Advertisement

ಪ್ರತಿಪಕ್ಷಗಳಿಗೆ ಭಯವೇ ಬಂಡವಾಳ

12:30 AM Mar 23, 2019 | Team Udayavani |

ಮನೋಹರ್‌ ಪರ್ರಿಕರ್‌ ನಿಧನಾ ನಂತರ ಗೋವಾದಲ್ಲಿ ನೂತನ ಮುಖ್ಯಮಂತ್ರಿಯನ್ನು ನೇಮಿಸಿ ಪರೀಕ್ಷೆ ಪಾಸಾಗಿದ್ದೀರಿ. ಆದರೆ ಇಲ್ಲಿ ಮುಖ್ಯಪ್ರಶ್ನೆ ಏನೆಂದರೆ, ಜನರು ಮೋದಿ ಸರ್ಕಾರವನ್ನು ಹೇಗೆ ಮೌಲ್ಯಮಾಪನ ಮಾಡುತ್ತಾರೆ ಎನ್ನುವುದು… 
50 ವರ್ಷಗಳಲ್ಲಿ ಆಗದ ಕೆಲಸಗಳನ್ನು ನಾವು 5 ವರ್ಷದಲ್ಲಿ ಮಾಡಿದ್ದೇವೆ. 100ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳನ್ನು ನಿರ್ಮಿಸಿದ್ದೇವೆ, ರೈಲ್ವೆಯು 12000 ಕಿ.ಮಿ.ಗೂ ಹೆಚ್ಚು ವಿಸ್ತೀರ್ಣದ ಗೇಜ್‌ ವರ್ಕ್‌ ಅನ್ನು ಮಾಡಿದೆ. ನಾವು 40 ಸಾವಿರ ಕಿ.ಮಿ.ವರೆಗೂ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಿದ್ದೇವೆ ಅಥವಾ ವಿಸ್ತರಿಸಿದ್ದೇವೆ. ಈಗ ಇನ್ನೂ 40 ಸಾವಿರ ಕಿ.ಮಿ. ರಸ್ತೆ ಅಭಿವೃದ್ಧಿಯಾಗುತ್ತಿದೆ. ಕೇವಲ ದೆಹಲಿಯೊಂದರಲ್ಲೇ ನಮ್ಮ ಸರ್ಕಾರ ರಸ್ತೆ ಅಭಿವೃದ್ಧಿಗಾಗಿ 50 ಸಾವಿರ ಕೋಟಿಗೂ ಹೆಚ್ಚು ಖರ್ಚು ಮಾಡುತ್ತಿದೆ. ಹೈವೇ ಮತ್ತು ಶಿಪ್ಪಿಂಗ್‌ ವಲಯದಲ್ಲಿನ ಒಟ್ಟು ಹೂಡಿಕೆ 16 ಲಕ್ಷ ಕೋಟಿಯಷ್ಟಿದ್ದು, ಗಂಗಾ ಪುನರುತ್ಥಾನ ಮತ್ತು ಜಲ ಸಂಪನ್ಮೂಲ ರಕ್ಷಣೆಗಾಗಿ ಹೆಚ್ಚುವರಿ 1 ಲಕ್ಷ ಕೋಟಿಯನ್ನು ಹೂಡಲಾಗುತ್ತಿದೆ. ನಮ್ಮ ಸರ್ಕಾರ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಿದೆ, ಬಡವರಿಗೆ ಎಲ್‌ಪಿಜಿ ಸಂಪರ್ಕವನ್ನು ಕೊಟ್ಟಿದೆ, ರೈತರಿಗೆ ನೇರ ಹಣ ಪಾವತಿಯನ್ನು ಆರಂಭಿಸಿದೆ, ಗ್ರಾಮೀಣ ರಸ್ತೆಗಳು ಮತ್ತು ಡಿಜಿಟಲ್‌ ಸಂಪರ್ಕವನ್ನು ಉತ್ತಮಪಡಿಸಿದೆ. ಎಲ್ಲಕ್ಕಿಂತ ಹೆಚ್ಚಾಗಿ ನಾವು ಸರ್ಕಾರಿ ಯೋಜನೆಗಳಲ್ಲಿ ಯಾರಿಗೂ ಭೇದಭಾವ ಮಾಡಿಲ್ಲ. ಸಬ್ಕಾ ಸಾಥ್‌ ಸಬ್ಕಾ ವಿಕಾಸ್‌ ಎನ್ನುವ ಘೋಷವನ್ನು ನಿಜಕ್ಕೂ ಅನುಸರಿಸಿದ್ದೇವೆ. 

Advertisement

ಆದರೆ ಪ್ರತಿಪಕ್ಷಗಳ ಮೈತ್ರಿಕೂಟವು ನಿಮ್ಮೆದುರು ನಿಂತಿದೆ. ಎನ್‌ಡಿಎದ ಚುನಾವಣಾ ಲೆಕ್ಕಾಚಾರಕ್ಕೆ ಅದು ಪೆಟ್ಟುಕೊಡಬಲ್ಲದಲ್ಲವೇ?
ನಾವೆಲ್ಲ ಬಲಿಷ್ಠರಾದ ಕಾರಣದಿಂದಲೇ ಅಲ್ಲವೇ ಅವರೆಲ್ಲ ಒಂದಾಗಿದ್ದು. ಅವರ ಒಟ್ಟುಗೂಡುವಿಕೆ ನಮ್ಮ ಶಕ್ತಿಯನ್ನು ಸಾರುತ್ತದೆ. ಈ ಸೋಕಾಲ್ಡ್‌ ಮೈತ್ರಿಪಕ್ಷಗಳಿಗೆ ಒಂದು ಸಮಾನ ನಿಲುವಿಲ್ಲ. ಒಬ್ಬ ವ್ಯಕ್ತಿಯ ವಿರುದ್ಧ ಇವರೆಲ್ಲ ನಿಂತಿದ್ದಾರಷ್ಟೆ .

ಬಿಜೆಪಿ 2014ರಲ್ಲಿ ಉತ್ತುಂಗದಲ್ಲಿತ್ತು. ಈಗ ಅದರ ಜನಪ್ರಿಯತೆ ತಗ್ಗಿದೆ ಎನ್ನಲಾಗುತ್ತಿದೆಯಲ್ಲ? 
ಈ ಬಾರಿ ನಮ್ಮ ಪ್ರದರ್ಶನ ಇನ್ನೂ ಉತ್ತಮವಾಗಿರಲಿದೆ. ಪ.ಬಂಗಾಳ ಮತ್ತು ಈಶಾನ್ಯ ರಾಜ್ಯಗಳಲ್ಲಿ ನಮ್ಮ ಟ್ಯಾಲಿ ಉತ್ತಮವಾಗಲಿದೆ. ಬಿಹಾರ, ಉತ್ತರಪ್ರದೇಶ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ನಮ್ಮ ಸೀಟುಗಳನ್ನು ಉಳಿಸಿಕೊಳ್ಳಲಿದ್ದೇವೆ ಎಂಬ ಬಲವಾದ ನಂಬಿಕೆ ನನಗಿದೆ. ಇನ್ನು ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲೂ ನಮಗೆ ತುಸು ಯಶಸ್ಸು ಸಿಗಬಹುದೇನೋ. 

ನೀವು ಅಭಿವೃದ್ಧಿಯ ಬಗ್ಗೆ ಮಾತನಾಡಿದಿರಿ. ಆದರೆ ಈಸ್ಟರ್ನ್ ಪೆರಿಫೆರಲ್‌ ಎಕ್ಸ್‌ಪ್ರೆಸ್‌ವೇ ಉದ್ಘಾಟಿಸಿದ ನಂತರ ನಡೆದ ಕೈರಾನಾ ಉಪಚುನಾವಣೆಯಲ್ಲಿ ನಿಮ್ಮ ಪಕ್ಷ ಸೋತದ್ದನ್ನು ನೋಡಿದೆವು. ಅಂದರೆ, ಅಭಿವೃದ್ಧಿಯೊಂದೇ ಮತಗಳನ್ನು ತಂದುಕೊಡಲಾರದು ಎಂದಂತಾಯಿತಲ್ಲವೇ? 
ನೋಡಿ ಯಾರಿಗೆ ಮತ ನೀಡಬೇಕು ಎನ್ನುವುದು ಮತದಾರರ ಆಯ್ಕೆ. ಅವರು ಅಭಿವೃದ್ಧಿಗೆ ಮತ ನೀಡಬಹುದು, ಇಲ್ಲವೇ ಕೆಲವು ಪಕ್ಷಗಳು ಅಲ್ಪಸಂಖ್ಯಾತ ಸಮುದಾಯಗಳ, ದಲಿತರ, ಆದಿವಾಸಿಗಳ ತಲೆಯಲ್ಲಿ ಹುಟ್ಟಿಸಿರುವ ಭಯಕ್ಕೆ ತಕ್ಕಂತೆ ಮತ ನೀಡಬಹುದು. ಈ ರೀತಿಯ ಪಕ್ಷಗಳು ನಮ್ಮ ಒಳ್ಳೆಯ ಕೆಲಸಗಳನ್ನು ಗುರುತಿಸುವುದಿಲ್ಲ. ಅವು ಬರಿ ಜನರ ಮನದಲ್ಲಿ ಭಯ ಸೃಷ್ಟಿಸುತ್ತವಷ್ಟೆ. ನಮಗೆ ಅಭಿವೃದ್ಧಿಯೇ ಮುಖ್ಯವಾದರೆ, ಅವರಿಗೆ ಭಯವೇ ಬಂಡವಾಳ. 

ದೇಶದಲ್ಲಿ ಅಸಹಿಷ್ಣುತೆ ಹೆಚ್ಚಾಗುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತವಲ್ಲ? 
ಯಾರೇ ತಪ್ಪು ಮಾಡಿದರೂ ಅದು ತಪ್ಪೇ. ಕೆಟ್ಟ ಕೆಲಸ ಮಾಡುವವರನ್ನು ನಮ್ಮ ಸರ್ಕಾರ ಅಥವಾ ಪಕ್ಷ ಎಂದಿಗೂ ಬೆಂಬಲಿಸಿಲ್ಲ. ಆದರೆ ಅಸಹಿಷ್ಣುತೆಯ ಬಗ್ಗೆ ಮಾತು ಬರುತ್ತಿರುವುದು ರಾಜಕೀಯ ಉದ್ದೇಶ ಇರುವ ವ್ಯಕ್ತಿಗಳಿಂದಲೇ ಎನ್ನುವುದನ್ನು ಗಮನಿಸಿ. ನಾವು ಅಧಿಕಾರಕ್ಕೆ ಬಂದಾಗ ಜನ ಹೇಗೆ ತಮ್ಮ ನ್ಯಾಷನಲ್‌ ಅವಾರ್ಡ್‌ಗಳನ್ನು ಹಿಂದಿರುಗಿಸಲಾರಂಭಿಸಿದರೋ ನೆನಪುಮಾಡಿಕೊಳ್ಳಿ. ಮುಂಬೈ ಉಗ್ರದಾಳಿಯಾದಾಗ ಅವರೇಕೆ ಪ್ರಶಸ್ತಿ ಹಿಂದಿರುಗಿಸಲಿಲ್ಲ? ಬಿಜೆಪಿ ಅಧಿಕಾರದಲ್ಲಿರುವುದನ್ನು ಅವರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. 

Advertisement

ಉದ್ಯೋಗ ಸೃಷ್ಟಿಯ ನಿಮ್ಮ ಭರವಸೆ ಪೂರ್ಣವಾಗಿ ಈಡೇರಿಲ್ಲ ಮತ್ತು ಕೃಷಿ ಬಿಕ್ಕಟ್ಟು ಪ್ರಮುಖ ಸವಾಲಾಗಿ ಬದಲಾಗಿದೆ…
ಕಳೆದ 60-70 ವರ್ಷಗಳ ಕೆಟ್ಟ ನೀತಿಗಳೇ ಈ ಸಂಕಷ್ಟಗಳಿಗೆ ಕಾರಣ. ಹತ್ತಿಗೆ ಕಡಿಮೆ ಬೆಲೆ, ಜವಳಿ ದುಬಾರಿ. ಗೋದಿಗೆ ಕಡಿಮೆ ಬೆಲೆ, ಬಿಸ್ಕಿಟ್‌ ದುಬಾರಿ. ಮೋಸಂಬಿಗೆ ಕಡಿಮೆ ಬೆಲೆ, ಜ್ಯೂಸ್‌ ದುಬಾರಿ! ಈ ರೀತಿಯ ನೀತಿಗಳು ದೇಶದ ಮೇಲೆ ಕೆಟ್ಟ ಪರಿಣಾಮ ಬೀರಿವೆ. ಇವೆಲ್ಲದರ ಪರಿಣಾಮ ಸಕ್ಕರೆಯ ಬೆಲೆಯನ್ನು ಬ್ರೆಜಿಲ್‌ ನಿರ್ಧರಿಸುತ್ತದೆ. ಸೋಯಾಬೀನ್‌, ಮೆಕ್ಕೆಜೋಳ ಮತ್ತು ಪಾಮ್‌ ಎಣ್ಣೆಯ ಬೆಲೆಯನ್ನು ಅಮೆರಿಕ, ಅರ್ಜೆಂಟಿನಾ ಮತ್ತು ಮಲೇಷ್ಯಾ ನಿರ್ಧರಿಸು ವಂತಾಗಿದೆ. ದೇಶದಲ್ಲಿಂದು ದ್ವಿದಳ ಧಾನ್ಯಗಳು, ಗೋದಿ ಮತ್ತು ಅಕ್ಕಿಯ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ ನಾವು ಬೆಳೆಯ ಪ್ಯಾಟರ್ನ್ ಅನ್ನು ಬದಲಿಸಬೇಕಿದೆ. ಇದೇ ಮೊದಲ ಬಾರಿ ನಾವು ಕೃಷಿ ಬೆಳೆಗಳನ್ನು ವೈವಿಧಿಕರಣಗೊಳಿಸಲು ದಿಟ್ಟ ಹೆಜ್ಜೆಗಳನ್ನು ಇಟ್ಟಿದ್ದೇವೆ. ನಮ್ಮ ರೈತರೀಗ ಕೃಷಿ ಉತ್ಪನ್ನಗಳ ಮೂಲಕ ಇಂಧನ ಉತ್ಪಾದಿಸುತ್ತಾರೆ. ಜೈವಿಕ ಇಂಧನದ ಆರ್ಥಿಕತೆಯು ಮುಂದಿನ ಐದು ವರ್ಷಗಳಲ್ಲಿ 2 ಲಕ್ಷ ಕೋಟಿಗೆ ಏರುವಂಥ ಕ್ರಮಗಳನ್ನು ಕೈಗೊಂಡಿದ್ದೇವೆ. 

ಈ ಬಾರಿ ಬಿಜೆಪಿಯ ಸ್ಥಾನಗಳು 220ರ ಆಸುಪಾಸು ಇರಲಿವೆ ಎನ್ನುವ ಮಾತಿದೆ. ಅಂಥ ಸ್ಥಿತಿ ಎದುರಾದರೆ, ಪ್ರಧಾನಿ ಹುದ್ದೆಗೆ ನೀವೇ “ಸರ್ವಮಾನ್ಯ’ ಅಭ್ಯರ್ಥಿಯಾಗುತ್ತೀರಿ…
ಇದೆಲ್ಲ ಆಗದಹೋಗದ ಮಾತು. ನಾನು ಅದನ್ನೆಲ್ಲ ಲೆಕ್ಕಹಾಕುತ್ತಾ ಕೂರುವವನೂ ಅಲ್ಲ, ಅಂಥ ನಿರೀಕ್ಷೆಗಳೂ ನನಗಿಲ್ಲ. ನಾನು ಬಿಜೆಪಿಯ ನಿಷ್ಠಾವಂತ ಕೆಲಸಗಾರ. ನರೇಂದ್ರ ಮೋದಿಯವರ ನೇತೃತ್ವದಲ್ಲೇ ಬಹುಮತ ಪಡೆಯುತ್ತೇವೆ.  (ಕೃಪೆ: ದ ಟೈಮ್ಸ್‌ ಆಫ್ ಇಂಡಿಯಾ) 

ನಿತಿನ್‌ ಗಡ್ಕರಿ, ಕೇಂದ್ರ ಸಾರಿಗೆ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next