Advertisement

ವೈದ್ಯರನ್ನು ದೋಷಮುಕ್ತಗೊಳಿಸಿದ ಹೈಕೋರ್ಟ್‌

11:28 AM Jul 12, 2017 | |

ಬೆಂಗಳೂರು: ಬಹುಕೋಟಿ ನಕಲಿ ಛಾಪಾ ಕಾಗದ ಹಗರಣದ ಪ್ರಮುಖ ಅಪರಾಧಿ ಅಬ್ದುಲ್‌ ಕರೀಂಲಾಲ ತೆಲಗಿಗೆ, ಜಾಮೀನು ಪಡೆದುಕೊಳ್ಳಲು ನೆರವಾಗುವಂತೆ ಸುಳ್ಳು ವೈದ್ಯಕೀಯ ಪ್ರಮಾಣಪತ್ರ ನೀಡಿದ್ದ ಆರೋಪ ಪ್ರಕರಣದಲ್ಲಿ ಇಬ್ಬರು ನಿವೃತ್ತ ಹಿರಿಯ ವೈದ್ಯರು ಹಾಗೂ ತೆಲಗಿಯನ್ನು ಹೈಕೋರ್ಟ್‌ ದೋಷಮುಕ್ತಗೊಳಿಸಿದೆ.

Advertisement

ಈ ಕುರಿತು ಮಂಗಳವಾರ ತೀರ್ಪು ನೀಡಿರುವ ನ್ಯಾಯಮೂರ್ತಿ ರವಿ ಮಳೀಮಠ ಹಾಗೂ ನ್ಯಾಯಮೂರ್ತಿ ಜಾನ್‌ ಮೈಕಲ್‌ ಕುನ್ಹಾ ಅವರಿದ್ದ ವಿಭಾಗೀಯ ಪೀಠ, ಪ್ರಕರಣದ ಆರೋಪಿಗಳಾದ ತೆಲಗಿ, ನಿವೃತ್ತ  ವೈದ್ಯರಾದ ಡಾ. ಕೆ.ಎಚ್‌.ಜ್ಞಾನೇಂದ್ರಪ್ಪ, ಡಾ. ಕೆ.ಎಂ.ಚನ್ನಕೇಶವ ಅವರನ್ನು ಖುಲಾಸೆಗೊಳಿಸಿದೆ.

ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಇಬ್ಬರು ವೈದ್ಯರು, ತೆಲಗಿ ಜಾಮೀನು ಪಡೆಯಲು ನೆರವಾಗುವಂತೆ ಸುಳ್ಳು ವೈದ್ಯಕೀಯ ಪ್ರಮಾಣ ಪತ್ರ ನೀಡಿದ್ದಾರೆ ಎನ್ನುವುದನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಶನ್‌ ವಿಫ‌ಲವಾಗಿದೆ. ಇಬ್ಬರು ವೈದ್ಯರು, ತೆಲಗಿ ಸಹಚರನಿಗೆ ಲಂಚ ಬೇಡಿಕೆಯಿಟ್ಟು, ಸ್ವೀಕರಿಸಿದ್ದಾರೆ ಎನ್ನುವುದನ್ನು ಸಾಬೀತು ಪಡಿಸಲು ಸೂಕ್ತ ಸಾಕ್ಷ್ಯಾಧಾರಗಳನ್ನು ಪ್ರಾಸಿಕ್ಯೂಶನ್‌ ಒದಗಿಸಿಲ್ಲ ಎಂದು ನ್ಯಾಯಪೀಠ ತೀರ್ಪಿನಲ್ಲಿ ತಿಳಿಸಿದೆ.

ಆರೋಪಿಗಳ ಮೇಲ್ಮನವಿಗಳ ವಿಚಾರಣೆ ವೇಳೆ ನ್ಯಾಯಪೀಠ, 22 ಮಂದಿ ಸಾಕ್ಷಿಗಳ ಹೇಳಿಕೆ, ಪ್ರಕರಣಕ್ಕೆ ಸಂಬಂಧಿಸಿದ 93 ದಾಖಲೆಗಳನ್ನು ಪರಿಶೀಲನೆ ನಡೆಸಿತ್ತು. ಈ ಪ್ರಕರಣದಲ್ಲಿ ತೆಲಗಿ ಖುಲಾಸೆಗೊಂಡಿದ್ದರೂ, ತೆಲಗಿ ವಿರುದ್ಧದ ಹಲವು ಪ್ರಕರಣಗಳಲ್ಲಿ ಆತ ಸಲ್ಲಿಸಿರುವ ಮೇಲ್ಮನವಿ ಅರ್ಜಿಗಳು ಹೈಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿವೆ.

ಪ್ರಕರಣ ಏನು?
“ನಕಲಿ ಛಾಪಾ ಕಾಗದ ಹಗರಣದಲ್ಲಿ ಭಾಗಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಕರೀಂಲಾಲ್‌ ತೆಲಗಿ, ಬಿಪಿ, ಶುಗರ್‌ ಸೇರಿದಂತೆ ಇನ್ನಿತರೆ ಕಾಯಿಲೆಗಳಿಂದ ಬಳಲುತ್ತಿದ್ದು, ರಕ್ತದ ವಾಂತಿ ಮಾಡಿಕೊಂಡಿರುತ್ತಾನೆ. ಹೀಗಾಗಿ ಆತನಿಗೆ ವೈದ್ಯಕೀಯ ಪರೀಕ್ಷೆ ನಡೆಸುವ ಅಗತ್ಯವಿದೆ ಎಂದು ಅಂದಿನ ಜೈಲು ಅಧೀಕ್ಷಕರು ವಿಕ್ಟೋರಿಯಾ ಆಸ್ಪತ್ರೆಯ ಮುಖ್ಯಸ್ಥರಿಗೆ ಪತ್ರ ಬರೆಯುತ್ತಾರೆ.

Advertisement

ಹೀಗಾಗಿ ತೆಲಗಿಯನ್ನು ತಪಾಸಣೆ ನಡೆಸುವ  ಮುಖ್ಯ ವೈದ್ಯಾಧಿಕಾರಿ ಡಾ. ಕೆ.ಎಚ್‌.ಜ್ಞಾನೇಂದ್ರಪ್ಪ, ಮಧುಮೇಹ ವಿಭಾಗದ ಡಾ. ಕೆ.ಎಂ.ಚನ್ನಕೇಶವ ಆರೋಪಿ ತೆಲಗಿ ಎಚ್‌ಐವಿ, ಹೃದ್ರೋಗ ಸೇರಿದಂತೆ ವಯೋಸಹಜ ಗಂಭೀರ ಕಾಯಿಲೆಗಳು ಹಾಗೂ ಮಾನಸಿಕ ಖನ್ನತೆಯಿಂದ ಬಳಲುತ್ತಿದ್ದಾನೆ.

ಹೀಗಾಗಿ ಆತನಿಗೆ ಮನೆಯ ವಾತಾವರಣದಲ್ಲಿ ವಾಸಿಸುವಂತೆ ಅನುಕೂಲ ಕಲ್ಪಿಸುವ ಅಗತ್ಯವಿದೆ, ಇಲ್ಲವಾದರೇ ಆತ ಮೃತಪಡುವ ಸಾಧ್ಯತೆಗಳಿವೆ’ ಎಂಬ ವಿವರಗಳನ್ನೊಳಗೊಂಡ ವೈದ್ಯಕೀಯ ಪ್ರಮಾಣಪತ್ರವನ್ನು 2002 ಜೂನ್‌ 6ರಂದು  ಹಾಗೂ ಸೆಪ್ಟೆಂಬರ್‌ ತಿಂಗಳಿನಲ್ಲಿ ನೀಡಿರುತ್ತಾರೆ.

ಆದರೆ  ವೈದ್ಯರು ನೀಡಿದ್ದ ಈ ಪ್ರಮಾಣಪತ್ರವನ್ನೇ ಮೂಲಾಧಾರವಾಗಿಟ್ಟುಕೊಂಡು ತೆಲಗಿ ಸಲ್ಲಿಸುವ ಜಾಮೀನು ಅರ್ಜಿಯನ್ನು ಸಿಬಿಐ ವಿಶೇಷ ನ್ಯಾಯಾಲಯ ವಜಾಗೊಳಿಸಿತ್ತು. ಈ ಸಂಬಂಧ ತನಿಖೆ ನಡೆಸುತ್ತಿದ್ದ ಸಿಬಿಐ ಪೊಲೀಸರು, ಆಸ್ಪತ್ರೆ ವೈದ್ಯರಿಬ್ಬರೂ ತೆಲಗಿಗೆ ಜಾಮೀನು ಕೊಡಿಸುವ ಸಲುವಾಗಿ ಸುಳ್ಳು ವೈದ್ಯಕೀಯ ಪ್ರಮಾಣ ಪತ್ರ ನೀಡಿದ್ದಾರೆ.

ಈ ಕಾರ್ಯಕ್ಕೆ ತೆಲಗಿ ಸಹಚರನಿಂದ   ಲಂಚ ಸ್ವೀಕರಿಸಿದ್ದಾರೆ ಎಂಬ ಆರೋಪದಲ್ಲಿ ವೈದ್ಯರಾದ ಜ್ಞಾನೇಂದ್ರಪ್ಪ, ಚನ್ನಕೇಶವ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿಕೊಂಡು ತೆಲಗಿ ಸೇರಿದಂತೆ ಮೂವರ ವಿರುದ್ಧವೂ ಚಾರ್ಜ್‌ಶೀಟ್‌ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಸಿಬಿಐ ವಿಶೇಷ ನ್ಯಾಯಾಲಯ ತೆಲಗಿಗೆ 25 ಲಕ್ಷ ರೂ. ದಂಡ ಹಾಗೂ ಇಬ್ಬರು ವೈದ್ಯರಿಗೆ ತಲಾ 16 ಲಕ್ಷ ರೂ. ದಂಡ ಹಾಗೂ 7 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿತ್ತು. ಈ ಆದೇಶ ಪ್ರಶ್ನಿಸಿ ಮೂವರು ಪ್ರತ್ಯೇಕ ಮೇಲ್ಮನವಿಗಳನ್ನು ಸಲ್ಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next