Advertisement

ಮತ್ತೆ ಹದಗೆಟ್ಟ ಹೆದ್ದಾರಿ; ವಾಹನ ಸವಾರರು ಹೈರಾಣ

11:21 AM Sep 10, 2019 | Team Udayavani |

ಕುಂದಾಪುರ: ಪುರಸಭೆ ವ್ಯಾಪ್ತಿಯ ಹೆದ್ದಾರಿಯ ಅನೇಕ ಕಡೆಗಳಲ್ಲಿ ಭಾರೀ ಮಳೆಯಿಂದಾಗಿ ಮತ್ತೆ ಬೃಹತ್‌ ಹೊಂಡ – ಗುಂಡಿಗಳು ಕಾಣಿಸಿಕೊಂಡಿದ್ದು, ವಾಹನ ಸವಾರರು ಹೈರಾಣಾಗಿ ಹೋಗಿದ್ದಾರೆ. ಸಂಚಾರಿ ನಿಯಮ ಉಲ್ಲಂಘನೆಯಡಿ ದಂಡವನ್ನು ಹೆಚ್ಚಿಸುವ ಸರಕಾರ ರಸ್ತೆ ದುರಸ್ತಿಗೆ ಯಾಕೆ ಮನಸ್ಸು ಮಾಡುತ್ತಿಲ್ಲ ಎನ್ನುವ ಆರೋಪವನ್ನು ಜನರು ಮಾಡುತ್ತಿದ್ದಾರೆ.

Advertisement

ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಅಲ್ಲಲ್ಲಿ ಹಾಕಲಾದ ತೇಪೆ ಎದ್ದು ಹೋಗಿದೆ. ಇದರಿಂದ ಈಗ ಹಿಂದಿಗಿಂತಲೂ ಹೆಚ್ಚು ಕಡೆಗಳಲ್ಲಿ ಹೆದ್ದಾರಿ ಮಧ್ಯೆಯೇ ಹೊಂಡ – ಗುಂಡಿಗಳಾಗಿವೆ. ಮಳೆ ಬಂದು, ನೀರೆಲ್ಲ ಈ ಹೊಂಡಗಳಲ್ಲಿ ನಿಂತಿದ್ದರೆ, ವಾಹನ ಸವಾರರಿಗೆ ಎಲ್ಲಿ ಹೊಂಡವಿದೆ, ಗುಂಡಿಗಳಿವೆ ಎಂದು ತಿಳಿಯದ ಸ್ಥಿತಿಯಿದೆ. ಅದರಲ್ಲೂ ದ್ವಿಚಕ್ರ ವಾಹನ ಸವಾರರಂತೂ ನಿತ್ಯ ಈ ನರಕ ಯಾತನೆ ಅನುಭವಿಸುವಂತಾಗಿದೆ.

ಎಲ್ಲೆಲ್ಲಿ ಹೊಂಡ – ಗುಂಡಿ?

ಕುಂದಾಪುರದ ಹೃದಯ ಭಾಗವಾದ ಶಾಸ್ತ್ರಿ ಸರ್ಕಲ್ ಬಳಿ ಅತೀ ಹೆಚ್ಚು ಹೊಂಡ – ಗುಂಡಿಗಳಿವೆ. ಇಲ್ಲಿ ಮೇಲ್ಸೆತುವೆ ಕಾಮಗಾರಿ ಪೂರ್ಣಗೊಳ್ಳದ ಕಾರಣ ಸಂಚಾರಿ ವ್ಯವಸ್ಥೆಯೂ ಸುಗಮವಾಗಿಲ್ಲ. ಈಗ ರಸ್ತೆಯೂ ಹದಗೆಟ್ಟು ಹೋಗಿರುವುದರಿಂದ ಯಾವ ಕಡೆಯಿಂದ ವಾಹನ ಬರುತ್ತದೆ ಎಂದು ಆ ಕಡೆ – ಈ ಕಡೆ ನೋಡುವಷ್ಟರಲ್ಲಿ ವಾಹನ ರಸ್ತೆಯಲ್ಲಿರುವ ಗುಂಡಿಗೆ ಬೀಳುತ್ತದೆ. ವಿನಾಯಕ ಚಿತ್ರ ಮಂದಿರದ ಎದುರಿನ ಹೆದ್ದಾರಿಯಲ್ಲಂತೂ ವಾಹನ ಸವಾರರ ಪಾಡು ದೇವರಿಗೆ ಪ್ರೀತಿ. ಅಲ್ಲಲ್ಲಿ ಹೊಂಡ – ಗುಂಡಿ ಗಳಿಗೆ ಎದ್ದು – ಬಿದ್ದು ವಾಹನದಲ್ಲಿ ಸಂಚರಿ ಸುವ ದುಸ್ಥಿತಿ ಜನರದ್ದು. ಇನ್ನು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿಯ ಹೆದ್ದಾರಿಯಲ್ಲಿ ಆಗಾಗ ತೇಪೆ ಹಾಕಿ, ರಸ್ತೆಯ ಗುಂಡಿಗಳನ್ನು ಮುಚ್ಚು ತ್ತಿದ್ದರೂ, ಮಳೆಗೆ ಮತ್ತೆ ಎದ್ದು ಹೋಗುತ್ತದೆ.

ಮಳೆಗಾಲದ ಬಳಿಕ ದುರಸ್ತಿ ಮಾಡಲಿ

ಮಳೆಗಾಲ ಆರಂಭವಾಗುವ ಹೊತ್ತಿಗೆ ಕಾಮಗಾರಿ ಆರಂಭಿಸುತ್ತಾರೆ. ಅದು ಮಳೆಗಾಲ ಮುಗಿಯುವುದರೊಳಗೆ ಎದ್ದು ಹೋಗುತ್ತದೆ. ಬೇಸಿಗೆಯಲ್ಲಿ ರಸ್ತೆ ಡಾಮರೀಕರಣ ಮಾಡಿದರೆ ಉತ್ತಮ. ಬಸ್ರೂರು ಮೂರು ಕೈ ಬಳಿ ಮಳೆಗಾಲ ಆರಂಭದಿಂದ ಈವರೆಗೆ ನೀರು ನಿಂತಿದೆ. ಮಳೆ ನೀರು ಹರಿದು ಹೋಗಲು ಸರಿಯಾದ ಚರಂಡಿ ಇಲ್ಲಿಲ್ಲ. ಈ ಸಲವಾದರೂ ಮಳೆಗಾಲ ಮುಗಿದ ತತ್‌ಕ್ಷಣ ಕಾಮಗಾರಿ ಕೈಗೆತ್ತಿಕೊಳ್ಳಲಿ.
– ಇರ್ಫಾನ್‌,ವಾಹನ ಸವಾರ
ಇನ್ನು ಬಸ್ರೂರು ಮೂರು ಕೈಜಂಕ್ಷನ್‌ಗಿಂತ ಸ್ವಲ್ಪ ಮುಂದೆ ಸರ್ವಿಸ್‌ ರಸ್ತೆಯಲ್ಲಿಯೇ ನೀರು ನಿಂತಿದ್ದು, ಇದು ರಸ್ತೆಯೋ ಅಥವಾ ನೀರು ಹರಿದು ಹೋಗುವ ತೋಡು ಎನ್ನುವ ಸಂಶಯ ಜನರದ್ದು. ಇಲ್ಲಿ ಮಳೆ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆಯೇ ಇಲ್ಲ. ಭಾರೀ ಮಳೆಯಿದ್ದಾಗ ಅಂತೂ ಈ ರಸ್ತೆಯಲ್ಲಿ ಸಂಚರಿಸುವುದೇ ಕಷ್ಟ. ಮಳೆ ಕಡಿಮೆ ಇದ್ದರೂ, ಇಲ್ಲಿ ನಿಂತ ನೀರು ಮಾತ್ರ ಕಡಿಮೆಯಾಗುವುದಿಲ್ಲ. ಈ ಬಗ್ಗೆ ಅಧಿಕಾರಿಗಳ ಸಭೆಯಲ್ಲಿ ಕುಂದಾಪುರದ ಸಹಾಯಕ ಆಯುಕ್ತರೇ ತತ್‌ಕ್ಷಣ ಪರಿಹರಿಸಲು ಕ್ರಮಕೈಗೊಳ್ಳಿ ಎಂದು ಸೂಚಿಸಿದರೂ, ಇನ್ನು ಇತ್ಯರ್ಥವಾಗಿಲ್ಲ.
Advertisement

Udayavani is now on Telegram. Click here to join our channel and stay updated with the latest news.

Next