Advertisement

ವಿಶಾಂತ್ರಿಗೆ ಹೋದ ಆನೆಗಳು ಬರಲೇ ಇಲ್ಲ; ಸಾರ್ವಜನಿಕರ ಆಕ್ರೋಶ

02:35 PM Mar 14, 2023 | Team Udayavani |

ಕಡಬ: ಕಳೆದ ತಿಂಗಳು ರೆಂಜಿಲಾಡಿ ಗ್ರಾಮದ ನೈಲದಲ್ಲಿ ಆನೆ ದಾಳಿಗೆ ಇಬ್ಬರು ಬಲಿಯಾದ ಬಳಿಕವೂ ಕಡಬ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ ಜನರನ್ನು ತಲ್ಲಣಗೊಳಿಸಿದೆ. ಕೃಷಿ ತೋಟಗಳಿಗೆ ಲಗ್ಗೆ ಇಟ್ಟು ಕೃಷಿ ನಾಶಮಾಡಿ ಜೀವ ಭಯ ಹುಟ್ಟಿಸಿರುವ ಕಾಡಾನೆ ಗಳನ್ನು ಹಿಡಿದು ಸ್ಥಳಾಂತರಿಸಲಾಗುವುದು ಎಂದು ಹೇಳಿ ಕಾರ್ಯಾಚರಣೆ ಆರಂಭಿಸಿದ್ದ ಅರಣ್ಯ ಇಲಾಖೆ ಒಂದು ಕಾಡಾನೆಯನ್ನು ಸೆರೆಹಿಡಿದು ಮೂರೇ ದಿನಕ್ಕೆ ಕಾರ್ಯಾ ಚರಣೆ ಸ್ಥಗಿತಗೊಳಿಸಿ ವಿಶಾಂತ್ರಿಗೆಂದು ಹೋದ ಆನೆಗಳು ಬರಲೇ ಇಲ್ಲ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ರೆಂಜಿಲಾಡಿ ಘಟನೆಯಿಂದ ಆಕ್ರೋಶಗೊಂಡಿದ್ದ ಸ್ಥಳೀಯ ಜನರು ಕಾಡಾನೆಗಳ ಹಾವಳಿಯನ್ನು ತಡೆಯಲು ಕ್ರಮ ಕೈಗೊಳ್ಳ ಬೇಕು, ಜನರನ್ನು ಬಲಿ ಪಡೆದ ಆನೆಗಳನ್ನು ಸೆರೆಹಿಡಿಯಬೇಕು ಎಂದು ಪಟ್ಟುಹಿಡಿದಿದ್ದ ಹಿನ್ನೆಲೆಯಲ್ಲಿ ಕಾಡಾನೆಯನ್ನು ಹಿಡಿಯಲು 5 ತರಬೇತಿ ನೀಡಿದ ಆನೆಗಳನ್ನು ಕರೆಸಿ ಕಾಡಾನೆ ಹಿಡಿದು ಸ್ಥಳಾಂತರಿಸುವ ಕಾರ್ಯಾಚರಣೆಗೆ ಫೆ. 21 ರಂದು ಚಾಲನೆ ನೀಡಲಾಗಿತ್ತು. ನಿರಂತರ ಮೂರು ದಿನಗಳ ಕಾರ್ಯಾಚರಣೆ ನಡೆದು ಫೆ. 23 ರಂದು ಸಂಜೆ ಕೊಂಬಾರು ಗ್ರಾಮದ ಮಂಡೆಕರ ಬಳಿಯ ಅರಣ್ಯದಲ್ಲಿ ಒಂದು ಕಾಡಾನೆಯನ್ನು ಸೆರೆ ಹಿಡಿದು ನಾಗರಹೊಳೆಯ ಮತ್ತಿಗೋಡು ಆನೆ ಶಿಬಿರಕ್ಕೆ ಸ್ಥಳಾಂತರಿಸಲಾಗಿತ್ತು. ಬಳಿಕ ಸಾಕಾನೆಗಳನ್ನು ವಿಶ್ರಾಂತಿಗೆಂದು ಕಳುಹಿಸಲಾಗಿತ್ತು.

ಆದರೆ ವಿಶ್ರಾಂತಿಗೆಂದು ತೆರಳಿದ ಆನೆಗಳು ಮತ್ತೆ ಕಾರ್ಯಾಚರಣೆಗೆ ಬರಲೇ ಇಲ್ಲ. ಕಾರ್ಯಾಚರಣೆ ನಿಲ್ಲುವು ದಿಲ್ಲ, ಮುಂದು ವರಿಯಲಿದೆ. ಉಪಟಳ ನೀಡುವ ಎಲ್ಲ ಕಾಡಾನೆಗಳನ್ನು ಸೆರೆಹಿಡಿದು ಸ್ಥಳಾಂತರಿಸಲಾಗುವುದು ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದ ಅರಣ್ಯಾಧಿಕಾರಿಗಳು ಕೂಡ ಈಗ ಸುಮ್ಮನಾಗಿದ್ದಾರೆ. ಇತ್ತ ಜನರು ಕಾಡಾನೆಗಳಿಂದ ತೊಂದರೆ ಅನುಭವಿಸುತ್ತಲೇ ಇದ್ದಾರೆ.

ಕೊಂಬಾರು, ಸಿರಿಬಾಗಿಲು ಗ್ರಾಮಗಳಲ್ಲಿ ಹೆಚ್ಚಿದ ಆನೆ ಉಪಟಳ ಕಳೆದ ಹಲವು ವರ್ಷಗಳಿಂದ ಕಾಡಾನೆಗಳ ದಾಳಿಯಿಂದಾಗಿ ಕಂಗಾ ಲಾಗಿರುವ ಮಲೆನಾಡ ತಪ್ಪಲಿನ ಕೊಂಬಾರು ಗ್ರಾ.ಪಂ. ವ್ಯಾಪ್ತಿಯ ಕೊಂಬಾರು ಹಾಗೂ ಸಿರಿಬಾಗಿಲು ಗ್ರಾಮಗಳಲ್ಲಿ ಕಾಡಾನೆಗಳ ತೊಂದರೆ ಮೇರೆ ಮೀರಿದೆ. ಪಕ್ಕದ ಗ್ರಾಮಗಳಾದ ಶಿರಾಡಿ ಹಾಗೂ ರೆಂಜಿಲಾಡಿಯಲ್ಲಿ ಆನೆಗಳಿಂದಾಗಿ ಜೀವಹಾನಿಯಾದ ಕಾರಣ ದಿಂದಾಗಿ ಇಲ್ಲಿನ ಜನರೂ ಜೀವ ಭಯ ದಿಂದ ತತ್ತರಿಸುವಂತಾಗಿದೆ. ಕೃಷಿ ತೋಟ ಗಳಿಗೆ ಪಕ್ಕದ ಕಾಡಿನಿಂದ ಆಹಾರ ಅರಸಿ ಕೊಂಡು ಬರುವ ಕಾಡಾನೆಗಳಿಗೆ ದಿನ ನಿತ್ಯ ಅಪಾರ ಪ್ರಮಾಣದ ಕೃಷಿ ಆಹುತಿಯಾಗುತ್ತಿರುವುದರ ಜತೆಗೆ ಜನರು ರಾತ್ರಿ ಮಾತ್ರವಲ್ಲದೇ ಹಗಲು ಹೊತ್ತಿನಲ್ಲಿಯೂ ಪ್ರಾಣ ಭೀತಿಯಿಂದಲೇ ಓಡಾಡುವಂತಾಗಿದೆ.

ಪರಿಹಾರ ಧನ ಮಾತ್ರ ಅತ್ಯಲ್ಪ ಅಭಿವೃದ್ಧಿಯ ವಿಚಾರದಲ್ಲಿ ಸಾಕಷ್ಟು ಹಿಂದುಳಿದಿರುವ ಕೊಂಬಾರು ಹಾಗೂ ಸಿರಿಬಾಗಿಲು ಗ್ರಾಮಗಳಲ್ಲಿ ಜನವಸತಿ ಪ್ರದೇಶಕ್ಕಿಂತ ಹೆಚ್ಚು ಅರಣ್ಯವೇ ಆವರಿಸಿ ಕೊಂಡಿದೆ. ಒಂದು ಅಂದಾಜಿನ ಪ್ರಕಾರ ವರ್ಷದಲ್ಲಿ ಕನಿಷ್ಠ ಎಂದರೂ 3-4 ಸಾವಿರ ಅಡಿಕೆ ಮರಗಳು, ಸಾವಿರಕ್ಕೂ ಮಿಕ್ಕಿ ರಬ್ಬರ್‌ ಗಿಡಗಳು, ನೂರಾರು ತೆಂಗಿನ ಮರಗಳು, ಸಾವಿರಾರು ಬಾಳೆ ಗಿಡಗಳು, ಕೃಷಿಗೆ ನೀರುಣಿಸುವ ನೀರಾ ವರಿ ಪೈಪ್‌ಗ್ಳು ಆನೆಗಳಿಂದಾಗಿ ಇಲ್ಲಿ ನಾಶವಾಗುತ್ತಿವೆ. ಈ ಹಾನಿಗಳಿಗೆ ಸರಕಾರ ದಿಂದ ಲಭಿಸುವ ಪರಿಹಾರ ಧನ ಮಾತ್ರ ಅತ್ಯಲ್ಪ. ಇಲ್ಲಿನ ಶೇ. 75ಕ್ಕೂ ಹೆಚ್ಚು ರೈತರು ಆನೆಗಳ ಉಪಟಳದಿಂದ ನಿರಂತರ ನಷ್ಟ ಅನುಭವಿಸುತ್ತಲೇ ಇದ್ದಾರೆ.

Advertisement

ಶಿರಿಬಾಗಿಲು ಗ್ರಾಮದ ಪೆರ್ಜೆ, ಪಿಲಿಕಜೆ, ಅನಿಲ, ದೇರಣೆ, ಗುಂಡ್ಯ, ಬಾರ್ಯ, ರೆಂಜಾಳ, ಕೊಂಬಾರು ಗ್ರಾಮದ ಕಾಪಾರು, ಅಗರಿ, ಬಗ್ಪುಣಿ, ಕೋಲ್ಪೆ, ಮಿತ್ತಬೈಲು, ಕಮರ್ಕಜೆ, ಮರುವಂಜಿ, ಬೊಟ್ಟಡ್ಕ ಪ್ರದೇಶಗಳಿಗೆ ಆನೆಗಳು ನಿರಂತರ ದಾಳಿ ನಡೆಸುತ್ತಿವೆ. ರೈತರು ಗರ್ನಾಲ್‌, ಪಟಾಕಿ ಸಿಡಿಸಿ ಆನೆಗಳನ್ನು ಓಡಿಸುವ ಪ್ರಯತ್ನ ನಡೆಸಿದರೂ ಯಾವುದೇ ಪ್ರಯೋಜನವಿಲ್ಲ. ಕೆಲವೊಮ್ಮೆ ಹಗಲಿನಲ್ಲೂ ಆನೆಗಳು ಇಲ್ಲಿ ಕಾಣ ಸಿಗುತ್ತವೆ. ಅದರಿಂದಾಗಿ ಜನ ಭಯಭೀತರಾಗಿ ರಸ್ತೆಗಳಲ್ಲಿ ಓಡಾಡಲೂ ಯೋಚಿಸುವಂತಾಗಿದೆ.

ಆನೆ ದಾಳಿ ನಿಯಂತ್ರಣಕ್ಕೆ ವೈಜ್ಞಾನಿಕ ಕ್ರಮ ಅಗತ್ಯ ರೆಂಜಿಲಾಡಿಯಲ್ಲಿ ಜೀವಹಾನಿಯಾದ ಕಾರಣದಿಂದಾಗಿ ಎಚ್ಚೆತ್ತುಕೊಂಡಿದ್ದ ಅರಣ್ಯ ಇಲಾಖೆಯವರು ಈಗ ಮತ್ತೆ ಸುಮ್ಮನಾಗಿದ್ದಾರೆ. ನಮ್ಮಲ್ಲಿ ದಿನಂಪ್ರತಿ ಎನ್ನುವಂತೆ ಆನೆಗಳು ತೊಂದರೆ ನೀಡುತ್ತಲೇ ಇವೆ. ಜನರು ಜೀವಭಯದಿಂದಲೇ ಬದುಕುವಂತಾಗಿದೆ. ಆನೆಗಳು
ಜನವಸತಿ ಪ್ರದೇಶಕ್ಕೆ ಬಾರದಂತೆ ತಡೆಯಲು ಸರಕಾರ ಆಧುನಿಕ ರೀತಿಯ ವೈಜ್ಞಾನಿಕ ಕ್ರಮಗಳನ್ನು ಕೈಗೊಳ್ಳುವುದರೊಂದಿಗೆ ಕೃಷಿ ಹಾನಿಗೆ ಸಮರ್ಪಕ ಪರಿಹಾರ ಸಿಗುವಂತೆ ಮಾಡಬೇಕು. ಉಪಟಳ ನೀಡುತ್ತಿರುವ ಆನೆಗಳನ್ನು ಹಿಡಿದು ಆನೆ ಶಿಬಿರಗಳಿಗೆ ಸ್ಥಳಾಂತರಿಸುವ ಕಾರ್ಯಾಚರಣೆಯನ್ನು ಮತ್ತೆ ಆರಂಭಿಸಬೇಕು.
ಜಯಶ್ರೀ ರಾಮಚಂದ್ರ,
ಕೊಂಬಾರು ಗ್ರಾ.ಪಂ. ಅಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.

Next