Advertisement

ಇಬ್ಬರು ಮಕ್ಕಳಿಗೆ ಬೆಂಕಿ ಇಟ್ಟ ತಂದೆ

12:05 PM Oct 29, 2018 | Team Udayavani |

ಬೆಂಗಳೂರು: ಇಬ್ಬರು ಮಕ್ಕಳ ಮೇಲೆ ತಂದೆಯೇ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ತಾನೂ ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತಲ್ಲಘಟ್ಟಪುರ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ತಡರಾತ್ರಿ ನಡೆದಿದ್ದು, ಘಟನೆಯಲ್ಲಿ ಒಂದೂವರೆ ವರ್ಷದ ಮಗು ಮೃತಪಟ್ಟಿದೆ.

Advertisement

ತಲಘಟ್ಟಪುರದ ಅಂಜನಾಪುರದ ನಿವಾಸಿ ಶ್ರೀನಿವಾಸಮೂರ್ತಿ (38) ಆತ್ಮಹತ್ಯೆಗೆ ಯತ್ನಿಸಿದ್ದು, ಒಂದೂವರೆ ವರ್ಷದ ಸಾಯಿಚರಣ್‌ ಎಂಬ ಮಗು ಮೃತಪಟ್ಟಿದೆ. ಐದು ವರ್ಷದ ಚೇತನ್‌ಗೆ ಶೇ.90ರಷ್ಟು ಸುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.

ಕೌಟುಂಬಿಕ ಕಲಹದಿಂದಾಗಿ ಪತ್ನಿ ಪ್ರೇಮಲತಾ ಮನೆ ಬಿಟ್ಟು ಹೋಗಿದ್ದರು. ಇದರಿಂದ ಬೇಸರಗೊಂಡಿದ್ದ ಶ್ರೀನಿವಾಸಮೂರ್ತಿ ಹೊಸಕೋಟೆಯ ಮಾವನ ಮನೆಯಲ್ಲಿದ್ದ ಇಬ್ಬರು ಮಕ್ಕಳನ್ನು ಶನಿವಾರ ಮನೆಗೆ ಕರೆತಂದು ಕೃತ್ಯವೆಸಗಿದ್ದಾನೆ ಎಂದು ಪೊಲೀಸರು ಹೇಳಿದರು.

ಗಾರೆ ಕೆಲಸ ಹಾಗೂ ಎಲೆಕ್ಟ್ರಿಕಲ್‌ ಕೆಲಸ ಮಾಡುವ ಶ್ರೀನಿವಾಸಮೂರ್ತಿ ಆರು ವರ್ಷಗಳ ಹಿಂದೆ ತ್ಯಾಗರಾಜನಗರದ ಮನೆಯೊಂದಕ್ಕೆ ಎಲೆಕ್ಟ್ರಿಕಲ್‌ ಕೆಲಸಕ್ಕೆ ಹೋದಾಗ ಪ್ರೇಮಲತಾ ಪರಿಚಯವಾಗಿದ್ದು, ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು.

ನಂತರ ಪ್ರೇಮಲತಾ ಪೋಷಕರಿಗೆ ಒಪ್ಪಿಸಿ ಶ್ರೀನಿವಾಸಮೂರ್ತಿ ಪ್ರೇಮಲತಾರನ್ನು ಮದುವೆಯಾಗಿದ್ದು, ದಂಪತಿಗೆ ಸಾಯಿಚರಣ್‌ ಮತ್ತು ಚೇತನ್‌ ಎಂಬ ಇಬ್ಬರು ಗಂಡು ಮಕ್ಕಳು ಇದ್ದರು. ಈ ನಡುವೆ ಮದ್ಯ ಸೇವನೆ ಚಟಕ್ಕೆ ಬಿದ್ದಿದ್ದ ಶ್ರೀನಿವಾಸಮೂರ್ತಿ ನಿತ್ಯ ಪಾನಮತ್ತರಾಗಿ ಮನೆಗೆ ಹೋಗುತ್ತಿದ್ದರು. ಮನೆ ನಿರ್ವಹಣೆಗೂ ಹಣ ಕೊಡುತ್ತಿರಲಿಲ್ಲ.

Advertisement

ಗಾರ್ಮೆಂಟ್ಸ್‌ನಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಪ್ರೇಮಲತಾ ಅವರೇ ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಕುಡಿತ ಬಿಡುವಂತೆ ಬುದ್ದಿ ಹೇಳಿದ್ದರೂ ಕುಡಿದು ಹಿಂಸೆ ನೀಡುತ್ತಿದ್ದ. ಇದರಿಂದ ಬೇಸತ್ತ ಆಕೆ 8 ತಿಂಗಳ ಹಿಂದೆ ಪತಿಯಿಂದ ದೂರವಾಗಿ ಇಬ್ಬರು ಮಕ್ಕಳನ್ನು ಹೊಸಕೋಟೆಯಲ್ಲಿರುವ ತವರು ಮನೆಯಲ್ಲಿ ಬಿಟ್ಟು ಗಾರ್ಮೆಂಟ್ಸ್‌ ಗೆ ಹೋಗುತ್ತಿದ್ದರು ಎಂದು ಪೊಲೀಸರು ಹೇಳಿದರು.

ಪ್ರತಿವಾರ ಮಕ್ಕಳನ್ನು ಕರೆದೊಯ್ಯುತ್ತಿದ್ದ: ಪತ್ನಿ ಮತ್ತು ಮಕ್ಕಳಿಂದ ದೂರವಾಗಿದ್ದ ಶ್ರೀನಿವಾಸಮೂರ್ತಿ ವಾರಾಂತ್ಯದಲ್ಲಿ ತನ್ನ ಇಬ್ಬರು ಮಕ್ಕಳನ್ನು ಹೊಸಕೋಟೆಯಿಂದ ಕರೆತಂದು ಎರಡು ದಿನ ಮನೆಯಲ್ಲಿ ಇಟ್ಟುಕೊಳ್ಳುತ್ತಿದ್ದ. ಶನಿವಾರ (ಅ.28) ಕೂಡ ಮಕ್ಕಳನ್ನು ಕರೆತಂದ ಶ್ರೀನಿವಾಸಮೂರ್ತಿ ತಡರಾತ್ರಿ ಮದ್ಯದ ಅಮಲಿನಲ್ಲಿ ಮಲಗಿದ್ದ ಇಬ್ಬರು ಮಕ್ಕಳ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದಾನೆ.

ಬಳಿಕ ತನ್ನ ಮೈಮೇಲೆ ಪೆಟ್ರೋಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ತಡರಾತ್ರಿ 3 ಗಂಟೆ ಸುಮಾರಿಗೆ ಬೆಂಕಿಯ ಕೆನ್ನಾಲಿಗೆಯ ನೋವಿನಿಂದ ನರಳಾಡುತ್ತಿದ್ದ ಮಕ್ಕಳ ಚೀರಾಟ ಕೇಳಿ ಸ್ಥಳೀಯರು ಮನೆ ಬಳಿ ಬಂದು ನೋಡಿದಾಗ ಕೃತ್ಯ ಬೆಳಕಿಗೆ ಬಂದಿದೆ.

ಕೂಡಲೇ ಸ್ಥಳೀಯರು ಬೆಂಕಿ ನಂದಿಸಿ ಮೂವರನ್ನೂ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಿಸದೆ ಸಾಯಿಚರಣ್‌ ಮೃತಪಟ್ಟರೆ, ಚೇತನ್‌ ಶೇ.90ರಷ್ಟು ಸುಟ್ಟ ಗಾಯಗಳಿಂದ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಶ್ರೀನಿವಾಸಮೂರ್ತಿಗೆ ಶೇ.30 ರಷ್ಟು ಸುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ತಲ್ಲಘಟ್ಟಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2ನೇ ವಿವಾಹವಾದ ಪ್ರೇಮಲತಾ: ಪ್ರೇಮಲತಾಗೆ ಈ ಮೊದಲು ಮದುವೆಯಾಗಿತ್ತು. ಕೆಲ ವರ್ಷಗಳ ಹಿಂದೆ ಪ್ರೇಮಲತಾಳನ್ನು ಪರಿಚಿತ ವ್ಯಕ್ತಿ ಜತೆ ಈಕೆಯ ಪೋಷಕರು ಮದುವೆ ಮಾಡಿಸಿದ್ದರು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಕೆಲ ವರ್ಷಗಳ ಬಳಿಕ ಕೌಟುಂಬಿಕ ಕಲಹ ಉಂಟಾಗಿ, ಪತಿಯನ್ನು ತೊರೆದು ಪ್ರೇಮಲತಾ ತವರು ಮನೆಯಲ್ಲಿ ವಾಸಿಸುತ್ತಿದ್ದರು.

ನಂತರ ಇಬ್ಬರು ಮಕ್ಕಳನ್ನು ಪತಿಯೇ ಸಾಕುತ್ತಿದ್ದರು. ಈ ವಿಚಾರವನ್ನು ಪ್ರೇಮಲತಾ, ತನ್ನನ್ನು ಪ್ರೀತಿಸುತ್ತಿದ್ದ ಶ್ರೀನಿವಾಸಮೂರ್ತಿಗೂ ತಿಳಿಸಿದ್ದರು. ಅವಿವಾಹಿತನಾಗಿದ್ದ ಶ್ರೀನಿವಾಸ್‌ಮೂರ್ತಿ ಈಕೆಯ ಪೋಷಕರ ಮನವೊಲಿಸಿ ಪ್ರೇಮಲತಾಳನ್ನು ಮದುವೆಯಾಗಿ ಅಂಜನಾಪುರದಲ್ಲಿರುವ ತನ್ನ ಬಾಡಿಗೆಯಲ್ಲಿ ವಾಸವಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next