Advertisement

ರಂಗಭೂಮಿಯ ಭೀಷ್ಮ ಏಣಗಿ ಬಾಳಪ್ಪ ನೇಪಥ್ಯಕ್ಕೆ ಸರಿದ ನಾಟ್ಯಭೂಷಣ

03:14 AM Aug 19, 2017 | |

ರಂಗನಟ ಏಣಗಿ ಬಾಳಪ್ಪನವರು ನಿಧನದಿಂದ ವೃತ್ತಿರಂಗಭೂಮಿಯ ವೈಭವದ ಪರಂಪರೆಯ ಕೊನೆಯ ಸನ್ನಿವೇಶಕ್ಕೆ ಪರದೆ ಬಿದ್ದಂತಾಗಿದೆ. ಅವರು ಬಿಟ್ಟು  ಹೋದ ನೆನಪು ಹೇಗೆ ಉಳಿಸಿಕೊಳ್ಳುತ್ತೇವೆ ಎಂಬುದೇ ಅವರಿಗೆ ಸಲ್ಲಿಸುವ ಶ್ರದ್ಧಾಂಜಲಿ.

Advertisement

ಏಣಗಿ ಬಾಳಪ್ಪನವರ ನಿಧನದ ಸುದ್ದಿ ಕೇಳಿ ಮನಸ್ಸು ಮಂಕಾಯಿತು. ರಂಗಭೂಮಿಯನ್ನು ಪ್ರೀತಿಸುವವರು ಅನಾಥಪ್ರಜ್ಞೆ ಅನುಭವಿಸುವ ಕ್ಷಣಗಳಿವು. ಬಾಳಪ್ಪನವರು ನೂರಾ ನಾಲ್ಕು ವರ್ಷ ಬಾಳಿದರು. ಆದರಲ್ಲಿ ತೊಂಬತ್ತು ವರ್ಷಗಳ ಕಾಲ ಅವರು ರಂಗಭೂಮಿಯ  ಜೊತೆಗೇ ಸಕ್ರಿಯರಾಗಿದ್ದರು. ಅವರು ಕಟ್ಟಿದ ನಾಟಕ ಕಂಪನಿ ನಿಂತರೂ ಆವರ ನಾಟಕ ಚಟುವಟಿಕೆಗಳು ನಿಂತಿರಲಿಲ್ಲ.  ಕುಂತಲ್ಲಿ ನಿಂತಲ್ಲಿ ರಂಗಭೂಮಿಯ ಕುರಿತೇ ಧೇನಿಸುತ್ತಿದ್ದರು. ಮಾತನಾಡುತ್ತಿದ್ದರು. ಕೇಳುಗರು ಎದುರಿಗಿದ್ದರೆ ರಂಗಗೀತೆಗಳನ್ನು ಹಾಡುತ್ತಿದ್ದರು. ತಮ್ಮ ರಂಗಭೂಮಿ ಆನುಭವಗಳನ್ನು ಕತೆ ಮಾಡಿ  ಹೇಳುತ್ತಿದ್ದರು. ಇಳಿ ವಯಸ್ಸಿನಲ್ಲಿಯೂ ರಂಗಭೂಮಿಯ ಮಾತು ಬಂದರೆ ಉಲ್ಲಸಿತರಾಗುತ್ತಿದ್ದರು. ತರುಣರಿಗೆ  ರಂಗಸಂಗೀತ ಕಲಿಸುತ್ತಿದ್ದರು. ಅವರಿಗೊಂದು ಕನಸು ಇತ್ತು ರಂಗ ಸಂಗೀತ ಶಾಲೆ ಕಟ್ಟಬೇಕೆಂದು. ಅಂಥ ಕನಸುಗಾರ ಇನ್ನಿಲ್ಲವೆಂದರೆ  ನಿಜಕ್ಕೂ ರಂಗಭೂಮಿಗೆ ಹಾನಿಯೇ..!

ಬದುಕಿನುದ್ದಕ್ಕೂ ರಂಗಭೂಮಿಗಾಗಿ ದುಡಿದು ಹಣ್ಣಾದ ಬಾಳಪ್ಪನವರು ಕಳೆದ ಎರಡು ವರ್ಷಗಳಿಂದ  ಪಾರ್ಶ್ವವಾಯು ರೋಗಕ್ಕೆ ಒಳಗಾಗಿದ್ದರು. ನಡೆದಾಡುವ ಶಕ್ತಿ ಕಳೆದುಕೊಂಡಿದ್ದರು. ಅಂತಹ ಸಂದರ್ಭದಲ್ಲಿಯೇ ಅವರ ಜನ್ಮಶತಮಾನೋತ್ಸವ ಸಮಾರಂಭ  ಬೆಳಗಾವಿಯಲ್ಲಿ  (2014) ಜರುಗಿತು. ಆಗ ಬಾಳಪ್ಪನವರು ಆಡಿದ ಮಾತು ನನಗಿನ್ನೂ ನೆನಪಿದೆ. “ಕುಣಿಯಲು ಬಾರದ್ದಕ್ಕೆ ಅಂಗಳ ಡೊಂಕು ಎಂದು ಹೇಳುವ ಜನರೇ ಬಹಳ. ಹಾಗೆಯೇ ನಾಟಕ ಆಡಿ ಹಾಳಾದೆ ಎಂದು ಹೇಳುತ್ತಾರೆ. ಅಂಥವರ ಎದುರು ನಾಟಕ ಆಡಿ ಬೆಳೆದೆ ಎಂದು ಹೇಳಲು  ನನಗೆ ಹೆಮ್ಮೆ ಆನಿಸುತ್ತದೆ. ರಂಗಭೂಮಿಯ ಸಹವಾಸದಿಂದಲೇ ನಾನು ನೂರು ವರ್ಷಗಳನ್ನು ಸಾರ್ಥಕವಾಗಿ ಬಾಳಿದೆ. ಸಂತೋಷವನ್ನು ಅನುಭವಿಸಿದೆ.’ ರಂಗಭೂಮಿಗೆ ಘನತೆ, ಗೌರವ ತಂದುಕೊಡುವ ಮಾತುಗಳಿವು. ಇಂಥ ಮಾತುಗಳನ್ನಾಡಿ ಅವರು ನಮಗೆ ಪ್ರಸ್ತುತರಾಗುತ್ತಿದ್ದರು. ವೃತ್ತಿ ರಂಗಭೂಮಿಯಲ್ಲಿ ನಟರಾಗಿ, ನಾಟಕ  ಕಂಪನಿ ಮಾಲೀಕರಾಗಿ ಬೆಳೆದಿದ್ದ ಅವರು ಹವ್ಯಾಸಿ ರಂಗಭೂಮಿಯನ್ನೂ   ಪ್ರೀತಿಸುತ್ತಿದ್ದರು. ಮಹಾರಾಷ್ಟ್ರದಲ್ಲಿ ಎರಡೂ ತರಹದ ರಂಗಭೂಮಿಗಳಿವೆ. ಕರ್ನಾಟಕದಲ್ಲಿಯೂ ಹಾಗಿರಬೇಕು ಎಂದು ಹೇಳುತ್ತಿದ್ದರು. ರಂಗಕಲೆಯ ವೈವಿಧ್ಯತೆಯೇ ರಂಗಭೂಮಿಯ ವೈಭವವೆಂಬುದು ಅವರ ಅಭಿಪ್ರಾಯವಾಗಿತ್ತು.

ಬಾಳಪ್ಪನವರು ಬೆಳಗಾವಿ ಜಿಲ್ಲೆಯ ಸಣ್ಣ ಹಳ್ಳಿ ಏಣಗಿಯಲ್ಲಿ ಜನಿಸಿದರು. ಲೋಕೂರ ಮನೆತನದ ಕರಿಬಸಪ್ಪ ಬಾಳಮ್ಮ ದಂಪತಿಗಳ ಮೂರನೇ ಮಗನಾಗಿ  ಜನಿಸಿದರು. ಮೂರನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡರು. ಆ ಮೇಲೆ ಐದಾರು ವರ್ಷಗಳಲ್ಲಿ ಅಣ್ಣನನ್ನು ಕಳೆದುಕೊಂಡರು. ಇಂಥ ಆಘಾತಗಳಿಂದ ತಾಯಿಯ ಮುಖ ಮಗ, ಮಗನ ಮುಖ ತಾಯಿ ನೋಡುತ್ತ ದಿನಗಳನ್ನು ನೂಕಿದರೆಂಬುದು ಕರುಳು ಹಿಂಡುವ ಕಥೆ. ಅಂತ ಸ್ಥಿತಿಯಲ್ಲಿ ಉಣ್ಣುವದಕ್ಕೆಂದು  ಬಾಳಪ್ಪ ತಾಯಿಯ ಮಡಿಲಿನಿಂದ ರಂಗಭೂಮಿಯ ಅಂಗಳಕ್ಕೆ ಹೆಜ್ಜೆ ಹಾಕಿದರು. ಹಳ್ಳಿಯ ಬಯಲಾಟಗಳಲ್ಲಿ, ಭಜನೆಗಳಲ್ಲಿ ಭಾಗವಹಿಸತ್ತಿದ್ದ ಬಾಲಕ ಬಾಳಪ್ಪ ರೂಪದಿಂದ, ಕಂಠದಿಂದ ನಟನಾಗಿ ಬೆಳೆಯುವ ಲಕ್ಷಣಗಳನ್ನು ಪ್ರದರ್ಶಿಸಿದರು. ಮುಂದೆ ನಾಟಕ ಕಂಪನಿ  ಪ್ರವೇಶಿಸಿದರು. ಅಲ್ಲಿ ಹೆಸರಾಂತ ನಾಟಕಕಾರ, ನಟ ಚಿಕ್ಕೋಡಿ ಶಿವಲಿಂಗಸ್ವಾಮಿಗಳು ಗುರುಗಳಾಗಿ ಸಿಕ್ಕರು. ಅವರ ಗರಡಿಯಲ್ಲಿ ಬಾಳಪ್ಪನವರ ಬಣ್ಣದ ಬದುಕು ಗರಿಗೆದರಿತು. ಕಂಪನಿಗಳು, ಪಾತ್ರದಿಂದ ಪಾತ್ರಕ್ಕೆ ಬಾಳಪ್ಪನವರ ರಂಗಯಾತ್ರೆ ಮುಂದುವರಿಯಿತು.

ಕನ್ನಡ ರಂಗಭೂಮಿ ಹೊರಳು  ದಾರಿಯಲ್ಲಿದ್ದ ಕಾಲವದು. ಸಾಗ್ರಸಂಗೀತ ನಾಟಕಗಳು ಗದ್ಯಕ್ಕೆ ಮುಖ ಮಾಡಿದ್ದವು. ನಾಟಕವೆಂಬುದು ಸಂಗೀತ ಸಭೆಯಲ್ಲ. ಅದು ಅಭಿನಯ ಪ್ರದಾನ. ಸಂಭಾಷಣೆ ಪ್ರಧಾನ ಎಂಬುದನ್ನು ಗರುಡ ಸದಾಶಿವರಾಯರು ಹೇಳುತ್ತಿದ್ದರು.  ಕಂದಗಲ್‌ ಹನುಮಂತರಾಯರು ಆ ತರಹದ ನಾಟಕಗಳನ್ನು ಬರೆಯುತ್ತಿದ್ದರು. ಆಗ ನಟನಾದವನ ಹಾಡು ಅಭಿನಯ, ವಾಚಿಕ ಕರಗತ ಮಾಡಿಕೊಳ್ಳಬೇಕಾಗಿತ್ತು. ನಾಟಕ ರಂಗ ಎಂಬುದು ಪ್ರತಿಭಾವಂತರ ಆಡುಂಬೊಲವಾಗಿದ್ದ ಕಾಲವದು. ಬಾಳಪ್ಪನವರು ಚಿಕ್ಕೋಡಿ ಶಿವಲಿಂಗಗಸ್ವಾಮಿಗಳಿಂದ ಅಭಿನಯ, ಬೇವೂರು ಬಾದಶಃ ಮಾಸ್ತರರಿಂದ ಸಂಗೀತ ಕಲಿತವರು. ಹಂದಿಗನೂರ ಸಿದ್ರಾಮಪ್ಪನಂತಹ ನಟರಿಂದ ಅಭಿನಯ ಪಾಠ ಕಲಿತರು. ಇದರಿಂದ ಸಂಗೀತ, ಅಭಿನಯದಲ್ಲಿ ಸ್ತ್ರೀ-ಪುರುಷ ಪಾತ್ರಗಳನ್ನು ಚೆನ್ನಾಗಿ ನಿರ್ವಹಿಸುವ ಕಲೆಗಾರಿಕೆ ಸಾಧಿಸಿದರು. 

Advertisement

ಬಾಳಪ್ಪನವರು  ತಾರುಣ್ಯದಲ್ಲಿ ಸ್ತ್ರೀ ಪಾತ್ರಕ್ಕಾಗಿ ಉದ್ದ ಕೂದಲು ಬಿಟ್ಟಿದ್ದರಂತೆ. ಅವರ ನಯ ನಾಜೂಕು ಅಭಿನಯದಿಂದ ಕಿತ್ತೂರ ರುದ್ರಮ್ಮ,  ಹೇಮರಡ್ಡಿ ಮಲ್ಲಮ್ಮ, ಕಡ್ಲಿಮಟ್ಟಿ ಕಾಶೀಬಾಯಿ  ಪಾತ್ರಗಳು ಅಪಾರ ಕೀರ್ತಿ ತಂದುಕೊಟ್ಟಿದ್ದವು. ಅವರು  ಪುರುಷ ಪಾತ್ರದ ಅಭಿನಯದಲ್ಲಿ ಜಗಜ್ಯೋತಿ ಬಸವೇಶ್ವರ ಹೊಸ ಇತಿಹಾಸವನ್ನೇ ನಿರ್ಮಿಸಿತು. ಅವರ ವಚನ ಗಾಯನ ಬಸವಣ್ಣವರ ಪಾತ್ರದಲ್ಲಿ ಅಭಿನಯದಿಂದ ಇವರು ಸಾಕ್ಷಾತ್‌ ಬಸವಣ್ಣ ಎಂದು ಪ್ರೇಕ್ಷಕರಿಂದ ಸರ್ಟಿಫಿಕೇಟ್‌ ಪಡೆದರು. ಈ ನಾಟಕ ಹುಬ್ಬಳ್ಳಿಯಲ್ಲಿ ಒಂದು ವರ್ಷ ಆದ್ದೂರಿಯಾಗಿ ನಡೆಯಿತು. ಆಗಲೇ ಆವರಿಗೆ ನಾಟ್ಯಭೂಷಣ ಬಿರುದು ಸಿಕ್ಕಿತು.

ಬಾಳಪ್ಪನವರು 1947 ರಲ್ಲಿ ಕಲಾ ವೈಭವ ನಾಟ್ಯ ಸಂಘ ಬೆಳಗಾವಿ ಎಂಬ  ಹೆಸರಿನಲ್ಲಿ ಸ್ವಂತ ಕಂಪನಿ ಕಟ್ಟಿದರು. ನಾಟಕ ಕಂಪನಿಗಳ  ಮೇಲೆ ಸಮಾಜದ ಋಣ ಬಹಳ. ಅದನ್ನು ತೀರಿಸಲು ಕಂಪನಿಗಳು ಸಮಾಜಕ್ಕೆ ಬೇಕಾಗುವಂತಹ ನಾಟಕಗಳನ್ನು ಆಡಬೇಕು ಎಂದು ಶಿವಲಿಂಗ ಸ್ವಾಮಿಗಳು ಹೇಳುತ್ತಿದ್ದರಂತೆ. ಆವರ ಮಾತು ಬಾಳಪ್ಪನವರಿಗೆ ಮಂತ್ರವಾಗಿತ್ತು. ಅದನ್ನು ಸ್ವಂತ ಕಂಪನಿಯ ಮೂಲಕ  ಪೂರೈಸಲು ಪ್ರಯತ್ನಿಸಿದರು.

ನಾಟಕ ಕಂಪನಿ ಅನ್ನುವದು ವಿದ್ಯಾಲಯ. ಆಲ್ಲಿ ಶಿಸ್ತಿರಬೇಕು. ನೀತಿ ಇರ್ಬೇಕು. ಕಲಾವಿದರ ಸಾಧನೆ ಇರಬೇಕು ಎಂದು ನಂಬಿದ ಬಾಳಪ್ಪನವರು ಸ್ವತಃ ನಿರ್ವಸನಿ. ಗಾಂಧಿವಾದಿ. ಕಂಪನಿಯ ಕಲಾವಿದರು ಹಾಗೇ ಇರಬೇಕೆಂದು ಬಯಸುತ್ತಿದ್ದರು. ದೇಶದಲ್ಲಿ ಸ್ವಾತಂತ್ರ್ಯ ಹೋರಾಟ ನಡೆಯುತ್ತಿದ್ದಾಗ ಕಿತ್ತೂರ ಚೆನ್ನಮ್ಮ, ಚಲೇಜಾವ್‌ದಂತಹ ನಾಟಕಗಳನ್ನಾಡಿ ಹೋರಾಟಗಾರರಿಗೆ ಸ್ಪೂರ್ತಿ ತುಂಬಿದರು. ಸ್ವಂತ ಕಂಪನಿ ಕಟ್ಟುವಾಗ ದೇಶ ಸ್ವತಂತ್ರವಾಗಿತ್ತು. ಆದರೆ ಏಕೀಕರಣ ಚಳುವಳಿ ಜೋರಾಗಿತ್ತು. ಆಗ ಬಾಳಪ್ಪನವರು ಏಕೀಕರಣ ಎಂಬ ನಾಟಕ ಬರೆಯಿಸಿ ಆಡಿಸಿದರು. ಬೆಳಗಾವಿಗಾಗಿ ಮಹಾರಾಷ್ಟ್ರದವರು ತಕರಾರು ಮಾಡುತ್ತಿದ್ದಾಗ ಬೆಳಗಾವಿ ಕರ್ನಾಟಕದ ಅವಿಭಾಜ್ಯವಾದ ಆಂಗವೆಂದು  ಸಾರಲು ಕಂಪನಿಯ ಫ್ರೇಮಿನ ಮೇಲೆ ಕಲಾವೈಭವ ನಾಟ್ಯ ಸಂಘ ಬೆಳಗಾವಿ (ಕರ್ನಾಟಕ ರಾಜ್ಯ) ಎಂದು ಬರೆಯಿಸಿದ್ದರು. ಆದಕ್ಕಾಗಿ ಅವರು ಸಾಕಷ್ಟು ಕಷ್ಟ ನಷ್ಟ ಅನುಭವಿಸಿದರು. ಕೊಲೆ ಬೆದರಿಕೆಯನ್ನು ಎದುರಿಸಿದರು. ಆದರೆ ತಮ್ಮ ನಿಲುವು ಬದಲಿಸಲಿಲ್ಲ. ನಾಟಕದ ಮೂಲಕ ಸ್ವಾತಂತ್ರ ಚಳುವಳಿಗೆ, ನಾಡು ನುಡಿಗೆ ಹೇಗೆ ಸೇವೆ ಮಾಡಬಹುದೆಂಬುದನ್ನು ತೋರಿಸಿಕೊಟ್ಟರು.

ಕಲಾವೈಭವ ನಾಟಕ ಕಂಪನಿಗಾಗಿ ತಾವೇ ಸ್ವತಃ ಕಥೆ ಹೇಳಿ ನಾಟಕಗಳನ್ನು  ಬರೆಯಿಸಿದ್ದರು. ಅಂತಹವುಗಳಲ್ಲಿ ಶಾಲಾ ಮಾಸ್ತರ, ಗೋರಾ ಕುಂಬಾರ, ಜೈ ಪದ್ಮಾವತಿ, ಮಾವ ಬಂದನಪ್ಪೋ ಮಾವ,  ದೇವರು ಮಗ ಪ್ರಮುಖವಾಗಿವೆ. ಯಾವ ನಾಟಕ ಯಾವ ಊರಿನಲ್ಲಿ ಆಡಬೇಕು ಎಂಬ ಲೆಕ್ಕಾಚಾರವು ಆವರಿಗೆ ಚೆನ್ನಾಗಿ ಗೊತ್ತಿತ್ತು. ಹೀಗಾಗಿ ಅವರ ಕಂಪನಿಗೆ ಪ್ರೇಕ್ಷಕರ ಕೊರತೆ ಕಾಣಲಿಲ್ಲ. ಅವರ ಕಂಪನಿ ಕೊಡುಗೆಗಳಲ್ಲಿ ಎರಡನ್ನು  ನೆನಯಲೇಬೇಕು. ಒಂದು ಬಸವೇಶ್ವರ ನಾಟಕ ಇನ್ನೊಂದು ನಟರಾಜ ಏಣಗಿ. ಇವರ ಮೂಲಕ ಬಾಳಪ್ಪನವರು ವೃತ್ತಿ, ಹವ್ಯಾಸಿ ರಂಗಗಳನ್ನು ಬೆಸೆಯಲು ಯತ್ನಿಸಿದರು. ಅವರ ಜೊತೆಗೆ ಕಂಪನಿ ಕಟ್ಟುವಲ್ಲಿ ಪ್ರಯತ್ನಿಸಿದವರು ಅವರ  ಕಲಾವಿದರು. ವಿಶೇಷವಾಗಿ ಅವರ ಕಲಾವಿದೆ ಪತ್ನಿ ಲಕ್ಷ್ಮಿಬಾಯಿ ಏಣಗಿ. ಸಿನಿಮಾದ ಅತಿಯಾದ ಆನುಕರಣೆಯಿಂದ  ರಂಗಭೂಮಿ ಹದ ಕೆಡುತ್ತಿದೆ ಎನಿಸಿದಾಗ ಆವರೊಂದಿಗೆ ಹೊಂದಾಣಿಕೆ ಸಾಧ್ಯವಿಲ್ಲ ಎನಿಸಿದಾಗ ನಾಟಕ ಕಂಪನಿ ನಿಲ್ಲಿಸಿದರು. ಕಂಪನಿ ನಿಂತರೂ ನಾಟಕ ಚಟುವಟಿಕೆಗಳು  ನಿಲ್ಲಲಿಲ್ಲ. ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಮ್ಯಾಳ ಎಂಬ ಸಂಘ ಹುಟ್ಟಿಕೊಳ್ಳಲು ಕಾರಣರಾದರು. ಏಣಗಿಯಲ್ಲಿ ಮಕ್ಕಳಿಗಾಗಿ ನಾಟಕ ಕಲಿಸಿದರು. ಆಸಕ್ತ ತರುಣರಿಗೆ ರಂಗ ಸಂಗೀತ ಹೇಳಿಕೊಟ್ಟರು. 
ರಂಗಸಂಗೀತ ರಂಗಭೂಮಿಯ ದೊಡ್ಡ ಸಂಪತ್ತು ಎನ್ನುತ್ತಿದ್ದರು. ಆದನ್ನು ಉಳಿಸಿಕೊಳ್ಳಬೇಕೆಂದು ದಾರವಾಡ ಆಕಾಶವಾಣಿ ಕೇಂದ್ರದಲ್ಲಿ ನಾಟಕ ಅಕಾಡೆಮಿಯಲ್ಲಿ ರಂಗಗೀತೆಗಳ  ಧ್ವನಿಮುದ್ರಣ ಮಾಡಿಸಿದರು. ಆದರೆ ರಂಗ ಸಂಗೀತ ಶಾಲೆಯ ಕನಸು ಮಾತ್ರ ನನಸಾಗಲಿಲ್ಲ.

ಬಾಳಪ್ಪನವರು ರಂಗಭೂಮಿ ಸೇವೆಗೆ ಹಲವಾರು ಗೌರವ ಪ್ರಶಸ್ತಿಗಳು ಬಂದಿವೆ. ಅವುಗಳಲ್ಲಿ ಕೇಂದ್ರ ಸಂಗೀತ, ನಾಟಕ ಅಕಾಡೆಮಿಯ ಗೌರವ ಪುರಸ್ಕಾರ. ಹಂಪಿ ವಿಶ್ವವಿದ್ಯಾಲಯದ ನಾಡೋಜ ಪದವಿ, ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌, ಇತ್ತೀಚೆಗಷ್ಟೆ  ಮೈಸೂರಿನ ಗಂಗೂಬಾಯಿ ಹಾನಗಲ್‌ ಸಂಗೀತ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌ ಪ್ರಮುಖವಾಗಿದೆ. ಮೂರು ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್‌  ಪದವಿ ಪಡೆದ ಏಕಮೇವ ರಂಗನಟ ಏಣಗಿ ಬಾಳಪ್ಪನವರು. ಅವರ ನಿಧನದಿಂದ ವೃತ್ತಿರಂಗಭೂಮಿಯ ವೈಭವದ ಪರಂಪರೆಯ ಕೊನೆಯ ಸನ್ನಿವೇಶಕ್ಕೆ ಪರದೆ ಬಿದ್ದಂತಾಗಿದೆ. ಅವರು ಬಿಟ್ಟು  ಹೋದ ನೆನಪುಗಳನ್ನು ನಾವು ಹೇಗೆ ಉಳಿಸಿಕೊಳ್ಳುತ್ತೇವೆ ಎಂಬುದೇ ಅವರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ.

ಡಾ.ರಾಮಕೃಷ್ಣ ಮರಾಠೆ

Advertisement

Udayavani is now on Telegram. Click here to join our channel and stay updated with the latest news.

Next