡಿ ಇವತ್ತೂಂದ ದಿನ ನಿಮ್ಮಲ್ಲಿ ಇಟಗೊಂಡ ಬಿಡ್ರಿ. ನಿಮ್ಮ ಕೈಗುಣ ಭಾಳ ಛಲೋ ಐತ್ರಿ. ನೀವು ಮುಟ್ಟಿದರ ಸಾಕು ಆರಾಮ ಆಗ್ತಾನ್ರಿ’

ಈ “ಕೈ ಗುಣ’ ಎನ್ನುವ ಪದವನ್ನು ನಮ್ಮ ವೈದ್ಯಕೀಯದಲ್ಲಿ ಎಷ್ಟು ಕೇಳಿದ್ದೇವೆಂದರೆ ಕೆಲವೊಮ್ಮೆ ಕ್ಲೀಷೆ ಎನಿಸುತ್ತದೆ. ಹತ್ತು ವರ್ಷ ವೈದ್ಯಕೀಯ ಕಾಲೇಜ್‌ಗೆ ಮಣ್ಣು ಹೊತ್ತು ಹಳ್ಳಿಯ ಜನರ ಸೇವೆ ಮಾಡಬೇಕೆಂದು ಆದರ್ಶಗಳನ್ನಿಟ್ಟುಕೊಂಡು ಹಳ್ಳಿಗೆ ಬಂದವನಿಗೆ ಏನೂ ಕಲಿಯದ ಒಬ್ಬ “ಕ್ವಾಕ್‌’ನಿಂದ ಸ್ಪರ್ಧೆ ಎದುರಾಗುತ್ತದೆ, “ಕೈಗುಣ’ ಎಂಬ ಮೂಢ ನಂಬಿಕೆಯಿಂದಾಗಿ! ಒಮ್ಮೊಮ್ಮೆ ನಮ್ಮನ್ನು ಹೊಗಳಿ ಯಾಮಾರಿಸಲೂ ಈ ಅಸ್ತ್ರದ ಪ್ರಯೋಗವಾಗುತ್ತದೆ. ಈಗ ಆಗಿದ್ದೂ ಅದೇ. ಅವರಿಗೆ ಏನಾದರೂ ಮಾಡಿ ಆ ರೋಗಿಯನ್ನು ಅವತ್ತು ನಮ್ಮ ಆಸ್ಪತ್ರೆಯಲ್ಲಿ ಅಡ್ಮಿಶನ್‌ ಮಾಡಬೇಕಾಗಿತ್ತು. ಆದರೆ, ಅವರು ನಿಜವಾಗಿಯೂ ಮುಗ್ಧರೂ, ನನ್ನ ಮೇಲೆ ಪ್ರೀತಿಯಿಟ್ಟು ಬಂದವರೂ ಆಗಿರಬಹುದಲ್ಲ…ರೋಗಿಯ ಜೊತೆ ಬಂದವರ ರೀತಿ ನೀತಿಗಿಂತ ರೋಗಿಯ ಕಾಳಜಿ ಮುಖ್ಯ ಅಲ್ಲವೇ? ಎಂದು ಯೋಚಿಸಿ ಅವನನ್ನು ಒಳರೋಗಿಯನ್ನಾಗಿಸಿ, ಐಸಿಯುನಲ್ಲಿಟ್ಟು, ರಾತ್ರಿಯೆಲ್ಲ ಅವನ ಆರೈಕೆ ಮಾಡುವಂತೆ ನಮ್ಮ ಸಿಬ್ಬಂದಿಗೆ ತಿಳಿಸಿದೆ. ಮನೆಗೆ ಬರಬೇಕಾದರೆ ರಾತ್ರಿಯಾಗಿತ್ತು.

ಮರುದಿನ ಬೆಳಿಗ್ಗೆ ನೋಡಿದರೆ ಒಂದಿಷ್ಟು ಹುಷಾರಾಗಿದ್ದ. ಆಸ್ಪತ್ರೆಯಲ್ಲಿ ಸಿಕ್ಕ ವಿಶ್ರಾಂತಿಯಿಂದಲೋ ಅಥವಾ ಆರೈಕೆಯಿಂದಲೋ ಕೈ ಕಾಲು ಆಡಿಸುವಷ್ಟು ಚೇತರಿಸಿಕೊಂಡಿದ್ದ. ಯಾವುದರಿಂದಾದರೂ ಆಗಲಿ ಚೇತರಿಸಿಕೊಂಡನಲ್ಲ ಎಂದು ನನಗೂ ಒಂದಿಷ್ಟು ಖುಷಿಯಾಯಿತು. ಆದರೆ ರೋಗಿಯ ಜೊತೆ ಬಂದಿದ್ದ “ಹಿರಿಯರು’ ಕಾಣಲಿಲ್ಲ. ಒಬ್ಬ ಹುಡುಗನನ್ನು ಕೂಡಿಸಿ ಹೋಗಿದ್ದರು. “ಎಲ್ಲರೂ ಎಲ್ಲಿ?’ ಎಂದು ಕೇಳಿದರೆ ಯಾವುದೋ “ಮುಖ್ಯ ಕೆಲಸ’ದ ಮೇಲೆ ಹೋಗಿದ್ದಾರೆಂದು ಉತ್ತರ ಬಂದಿತು. “ಎಲ್ಲಿಯಾದರೂ ಹೋಗಲಿ’ ಎಂದುಕೊಳ್ಳುತ್ತ ನಮ್ಮ ಸಿಬ್ಬಂದಿಗೆ ಇನ್ನಷ್ಟು ಕಾಳಜಿ ಮಾಡಲು ತಿಳಿಸಿ ಆಪರೇಷನ್‌ ಥೀಯೇಟರ್‌ಗೆ ಹೋದೆ.

ಎಲ್ಲ ಆಪರೇಷನ್‌ಗಳನ್ನೂ ಮುಗಿಸಬೇಕಾದರೆ ಮಧ್ಯಾಹ್ನ ಎರಡು ಗಂಟೆ. ನನಗೆ ಅದೇ ಪೇಷಂಟ್‌ದೇ ಚಿಂತೆ. ನಾನು ಎದುರಿಗೆ ಇಲ್ಲದಾಗ ಏನಾದರೂ ಹೆಚ್ಚು ಕಮ್ಮಿಯಾದರೆ ಏನು ಗತಿ ಎಂಬ ಅಳುಕಿನಿಂದಲೇ ಆಪರೇಷನ್‌ಗೆ ಹೋಗಿ¨ªೆ. ಅಕಸ್ಮಾತ್‌ ಮರಣಿಸಿದರೆ “ಬರುವಾಗ ತುಂಬಾ ಆರಾಮವಿದ್ದ. ನಿಮ್ಮ ಅಲಕ್ಷದಿಂದಾಗಿ ಮರಣಿಸಿದ’ ಎಂದು ಗೂಬೆ ಕೂಡಿಸುವ ಚಾಲಾಕಿ ಜನ ಇಲ್ಲದಿಲ್ಲ. ಒಬ್ಬನೇ ವೈದ್ಯನಿರುವ ಆಸ್ಪತ್ರೆಗಳಲ್ಲಿ ಈ ಸಮಸ್ಯೆ ಹೆಚ್ಚು…ಏನೇ ಆದರೂ ಒಬ್ಬನೇ ನಿಭಾಯಿಸಬೇಕು. ಆದರೂ, ತರಬೇತಿ ಹೊಂದಿದ, ಬದ್ಧತೆಯಿರುವ ನಮ್ಮ ಆಸ್ಪತ್ರೆಯ ಸಿಬ್ಬಂದಿಯಿಂದಾಗಿ ಒಂದಿಷ್ಟು ಆರಾಮದಿಂದಿರುವ ಭಾಗ್ಯ ನನ್ನದು. ಹೊರಬಂದವನೇ ಮೊದಲು ಅವನಿದ್ದ ವಾರ್ಡ್‌ಗೇ ಓಡಿದೆ. ಅಲ್ಲಿ ನೋಡಿದರೆ ಆಶ್ಚರ್ಯ ಕಾದಿತ್ತು.

ಅಲ್ಲಿ ಯಾರೂ ಇರಲಿಲ್ಲ…
ರೋಗಿಯಾಗಲಿ, ಅವನ ಸಂಬಂಧಿಕರಾಗಲಿ, ಕೊನೆಗೆ ನಮ್ಮ ಸಿಬ್ಬಂದಿಯಾಗಲಿ ಒಬ್ಬರೂ ಇಲ್ಲ. ಆದರೆ ಅವರ ಲಗೇಜುಗಳಿವೆ! ನನಗೆ ಗಾಬರಿ, ಏನಾದರೂ ಅನಾಹುತ ಆಗಿರಬಹುದೇ ಎಂದು. ಆದರೆ ನಮ್ಮ ಸಿಬ್ಬಂದಿ ನನಗೆ ಹೇಳಿಲ್ಲವಲ್ಲ? ಅಸಮಾಧಾನದಿಂದ ನಮ್ಮವರನ್ನು ಕರೆದು ಕೇಳಿದಾಗ ಅವರು ಒದಗಿಸಿದ ಸುದ್ದಿ ನನ್ನನ್ನು ಆಶ್ಚರ್ಯಚಕಿತನನ್ನಾಗಿಸಿತ್ತು. ನನ್ನ ಮೇಲೆ ನಂಬುಗೆ-ಭಕ್ತಿ ಇತ್ಯಾದಿ ಇಟ್ಟುಕೊಂಡು ಬಂದಿದ್ದೇವೆಂದು ಹೇಳಿದವರು ಇಂಥದನ್ನು ಮಾಡಿದರಾ ಎಂದು ಕ್ಷಣಕಾಲ ವ್ಯಥೆಯೆನಿಸಿತು.

ಆದದ್ದಿಷ್ಟು….
ನಮ್ಮ ಆಸ್ಪತ್ರೆಗೂ ಸಬ್‌ರೆಜಿಸ್ಟ್ರಾರ್‌ ಆಫೀಸ್‌ಗೂ ಬಹಳ ಸಮೀಪದ ದಾರಿ. ಸಾಯಲಿರುವ ಆ ಹಿರಿಯ ಜೀವದ ಹೆಸರಿನಲ್ಲಿ ನೂರಾರು ಎಕರೆ ಆಸ್ತಿ ಇತ್ತು. ಅನೇಕ ಜನರಿಗೆ ಕೊಟ್ಟಿದ್ದ ಸಾಲ, ಕೈಗಡ ಇತ್ಯಾದಿಗಳಿಗೆಲ್ಲ ಅವನ ಹೆಬ್ಬೆಟ್ಟಿನ ಅವಶ್ಯಕತೆ ಇತ್ತು. ಅವನು ಸಾಯುವುದು ಗೊತ್ತಾದಾಗ ಬೆಳಗಾವಿಯಿಂದ ಡಿಸಾcರ್ಜ್‌ ಮಾಡಿಸಿಕೊಂಡು ಬಂದು ನನ್ನ ಆಸ್ಪತ್ರೆಯನ್ನು ಒಂದು ದಿನದ ಸುರûಾ ತಂಗುದಾಣ ಮತ್ತು ಲಾಡಿjಂಗ್‌ ಮಾಡಿಕೊಂಡರು! ಅವನನ್ನು ಒಂದು ದಿನದ ಮಟ್ಟಿಗೆ ಜೀವಂತ ಇಡುವುದಕ್ಕೆ ನಮ್ಮ ಸಹಾಯ ಪಡೆದು, ಸಬ್‌ ರೆಜಿಸ್ಟ್ರಾರ್‌ ಆಫೀಸ್‌ ತೆರೆದ ಕೂಡಲೇ ಅಲ್ಲಿ ಎಲ್ಲ ಕಡತ ಸಿದ್ಧಗೊಳಿಸಿ ಈ  ಹಿರಿಯನನ್ನು ಅಲ್ಲಿಗೆ ಸಾಗಿಸಿದರು…ಅಷ್ಟೇ!  ಅಂದರೆ ಅವರಿಗೆ ಬೇಕಾಗಿದ್ದದ್ದು “ಜೀವಂತ ಹೆಬ್ಬೆರಳು’ ಮಾತ್ರ. ನನ್ನೊಡನೆ ಚೆಂದದ ನಾಟಕವಾಡಿ, ಒಂದು ದಿನ ನನ್ನನ್ನೂ, ನಮ್ಮ ಸಿಬ್ಬಂದಿಯನ್ನೂ ತಮ್ಮ ಕೆಲಸಕ್ಕೆ ಬಳಸಿಕೊಂಡರು. “ಜಾಣ ಜನ’!

ಹೆಬ್ಬೆಟ್ಟಿನ ಕೆಲಸ ಮುಗಿದೊಡನೆ ಆ ವೃದ್ಧನನ್ನು ಸೀದಾ ತಮ್ಮ ಮನೆಗೆ ಸಾಗಿಸಿದರೆಂದೂ, ಮುಂದಿನ ಎರಡೇ ದಿನಗಳಲ್ಲಿ ಸಂಬಂಧಿಕರಿಗೂ, ಊರ ಜನರಿಗೂ ಹಿರಿಯ ಜೀವದ “ದರ್ಶನ’ ಮಾಡಿಸಿ, ತುಂಬ ವಿಜೃಂಭಣೆಯಿಂದ ಅವನನ್ನು “ಬೀಳ್ಕೊಟ್ಟ’ರೆಂದೂ ಆಮೇಲೆ ಗೊತ್ತಾಯಿತು…! 

ಡಾ. ಶಿವಾನಂದ ಕುಬಸದ

Advertisement

Udayavani is now on Telegram. Click here to join our channel and stay updated with the latest news.

Next