Advertisement

ಮೇಳ ಬಂತು ಮೇಳ

10:03 AM Oct 13, 2019 | Lakshmi GovindaRaju |

ರಾಜಧಾನಿಯಲ್ಲಿ ನೆಲೆನಿಂತ ಕರಾವಳಿಗರು ಇಡೀ ದಿನ ದುಡಿದು ದಣಿದರೂ, “ಆಟ ಉಂಟು ಮಾರ್ರೆ’ ಅಂದಾಗ, ಕೊಂಚ ರಿಲ್ಯಾಕ್ಸ್‌ ಆಗುತ್ತಾರೆ. ರಾತ್ರಿ ಸಂಪೂರ್ಣವಾಗಿ ನಿದ್ದೆ ಬಿಟ್ಟು, ಆಟ ನೋಡುವುದು ಬೆಂಗಳೂರಿನ ಯಕ್ಷಪ್ರಿಯರಿಗೆ ಖುಷಿಯ ವಿಚಾರ. ಅದೇ ಯಕ್ಷಗಾನದ ತಾಕತ್ತು ಕೂಡ. “ಎಲ್ಲೂ ಸಿಗದಿದ್ದರೆ, ಅಂವ ಆಟದಲ್ಲಿ ಸಿಗುತ್ತಾನೆ ಬಿಡು…’ ಎನ್ನುವುದು, ನಮ್ಮವರನ್ನು ಹುಡುಕುವ ಅತಿ ಸುಲಭದ ಮಾರ್ಗ…

Advertisement

ಕರಾವಳಿಯಲ್ಲಿ ಚಂಡೆಯ ಸದ್ದು ಕೇಳುತ್ತಲೇ, ರಾತ್ರಿಯು ಬೆಳಗಾಗುವುದು. ಪೌರಾಣಿಕ ಕತೆಗಳ ಗೀಳು ಹಿಡಿಸುವ ಯಕ್ಷಗಾನದ ನಂಟು, ಊರು ಬಿಟ್ಟು ರಾಜಧಾನಿ ಸೇರಿದರೂ ಆತ್ಮಕ್ಕೆ ಅಂಟಿಕೊಂಡು ಜತೆಗೇ ಬಂದಿರುತ್ತದೆ. ಮೇ ತಿಂಗಳ ಕೊನೆಗೆ ಊರಿನ ತಿರುಗಾಟ ಮುಗಿಸುವ ಹರಕೆ ಮೇಳಗಳು, ರಂಗಸ್ಥಳವನ್ನು ಅಟ್ಟಕ್ಕೆ ಸೇರಿಸುತ್ತವೆ. ಆದರೆ, ಡೇರೆ ಮೇಳಗಳು ಮತ್ತು ಬಯಲಾಟದ ಕಲಾವಿದರು, ಅವರದ್ದೇ ಒಂದು ತಂಡದೊಂದಿಗೆ ಬೆಂಗಳೂರಿನತ್ತ ಹೊರಡುತ್ತಾರೆ.

ಇಲ್ಲಿಯವರು ಇಡೀ ದಿನ ದುಡಿದು ದಣಿದರೂ, “ಆಟ ಉಂಟು ಮಾರ್ರೆ’ ಅಂದಾಗ, ಕೊಂಚ ರಿಲ್ಯಾಕ್ಸ್‌ ಆಗುತ್ತಾರೆ. ರಾತ್ರಿ ಸಂಪೂರ್ಣವಾಗಿ ನಿದ್ದೆ ಬಿಟ್ಟು, ಆಟ ನೋಡುವುದು ಬೆಂಗಳೂರಿನ ಯಕ್ಷಪ್ರಿಯರಿಗೆ ಖುಷಿಯ ವಿಚಾರ. ಅದೇ ಯಕ್ಷಗಾನದ ತಾಕತ್ತು ಕೂಡ. “ಎಲ್ಲೂ ಸಿಗದಿದ್ದರೆ, ಅಂವ ಆಟದಲ್ಲಿ ಸಿಗುತ್ತಾನೆ ಬಿಡು…’ ಎನ್ನುವುದು, ನಮ್ಮವರನ್ನು ಹುಡುಕುವ ಅತಿ ಸುಲಭದ ಮಾರ್ಗ. ಇಲ್ಲಿ ಆಟ ಕಾಣಿಸುವ ಅಗ್ರಪಂಕ್ತಿಯಲ್ಲಿ ರವೀಂದ್ರ ಕಲಾಕ್ಷೇತ್ರವಿದ್ದರೆ, ಎಡಿಎ, ಉದಯಭಾನು, ಬಂಟರ ಸಂಘ- ವಿಜಯನಗರ, ಪುತ್ತಿಗೆ ಮಠ, ನಯನ, ಸಂಸ, ತರಳಬಾಳು, ಶೃಂಗೇರಿ ಮಠ, ಗಿರಿನಗರ, ಉತ್ತರಹಳ್ಳಿ, ವಿಜಯ ಬ್ಯಾಂಕ್‌ ಲೇಔಟ್‌- ಇನ್ನಿತರ ಕೆಲವು ಸ್ಥಳಗಳು ರಾಜಧಾನಿಯ ಯಕ್ಷಪ್ರಿಯರಿಗೆ ರಂಗಸ್ಥಳವನ್ನು ದರ್ಶಿಸುತ್ತವೆ. ಇಲ್ಲಿ ಚಂಡೆಯ ಸದ್ದು ಸದಾ ಮೊರೆಯುತ್ತಿರುತ್ತದೆ.

ರವೀಂದ್ರ ಕಲಾಕ್ಷೇತ್ರ ಮತ್ತು ಟೌನ್‌ ಹಾಲ್‌, ಬೆಂಗಳೂರು ಯಕ್ಷಗಾನದ ದೈವದ ಮನೆ ಇದ್ದಂತೆ. ಜೂನ್‌ ಟು ಅಕ್ಟೋಬರ್‌, ಇಲ್ಲಿ 120 ಆಟಗಳಾದ ದಾಖಲೆಗಳುಂಟು. ನಿರಂತರ ಮೂರು ದಿನ ಒಂದೇ ಪ್ರಸಂಗ ಪ್ರದರ್ಶನಗೊಂಡಾಗಲೂ, ಇಲ್ಲಿ ಹೌಸ್‌ಫ‌ುಲ್‌ ಆಗಿದ್ದಿದೆ. ಇಲ್ಲಿಂದಲೇ ಅನೇಕ ಕಲಾವಿದರ ಬದುಕು ಬೆಳಕಾಗಿದೆ. ಅದೆಷ್ಟೋ ಕಲಾವಿದರಿಗೆ ಊರಿನಲ್ಲಿ ಮನೆ ಎದ್ದಿದೆ. ಊರಿನ ಕೆಲವು ದೇಗುಲಗಳು ಜೀರ್ಣೋದ್ಧಾರಗೊಂಡಿವೆ. ಸಹಾಯಾರ್ಥ ಆಟಗಳು ಲೆಕ್ಕವಿಲ್ಲದಷ್ಟು ಆಗಿವೆ. ಕಲಾವಿದರು ತಮ್ಮ ವೃತ್ತಿ ಬದುಕಿನ ಸಂಭ್ರಮವನ್ನೂ ಬೆಂಗಳೂರಿನಲ್ಲಿ ಆಚರಿಸಿದ್ದಾರೆ.

ಪಾಂಚಜನ್ಯ, ನಿಡ್ಲೆ, ಪುತ್ತೂರು, ಪಾವಂಜೆ ತೆಂಕಿನ ಮೇಳಗಳು, ರಾಜಧಾನಿಯಲ್ಲೇ ಇರುವ ಹವ್ಯಾಸಿ ಮೇಳಗಳಾದ ಯಕ್ಷಕಲಾ ಸಾಗರ, ಸಿರಿಕಲಾ ಮೇಳ, ಯಕ್ಷಸಿಂಚನ, ಯಕ್ಷ ದೇಗುಲ, ಗಾನ ಸೌರಭ, ಯಕ್ಷ ಸಂಭ್ರಮ- ಇವು ಇಲ್ಲಿ ಪ್ರದರ್ಶನಗಳನ್ನು ನೀಡುತ್ತಲೇ ಇರುತ್ತವೆ. ಬೆಂಗಳೂರು ಕೇವಲ ಯಕ್ಷಪ್ರೇಕ್ಷಕರನ್ನು ಒಳಗೊಂಡಿಲ್ಲ. ಇಲ್ಲಿ ಹವ್ಯಾಸಿ ಕಲಾವಿದರಿದ್ದಾರೆ; ಕಲಾಪೋಷಕರಿದ್ದಾರೆ; ಹೆಜ್ಜೆ ಕಲಿಸುವ ಶಾಲೆಗಳಿವೆ; ಪುರುಷ- ಮಹಿಳಾ ಕಲಾತಂಡಗಳಿವೆ. ತನ್ನೂರಿನ ಕಲಾವಿದರನ್ನು ಕಂಡಾಗ ಪುಳಕಿತಗೊಳ್ಳುವ ಅವರುಗಳ ಸಹಕಾರದಿಂದ, ಹಲವಷ್ಟು ಕಲಾವಿದರ ಬದುಕು ಬದಲಾಗಿದೆ.

Advertisement

ಯಕ್ಷ ಕಲಾವಿದರು ತಮ್ಮ ಹೆಸರಿಗಿಂತ, ಊರಿನ ಹೆಸರಿನ ಮೂಲಕವೇ ಪ್ರಚಲಿತಗೊಳ್ಳುವುದು ಯಕ್ಷಗಾನದ ಇನ್ನೊಂದು ವಿಶೇಷ. ಸಾಹಿತಿಗಳ ಕಾವ್ಯನಾಮದಂತೆ ಊರಿನ ಹೆಸರುಗಳೇ ಇವರಿಗೆ ಐಡೆಂಟಿಟಿ. ಯಕ್ಷಗಾನದ ಮೂಲಕ ಪರಿಚಿತಗೊಂಡ ಯಾವುದೇ ಕಲಾವಿದ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳ ಮನೆಮನಗಳಲ್ಲೂ ನೆಲೆಗೊಳ್ಳುವುದು ಯಕ್ಷಗಾನದ ವ್ಯಾಪ್ತಿ. ಇವತ್ತಿಗೂ ಹೆಚ್ಚಿನ ಮನೆಯ ಬೆಳಗಿನ ಆರಂಭ ಸುಪ್ರಭಾತವಾದರೆ, ರಾತ್ರಿ ಮಲಗುವಾಗ ಚಂಡೆಯ ಸದ್ದು ಇಲ್ಲವೆ ಒಂದು ಪದ್ಯ ಕೇಳದೆ ಹೆಚ್ಚಿನವರಿಗೆ ಕಣ್ಣಿಗೆ ನಿದ್ದೆಯೇ ಇಳಿಯದು. ಕರಾವಳಿ ಬೇರಿನಿಂದ ಬಂದವರ ಮೊಬೈಲುಗಳೂ, ಯಕ್ಷಗಾನದ ವಿಡಿಯೋಗಳಿಂದಲೇ, ಭರ್ತಿಯಾಗಿ, ಅವರಿಗೆ ರಿಲ್ಯಾಕ್ಸ್‌ ಮೂಡಿಸುವುದುಂಟು.

ಆಟದ ಸವಾಲುಗಳೇನು?
– ಸರ್ವ ಸಮರ್ಥ ಬಹುಬೇಡಿಕೆಯ ಕಲಾವಿದರು ಅಂದ್ರೆ, ಇಲ್ಲಿನ ಜನರಿಗೆ ಆಸಕ್ತಿ ಹೆಚ್ಚು. ಅಂಥ ಪ್ರದರ್ಶನಗಳು ಹೌಸ್‌ಫ‌ುಲ್‌ ಕಾಣುತ್ತವೆ.

– ಇಲ್ಲಿ ರಾತ್ರಿ ಆಟಗಳಿಗೆ ಪ್ರೇಕ್ಷಕರು ಕಡಿಮೆ. ಈ ವರ್ಷ ಒಟ್ಟು 28 “ರಾತ್ರಿ ಆಟ’ಗಳು ನಡೆದಿವೆ. ಸಂಜೆ, ಮಧ್ಯಾಹ್ನ, ರಾತ್ರಿ ತನಕ ಆಟಗಳು ನಡೆಯುತ್ತವೆ.

– ಪ್ರೇಕ್ಷಕರ ಒತ್ತಾಯದ ಮೇರೆಗೆ, ಒಂದು ಪ್ರಸಂಗವನ್ನು 3-4 ಗಂಟೆಗಳ ಪ್ರದರ್ಶನಕ್ಕೆ ಸೀಮಿತಗೊಳಿಸುವುದೂ ಒಂದು ಸವಾಲು.

– ಪೌರಾಣಿಕ ಪ್ರಸಂಗಗಳನ್ನು ಇಲ್ಲಿನವರು ಇಷ್ಟಪಡುತ್ತಾರೆ. ಅವುಗಳನ್ನೇ ಹೆಚ್ಚು ಆಡಿಸಬೇಕು.

– ಪ್ರಸಂಗಗಳನ್ನು ಆಯ್ಕೆಗೊಳಿಸಿ, ಅದಕ್ಕೆ ಸರಿಹೊಂದುವ ಕಲಾವಿದರನ್ನು ಜೋಡಿಸಬೇಕು.

ಈ ವರ್ಷ ಎಲ್ಲೆಲ್ಲಿ ಎಷ್ಟೆಷ್ಟು ಆಟ?
ರವೀಂದ್ರ ಕಲಾಕ್ಷೇತ್ರ- 23
ಉದಯಭಾನು- 16
ಪುತ್ತಿಗೆ ಮಠ- 9
ತರಳಬಾಳು- 5
ಜಕ್ಕೂರು- 4
ಬಂಟರಸಂಘ- 4
ಎಡಿಎ- 2
ಮರ್ಡಿ ಸುಬ್ಬಯ್ಯ- 2

ಇವರಿಗೆ ಹೆಚ್ಚು ಬೇಡಿಕೆ
– ಪಟ್ಲ ಸತೀಶ ಶೆಟ್ಟಿ
– ಜನ್ಸಾಲೆ ರಾಘವೇಂದ್ರ ಆಚಾರ್ಯ
– ಜಲವಳ್ಳಿ ವಿದ್ಯಾಧರ ರಾವ್‌
– ಪೆರ್ಮುದೆ ಜಯಪ್ರಕಾಶ್‌ ಶೆಟ್ಟಿ
– ಕೃಷ್ಣಯಾಜಿ ಬಳ್ಕೂರು

ಮುಂದಿನ ಬದಲಾವಣೆ…: ತೆಂಕು ಬಡಗಿನ ದಿಗ್ಗಜರ ಕೂಡುವಿಕೆಯಲ್ಲಿ “ಯಕ್ಷ ಸಮಾಗಮ 5′ ಆಯೋಜನೆಗೊಂಡಿದೆ. ನಡುತಿಟ್ಟಿನ ಪೌರಾಣಿಕ ಆಖ್ಯಾನ “ತಾಮ್ರಧ್ವಜ’ ಇದೇ ಮೊದಲ ಬಾರಿಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಳ್ಳಲಿದೆ. ರಾಘವೇಂದ್ರ ಆಚಾರ್ಯ ಜನ್ಸಾಲೆ , ಪ್ರಸಾದ್‌ ಮೊಗೆಬೆಟ್ಟು , ಸದಾಶಿವ ಅಮಿನ್‌ , ಪ್ರಸನ್ನ ಭಟ್‌ ಬಾಳ್ಕಲ್‌ ಗಾನಸಾರಥ್ಯ ಇರಲಿದೆ. ಪೆರ್ಮುದೆ ಜಯಪ್ರಕಾಶ್‌ ಶೆಟ್ಟಿ (ವಾಲಿ) ಮತ್ತುಜಲವಳ್ಳಿ ವಿದ್ಯಾಧರ್‌ ರಾವ್‌ (ಸುಗ್ರೀವ) ಬಹುನಿರೀಕ್ಷೆಯ ಮುಖಾಮುಖೀ.

ಯಾವಾಗ?: ಅ. 18, ಶುಕ್ರವಾರ, ರಾತ್ರಿ 10
ಎಲ್ಲಿ?: ರವೀಂದ್ರ ಕಲಾಕ್ಷೇತ್ರ
ಪ್ರವೇಶ: 500- 300 – 200 ರೂ.
ಸಂಪರ್ಕ: 95913 11056

ಈ ವರ್ಷದ ಕೊನೆಯ ಯಕ್ಷಗಾನ: “ತುಳಸಿ ಜಲಂಧರ- ಕಾಶಿಮಾಣಿ- ಅಭಿಮನ್ಯು’
ಸ್ಥಳ: ಉದಯಭಾನು ಕಲಾಸಂಘ

ಬೆಂಗಳೂರಿನಲ್ಲಿ ಆಟ ನೋಡುವಾಗ, ನೆನಪುಗಳು ಊರಿಗೆ ಓಡುತ್ತವೆ. ನಮ್ಮ ಮಕ್ಕಳಿಗೆ ಇಲ್ಲಿ ಪ್ರಸಂಗ ತೋರಿಸುವುದೇ ಒಂದು ಖುಷಿ. ತೀರ್ಥಳ್ಳಿ ಗೋಪಾಲಾಚಾರಿ ನನ್ನ ಇಷ್ಟದ ಕಲಾವಿದ.
-ಕೃಷ್ಣಮೂರ್ತಿ ಬಜಗೋಳಿ, ಮಾರತ್‌ಹಳ್ಳಿ ನಿವಾಸಿ

* ನಾಗರಾಜ್‌ ಶೆಟ್ಟಿ ನೈಕಂಬ್ಳಿ

Advertisement

Udayavani is now on Telegram. Click here to join our channel and stay updated with the latest news.

Next