Advertisement

ಚಟುವಟಿಕೆಯ ನೆಲೆಯಲ್ಲೂ ಅಂತಿಮ ನಮನ

11:52 AM Nov 14, 2018 | |

ಬೆಂಗಳೂರು: ಅವಕಾಶ, ಸಂದರ್ಭ ಸಿಕ್ಕಾಗಲೆಲ್ಲಾ, ಪ್ರಧಾನಿ ಆದಿಯಾಗಿ ರಾಷ್ಟ್ರೀಯ ನಾಯಕರನ್ನು ಬಸವನಗುಡಿಯ ನ್ಯಾಷನಲ್‌ ಹೈಸ್ಕೂಲ್‌ ಮೈದಾನಕ್ಕೆ ಕರೆಸಿ ಸಾರ್ವಜನಿಕ ಸಭೆ ಆಯೋಜಿಸಿ ಕ್ರಿಯಾಶೀಲವಾಗಿ ಓಡಾಡುತ್ತಿದ್ದ ಬಿಜೆಪಿ ಹಿರಿಯ ನಾಯಕ ಎಚ್‌.ಎನ್‌.ಅನಂತಕುಮಾರ್‌ ಮಂಗಳವಾರ ಅದೇ ಮೈದಾನದಲ್ಲಿ ಚಿರನಿದ್ರೆಗೆ ಜಾರಿದ ದೃಶ್ಯ ಮನಕಲಕುವಂತಿತ್ತು.

Advertisement

ಸೋಮವಾರ ವಿಧಿವಶರಾದ ಅನಂತ ಕುಮಾರ್‌ ಅವರ ಪಾರ್ಥಿವ ಶರೀರವನ್ನು ಮಂಗಳವಾರ ಬೆಳಗ್ಗೆ 10.50ರ ಹೊತ್ತಿಗೆ ನ್ಯಾಷನಲ್‌ ಹೈಸ್ಕೂಲ್‌ ಮೈದಾನಕ್ಕೆ ಸೇನಾ ವಾಹನದಲ್ಲಿ ಮೆರವಣಿಗೆಯಲ್ಲಿ ತಂದು ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿತ್ತು. ಸರತಿ ಸಾಲಿನಲ್ಲಿ ಕಾದಿದ್ದ ಸಾರ್ವಜನಿಕರು ಅಗಲಿದ ನಾಯಕನ ಅಂತಿಮ ದರ್ಶನ ಪಡೆದರು. ನೂರಾರು ಶಾಲಾ ಮಕ್ಕಳು ವಿದ್ಯಾರ್ಥಿಗಳು ತಂಡೋಪತಂಡವಾಗಿ ಆಗಮಿಸಿ ಅಂತಿಮ ನಮನ ಸಲ್ಲಿಸಿದರು.

ಸಚಿವರಾದ ಜಿ.ಟಿ.ದೇವೇಗೌಡ, ಸಿ.ಎಸ್‌.ಪುಟ್ಟರಾಜು, ಸಂಸದರಾದ ಎಂ.ವೀರಪ್ಪ ಮೊಯಿಲಿ, ಬಿ.ವೈ.ರಾಘವೇಂದ್ರ ಇತರರು ಅಂತಿಮ ದರ್ಶನ ಪಡೆದರು. ಮಧ್ಯಾಹ್ನ 12.05ರ ಹೊತ್ತಿಗೆ ಸಾಮೂಹಿಕವಾಗಿ ವಂದೇ ಮಾತರಂ ಗೀತೆ ಹಾಡಲಾಯಿತು.  ನಂತರ ವಿಶೇಷವಾಗಿ ಹೂವಿನಿಂದ ಅಲಂಕೃತವಾಗಿದ್ದ ಸೇನಾ ಟ್ರಕ್‌ನಲ್ಲಿ ಪಾರ್ಥಿವ ಶರೀರದ ಅಂತಿಮ ಯಾತ್ರೆ ನಡೆಯಿತು.

ಅನಂತ ಕುಮಾರ್‌ ಅವರಿಗೆ ನ್ಯಾಷನಲ್‌ ಹೈಸ್ಕೂಲ್‌ ಮೈದಾನದ ಬಗ್ಗೆ ವಿಶೇಷ ಪ್ರೀತಿ. ಬೆಂಗಳೂರಿನಲ್ಲಿ ಹಾಗೂ ನಗರದ ದಕ್ಷಿಣ ಭಾಗದಲ್ಲಿ ಪಕ್ಷದಿಂದ ಯಾವುದೇ ಸಾರ್ವಜನಿಕ ಸಭೆ ಆಯೋಜಿಸಲು ನ್ಯಾಷನಲ್‌ ಹೈಸ್ಕೂಲ್‌ ಮೈದಾನವನ್ನೇ ಆಯ್ಕೆ ಮಾಡುತ್ತಿದ್ದರು. ಹಾಗಾಗಿ ಸಾಕಷ್ಟು ಕಾರ್ಯಕ್ರಮಗಳಿಗೆ ಈ ಮೈದಾನ ಸಾಕ್ಷಿಯಾಗಿದೆ. ಪ್ರಧಾನಿ ಆದಿಯಾಗಿ ಗಣ್ಯಾತಿಗಣ್ಯರು ಭಾಷಣ ಮಾಡಿ ಮೈದಾನಕ್ಕೆ ವಿಶೇಷ ಮಹತ್ವ ತಂದುಕೊಡುವಲ್ಲಿ ಅವರ ಪಾತ್ರ ದೊಡ್ಡದಿತ್ತು ಎನ್ನುತ್ತಾರೆ ಬಿಜೆಪಿ ನಗರ ಘಟಕದ ಅಧ್ಯಕ್ಷ ಪಿ.ಎನ್‌.ಸದಾಶಿವ.

ಬೆಂಗಳೂರಿನಲ್ಲಿ ಎರಡು ಬಾರಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ನಡೆದಾಗಲೂ ಎರಡೂ ಬಾರಿ ಇದೇ ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆದಿತ್ತು. ಒಮ್ಮೆ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ, ಇನ್ನೊಮ್ಮೆ ಪ್ರಧಾನಿ ನರೇಂದ್ರ ಮೋದಿಯವರು ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಿದ್ದರು. ಮಾಜಿ ಉಪಪ್ರಧಾನಿ ಎಲ್‌.ಕೆ.ಅಡ್ವಾಣಿಯವರು ರಥಯಾತ್ರೆಯೊಂದಿಗೆ ಬೆಂಗಳೂರಿಗೆ ಆಗಮಿಸಿದಾಗಲೂ ಇದೇ ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಸಿದ್ದರು.

Advertisement

ಈ ಭಾಗದಲ್ಲಿ ಬಿಜೆಪಿ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿರುವುದು, ಕುಟುಂಬ ಸಮೇತರಾಗಿ ಸಾರ್ವಜನಿಕರು ಪಾಲ್ಗೊಳ್ಳುವ ವಾತಾವರಣವಿದ್ದ ಕಾರಣ ಇದೇ ಮೈದಾನವನ್ನು ಅನಂತ ಕುಮಾರ್‌ ಅವರು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಅವರು ಕಡೆಯ ಬಾರಿ ಇದೇ ಮೈದಾನದಲ್ಲಿ ಕೇರಳ ಹಾಗೂ ಕೊಡಗಿಗೆ ಉಚಿತವಾಗಿ ಎರಡು ಕೋಟಿ ರೂ. ಮೌಲ್ಯದ ಔಷಧಿ ಹೊತ್ತ ವಾಹನಗಳಿಗೆ ಚಾಲನೆ ನೀಡಿದ್ದರು ಎಂದು ಸ್ಮರಿಸಿದರು.

12 ವರ್ಷಗಳಿಂದ ಅದಮ್ಯ ಚೇತನ ವಾರ್ಷಿಕ ಉತ್ಸವ ಕೂಡ ನ್ಯಾಷನಲ್‌ ಹೈಸ್ಕೂಲ್‌ ಮೈದಾನದಲ್ಲೇ ನಡೆಯುತ್ತಿದೆ. ಈ ಸಂದರ್ಭದಲ್ಲಿ ಸಾವಿರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿ ಸಾಮೂಹಿಕವಾಗಿ ವಂದೇ ಮಾತರಂ ಹೇಳುತ್ತಿದ್ದ ಪದ್ಧತಿ ಇದೆ. ಆದರೆ ಸಾಮೂಹಿಕವಾಗಿ ವಂದೇ ಮಾತರಂ ಹಾಡುವ ಮೂಲಕವೇ ಅನಂತ ಕುಮಾರ್‌ ಅವರಿಗೆ ವಿದಾಯ ಹೇಳಿದ್ದು, ನೋವಿನ ಸಂಗತಿ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next