Advertisement

ಬೆರಳ ತುದೀಲಿ 54 ಬೆಳೆಗಳ ಮಾಹಿತಿ!

12:43 PM Nov 17, 2018 | Team Udayavani |

ಬೆಂಗಳೂರು: ರೈತರು ಕುಳಿತಲ್ಲಿಯೇ ಸುತ್ತಲಿನ 200 ಕಿ.ಮೀ. ವ್ಯಾಪ್ತಿಯಲ್ಲಿರುವ ಮಾರುಕಟ್ಟೆಗಳ ಧಾರಣೆ ಮಾಹಿತಿ ಪಡೆಯುವ ಜತೆಗೆ ತಮ್ಮ ಪ್ರದೇಶದಲ್ಲಿನ ಬೆಳೆಗಳ ಸುಸ್ಥಿರತೆಯನ್ನೂ ಕಾಪಾಡಬಹುದು!

Advertisement

ಇದಕ್ಕಾಗಿ ರೈತರು ಮಾಡಬೇಕಾದ್ದಿಷ್ಟೇ- ನಿಮ್ಮ ಮೊಬೈಲ್‌ನಲ್ಲಿರುವ ಪ್ಲೇಸ್ಟೋರ್‌ಗೆ ಹೋಗಿ “ಫಾರ್ಮ್ರೈಸ್‌’ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಜಮೀನಿನಲ್ಲಿ ನಿಂತು ಆ ಆ್ಯಪ್‌ನಲ್ಲಿರುವ ಜಿಪಿಎಸ್‌ ಗುಂಡಿಯನ್ನು ಒತ್ತಿದರೆ ಸಾಕು. ಏಕಕಾಲದಲ್ಲಿ 200 ಕಿ.ಮೀ. ವ್ಯಾಪ್ತಿಯಲ್ಲಿನ ಪ್ರಮುಖ ಮಾರುಕಟ್ಟೆಗಳಲ್ಲಿ ಸುಮಾರು 54 ಬೆಳೆಗಳ ಧಾರಣೆ ಪಟ್ಟಿ ದೊರೆಯುತ್ತದೆ. 

ಅಷ್ಟೇ ಅಲ್ಲ, ಹತ್ತು ದಿನಗಳ ಹವಾಮಾನ ಮುನ್ಸೂಚನೆಯೊಂದಿಗೆ ಆ ಪ್ರದೇಶದಲ್ಲಿರುವ ಬೆಳೆಗಳು ಯಾವುವು? ಅವುಗಳಿಗೆ ಯಾವಾಗ ರೋಗಬಾಧೆ ಬರುವ ಸಾಧ್ಯತೆ ಇದೆ? ಅದರ ನಿಯಂತ್ರಣಕ್ಕೆ ರೈತರು ಯಾವ್ಯಾವ ಔಷಧ ಸಿಂಪರಣೆ ಮಾಡಬೇಕು ಎಂಬ ಸಮಗ್ರ ಮಾಹಿತಿ ಸಿಗಲಿದೆ ಎಂದು ಫಾರ್ಮ್ರೈಸ್‌ ಕಂಪನಿಯ ಅಗ್ರೋನಾಮಿ ಮುಖ್ಯಸ್ಥ ಡಾ.ಭಾನುಕಿರಣ್‌ “ಉದಯವಾಣಿ’ಗೆ ತಿಳಿಸಿದರು. ಬೆಂಗಳೂರು ಕೃಷಿ ಮೇಳದ ಸ್ಟಾರ್ಟ್‌ಅಪ್‌ಗ್ಳ ಮಳಿಗೆಗಳಲ್ಲಿ ಈ ಆ್ಯಪ್‌ ಆಕರ್ಷಣೆಯ ಕೇಂದ್ರಬಿಂದು ಆಗಿದೆ.

ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೋ ಮೂಲದ ಬಹುರಾಷ್ಟ್ರೀಯ ಕಂಪನಿಯೊಂದು ಈ ಆ್ಯಪ್‌ ಅಭಿವೃದ್ಧಿಪಡಿಸಿದ್ದು, ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ಗುಜರಾತ್‌, ತೆಲಂಗಾಣ, ಉತ್ತರಪ್ರದೇಶ ಸೇರಿದಂತೆ ದೇಶದ ಆರು ರಾಜ್ಯಗಳಲ್ಲಿ ಕನ್ನಡ ಒಳಗೊಂಡಂತೆ ಆರು ಭಾಷೆಗಳಲ್ಲಿ ಇದನ್ನು ಪರಿಚಯಿಸಲಾಗಿದೆ.

ಸುಮಾರು ಎರಡೂವರೆ ಲಕ್ಷ ರೈತರು ಇದನ್ನು ಬಳಸುತ್ತಿದ್ದು, ಈ ಪೈಕಿ ಮಾಹಿತಿ ತಂತ್ರಜ್ಞಾನದ ರಾಜಧಾನಿ ಎನಿಸಿರುವ ಕರ್ನಾಟಕದಲ್ಲೇ ಅತಿ ಹೆಚ್ಚು (70 ಸಾವಿರ) ರೈತರು ಆ್ಯಪ್‌ನ ಉಪಯೋಗ ಪಡೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬಿಹಾರ, ಹರಿಯಾಣ, ರಾಜಸ್ತಾನ, ಉತ್ತರಾಖಂಡದಲ್ಲೂ ಆ್ಯಪ್‌ ಪರಿಚಯಿಸುವ ಗುರಿ ಇದೆ ಎಂದು ಅವರು ಹೇಳಿದರು.

Advertisement

ಹತ್ತಿ, ಮೆಕ್ಕೆಜೋಳ ರೈತರೇ ಹೆಚ್ಚು: ಹವಾಮಾನ ಮುನ್ಸೂಚನೆಗಾಗಿ ಸ್ಕೈಮೇಟ್‌ ಜತೆ ಕಂಪನಿಯು ಒಪ್ಪಂದ ಮಾಡಿಕೊಂಡಿದೆ. ಕಳೆದ ವರ್ಷ ಮೇ ತಿಂಗಳಿಂದ ಇದು ಕಾರ್ಯನಿರ್ವಹಿಸುತ್ತಿದ್ದು, ರೈತರಿಗೆ ಬಹುತೇಕ ನಿಖರ ಮಾಹಿತಿ ಲಭ್ಯವಾಗುತ್ತಿದೆ.

ರಾಜ್ಯದಲ್ಲಿ ಹತ್ತಿ ಮತ್ತು ಮೆಕ್ಕೆಜೋಳ ಬೆಳೆಗಾರರು ಹಾಗೂ ಮಹಾರಾಷ್ಟ್ರದಲ್ಲಿ ಈರುಳ್ಳಿ ಬೆಳೆಗಾರರು ಹವಾಮಾನ ಮುನ್ಸೂಚನೆಯ ಹೆಚ್ಚು ಉಪಯೋಗ ಪಡೆಯುತ್ತಿದ್ದಾರೆ. ಹತ್ತಾರು ಮಾರುಕಟ್ಟೆಗಳ ದೂರ ಮತ್ತು ಅಲ್ಲಿನ ಧಾರಣೆ ಲಭ್ಯವಾಗುವುದರಿಂದ ಬೆಳೆಯನ್ನು ಎಲ್ಲಿ ಕೊಂಡೊಯ್ದರೆ ತಮಗೆ ಲಾಭ ಆಗುತ್ತದೆ ಎಂಬುದನ್ನು ರೈತರು ಸುಲಭವಾಗಿ ನಿರ್ಧರಿಸಬಹುದು. ಮಾರುಕಟ್ಟೆ ದೂರ ಗೊತ್ತಾಗುವುದರಿಂದ ಸಾಗಣೆ ವೆಚ್ಚವನ್ನೂ ಲೆಕ್ಕಹಾಕಬಹುದು.

ಏನು ಉಪಯೋಗ?: ಆಯಾ ಪ್ರದೇಶಗಳಲ್ಲಿನ ವಿವಿಧ ಬೆಳೆಗಳ ಬಿತ್ತನೆಯಿಂದ ಹಿಡಿದು ಪ್ರತಿ ಹಂತದ ಮಾಹಿತಿ ಸಿಗುವುದರಿಂದ ಬೆಳೆ ಸಂರಕ್ಷಣೆಗೂ ಅನುಕೂಲ ಆಗಲಿದೆ. ಇದಲ್ಲದೆ, ಸಂಬಂಧಿತ ಕೃಷಿ ವಿಷಯದ ಬಗ್ಗೆ ಪರಸ್ಪರ ಸಂಪರ್ಕ ಸಾಧಿಸಲು ರೈತರಿಗೆ ಸಂವಹನಾತ್ಮಕ ವೇದಿಕೆ ಇದರಲ್ಲಿದೆ. ಆಯ್ದ ಕೃಷಿ ಮತ್ತು ಗ್ರಾಮೀಣ ಸಂಬಂಧಿ ಸರ್ಕಾರಿ ನೀತಿಗಳು, ಇತ್ತೀಚಿನ ಸುದ್ದಿಗಳು, ಕಾರ್ಯಕ್ರಮಗಳ ವಿವರವನ್ನು ಕೂಡ ಆ್ಯಪಅ ಮೂಲಕ ಪಡೆಯಬಹುದು ಎಂದು ತಿಳಿಸಿದರು.

ಪ್ರಸ್ತುತ ಆನ್‌ಲೈನ್‌ ಮಾರುಕಟ್ಟೆ ವ್ಯವಸ್ಥೆ ರಾಜ್ಯದಲ್ಲಿ ಇದೆ. ಆದರೆ, ಅದು ಆಯ್ದ ಮಾರುಕಟ್ಟೆಗಳಿಗೆ ಸೀಮಿತವಾಗಿದ್ದು, ಅದರ ಲಾಭ ರೈತರಿಗೆ ಸಮರ್ಪಕವಾಗಿ ದೊರೆಯುತ್ತಿಲ್ಲ ಎಂಬ ಆರೋಪವೂ ಇದೆ. ಈಗ ಬಹುತೇಕ ರೈತರು ಸ್ಮಾರ್ಟ್‌ಫೋನ್‌ ಹೊಂದಿರುವುದರಿಂದ ಈ ಆ್ಯಪ್‌ನ ಲಾಭ ಪಡೆಯಬಹುದು. ಸದ್ಯ ಆ್ಯಂಡ್ರಾಯ್ಡ ಫೋನ್‌ಗಳಲ್ಲಿ ಮಾತ್ರ ಈ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳುವ ಸೌಲಭ್ಯ ಇದೆ ಎಂದರು.

ಡೌನ್‌ಲೋಡ್‌ ಹೀಗೆ 
ಸ್ಮಾರ್ಟ್‌ಫೋನ್‌ಗಳಲ್ಲಿ ಗೂಗಲ್‌ ಪ್ಲೇ ಸ್ಟೋರ್‌ಗೆ ಹೋಗಿ, ಫಾರ್ಮ್ರೈಸ್‌ (FARMRISE) ಎಂದು ಟೈಪ್‌ ಮಾಡಿ. ಡೌನ್‌ಲೋಡ್‌ ಮೇಲೆ ಕ್ಲಿಕ್‌ ಮಾಡಿ. ಅಂದ ಹಾಗೆ ಇದು ಸಂಪೂರ್ಣ ಉಚಿತ ಆ್ಯಪ್‌. ಪ್ರಾಯೋಗಿಕ ಹಂತದಲ್ಲಿ ಇರುವುದರಿಂದ ಇದು ಉಚಿತವಾಗಿದ್ದು, ಮುಂದಿನ ದಿನಗಳಲ್ಲಿ ಇದಕ್ಕೆ ಶುಲ್ಕ ವಿಧಿಸುವ ಸಾಧ್ಯತೆಯೂ ಇದೆ.

ಆ್ಯಪ್‌ನಲ್ಲಿ ಇವೆಲ್ಲಾ ಮಾಹಿತಿ ಲಭ್ಯ
-200 ಕಿ.ಮೀ. ವ್ಯಾಪ್ತಿಯಲ್ಲಿನ ಪ್ರಮುಖ ಮಾರುಕಟ್ಟೆಗಳ ಮಾಹಿತಿ.
-ಮಾರುಕಟ್ಟೆಗಳಲ್ಲಿನ 54 ಪ್ರಮುಖ ಬೆಳೆಗಳ ಧಾರಣೆ ಪಟ್ಟಿ.
-ಹತ್ತು ದಿನಗಳ ಹವಾಮಾನ ಮುನ್ಸೂಚನೆ.
-ಬಿತ್ತನೆ, ಬಿತ್ತನೆ ನಂತರದ ಪ್ರತಿ ಹಂತದ ಮಾಹಿತಿ.
-ಆಯಾ ಪ್ರದೇಶದಲ್ಲಿರುವ ಬೆಳೆಗಳು.
-ಬೆಳೆಗೆ ರೋಗಬಾಧೆ ಬರುವ ಮುನ್ಸೂಚನೆಗಳು.
-ರೋಗ ನಿಯಂತ್ರಣಕ್ಕೆ ಯಾವ ಔಷಧ ಸಿಂಪಡಿಸಬೇಕು.
-ಕೃಷಿ ಕುರಿತು ಪರಸ್ಪರ ಚರ್ಚಿಸಲು ಸಂವಹನಾತ್ಮಕ ವೇದಿಕೆ.
-ಆಯ್ದ ಕೃಷಿ ಮತ್ತು ಗ್ರಾಮೀಣ ಸಂಬಂಧಿ ಸರ್ಕಾರಿ ನೀತಿಗಳು.
-ಕೃಷಿಗೆ ಸಂಬಂಧಿಸಿದ ಇತ್ತೀಚಿನ ಸುದ್ದಿಗಳು, ಕಾರ್ಯಕ್ರಮಗಳ ವಿವರ.

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next