Advertisement

ಅಚ್ಚುಕಟ್ಟು ಪ್ರದೇಶದ ಹೃದಯಭಾಗ ಹುಣಸಗಿ

05:11 PM Feb 05, 2018 | |

ಯಾದಗಿರಿ: ಜಿಲ್ಲೆಯಲ್ಲಿ ಬೆಳೆಯುತ್ತಿರುವ ದೊಡ್ಡ ಪಟ್ಟಣಗಳಲ್ಲಿ ಹುಣಸಗಿ ಮುಂಚೂಣಿಯಲ್ಲಿದ್ದು, ತಾಲೂಕು ಕೇಂದ್ರವಾಗಿ ರಚನೆಯಾಗಿದೆ. ಸುರಪುರ ತಾಲೂಕಿನ ಹುಣಸಗಿ ಹಾಗೂ ಕೆಂಭಾವಿ ಪಟ್ಟಣಗಳ ನಡುವೆ ತಾಲೂಕಿಗಾಗಿ ದೊಡ್ಡ ಹೋರಾಟಗಳು, ಪ್ರತಿಭಟನೆಗಳು ನಡೆದಿವೆ. ರಾಜ್ಯ ಸರಕಾರ ಹುಣಸಗಿ ಪಟ್ಟಣವನ್ನು ತಾಲೂಕು ಕೇಂದ್ರವಾಗಿ ಘೋಷಿಸಿದ್ದು, ಈಗಾಗಲೇ ತಾಲೂಕು ರಚನೆ ಪ್ರಕ್ರಿಯೆಗಳು ನಡೆಯುತ್ತಿವೆ.

Advertisement

ಹುಣಸಗಿ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಹೃದಯ ಭಾಗದಂತಿದೆ. ಇಲ್ಲಿಯ ಜನರ 40 ವರ್ಷದ ಹೋರಾಟದ ಫಲವಾಗಿ ಹುಣಸಗಿ ತಾಲೂಕು ಕೇಂದ್ರವಾಗಿದೆ. ಆಡಳಿತ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಸುರಪುರ ತಾಲೂಕಿನ ಹುಣಸಗಿ ಬೇರ್ಪಡಿಸುವ ಮೂಲಕ ಸಾಕಷ್ಟು ಅನುಕೂಲತೆಗಳಾಗಲಿವೆ. 2011ರ ಜನಗಣತಿ ಪ್ರಕಾರ ಹುಣಸಗಿ 1,49,068 ಜನಸಂಖ್ಯೆ ಹೊಂದಿದೆ. ಹುಣಸಗಿ ಪಟ್ಟಣದಲ್ಲಿ ವಿಶೇಷ ತಹಶೀಲ್ದಾರ ಕಚೇರಿ, ಹುಣಸಗಿ ವೃತ್ತ ಪೊಲೀಸ್‌ ಕಚೇರಿ, ಪತ್ರಾಂಕಿತ ಉಪ ಖಜಾನೆ ಅಧಿಕಾರಿಗಳ ಕಚೇರಿ, ನೋಂದಣಿ ಕಚೇರಿ, ಜೆಸ್ಕಾಂ ಉಪವಿಭಾಗ, ಕೃಷ್ಣಾ ಭಾಗ್ಯ ಜಲ ನಿಗಮದ ಪ್ರಮುಖ ಕಚೇರಿಗಳು, ನಾರಾಯಣಪುರದಲ್ಲಿ ಮುಖ್ಯ ಇಂಜಿನಿಯರ್‌ ಕಚೇರಿ ಕಾರ್ಯನಿರ್ವಹಿಸುತ್ತಿವೆ. ಇದಲ್ಲದೆ ಕೃಷ್ಣಾಭಾಗ್ಯ ಜಲ ನಿಮಗದ ಕ್ಯಾಂಪ್‌ನಲ್ಲಿ 41 ಸ್ಥಳಗಳನ್ನು ಗುರುತಿಸಲಾಗಿದೆ. ಇಲ್ಲಿ ಕಚೇರಿ ನಿರ್ಮಾಣಕ್ಕೆ ಯಾವುದೇ ಸ್ಥಳದ ಕೊರತೆ ಇಲ್ಲ ಎಂದು ಸಂಬಂಧಿಸಿದ ಅಧಿಕಾರಿಗಳು ತಿಳಿಸಿದ್ದಾರೆ. ಹುಣಸಗಿ ತಾಲೂಕು ಘೋಷಣೆಯಿಂದಾಗಿ ಆಡಳಿತಾತ್ಮಕ ಸಾಕಷ್ಟು ಅನುಕೂಲವಾಗಲಿದೆ.

ಪ್ರತಿಯೊಂದು ಕೆಲಸಕ್ಕೆ ಇಲ್ಲಿಯ ಸುತ್ತಮುತ್ತಲಿನ ಗ್ರಾಮಸ್ಥರು ಸುರಪುರಕ್ಕೆ ಹೋಗಬೇಕಾಗಿತ್ತು. ಸಾಕಷ್ಟು ಸಮಯ ಹಾಗೂ ಹಣ ಖರ್ಚಾಗುತ್ತಿದ್ದು, ಅದೆಲ್ಲವೂ ಉಳಿತಾಯವಾಗುತ್ತದೆ. ಅಧಿಕಾರ ವಿಕೇಂದ್ರೀಕರಣದಿಂದಾಗಿ ಸುರಪುರ ಹಾಗೂ ಹುಣಸಗಿ ತಾಲೂಕು ಅಭಿವೃದ್ಧಿಗೆ ಅನುಕೂಲವಾಗಲಿದೆ.

ಹುಣಸಗಿ ತಾಲೂಕು ರಚನೆಯಿಂದ ಆಡಳಿತ ಪಕ್ಷಕ್ಕೆ ಸಾಕಷ್ಟು ರಾಜಕೀಯ ಲಾಭ ದೊರೆಯಲಿದೆ. ಹೊಸ ತಾಲೂಕು ರಚನೆಯಾಗಿದೆ ಎಂಬ ಮನೋಭಾವ ಇಲ್ಲಿಯ ಮತದಾರರಲಿದೆ. ಹುಣಸಗಿ ಹೊಸ ತಾಲೂಕು ಘೋಷಣೆಯಿಂದಾಗಿ ಕೆಂಭಾವಿ ಗ್ರಾಮಸ್ಥರು ಸಹ ಕೆಂಭಾವಿ ತಾಲೂಕು ಎಂದು ಘೋಷಿಸುವಂತೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದಾರೆ. ಅದು ಎಷ್ಟರಮಟ್ಟಿಗೆ ಕಾರ್ಯರೂಪಕ್ಕೆ ಬರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ತಾಲೂಕು ಕೇಂದ್ರಕ್ಕೆ ಪ್ರಮುಖವಾಗಿ ನ್ಯಾಯಾಲಯ, ತಾಪಂ, ಬಂಧಿಖಾನೆ, ತೋಟಗಾರಿಕೆ, ಕೃಷಿ, ಅಗ್ನಿ ಶಾಮಕ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಸೇರಿದಂತೆ ವಿವಿಧ ಇಲಾಖೆ ತಾಲೂಕು ಕಚೇರಿಗಳು ಕಾರ್ಯಾರಂಭಿಸಬೇಕಿದೆ.

Advertisement

ಹುಣಸಗಿ ಹೊಸ ತಾಲೂಕಿಗೆ ತೆಗಳ್ಳಿ, ಬದಲಾಪುರ (ಡಿ), ಸಲಗೊಂಡ (ಡಿ), ಕೊಜ್ಜಪುರ (ಡಿ), ಶಾಕಪುರ (ಎಸ್‌.ಕೆ), ಯಡಿಯಾಪುರ, ಕಲ್ಲದೇವನಹಳ್ಳಿ, ಕಾಮನಟಗಿ, ಬಲಶೆಟ್ಟಿ ಹಾಳ, ಕನಗಂಡನಹಳ್ಳಿ, ಬನ್ನಟ್ಟಿ, ದೇವಾಪುರ (ಜೆ), ಹುಣಸಗಿ, ವಜ್ಜಲ, ಚನ್ನೂರ, ಶ್ರೀನಿವಾಸಪುರ, ಮಂಜಲಪುರ ಹಳ್ಳಿ, ಕೋಳಿಹಾಳ, ಇಸ್ಲಾಂಪುರ, ಗುಂಡಲಗೇರಾ, ಆಗ್ನಿ, ಆಗ್ನಿತೀರ್ಥ, ಕರಿಬಾವಿ, ಅಮಲಿಹಾಳ, ಹಂದ್ರಾಳ (ಜೆ), ಅರಕೇರಾ (ಜೆ), ಸದಬಾ, ಯಡಹಳ್ಳಿ, ಬೈಚ್‌ಬಾಳ್‌, ಕನ್ನಳ್ಳಿ, ಕೊಡಳಗಿ, ಮುದನೂರ (ಕೆ), ಮುದನೂರ (ಬಿ), ರಾಮಪುರ, ಹೆಬ್ಟಾಳ (ಬಿ), ಹೆಬ್ಟಾಳ(ಕೆ), ಸಿದ್ದಾಪುರ (ಬಿ), ಬೈಲಾಪುರ, ಹೊಂಬಾಳಕಾಲ್‌, ಸೊನ್ನಾಪುರ, ಹನಮನಾಳ (ಡಿ), ಇಡ್ಲಾಬಾವಿ, ಬೆಂಚಿಗಡ್ಡಿ, ಕತಾಪುರ ಡಿ, ಕಕ್ಕೇರಾ ಹೋಬಳಿಯ ತೋಳದಿನ್ನಿ.

ಕೋಡೆಕಲ್‌ ಹೋಬಳಿಗೆ ಸೇರಿದ ಗ್ರಾಮಗಳು: ಬಸಪುರ, ತಂಗಡಬೈಲ್‌ (ಡಿ), ಗೆದ್ದಲಮರಿ, ಜುಮಲ್‌ಪುರ, ಬೈಲ್‌ಕುಂಟಿ, ಬೊಮ್ಮಗುಡ್ಡ, ಕಡದರಾಳ, ರಾಜಾವಾಳ, ಹನಮಸಾಗರ, ರಾಜನಕೊಳ್ಳೂರು, ತೀರ್ಥ, ಕೊಡೇಕಲ್‌, ರಾಯನಪಾಳ, ಮರನಾಳ, ಎಣ್ಣಿವಡಗೇರಾ, ಕಮಲಪುರ, ಮದಲಿಂಗನಹಾಳ, ನಾರಾಯಣಪುರ, ಜಂಗಿನಗಡ್ಡಿ, ಮೇಲಿನಗಡ್ಡಿ, ಜೊಗುಂಡಭಾವಿ, ಹುಲಿಕೇರಾ, ರಾಯನಗೋಳ, ಕೋಟೆಗುಡ್ಡ, ಅಮ್ಮಾಪುರ (ಎಸ್‌. ಕೆ), ಬರದೇವನಾಳ, ಕುರೇಕನಾಳ, ಯರಕೀಹಾಳ, ಉಪ್ಪಲದ್ದಿನ್ನಿ, ಬಪ್ಪರಗಾ, ಹಗರಟಗಿ, ಬೂದಿಹಾಳ, ಮಾಳನೂರ, ಮರಳಭಾವಿ, ಗುಳಬಾಳ, ಕುಪ್ಪಿ, ದ್ಯಾಮನಾಳ ಗ್ರಾಮಗಳು ಸೇರ್ಪಡೆ ಮಾಡಲಾಗಿದೆ. ರಾಜ್ಯ ಸರಕಾರ ನೂತನ ತಾಲೂಕನ್ನಾಗಿ ಹುಣಸಗಿ ಪಟ್ಟಣವನ್ನು ಮಾಡಲು ಹೊರಟಿದೆ. ಅದರೊಂದಿಗೆ ಸಿಬ್ಬಂದಿಗಳನ್ನು ನೇಮಿಸಿ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಹಿಂದುಳಿದ ಯಾದಗಿರಿ ಜಿಲ್ಲೆಯಲ್ಲಿ ಮೂರು ತಾಲೂಕುಗಳನ್ನು ಮಾಡುವ ಜಿಲ್ಲೆಯಲ್ಲಿ ಅಧಿಕಾರ ವೀಕೇಂದ್ರಿಕರಿಸಿದ್ದು, ಅದು ಎಷ್ಟರ ಮಟ್ಟಿಗೆ ಯಶಸ್ಸು ದೊರೆಯುತ್ತದೆ ಎಂಬುದು ಮಾತ್ರ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ನೂತನ ತಾಲೂಕುಗಳಲ್ಲಿರುವ ವಿಶೇಷ ತಹಶೀಲ್ದಾರ ಕಚೇರಿಗಳನ್ನೇ ತಾಲೂಕು ಕಚೇರಿಗಳನ್ನಾಗಿ ಮೇಲ್ದರ್ಜೆಗೇರಿಸಲಾಗುವುದು. ಮುಂದಿನ ದಿನಗಳಲ್ಲಿ ಸೂಕ್ತ ಸ್ಥಳಗಳನ್ನು ಗುರುತಿಸಿ ಕಚೇರಿ ನಿರ್ಮಾಣ ಕಾರ್ಯ
ನಡೆಯಲಿದೆ.  
 ಜೆ. ಮಂಜುನಾಥ, ಜಿಲ್ಲಾಧಿಕಾರಿ, ಯಾದಗಿರಿ

ರಾಜೇಶ ಪಾಟೀಲ ಯಡ್ಡಳಿ

Advertisement

Udayavani is now on Telegram. Click here to join our channel and stay updated with the latest news.

Next