Advertisement

ಅಪರಾಧಿಗಳ ಜಾಡು ಹಿಡಿದ ಅರ್ಜುನ ಪೊಲೀಸ್‌ ಇಲಾಖೆಯಿಂದ ನಿವೃತ್ತಿ

10:20 PM Jan 12, 2020 | Sriram |

ಉಡುಪಿ: ಜಿಲ್ಲಾ ಪೊಲೀಸ್‌ ಶ್ವಾನದಳ ವಿಭಾಗದಲ್ಲಿ ಅತ್ಯಂತ ಹೆಚ್ಚು ಅಪರಾಧ ಪ್ರಕರಣಗಳನ್ನು ಭೇದಿಸುವ ಮೂಲಕ ಇತಿಹಾಸ ಸೃಷ್ಟಿಸಿದ ಜಿಲ್ಲಾ ಪೊಲೀಸ್‌ ಶ್ವಾನ ಅರ್ಜುನ ಜ. 10 ಪೊಲೀಸ್‌ ಸೇವೆಯಿಂದ ಅಧಿಕೃತವಾಗಿ ನಿವೃತ್ತಿಯಾಗಿದೆ.

Advertisement

9 ವರ್ಷಗಳು ಸೇವೆ
ಪೊಲೀಸರಿಗೆ ಸವಾಲಾಗಿದ್ದ 2015ರಲ್ಲಿ ನಡೆದಿದ್ದ ಬೈಂದೂರಿನ ವಿದ್ಯಾರ್ಥಿನಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮಹತ್ವದ ಸುಳಿವು ನೀಡಿದ್ದ, ಸುಮಾರು 15ಕ್ಕೂ ಹೆಚ್ಚು ಅಪರಾಧ ಪ್ರಕರಣಗಳನ್ನು ಭೇದಿಸುವಲ್ಲಿ ಪತ್ತೆದಾರಿಯಾಗಿ ಹೆಸರು ಮಾಡಿದ್ದ ಅರ್ಜುನ ಅನಾರೋಗ್ಯ ಕಾರಣದಿಂದ ಪೊಲೀಸ್‌ ಸೇವೆಯಿಂದ ನಿವೃತ್ತಿಯಾಗಿದೆ.

120 ಪ್ರಕರಣದ ಜಾಡು
ಅಪರಾಧ ವಿಭಾಗದಲ್ಲಿ ಈ ಶ್ವಾನ 9 ವರ್ಷ ಉತ್ತಮ ಸೇವೆ ಸಲ್ಲಿಸಿದೆ. ಈ ಅವಧಿಯಲ್ಲಿ 500 ಪ್ರಕರಣಗಳಲ್ಲಿ 120 ಅಪರಾಧ ಪ್ರಕರಣಗಳ ಅಪರಾಧಿಗಳ ಜಾಡು ಹಾಗೂ 5 ಪ್ರಮುಖ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಿತ್ತು. ಜಿಲ್ಲೆಯಲ್ಲಿ ಇದು ಪ್ರಮುಖ ಪತ್ತೇದಾರಿ ಶ್ವಾನವಾಗಿತ್ತು. ಬೆಂಗಳೂರಿನ ಆಡುಗೋಡಿಯ ಪೊಲೀಸ್‌ ಶ್ವಾನ ತರಬೇತಿ ಕೇಂದ್ರದಲ್ಲಿ ತರಬೇತುಗೊಂಡು 2011ರ ಫೆ. 7ರಂದು ಉಡುಪಿ ಅಪರಾಧ ಪತ್ತೆ ದಳದಲ್ಲಿ ಸೇರ್ಪಡೆಯಾಗಿತ್ತು.

ಕುಶಾಗ್ರಮತಿ ಶ್ವಾನ
ಡಾಬರ್‌ ಮನ್‌ ತಳಿಯ ಅರ್ಜುನ ಪಾಲನೆ ಮಾಡುವವರಿಗೆ, ಪೊಲೀಸ್‌ ಅಧಿಕಾರಿಗಳಿಗೆ ಅಚ್ಚುಮೆಚ್ಚಾಗಿದ್ದು, ಕುಶಾಗ್ರಮತಿ ಶ್ವಾನ ಎಂದೇ ಖ್ಯಾತಿ ಪಡೆದಿತ್ತು. ಕಳೆದ ಹಲವು ತಿಂಗಳಿನಿಂದ ಮೂಲವ್ಯಾಧಿ ಸಮಸ್ಯೆ ತೀವ್ರವಾಗಿ ಬಾಧಿಸುತ್ತಿರುವ ಹಿನ್ನಲೆಯಲ್ಲಿ ನಿವೃತ್ತಿಗೆ ಇನ್ನೂ ಸಮಯ ಇರುವಾಗಲೇ ಇಲಾಖೆಯು ನಿವೃತ್ತಿ ಘೋಷಿಸಿದೆ.

ಹ್ಯಾಂಡ್ಲರ್‌ ಜತೆ ಅರ್ಜುನ್‌
ಸೇವೆಗೆ ವಿಮುಖವಾಗುವ ಶ್ವಾನಗಳನ್ನು ಸರಕಾರದ ನಿಯಮದಂತೆ ಷರತ್ತುಬದ್ಧವಾಗಿ ಸಶಸ್ತ್ರ ಮೀಸಲು ಪಡೆಯ ಡಾಗ್‌ ಹ್ಯಾಂಡ್ಲರ್‌ ತಮ್ಮ ಬಳಿ ಇಟ್ಟುಕೊಳ್ಳಬಹುದು ಅಥವಾ ಪ್ರಾಣಿ ದಯಾ ಸಂಘಕ್ಕೆ ಇಲಾಖೆ ನಿಯಮಗಳನ್ನು ಅನುಸರಿಸಿ ಕೊಡಲಾಗುತ್ತದೆ. ಪ್ರಸ್ತುತ ಅರ್ಜುನನ ಜವಾಬ್ದಾರಿಯನ್ನು ಸ್ವಯಂ ಆಸಕ್ತಿಯಿಂದ ಹ್ಯಾಂಡ್ಲರ್‌ ಪೆಂಚಲ್‌ ರಾವ್‌ ತೆಗೆದುಕೊಂಡಿದ್ದು, ಮನೆಯಲ್ಲಿ ಆರೈಕೆ ಮಾಡುತ್ತಿದ್ದಾರೆ.

Advertisement

ಅರ್ಜುನ ಜಾಗಕ್ಕೆ ಬ್ರೌನಿ
ಅರ್ಜುನನ ಸ್ಥಾನವನ್ನು ಉಡುಪಿ ಮೂಲದ ಶ್ವಾನ ಬ್ರೌನಿ ಭರ್ತಿಯಾಗಿದ್ದಾನೆ. ಬ್ರೌನಿ ಮೂರು ತಿಂಗಳ ಮರಿಯಾಗಿದ್ದಾಗ ಅಂದಿನ ಎಸ್ಪಿ ಲಕ್ಷ್ಮಣ ಬ. ನಿಂಬರಗಿ ಅವರು ಜಿಲ್ಲಾ ಶ್ವಾನದಳ ವಿಭಾಗಕ್ಕೆ ಆಯ್ಕೆ ಮಾಡಿದ್ದರು. ಅಲ್ಲಿಂದ ನೇರವಾಗಿ ಬೆಂಗಳೂರಿನ ಆಡುಗೋಡಿಯ ಪೊಲೀಸ್‌ ಶ್ವಾನ ತರಬೇತಿ ಕೇಂದ್ರದಲ್ಲಿ ಆರು ತಿಂಗಳ ಕಾಲ ವಿಶೇಷ ತರಬೇತಿ ಪಡೆದು, ಅಲ್ಲಿ ನಡೆಸುವ ಪರೀಕ್ಷೆಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ “ಬಿ’ ರ್‍ಯಾಂಕ್‌ ಪಡೆದುಕೊಂಡಿದೆ.

ಚುರುಕಿನ “ಬ್ರೌನಿ’
ಅಪರಾಧ ಸೇರಿದಂತೆ ವಿವಿಧ ವಿಭಾಗದ ನುರಿತ ತಜ್ಞರಿಂದ ತರಬೇತುಗೊಂಡ ಬ್ರೌನಿ ಉತ್ತಮ ಜಾಣ್ಮೆ ತೋರಿ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು. ತರಬೇತಿ ಅವಧಿಯಲ್ಲೇ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಪರೇಡ್‌ನ‌ಲ್ಲಿ ಭಾಗವಹಿಸಿದ ಕೀರ್ತಿ ಬ್ರೌನಿಗೆ ಸಲ್ಲುತ್ತದೆ. ಶ್ವಾನ ಆಯ್ಕೆ ವಿಷಯದಲ್ಲಿ ಇಲಾಖೆ ಹೆಚ್ಚಿನ ಕಾಳಜಿ ವಹಿಸುತ್ತದೆ. ಡಾಬರ್‌ ಮೆನ್‌ ತಳಿ, ಚುರುಕುತನ, ಗ್ರಹಿಕೆ ಮೊದಲಾದ ವಿಷಯಗಳನ್ನು ಪರಾಮರ್ಶಿಸಲಾಗುತ್ತದೆ.

ಅಣ್ಣಾಮಲೈ ಬಹುಮಾನ
ಬೈಂದೂರಿನ ವಿದ್ಯಾರ್ಥಿನಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆಗೆ ಮಹತ್ವದ ಸುಳಿವು ನೀಡಿ ಆರೋಪಿಗಳನ್ನು ಬಂಧಿಸುವಲ್ಲಿ ನೆರವಾಗಿದ್ದ ಅರ್ಜುನನಿಗೆ ಅಂದಿನ ಎಸ್ಪಿ ಅಣ್ಣಾಮಲೈ 6,000 ರೂ. ಬಹುಮಾನ ಘೋಷಿಸಿದ್ದರು. ವಾರಾಹ ದೇವಸ್ಥಾನದ ಕಳ್ಳತನ ಪ್ರಕರಣ ಸೇರಿದಂತೆ ಇದುವರೆಗೂ ಸುಮಾರು 20 ಮಹತ್ವದ ಅಪರಾಧ ಪ್ರಕರಣ ಭೇದಿಸುವಲ್ಲಿ ಅರ್ಜುನ ಪ್ರಮುಖ ಪಾತ್ರ ವಹಿಸಿದ್ದ ಎಂದು ಅಧಿಕಾರಿಗಳು ನೆನಪಿಸಿಕೊಳ್ಳುತ್ತಾರೆ.

ನುರಿತ ತಜ್ಞರಿಂದ ತರಬೇತಿ
ಅಪರಾಧ ಸೇರಿದಂತೆ ವಿವಿಧ ವಿಭಾಗದ ನುರಿತ ತಜ್ಞರಿಂದ ಬ್ರೌನಿ ತರಬೇತಿ ಪಡೆದುಕೊಂಡಿದೆ. ಕಳೆದ ವರ್ಷ ಮಾರ್ಚ್‌ನಲ್ಲಿ ಉಡುಪಿ ಪೊಲೀಸ್‌ ಶ್ವಾನದಳಕ್ಕೆ ಸೇರ್ಪಡೆಯಾಗಿದೆ.
-ಶ್ರೀನಿವಾಸ್‌, ಸಂದೀಪ್‌, ಬ್ರೌನಿ ಶ್ವಾನದಳದ ನಿರ್ವಾಹಕ, ಪೊಲೀಸ್‌ ಶ್ವಾನದಳ ಉಡುಪಿ.

10 ವರ್ಷ ಸೇವೆ
ಪೊಲೀಸ್‌ ಇಲಾಖೆಯಲ್ಲಿ 10 ವರ್ಷ ಸೇವೆ ಸಲ್ಲಿಸಿದ ಶ್ವಾನಗಳಿಗೆ ನಿವೃತ್ತಿ ಘೋಷಿಸುವುದು ಸಾಮಾನ್ಯ. ಆದರೆ ಅರ್ಜುನನಿಗೆ ಇತ್ತೀಚೆಗೆ ಮೂಲವ್ಯಾಧಿ ಸಮಸ್ಯೆ ತೀವ್ರವಾಗಿ ಬಾಧಿಸುತ್ತಿರುವ ಹಿನ್ನಲೆಯಲ್ಲಿ ಇಲಾಖೆಯು ಅರ್ಜುನ್‌ಗೆ ನಿವೃತ್ತಿ ಘೋಷಿಸಿದೆ. ಪ್ರಸ್ತುತ ಸೇವೆಯಿಂದ ವಿಮುಖವಾಗುವ ಶ್ವಾನಗಳನ್ನು ಸರ್ಕಾರದ ನಿಯಮದಂತೆ ಷರತ್ತುಬದ್ಧವಾಗಿ ಅರ್ಜುನ ಜವಾಬ್ದಾರಿ ಪಡೆದುಕೊಂಡಿದ್ದೇನೆ.
– ಪೆಂಚಲ್‌ ರಾವ್‌,ಅರ್ಜುನ ಶ್ವಾನ ನಿರ್ವಾಹಕ. ಪೊಲೀಸ್‌ ಶ್ವಾನದಳ, ಉಡುಪಿ.

-ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next