Advertisement

ಆಟೋ ಚಾಲಕನಿಗೆ ಯುವತಿಯರ ಶೂ ಏಟು!

12:58 AM Jun 03, 2019 | Team Udayavani |

ಬೆಂಗಳೂರು: ಕಂಠಪೂರ್ತಿ ಮದ್ಯ ಸೇವಿಸಿದ್ದ ಮೂವರು ಯುವತಿಯರು, ಆಟೋ ಚಾಲಕನಿಗೆ “ಶೂ’ನಿಂದ ಹೊಡೆದು ಪರಾರಿಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Advertisement

ಈ ಸಂಬಂಧ ಆಟೋ ಚಾಲಕ, ಕೆಂಗೇರಿಯ ನಾಗದೇವನಹಳ್ಳಿ ನಿವಾಸಿ ಸುರೇಂದ್ರ ಎಂಬವರು ದೂರು ನೀಡಿದ್ದು, ಈ ದೂರು ಆಧರಿಸಿ ಹೈಗ್ರೌಂಡ್ಸ್‌ ಠಾಣೆ ಪೊಲೀಸರು ಗಂಭೀರ ಸ್ವರೂಪವಲ್ಲದ ಪ್ರಕರಣ(ಎನ್‌ಸಿಆರ್‌) ದಾಖಲಿಸಿಕೊಂಡು, ಅಪರಿಚಿತ ಯುವತಿಯರಿಗಾಗಿ ಶೋಧ ನಡೆಸುತ್ತಿದ್ದಾರೆ.

ದೂರುದಾರ ಸುರೇಂದ್ರ ಸುಮಾರು 20 ವರ್ಷಗಳಿಂದ ಕೆಂಗೇರಿಯ ನಾಗದೇವನಹಳ್ಳಿಯಲ್ಲಿ ಕುಟುಂಬ ಸದಸ್ಯರ ಜತೆ ವಾಸವಾಗಿದ್ದು, ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಮೇ 29ರಂದು ರಾತ್ರಿ 8.30ರ ಸುಮಾರಿಗೆ ಸುರೇಂದ್ರ ಎಂ.ಜಿ.ರಸ್ತೆಯಲ್ಲಿ ಆಟೋ ನಿಲ್ಲಿಸಿಕೊಂಡಿದ್ದರು.

ಈ ವೇಳೆ ಮದ್ಯದ ಅಮಲಿನಲ್ಲಿದ್ದ ಮೂವರು ಯುವತಿಯರು ತಮ್ಮನ್ನು ವಿಜಯನಗರದ ಹೊಸಹಳ್ಳಿಗೆ ಕರೆದೊಯ್ಯುವಂತೆ ಕೇಳಿಕೊಂಡಿದ್ದಾರೆ. ಅದಕ್ಕೆ ಒಪ್ಪಿದ ಸುರೇಂದ್ರ ಆಟೋದಲ್ಲಿ ಕುಳಿತುಕೊಳ್ಳಲು ಹೇಳಿದ್ದಾರೆ.

ನಂತರ ಮೀಟರ್‌ ಹಾಕಿ ಕರೆದೊಯ್ಯುವ ಮಾರ್ಗ ಮಧ್ಯೆ ಶಿವಾನಂದ ವೃತ್ತದ ಪ್ರತಿಷ್ಠಿತ ಹೋಟೆಲ್‌ ಒಂದರ ಸಮೀಪ ಮೂವರೂ ಯುವತಿಯರು ಪರಸ್ಪರ ಕಿತ್ತಾಡಿಕೊಂಡು, ಜೋರಾಗಿ ಕಿರುಚಾಡುತ್ತಿದ್ದರು. ಆಗ ಮಧ್ಯೆ ಪ್ರವೇಶಿಸಿದ ಸುರೇಂದ್ರ, “ಯಾಕಮ್ಮ ಚಿರಾಡುತ್ತಿರಾ, ಸುಮ್ಮನೆ ಕುಳಿತುಕೊಳ್ಳಿ’ ಎಂದು ಹೇಳಿದ್ದಾರೆ.

Advertisement

ಅಷ್ಟಕ್ಕೆ ಆಕ್ರೋಶಗೊಂಡ ಯುವತಿಯರು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಸುರೇಂದ್ರ ಅವರು ಕೂಡಲೇ ಆಟೋ ನಿಲ್ಲಿಸಿ, ಯಾಕಮ್ಮ ಬೈತೀರಾ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಯುವತಿಯೊಬ್ಬಳು ಆಟೋದಲ್ಲಿ ಕುಳಿತಲ್ಲಿನಿಂದಲೇ “ಶೂ’ನಿಂದ ಸುರೇಂದ್ರ ಅವರ ಕೆನ್ನೆಗೆ ಹೊಡೆದಿದ್ದಾಳೆ.

ಈ ವೇಳೆ ಆಟೋ ಚಾಲಕ ಮತ್ತು ಯುವತಿಯರ ನಡುವೆ ವಾಗ್ವಾದ ನಡೆದಿದೆ. ಸ್ಥಳದಲ್ಲಿ ಸಾರ್ವಜನಿಕರು ಜಮಾಯಿಸ್ತುತಿದ್ದಂತೆ ಯುವತಿಯರು ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದರು.

ಈ ಸಂಬಂಧ ಸುರೇಂದ್ರ ಅವರು ಮೂವರು ಅಪರಿಚಿತ ಯುವತಿಯರನ್ನು ಪತ್ತೆ ಹಚ್ಚಿ ತಮಗೆ ನ್ಯಾಯ ಕೊಡಿಸುವಂತೆ ದೂರು ನೀಡಿದ್ದಾರೆ ಎಂದು ಹೈಗ್ರೌಂಡ್ಸ್‌ ಠಾಣೆ ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next