Advertisement

ವಿವಿಧೆಡೆ ಜಿಲ್ಲಾಧಿಕಾರಿ ದಿಢೀರ್‌ ಭೇಟಿ

02:29 PM Aug 05, 2017 | |

ಮುದ್ದೇಬಿಹಾಳ: ಇಲ್ಲಿಯ ತಾಲೂಕಾಸ್ಪತ್ರೆಗೆ ವಿಜಯಪುರ ಜಿಲ್ಲಾಧಿಕಾರಿ ಶಿವಕುಮಾರ ಕೆ.ಬಿ. ಅವರು ಶುಕ್ರವಾರ ದಿಢೀರ್‌ ಭೇಟಿ ನೀಡಿ ಅಲ್ಲಿಯ ಹಣಕಾಸು ನಿರ್ವಹಣೆ ಹಾಗೂ ರೋಗಿಗಳ ರೋಗ್ಯದ ಬಗ್ಗೆ ಸ್ಥಳೀಯ ವೈದ್ಯರ ಸ್ಪಂದನೆ ಬಗ್ಗೆ ವಿಚಾರಿಸಿದರು. ಆಸ್ಪತ್ರೆಗೆ ಪ್ರವೇಶಿಸುತ್ತಿದಂತೆ ಸಿಬ್ಬಂದಿಗಳ ಹಾಜರಿ ಪುಸ್ತಕ ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಎಲ್ಲ ಸಿಬ್ಬಂದಿಗಳನ್ನು ಕರೆಸಿ ಹಾಜರಿ ಹಾಕಿದ ಸಿಬ್ಬಂದಿಗಳನ್ನು ಖಚಿತಪಡಿಸಿಕೊಂಡರು. ನಂತರ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಕೋಣೆ, ಎಕ್ಸರೇ ಸೌಲಭ್ಯ, ರಕ್ತ, ಮೂತ್ರ ತಪಾಸಣಾ ವಿಭಾಗ, ಬಯೋವೇಸ್ಟ್‌ ನಿರ್ವಹಣೆ ಘಟಕ, ಶವಾಗಾರ ಹೀಗೆ ಆಸ್ಪತ್ರೆಯಲ್ಲಿರುವ ಹಲವು ಸೌಕರ್ಯಗಳಿಗೆ ಖುದ್ದು ಭೇಟಿ ನೀಡಿ ಅಲ್ಲಿನ ಉಸ್ತುವಾರಿ ಸಿಬ್ಬಂದಿಯಿಂದ ಆಯಾ
ವಿಭಾಗಕ್ಕೆ ಸಂಬಂಧಿ ಸಿದ ಮಾಹಿತಿ ಪಡೆದುಕೊಂಡರು. ನಂತರ ರೋಗಿಗಳನ್ನು ಖುದ್ದಾಗಿ ಬೇಟಿ ಮಾಡಿದ ಅವರು ಆಸ್ಪತ್ರೆ ಸಿಬ್ಬಂದಿಗಳು ಚಿಕಿತ್ಸೆಗಾಗಿ ಹಣ ಪಡೆದುಕೊಳ್ಳುತ್ತಿದ್ದಾರೆಯೇ ಎಂದು ಮಾಹಿತಿ ಪಡೆದುಕೊಂಡರು.

Advertisement

ಆಸ್ಪತ್ರೆಗೆ ಜಾಗ ನೀಡಿದ ಜಮೀನಿನ ಮೂಲ ಮಾಲೀಕರು ಹೆಚ್ಚಿನ ಭೂಪರಿಹಾರ ಕೋರಿ ಕೋರ್ಟ್‌ ಮೆಟ್ಟಿಲೇರಿದ್ದು ಪ್ರಕರಣ ಇನ್ನೂ ನ್ಯಾಯಾಯದಲ್ಲಿದೆ. ತಹಶೀಲ್ದಾರ್‌ ಕಚೇರಿಯಿಂದ ಪೋಡಿ, 11ಇ ನಕ್ಷೆ ಮುಂತಾದವುಗಳು ಶೀಘ್ರ ಲಭ್ಯವಾದಲ್ಲಿ ಪ್ರಕರಣ ಇತ್ಯರ್ಥಕ್ಕೆ ಅನುಕೂಲವಾಗುತ್ತದೆ ಎಂದು ಡಾ| ಓಂಕಾರ ತಿಳಿಸಿದಾಗ ಜೊತೆಯಲ್ಲೇ ಇದ್ದ ತಹಶೀಲ್ದಾರ್‌ ಎಂ.ಎ.ಎಸ್‌. ಬಾಗವಾನಗೆ ಈ ಕುರಿತು ಆದ್ಯತೆ ಮೇರೆಗೆ ಸಹಕಾರ ನೀಡಲು ಜಿಲ್ಲಾಧಿಕಾರಿ ಸೂಚಿಸಿ ವರದಿ ಪಡೆದುಕೊಂಡರು. ಒಂದು ಕಡೆ ಆಸ್ಪತ್ರೆ ಕಚೇರಿಯಲ್ಲಿ ಡಿಸಿ ಲೆಕ್ಕಪತ್ರ ತಪಾಸಣೆ, ಹಾಜರಿ ಪುಸ್ತಕ ಪರಿಶೀಲನೆ ನಡೆಸುತ್ತಿದ್ದರೆ ಇನ್ನೊಂದು ಕಡೆ ಆಸ್ಪತ್ರೆ ಮೇಲ್‌ನರ್ಸ್ಗಳು ಒಳರೋಗಿಗಳ ವಾರ್ಡ್‌ನಲ್ಲಿನ ಬೆಡ್‌ಗೆ ಸ್ವತ್ಛಗೊಳಿಸಿದ ಬೆಡ್‌ ಶೀಟ್‌ ಹಾಕುತ್ತಿರುವುದು ಮಾಧ್ಯಮದವರ ಗಮನಕ್ಕೆ ಬಂತು.

ಜಮ್ಮಲದಿನ್ನಿ-ಸರೂರ ಗ್ರಾಮಕ್ಕೆ ಭೇಟಿ
ತಾಳಿಕೋಟೆ: ಸಮೀಪದ ಜಮ್ಮಲದಿನ್ನಿ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಹಾಗೂ ಸರೂರಿನ ಘನತ್ಯಾಜ್ಯ ವಿಲೇವಾರಿ ಘಟಕಗಳಿಗೆ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ ಶುಕ್ರವಾರ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಸತಿ ಶಾಲೆಗೆ ಭೇಟಿ ನೀಡಿದ ಡಿಸಿ ಶಾಲಾ ಮಕ್ಕಳಿಗೆ ಪಾಠ ಮಾಡಿದರು. ಅಲ್ಲದೇ ಅಡುಗೆ ಕೋಣೆಗೆ ತೆರಳಿ ಊಟದ ರುಚಿ ಸವಿದರು.

ವಸತಿ ನಿಲಯದಲ್ಲಿ ಪಾತ್ರೆಗಳನ್ನು ಇಡುವ ವ್ಯವಸ್ಥೆ ಬದಲಾಯಿಸುವಂತೆ ಸಿಬ್ಬಂದಿಗೆ ಸೂಚಿಸಿದರು. ಶಾಲೆಯ ಆಟದ ಮೈದಾನ, ಉಟದ ತಟ್ಟೆಗಳ ಖರೀದಿ ಅಗತ್ಯವಿದೆ ಎಂಬುದನ್ನು ಮನಗಂಡ ಡಿಸಿ ಅವರು ಸಂಬಂಧಿ ಸಿದ ಅಧಿಕಾರಿಗಳಿಗೆ ಪತ್ರ ಬರೆದು ಸೂಕ್ತ ವ್ಯವಸ್ಥೆ ಮಾಡಿಕೊಳ್ಳುವಂತೆ ನಿಲಯದ ಸಿಬ್ಬಂದಿಗೆ ತಿಳಿಸಿದರು. ಶಾಲೆಯಲ್ಲಿಯ ಶಿಕ್ಷಣದ ಕುರಿತು ಮೆಚ್ಚುಗೆಯನ್ನೂ ವ್ಯಕ್ತಪಡಿಸಿದರು. 

ನಂತರ ಸರೂರ ಗ್ರಾಮದ ಘನತ್ಯಾಜ್ಯ ವಿಲೇವಾರಿ ಘಟಕ ಭೇಟಿ ನೀಡಿದ ಅವರು, ಘಟಕದಲ್ಲಿನ ವ್ಯವಸ್ಥೆ ಪರಿಶೀಲನೆ ನಡೆಸಿದರು. ವೈಜ್ಞಾನಿವಕವಾಗಿ ಕಸ ವಿಲೇವಾರಿ ಮಾಡುವುದು ಯಾವಾಗ ಎಂದು ಸಿಬ್ಬಂದಿ ವಿನೋದ ಝಿಂಗಾಡೆ, ಮುಖ್ಯಾಧಿಕಾರಿ ಎಸ್‌.ಎಸ್‌. ಬಾಗಲಕೋಟ ಅವರನ್ನು ಪ್ರಶ್ನಿಸಿದರು. ಎರೆಹುಳು ಗೊಬ್ಬರದ ಘಟಕವನ್ನು ಆರಂಭಿಸಿ ಸ್ವಯಂ ಸೇವಾ ಸಂಘಗಳಿಗೆ ನಿರ್ವಹಣೆಗೆ ನೀಡುವಂತೆ ಸೂಚಿಸಿದರು. ಅಲ್ಲದೇ ಘಟಕಕ್ಕೆ
ಅಗತ್ಯವಾಗಿರುವ ವಿದ್ಯುತ್‌ ವ್ಯವಸ್ಥೆ ಕಲ್ಪಿಸಲು ಹೆಸ್ಕಾಂ ಅಧಿಕಾರಿಗೆ ಪತ್ರ ಬರೆಯುವಂತೆಯೂಸೂಚಿಸಿದರು. 

Advertisement

ಎಸಿ ಡಾ| ಶಂಕರ ವಣಕ್ಯಾಳ, ತಹಶೀಲ್ದಾರ್‌ ಎಂ.ಎ.ಎಸ್‌. ಬಾಗವಾನ, ಪುರಸಭೆ ಸದಸ್ಯ ಮಹಿಬೂಬ ಗೊಳಸಂಗಿ, ಕಂದಾಯ ನಿರೀಕ್ಷಕ ಎಸ್‌.ಸಿ. ವಡವಡಗಿ, ಬಿ.ಸಿ. ಭದ್ರಣ್ಣವರ, ಪುರಸಭೆ ಸಿಬ್ಬಂದಿ ಶಿವಣ್ಣ ಬೋಳಿ, ಶಮುದ್ದೀನ್‌ ಮೂಲಿಮನಿ ಇದ್ದರು.

ಮುದ್ದೇಬಿಹಾಳ ತಾಲೂಕಾಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆಯಿದೆ. ಇದ್ದ ಸಿಬ್ಬಂದಿ ಸಂತೃಪ್ತಿಯಿಂದ ಕೆಲಸ ಮಾಡದ ಪರಿಸ್ಥಿತಿ ಇದೆ. ಇವರಿಗೆ ತೃಪ್ತಿ ಇಲ್ಲ ಎಂದ ಮೇಲೆ ಇವರಿಂದ ರೋಗಿಗಳಿಗೆ ತೃಪ್ತಿಕರ ಸೇವೆ ನಿರೀಕ್ಷೆ ಸಾಧ್ಯವಿಲ್ಲ. ಸಿಬ್ಬಂದಿ ಕೊರತೆ ಬಗೆಹರಿಸುವಂತೆ ಆರೋಗ್ಯ ಇಲಾಖೆ
ನಿರ್ದೇಶಕರಿಗೆ ವರದಿ ಸಲ್ಲಿಸಲಾಗುತ್ತದೆ.  
ಶಿವಕುಮಾರ ಕೆ.ಬಿ.

Advertisement

Udayavani is now on Telegram. Click here to join our channel and stay updated with the latest news.

Next