Advertisement

ಕ್ಷೇತ್ರ ಸಣ್ಣದು, ಸಮಸ್ಯೆ-ಬೇಡಿಕೆ ದೊಡ್ಡದು

04:06 PM Apr 09, 2018 | |

ದಾವಣಗೆರೆ: ಜನವಸತಿ ಪ್ರದೇಶದ ಟಿಕೆಟ್‌ ಆಕಾಂಕ್ಷಿಗಳು ವಿಷಯ ಬಂದಾಗ ಅತಿ ಸಣ್ಣದು ಎನ್ನಬಹುದಾದ, ಜನಸಂಖ್ಯೆ ಪ್ರಮಾಣ ನೋಡಿದಾಗ ದೊಡ್ಡದು ಎನ್ನಬಹುದಾದ ಕ್ಷೇತ್ರ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ. ಅಲ್ಪಸಂಖ್ಯಾತ ಸಮುದಾಯದ ಮುಸ್ಲಿಮರು ಅತಿ ಹೆಚ್ಚು ಇರುವ ಪ್ರದೇಶ ಈ ಕ್ಷೇತ್ರ ವ್ಯಾಪ್ತಿಯಲ್ಲಿದೆ. ಹಾಗಾಗಿಯೇ ಆ ಸಮುದಾಯದ ಪ್ರೀತಿ-ವಿಶ್ವಾಸಗಳಿಸಿದವರಿಗೆ ವಿಜಯಲಕ್ಷ್ಮಿ ನಿಶ್ಚಿತ. 

Advertisement

2008ರಲ್ಲಿ ಕ್ಷೇತ್ರ ಪುನರ್‌ ವಿಂಗಡಣೆಯಾದ ನಂತರ 3ನೇ ಚುನಾವಣೆಗೆ ಕ್ಷೇತ್ರ ಸಜ್ಜಾಗುತ್ತಿದೆ. 2 ಬಾರಿಯೂ ಕಾಂಗ್ರೆಸ್‌ನ ಶಾಮನೂರು ಶಿವಶಂಕರಪ್ಪ ಗೆಲುವು ಸಾಧಿಸಿದ್ದಾರೆ. ಸದ್ಯ ಈ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆ ಎಂಬಂತಿದೆ. ದಾವಣಗೆರೆ ಮಹಾನಗರ ಪಾಲಿಕೆಯ 1ರಿಂದ 17, 22, 27ನೇ ವಾರ್ಡ್‌ ವ್ಯಾಪ್ತಿಯ ಜೊತೆಗೆ ದಾವಣಗೆರೆ ಜಿಲ್ಲಾ ಪಂಚಾಯತ್‌ನ ಹದಡಿ ಜಿಲ್ಲಾ ಪಂಚಾಯತ್‌ ಕ್ಷೇತ್ರದ ಹಳ್ಳಿಗಳು ಈ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುತ್ತವೆ. ಕ್ಷೇತ್ರ ಪುನರ್‌ ವಿಂಗಡಣೆ ವೇಳೆ ದಾವಣಗೆರೆ ವಿಧಾನಸಭಾ ಕ್ಷೇತ್ರವನ್ನು ದಾವಣಗೆರೆ ದಕ್ಷಿಣ, ಉತ್ತರ ಎಂದು ವಿಂಗಡಿಸಲಾಯಿತು. ಅವಿಭಜಿತ ದಾವಣಗೆರೆ ಕ್ಷೇತ್ರ ಸದಾ ಕಾಂಗ್ರೆಸ್‌ ತೆಕ್ಕೆಯಲ್ಲಿಯೇ ಇದೆ. ಕಮ್ಯುನಿಸ್ಟ್‌ ಪಕ್ಷ ಉತ್ತುಂಗದಲ್ಲಿದ್ದಾಗ ಮೂರು ಬಾರಿ ಪಂಪಾಪತಿ ಆಯ್ಕೆಯಾಗಿದ್ದರು. ನಂತರ ಕಾಂಗ್ರೆಸ್‌ ತೆಕ್ಕೆಗೆ ಬಂದಿರುವ ಈ ಕ್ಷೇತ್ರ ವಿಭಜನೆ ನಂತರವೂ ತನ್ನ ಪಾರಮ್ಯ ಮುಂದುವರಿಸಿಕೊಂಡು ಹೋಗಿದೆ. 

ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಪ್ರದೇಶದ ಅಭಿವೃದ್ಧಿ ತಕ್ಕಮಟ್ಟಿಗೆ ಆಗಿದೆ. ಪಾಲಿಕೆ ವ್ಯಾಪ್ತಿಯ ವಾರ್ಡ್‌ಗಳಲ್ಲೂ ಮೂಲಭೂತ ಸೌಕರ್ಯ ಕಲ್ಪಿಸಲಾಗಿದೆ. ಆದರೆ ಕುಡಿಯುವ ನೀರು, ಸ್ವತ್ಛತೆಯ ಸಮಸ್ಯೆ ಕ್ಷೇತ್ರದ ಪಾಲಿಕೆಗೆ ಸೇರಿದ ಪ್ರದೇಶದ ಜನರನ್ನು ನಿರಂತರವಾಗಿ ಕಾಡುತ್ತಿವೆ. ಈ ಕ್ಷೇತ್ರದ ಅರ್ಧ ಭಾಗ ದಾವಣಗೆರೆಗೆ ಸೇರಿದ್ದರೂ ನಗರದ ಹೊಸ ಬಡಾವಣೆಯಷ್ಟು ಅಭಿವೃದ್ಧಿ ಆಗಿಲ್ಲ ಎಂಬುದು ಕೇಳಿ ಬರುವ ಆರೋಪ. ರಸ್ತೆ, ನೀರು, ಚರಂಡಿ, ಯುಜಿಡಿ, ಸುಸಜ್ಜಿತ ಆಸ್ಪತ್ರೆ, ಹೈಟೆಕ್‌ ಕಾಲೇಜ್‌ ಈ ಭಾಗದ ಮಂದಿಗೆ ಮರೀಚಿಕೆ. ಕ್ಷೇತ್ರದ ಜನ ಆರ್ಥಿಕವಾಗಿ ಬಲಾಡ್ಯರಲ್ಲ. ಹಾಗಾಗಿ ಮೂಲಭೂತ ಸೌಕರ್ಯದ ಜತೆಗೆ ಶಾಶ್ವತ ಸೂರು, ನಿವೇಶನಕ್ಕಾಗಿ ಆಗಾಗ ಬೀದಿಗಿಳಿಯುತ್ತಾರೆ.

ಕ್ಷೇತ್ರದಲ್ಲಿ ಬಿಜೆಪಿ ಯಿಂದ ಕಣಕ್ಕಿಳಿದವರ ಪೈಕಿ ಪಕ್ಷದ ಹಾಲಿ ಜಿಲ್ಲಾಧ್ಯಕ್ಷ ಯಶವಂತರಾವ್‌ ಜಾಧವ್‌ ಮಾತ್ರ ಕಾಂಗ್ರೆಸ್‌ಗೆ ತೀವ್ರ ಪೈಪೋಟಿ ನೀಡಿದ್ದರು. 2008ರ ಚುನಾವಣೆಯಲ್ಲಿ 6,358 ಮತಗಳ ಅಂತರದಲ್ಲಿ ಜಯ ಸಾಧಿಸಿದ್ದ ಶಾಮನೂರು, 2013ರ ಚುನಾವಣೆಯಲ್ಲಿ ಜೆಡಿಎಸ್‌ನ ಸೈಯ್ಯದ್‌ ಸೈಫುಲ್ಲಾ, ಬಿಜೆಪಿಯ ಬಿ. ಲೋಕೇಶ್‌ ವಿರುದ್ಧ ಭರ್ಜರಿ ಜಯ ಸಾಧಿಸಿದ್ದರು. ಒಟ್ಟು 1,82,370 ಮತದಾರರ ಪೈಕಿ 1,20,410 (ಶೇ.66.05) ಮಂದಿ ಮತ ಚಲಾಯಿಸಿದ್ದರು. ಈ ಪೈಕಿ ಶೇ. 55ರಷ್ಟು ಶಾಮನೂರು ಶಿವಶಂಕರಪ್ಪನವರ ಪರ ಮತ ಚಲಾಯಿಸಿದ್ದರು. ಶಿವಶಂಕರಪ್ಪ 66,320 ಮತ ಗಳಿಸಿದ್ದರು. 2ನೇ ಸ್ಥಾನದಲ್ಲಿದ್ದ ಜೆಡಿಎಸ್‌ನ ಸೈಯದ್‌ ಸೈಫುಲ್ಲಾ 26,162 ಮತ ಗಳಿಸಿದ್ದರು. ಬಿಜೆಪಿ ಅಭ್ಯರ್ಥಿ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಈ ಬಾರಿ ಕಾಂಗ್ರೆಸ್‌ನಿಂದ ಮತ್ತೆ ನಾನೇ ಅಭ್ಯರ್ಥಿ ಎಂಬುದಾಗಿ ಶಾಮನೂರು ಶಿವಶಂಕರಪ್ಪ ಹಲವಾರು ಬಾರಿ ಹೇಳಿದ್ದಾರೆ. ಬಿಜೆಪಿ ಪರಿವರ್ತನಾ ಯಾತ್ರೆ ಸಂದರ್ಭದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಯಶವಂತರಾವ್‌ ಜಾಧವ್‌ರನ್ನು ಗೆಲ್ಲಿಸಿ ಎಂದು ಹೇಳಿದ್ದರು. ಆದರೂ ಇನ್ನೊಂದು ಕಡೆ ಮುಖಂಡ ಎಚ್‌.ಎಸ್‌. ನಾಗರಾಜ್‌ ಸಹ ಟಿಕೆಟ್‌ಗೆ ಭಾರೀ ಪ್ರಯತ್ನ ಮಾಡುತ್ತಿದ್ದಾರೆ. ಜೆಡಿಎಸ್‌ನಿಂದ ಜೆ. ಅಮಾನುಲ್ಲಾ ಖಾನ್‌ ಅಥವಾ ರಾಜಾಸಾಬ್‌ ಕಣಕ್ಕೆ ಇಳಿಯಲಿದ್ದಾರೆ. ಕಾಂಗ್ರೆಸ್‌ ತೆಕ್ಕೆಯಿಂದ ಈ ಬಾರಿ ಶತಾಯಗತಾಯ ಕ್ಷೇತ್ರವನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಬಿಜೆಪಿ ಇನ್ನಿಲ್ಲದ ಯತ್ನ ಮಾಡುತ್ತಿದೆ. ಈ ಬಾರಿ ಮುಸ್ಲಿಂ ಯುವ ಪಡೆಯನ್ನೂ ಸಹ ತನ್ನ ಬೆನ್ನಿಗೆ ಕಟ್ಟಿಕೊಂಡು ಬೂತ್‌ಮಟ್ಟದಿಂದ ಕಾರ್ಯ ಆರಂಭಿಸಿದೆ.

ಇತ್ತ ಕಾಂಗ್ರೆಸ್‌ನಲ್ಲಿ ಶಾಮನೂರು ಶಿವಶಂಕರಪ್ಪನವರಿಗೆ ವಯಸ್ಸಾಗಿದೆ ಟಿಕೆಟ್‌ ನೀಡುವುದು ಬೇಡ. ಈ ಬಾರಿ ಮುಸ್ಲಿಮರಿಗೆ ನೀಡಲಿ ಎಂದು ಮುಸ್ಲಿಂ ಮುಖಂಡರ ಗುಂಪು ಕೇಳಿಕೊಂಡರೆ, ಟಿಕೆಟ್‌ ಆಕಾಂಕ್ಷಿ ಎಂದು ಹೇಳಿಕೊಳ್ಳುತ್ತಿರುವ ಸಾಧಿಕ್‌ ಪೈಲ್ವಾನ್‌ರ ಸಹೋದರ, ದೂಡಾ ಮಾಜಿ ಅಧ್ಯಕ್ಷ ಆಯೂಬ್‌ ಪೈಲ್ವಾನ್‌ ಶಾಮನೂರು ಶಿವಶಂಕರಪ್ಪನವರಿಗೇ ಟಿಕೆಟ್‌ ನೀಡಬೇಕು ಎಂದಿದ್ದಾರೆ. ಜೊತೆಗೆ ಮುಸ್ಲಿಂ ಸಮಾಜದಿಂದ ಶಾಸಕರಾಗಬೇಕು ಎಂಬ ಕೂಗಿಗೆ ಈ ಹಿಂದಿನ ಚುನಾವಣೆ ವೇಳೆ ಹೇಳಿದಂತೆ ಅಬ್ದುಲ್‌ ಜಬ್ಟಾರ್‌ರನ್ನು ವಿಧಾನ ಪರಿಷತ್‌ ಸದಸ್ಯರನ್ನಾಗಿ ಮಾಡಿದ್ದಾರೆ. 

Advertisement

ಹೀಗಾಗಿ ಮತ್ತೆ ನಾವು ಸಮಾಜದವರಿಗೆ ಟಿಕೆಟ್‌ ಕೊಡಿ ಎಂದು ಕೇಳುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ. ಹಾಗಾಗಿ ಶಾಮನೂರು ಶಿವಶಂಕರಪ್ಪನವರಿಗೆ ಕಳೆದ ಬಾರಿಯಷ್ಟು ಈ ಸಲ ಟಿಕೆಟ್‌ಗೆ ವಿರೋಧ ವ್ಯಕ್ತವಾಗಲ್ಲ ಎಂದಾದರೂ ಬೇರೆ ಮುಖಂಡರು ಟಿಕೆಟ್‌ ಪ್ರಯತ್ನದಿಂದ ಹಿಂದೆ ಸರಿಯಲ್ಲ ಎಂದೇನೂ ಇಲ್ಲ
 
ಕ್ಷೇತ್ರದ ಬೆಸ್ಟ್‌ ಏನು?
ಬಹುತೇಕ ರಸ್ತೆಗಳು ಸಿಮೆಂಟೀಕರಣಗೊಂಡಿವೆ. ಮಳೆಗಾಲದಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗುತ್ತಿದ್ದ ಸಮಸ್ಯೆಗೆ ರಾಜಕಾಲುವೆ ಪುನರ್‌ ನಿರ್ಮಾಣದ ಮೂಲಕ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಜಲಸಿರಿ ಯೋಜನೆ ಮೂಲಕ ವಾರದ 7 ದಿನ 24 ತಾಸು ನೀರು ಒದಗಿಸುವ ಕಾಮಗಾರಿ ಆರಂಭವಾಗಿದೆ. ಇನ್ನು ಇಡೀ ನಗರದ ಕೊಳಚೆ ನೀರಿನ ಸಮಸ್ಯೆ ಪರಿಹಾರಕ್ಕೆ ಕೊಳಚೆ ನೀರು ಶುದ್ಧೀಕರಣ ಘಟಕ ಸ್ಥಾಪಿಸಲಾಗಿದೆ.

ಕ್ಷೇತ್ರದ ದೊಡ್ಡ  ಸಮಸ್ಯೆ?
ಆಜಾದ್‌ ನಗರ, ಅಹ್ಮದ್‌ ನಗರ, ಹೆಗಡೆ ನಗರ, ಶಿವನಗರ, ಆಶ್ರಯ ಬಡಾವಣೆಗಳು ಇಂದಿಗೂ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿವೆ. ಮುಖ್ಯವಾಗಿ ಕುಡಿಯುವ ನೀರಿನ ಅಭಾವ, ಸ್ವತ್ಛತೆಯ ಕೊರತೆ ಇಲ್ಲಿ ಎದ್ದು ಕಾಣುತ್ತದೆ. ಇದೆಲ್ಲಕ್ಕೂ ಮುಖ್ಯವಾಗಿ ವಸತಿಹೀನರ ಸಮಸ್ಯೆ ಈ ಪ್ರದೇಶವನ್ನು ಬಹುವಾಗಿ ಕಾಡುತ್ತಿದೆ. ಅತಿ ಸಣ್ಣ ಮನೆಗಳಲ್ಲಿ 10-20 ಜನ ವಾಸಮಾಡುತ್ತಿದ್ದಾರೆ. 2002ರಲ್ಲಿ ಮಲ್ಲಿಕಾರ್ಜುನ್‌ ಸಚಿವರಾಗಿದ್ದ ಸಂದರ್ಭದಲ್ಲಿ ಆಶ್ರಯ ಮನೆ ನಿರ್ಮಾಣ ಮಾಡಿ ಹಂಚಿಕೆ ಮಾಡಿದ್ದು ಬಿಟ್ಟರೆ ಈವರೆಗೆ ಒಂದೂ ಆಶ್ರಯ ಮನೆ ನಿರ್ಮಾಣ ಸಾಧ್ಯವಾಗಿಲ್ಲ. ಈ ಭಾಗದಲ್ಲಿ ಒಂದು ಪದವಿ ಕಾಲೇಜಾಗಲಿ, ಆಸ್ಪತ್ರೆಯಾಗಲಿ ಇಲ್ಲ. ನಗರದ ಒಟ್ಟು ಜನಸಂಖ್ಯೆಯಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ ಈ ಪ್ರದೇಶದಲ್ಲಿ ಸರ್ಕಾರಿ ಕಾಲೇಜ್‌ ಇಲ್ಲ. ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದುರ್ಗಾಂಬಿಕಾ ದೇವಸ್ಥಾನ, ಮಂಡಕ್ಕಿ ಭಟ್ಟಿ, ಮಂಡಿಪೇಟೆ ಒಳಗೊಂಡಂತೆ 5
ಭಾಗಗಳನ್ನು ಸ್ಮಾರ್ಟ್‌ಸಿಟಿ ಯೋಜನೆಯಡಿ ಅಭಿವೃದ್ಧಿಗೆ ಆಯ್ಕೆ ಮಾಡಲಾಗಿದೆ. ಆದರೆ, ಈವರೆಗೆ ಕಾಮಗಾರಿ ಉದ್ಘಾಟನೆ ಬಿಟ್ಟರೆ ಬೇರೆ ಯಾವ ಅಭಿವೃದ್ಧಿ ಆಗಿಲ್ಲ

ಶಾಸಕರು ಏನಂತಾರೆ?
ದಕ್ಷಿಣ ಕ್ಷೇತ್ರ ವ್ಯಾಪ್ತಿಯ ಅಭಿವೃದ್ಧಿಗೆ ಸಾಕಷ್ಟು ಕಾರ್ಯಕ್ರಮ
ಹಮ್ಮಿಕೊಳ್ಳಲಾಗಿದೆ. ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಜಲಸಿರಿ ಯೋಜನೆ ಜಾರಿ ಮಾಡಲಾಗುತ್ತಿದೆ. ಸ್ವತ್ಛತೆಗೆ ಒತ್ತು ನೀಡಲಾಗುತ್ತಿದೆ. ಇಲ್ಲಿನ ನಿರ್ವಸತಿಗರಿಗೆ ಸೂರು ಕೊಡುವ ಸಲುವಾಗಿ ಯೋಜನೆ ರೂಪಿಸಲಾಗಿದೆ. ಇಡೀ ನಗರದಲ್ಲಿ ಎಲ್ಲರಿಗೂ ಸೂರು ಕಲ್ಪಿಸುವ ಉದ್ದೇಶ ಇದೆ. ಇನ್ನು ಶಾಲೆ, ಕಾಲೇಜು
ಆರಂಭದ ವಿಷಯದಲ್ಲಿ ಈಗಾಗಲೇ ಸರ್ಕಾರದ ಹಂತದಲ್ಲಿ ಮಾತುಕತೆ ನಡೆದಿದೆ. ಪದವಿ ಕಾಲೇಜು, ಇನ್ನೊಂದು ಸರ್ಕಾರಿ ಆಸ್ಪತ್ರೆ ಆರಂಭಕ್ಕೂ ಕ್ರಮ ವಹಿಸಲಾಗುವುದು.
ಶಾಮನೂರು ಶಿವಶಂಕರಪ್ಪ

ಕ್ಷೇತ್ರದ ಮಹಿಮೆ
ರಾಜ್ಯದ ಮನೆ ಮಾತಾಗಿರುವ ದಾವಣಗೆರೆ ನಗರ ದೇವತೆ
ಶ್ರೀ ದುರ್ಗಾಂಬಿಕಾ ದೇವಸ್ಥಾನ, ಹಳೇಪೇಟೆ ಶ್ರೀ ವೀರಭದ್ರೇಶ್ವರ ದೇವಸ್ಥಾನ, ಕೈದಾಳೆ ಗ್ರಾಮದ
ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನ, ಹದಡಿಯ
ಶ್ರೀ ಚಂದ್ರಗಿರಿಮಠ, ಬೆಳವನೂರು ಸಮೀಪದ ಕಲ್ಲುಬಂಡೆಮಠ ಪ್ರಮುಖ ಧಾರ್ಮಿಕ ತಾಣ.
 
ಹಂದಿ, ಬೀದಿ ನಾಯಿ, ಬಿಡಾಡಿ ದನಗಳ ಕಾಟ ಕ್ಷೇತ್ರದ ಪ್ರಮುಖ ಸಮಸ್ಯೆ. ಇವುಗಳ ನಿವಾರಣೆಗೆ ಶಾಸಕರು ಯಾವುದೇ ಕ್ರಮ ವಹಿಸಿಲ್ಲ. ಇನ್ನೂ ಕೆಲವು ಕಡೆ ರಸ್ತೆ ಚರಂಡಿ
ನಿರ್ಮಾಣ ಆಗಬೇಕಿದೆ. ಸ್ವತ್ಛತೆ ವಿಷಯದಲ್ಲಿ ಪಾಲಿಕೆಯವರು
ಕೈಕಟ್ಟಿ ಕುಳಿತಿದ್ದಾರೆ. ಪೌರ ಕಾರ್ಮಿಕರ ಸಂಖ್ಯೆ ಕಡಿಮೆ ಇದೆ.
ಈ ಭಾಗದಲ್ಲಿ ಹೆಚ್ಚಿನ ಕಸ ಸಂಗ್ರಹ ಆಗುತ್ತಿದ್ದು, ನಿರ್ವಹಣೆಗೆ ಜನ ಸಾಕಾಗುತ್ತಿಲ್ಲ ಎಂಬ ಸಬೂಬು ಹೇಳುತ್ತಾರೆ. ಹೀಗಾಗಿ ಕ್ರಿಮಿಕೀಟದ ಹಾವಳಿ ಹೆಚ್ಚಿದೆ.
 ಆರ್‌. ಚಂದ್ರು, ಬಂಬೂಬಜಾರ್‌ ನಿವಾಸಿ

ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪನವರು ಸಾಕಷ್ಟು ಕೆಲಸ ಮಾಡಿದ್ದಾರೆ. ಆದರೆ, ಈ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ನೀಡುವ ಸಾಮಾನ್ಯ ಅನುದಾನ, ಶಾಸಕರ ಅನುದಾನ ಸಾಲಲ್ಲ. ಬದಲಿಗೆ ವಿಶೇಷ ಪ್ಯಾಕೇಜ್‌ ಕೊಡಬೇಕಿದೆ. ಇಲ್ಲಿ ಬಹುತೇಕ ಬಡ, ಮಧ್ಯಮ ವರ್ಗದ ನಿವಾಸಿಗಳಿದ್ದು ಇವರ ಕೈಯಲ್ಲಿ ನಿವೇಶನ, ಮನೆ ಖರೀದಿ
ಸಾಧ್ಯವಿಲ್ಲ. ಬಾಡಿಗೆ ಕಟ್ಟಿ ಜೀವನ ನಡೆಸುವುದು ಕಷ್ಟ. ಹಾಗಾಗಿ ಸಣ್ಣ ಮನೆಯಲ್ಲಿಯೇ ಎಲ್ಲರೂ ವಾಸ ಮಾಡುತ್ತಾರೆ. ಇವರಿಗೆ ಮನೆ ಕೊಡಿಸಲು ವಿಶೇಷ ಯೋಜನೆ ಬೇಕಿದೆ.
 ಅಶ್ಫಕ್‌ ಆಲಿ, ಅಹಮದ್‌ ನಗರ ನಿವಾಸಿ

ಈ ಭಾಗದ ಚರಂಡಿಗಳು ಸದಾ ತುಂಬಿ ತುಳುಕುತ್ತವೆ.
ಚರಂಡಿ ಸ್ವತ್ಛತೆ ಸಿಬ್ಬಂದಿಯಿಂದ ಸಾಧ್ಯವಿಲ್ಲ. ಅತಿ ಹೆಚ್ಚು
ಜನ ವಾಸಮಾಡುವ ಈ ಪ್ರದೇಶದಲ್ಲಿ ಹಂದಿಗಳ ಹಾವಳಿ ವಿಪರೀತ ಇದೆ. ಹಂದಿ ನಿಯಂತ್ರಣ ಮೊದಲು ಆಗಬೇಕು. ಜನರಲ್ಲೂ ಸಹ ಸ್ವತ್ಛತೆ ಕುರಿತು ಅರಿವು ಮೂಡಿಸಬೇಕು. ದುಡಿದ ಹಣದಲ್ಲಿ ಬಹುತೇಕ ಆಸ್ಪತ್ರೆಗೆ ವೆಚ್ಚ ಮಾಡುವುದನ್ನು ತಪ್ಪಿಸಲು ಮೊದಲು ನೈರ್ಮಲ್ಯ ವಾತಾವರಣ ಬೇಕು.  ಶೇರ್‌ಆಲಿ, ಆಜಾದ್‌ನಗರ ನಿವಾಸಿ

ಸಂಚಾರ ವ್ಯವಸ್ಥೆ ಸುಧಾರಣೆ ಆಗಬೇಕು. ಇರುವ ಸಣ್ಣ ಸಣ್ಣ ರಸ್ತೆಗಳ ಜೊತೆಗೆ ಪ್ರಮುಖ ರಸ್ತೆಗಳಲ್ಲಿ ವ್ಯವಸ್ಥಿತ
ಫುಟ್‌ಪಾತ್‌ ನಿರ್ಮಾಣ ಆಗಬೇಕು. ರಸ್ತೆ ಬದುಗಳಲ್ಲಿ ಮರ ಬೆಳೆಸುವ ಕಾರ್ಯ ಆಗಬೇಕು. ಪಾರ್ಕ್‌ಗಳು ಅಭಿವೃದ್ಧಿ ವಂಚಿತ ಆಗಿವೆ. ಈ ಭಾಗದಲ್ಲಿ ಆಸ್ಪತ್ರೆ, ಪದವಿ ಕಾಲೇಜು ತೆರೆಯಬೇಕಿದೆ.
 ಗಿರೀಶ್‌ ದೇವರಮನಿ, ಪರಿಸರಪರ ಹೋರಾಟಗಾರ.

ಪಾಟೀಲ್‌ ವೀರನಗೌಡ

Advertisement

Udayavani is now on Telegram. Click here to join our channel and stay updated with the latest news.

Next