Advertisement

ಪೌರಾಣಿಕ-ಸಮಕಾಲೀನ ಮೌಲ್ಯಗಳ ಸಮೀಕರಣ ಮಾಯಾವಿಹಾರಿ

06:00 AM Dec 28, 2018 | Team Udayavani |

ಭೀಮಸೇನನ ಮಗ ಘಟೋತ್ಕಚನ ಸುತ್ತ ಹೆಣೆದ ಪ್ರಸಂಗದಲ್ಲಿ ಮೂಲ ಕಥೆಗೆ ಸಾಮಾಜಿಕ ಚಿಂತನೆಯ ಕಲ್ಪನಾಶಕ್ತಿಯೂ ಸೇರಿದೆ. ಕಾವ್ಯ , ಪುರಾಣಗಳಿಗೆ ಕಾಲ್ಪನಿಕತೆ ಅಳವಡಿಸುವಾಗ ಮೂಲಕಥೆಯ ಚೌಕಟ್ಟಿಗೆ ಲೋಪವಾಗಕೂಡದು ಎಂದು ಗಮನದಲ್ಲಿಟ್ಟ ಪ್ರಸಂಗ.

Advertisement

ಪೌರಾಣಿಕ ಮೌಲ್ಯಗಳನ್ನು ಸಮಕಾಲೀನ ಮೌಲ್ಯಗಳೊಂದಿಗೆ ಸಮೀಕರಿಸಿ ಪುರಾಣ ಕಥೆಗಳಿಗೆ ಹೊಸ ಸ್ಪರ್ಶ ನೀಡಬಹುದು ಎಂಬುದಕ್ಕೆ ಹನುಮಗಿರಿ ಮೇಳದವರ ಮಾಯಾವಿಹಾರಿ ಪ್ರಸಂಗ ಉತ್ತಮ ಉದಾಹರಣೆ. ಪ್ರಸಿದ್ಧ ಪ್ರಸಂಗಕರ್ತ , ಕಲಾವಿದರಾದ ತಾರಾನಾಥ ವರ್ಕಾಡಿ ರಚಿಸಿದ “ಮಾಯಾವಿಹಾರಿ’ ಉತ್ತಮ ಪ್ರಯೋಗವೆನ್ನಬಹುದು. ಭೀಮಸೇನನ ಮಗ ಘಟೋತ್ಕಚನ ಸುತ್ತ ಹೆಣೆದ ಪ್ರಸಂಗದಲ್ಲಿ ಮೂಲ ಕಥೆಗೆ ಸಾಮಾಜಿಕ ಚಿಂತನೆಯ ಕಲ್ಪನಾಶಕ್ತಿಯೂ ಸೇರಿದೆ .ಕಾವ್ಯ , ಪುರಾಣಗಳಿಗೆ ಕಾಲ್ಪನಿಕತೆ ಅಳವಡಿಸುವಾಗ ಮೂಲಕಥೆಯ ಚೌಕಟ್ಟಿಗೆ ಲೋಪವಾಗಕೂಡದು ಎಂದು ಗಮನದಲ್ಲಿಟ್ಟ ಪ್ರಸಂಗ. 

ಏಕಚಕ್ರದಲ್ಲಿ ಏಕಚಕ್ರ ಎಂಬ ರಾಕ್ಷಸನು ದೇವತೆಗಳಿಂದ ಸೋತು ಮುನಿಯಾಗಿ ಬದಲಾಗುತ್ತಾನೆ . ಮುನಿಯಾದರೂ ಹಿಡಿಂಬ , ಬಕ , ಜಟಾಸುರ , ಕಿಮ್ಮಿರ ,ಅಲಾಯುಧ , ಅಲಂಬುಷ ಮೊದಲಾದ ರಾಕ್ಷಸರನ್ನು ಒಗ್ಗೂಡಿಸಿ ರಾಕ್ಷಸ ಸಾಮ್ರಾಜ್ಯ ನಿರ್ಮಾಣದ ಕನಸು ಕಾಣುತ್ತಾನೆ . ಬಕಾಸುರನು ಏಕಚಕ್ರದ ರಾಜ ಶುಕಧ್ವಜನನ್ನು ಸೋಲಿಸಿ ತನಗೆ ದಿನಂಪ್ರತಿ ಆಹಾರ ಒದಗಿಸುವ ಒಪ್ಪಂದ ಮಾಡುತ್ತಾನೆ . ಅರಗಿನ ಮನೆಯಿಂದ ತಪ್ಪಿಸಿಕೊಂಡ ಪಾಂಡವರು ಕಾನನದಲ್ಲಿ ನೆಲೆಸುತ್ತಾರೆ . ರಾತ್ರಿ ಹಿಡಿಂಬಾಸುರನ ಸಾಕು ತಂಗಿಯಾದ ಹಿಡಿಂಬೆಯು ಭೀಮನನ್ನು ಕಂಡು ಪ್ರೇಮಮೋಹಿತಳಾಗಿ ವಿವಾಹವಾಗುತ್ತಾಳೆ . ಭೀಮ ಹಿಡಿಂಬೆಯರಿಗೆ ಘಟೋತ್ಕಚನು ಜನಿಸುತ್ತಾನೆ . ಮಾತೃಸಂಬಂಧದ ಹಿನ್ನೆಲೆಯಲ್ಲಿ ಒಂದಷ್ಟು ರಾಕ್ಷಸೀ ಸ್ವಭಾವ ಹೊಂದಿ ಬ್ರಹ್ಮದ್ವೇಷಿ , ಯಜ್ಞದ್ವೇಷಿಯಾಗಿ ಬೆಳೆದರೂ ಸಂಸ್ಕಾರವಂತನಾಗುತ್ತಾನೆ. ಘಟೋತ್ಕಚನನ್ನು ಹಿಡಿಂಬೆಯ ಬಳಿ ಬಿಟ್ಟು ಪಾಂಡವರು ಏಕಚಕ್ರನಗರದಲ್ಲಿ ಕುಂಬಾರನ ಆಶ್ರಯದಲ್ಲಿರುತ್ತಾರೆ .ಬಕಾಸುರನಿಗೆ ಔತಣ ನೀಡುವ ಸರದಿ ಕುಂಬಾರನ ಪಾಲಿಗೆ ಬಂದಾಗ ಭೀಮನಿಂದ ಬಕಾಸುರನ ಅಂತ್ಯವಾಗುತ್ತದೆ .ಘಟೋತ್ಕಚನು ಕಾಮಕಟಂಕಟೆಯನ್ನು ಸ್ಪರ್ಧೆಯಲ್ಲಿ ಸೋಲಿಸಿ ವಿವಾಹವಾಗುತ್ತಾನೆ . ಕುರುಕ್ಷೇತ್ರ ಯುದ್ಧದಲ್ಲಿ ಘಟೋತ್ಕಚನು ತನ್ನ ತಂದೆಯ ಪಕ್ಷದಲ್ಲಿ ಹೋರಾಡಿ ಅಲಾಯುಧ , ಅಲಂಬಲ , ಅಲಂಬುಷರಂಥಹ ರಾಕ್ಷಸರನ್ನು ಕೊಂದುದಲ್ಲದೆ , ಕೌರವ ಸೇನೆಯ ಪಾಲಿಗೆ ಮಾರಣಾಂತಕನಾಗಿ ಪರಿಣಮಿಸಿದಾಗ , ಕರ್ಣನು ಅರ್ಜುನನ ವಧೆಗೆಂದೇ ಮೀಸಲಾದ ಅಸ್ತ್ರವನ್ನು ಪ್ರಯೋಗಿಸಿ ಅವನನ್ನು ಕೊಲ್ಲುತ್ತಾನೆ. 

ಛಂದೋಬದ್ಧವಾದ ರಚನೆಯ ಪದ್ಯಗಳಲ್ಲಿ ಉತ್ತಮವಾದ ಸಾಹಿತ್ಯವಿದೆ.ರಾಕ್ಷಸ ಮಾತೆಯಾದ ದಿತಿದೇವಿಯ ಮಗ ಏಕಚಕ್ರ ಎಂದು ಪುರಾಣದಲ್ಲಿರುವ ಅಂಶವನ್ನು ಕಲ್ಪನೆಯಿಂದ ಸೃಷ್ಟಿಸಿದ್ದಾರೆ. ಬಕ , ಹಿಡಿಂಬರನ್ನು ಏಕಚಕ್ರನು ಸಲಹುವುದು , ಹಿಡಿಂಬೆಯನ್ನು ವಿವಾಹವಾಗಕೂಡದೆಂದು ಭೀಮನಲ್ಲಿ ಏಕಚಕ್ರ ವಾದಿಸುವುದು , ಕಾಮಕಟಂಕಟೆಯು ನಾಟ್ಯ ಪ್ರವೀಣೆ ಎನಿಸಿರುವುದು , ಗಂಗಾಶುದ್ಧೀಕರಣದ ಧ್ಯೇಯವನ್ನು ಅಂಗಾರಪರ್ಣ – ಅರ್ಜುನನ ಯುದ್ಧದಲ್ಲಿ ಬಳಕೆ – ಇತ್ಯಾದಿಗಳನ್ನೆಲ್ಲಾ ಕಲ್ಪನೆಯ ಮೂಲಕ ಅಳವಡಿಸಲಾಗಿದೆ. ಹನುಮಗಿರಿ ಮೇಳದ ಕಲಾವಿದರ ಸಾಂ ಕ ಪ್ರಸ್ತುತಿ ಪ್ರಸಂಗದ ಯಶಸ್ಸಿಗೆ ಕಾರಣವಾಗಿದೆ .ಕಾಲ್ಪನಿಕ ಪಾತ್ರ ಏಕಚಕ್ರನಾಗಿ ರಂಗಾಭಟ್ಟರು ವೈಚಾರಿಕತೆಯ ಮೂಲಕ ಪಾತ್ರೋಚಿತ ಚಿತ್ರಣ ನೀಡಿದರು . ಪೂರ್ವಾರ್ಧದ ಭೀಮಸೇನನಾಗಿ ಪೆರ್ಮುದೆಯವರು ತಾನಾಗಿ ಒಲಿದ ನಾರಿಯನ್ನು ತಿರಸ್ಕರಿಸುವುದು ಧರ್ಮಸಮ್ಮತವಲ್ಲ ಎಂದು ನಿರೂಪಿಸಿದರು . ಹಿಡಿಂಬೆಯಾಗಿ ಹಿಲಿಯಾಣರು ಭೀಮನೊಂದಿಗಿನ ಸಂಭಾಷಣೆಯಲ್ಲಿ ಪ್ರಭುತ್ವ ಮೆರೆದರು . ಪೂರ್ವಾರ್ಧದ ಘಟೋತ್ಕಚನಾಗಿ ದಿವಾಕರ ಸಂಪಾಜೆಯವರು ಉತ್ತಮ ನಾಟ್ಯ ಹಾಗೂ ಸಂಭಾಷಣೆಯಿಂದ ಮಿಂಚಿದರು . ಕಾಮಕಟಂಕಟೆಯಾಗಿ ರಕ್ಷಿತ್‌ ಪಡ್ರೆಯವರ ನಿರ್ವಹಣೆ ಮನ ಗೆದ್ದಿತು . ಬಕಾಸುರನಾಗಿ ಶೆಟ್ಟಿಗಾರರವರು ಕ್ರೌರ್ಯ ಸಾಧಿಸುವಲ್ಲಿ ಯಶಸ್ವಿಯಾದರು . ಬಕನ ಅನುಚರ ಬಂಡಿಕಾರ ಪತ್ರಾಂಗನಾಗಿ ಹಾಸ್ಯಗಾರ ಸೀತಾರಾಮ ಕಟೀಲು ಒಂದೂ ಪದ್ಯ ಇಲ್ಲದ ಪಾತ್ರವಾದರೂ ಬಣ್ಣಗಾರಿಕೆಯಲ್ಲಿ ವಿಶಿಷ್ಟ ಚಿತ್ರಣದ ಮೂಲಕ ಶುದ್ಧ ಹಾಸ್ಯ ನೀಡಿದರು . ಬಂಟ್ವಾಳರು ಪಾರಂಪರಿಕ ಹಾಸ್ಯದಿಂದ ರಂಜಿಸಿದರು. ಶುಕಧ್ವಜನಾಗಿ ಶೀನಪ್ಪ ರೈ , ಉತ್ತರಾರ್ಧದ ಘಟೋತ್ಕಚನಾಗಿ ಜಗದಾಭಿರಾಮ , ಭೀಮನಾಗಿ ಶಬರೀಶ , ಹಿಡಿಂಬಾಸುರನಾಗಿ ಜಯಾನಂದ , ಕೌರವನಾಗಿ ಜೋಗಿ , ಕರ್ಣನಾಗಿ ಸದಾಶಿವ ಕುಲಾಲ್‌ , ಶ್ರೀಕೃಷ್ಣನಾಗಿ ಪೆರ್ಲ , ಕುಂಭೀನಸಿಯಾಗಿ ಪ್ರಕಾಶ್‌ ನಾಯಕ್‌ ಪಾತ್ರೋಚಿತ ಚಿತ್ರಣ ನೀಡಿದರು. ಅಲಾಯುಧನಾಗಿ ಸುಬ್ರಾಯ ಹೊಳ್ಳರು ಮಿಂಚಿದರೂ , ಅವಕಾಶ ಸಾಲದಾಯಿತು . ಉಳಿದ ಕಲಾವಿದರ ನಿರ್ವಹಣೆ ಯಶಸ್ಸಿಗೆ ಕಾರಣವಾಯಿತು . ಭಾಗವತರಾದ ಪದ್ಯಾಣ , ಕನ್ನಡಿಕಟ್ಟೆಯವರ ಸುಶ್ರಾವ್ಯ ಹಾಡುಗಾರಿಕೆ ಮತ್ತಷ್ಟು ಕೇಳಬೇಕೆನಿಸುವಷ್ಟು ಇಂಪಾಗಿತ್ತು . ಶಂಕರನಾರಾಯಣ ಪದ್ಯಾಣ , ಪದ್ಯಾಣ ಜಯರಾಮ ಭಟ್‌ , ಚೈತನ್ಯ , ವಿಟ್ಲರವರ ಹಿಮ್ಮೇಳವೂ ಪ್ರಸಂಗದ ಯಶಸ್ಸಿಗೆ ಕಾರಣವಾಯಿತು .

ಎಂ.ಶಾಂತರಾಮ ಕುಡ್ವ 

Advertisement
Advertisement

Udayavani is now on Telegram. Click here to join our channel and stay updated with the latest news.

Next