Advertisement

ನೂತನ ಪಿಂಚಣಿ ಯೋಜನೆ ಕೈ ಬಿಡುವಂತೆ ಆಗ್ರಹ

04:29 PM Jan 19, 2018 | |

ಸುರಪುರ: ರಾಜ್ಯ ಸರಕಾರಿ ನೌಕರರ ನೂತನ ಪಿಂಚಣಿ ಕಾಯ್ದೆ ವಿರೋಧಿಸಿ ನಗರದ ಗಾಂಧಿ ವೃತ್ತದಲ್ಲಿ ಬುಧವಾರ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಹಾಗೂ ಎನ್‌.ಪಿ.ಎಸ್‌ ನೌಕರರ ಸಂಘದ ತಾಲೂಕು ಘಟಕಗಳ ನೇತೃತ್ವದಲ್ಲಿ ವಿವಿಧ ಇಲಾಖೆ ನೌಕರರು ಪ್ರತಿಭಟನೆ ನಡೆಸಿದರು.

Advertisement

ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಭೀಮಣ್ಣ ಬೋಸಗಿ ಮಾತನಾಡಿ, ನೂತನ ಪಿಂಚಣಿ ಕಾಯ್ದೆ ನೌಕರರಿಗೆ
ಮಾರಕವಾಗಿದೆ. ಹೊಸದಾಗಿ ಸೇವೆಗೆ ಸೇರಿದ ನೌಕರರು ಈ ಕಾಯ್ದೆಯಿಂದ ಗೊಂದಲಕ್ಕಿಡಾಗುತ್ತಿದ್ದಾರೆ. ಕಾರಣ ನೌಕರರ ಪಾಲಿಗೆ ಮರಣ ಶಾಸನವಾಗಿರುವ ಈ ಕಾಯ್ದೆ ಕೂಡಲೇ ಕೈಬಿಡಬೇಕು ಎಂದು ಒತ್ತಾಯಿಸಿದರು.

ಸಮಾನ ಶ್ರೇಣಿಯಲ್ಲಿ ನೌಕರಿ ಮಾಡುತ್ತಿರುವ ನೂತನ ನೌಕರರಿಗೆ ಪಿಂಚಣಿ ಸೌಲಭ್ಯ ನೀಡದಿರುವುದು ಅಮಾನವೀಯತೆ, ಇದು ಸರಿಯಾದ ಕ್ರಮವಲ್ಲ. ಕಾರಣ ಈ ನೂತನ ಪಿಂಚಣಿ ಕಾಯ್ದೆ ಕೈಬಿಟ್ಟು ಹಳೆ ಪಿಂಚಣಿ ಸೌಲಭ್ಯ ಮುಂದುವರೆಸಬೇಕು ಮತ್ತು 6ನೇ ವೇತನ ಆಯೋಗದ ವರದಿ ಎತಾವತ್ತಾಗಿ ಜಾರಿಗೊಳಿಸಬೇಕು ಎಂದು
ಆಗ್ರಹಿಸಿದರು. 

ನಿರ್ಲಕ್ಷವಹಿಸಿದಲ್ಲಿ ಸೇವೆ ಸ್ಥಗಿತಗೊಳಿಸಿ ಪ್ರತಿಭಟಿಸುವುದು ಅನಿವಾರ್ಯ ಆಗುತ್ತದೆ ಎಂದು ಎಚ್ಚರಿಸಿ, ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಬರದೆ ಮನವಿ ಪತ್ರವನ್ನು ಶಿರಸ್ತೇದಾರ್‌ ನಜೀರ ಅಹ್ಮದ್‌ ಅವರಿಗೆ ಸಲ್ಲಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಹಳ್ಳೆಪ್ಪ ಕಾಜಾಂಜಿ, ತಾಲೂಕು ಘಟಕದ ಅಧ್ಯಕ್ಷ ಸೋಮರೆಡ್ಡಿ ಮಂಗಿಹಾಳ, ಶರಣು ದೇವರಗೋನಾಲ ಮಾತನಾಡಿದರು. ತಿರಂದಾಜ, ಮಹದೇವಪ್ಪ ಗುತ್ತೇದಾರ, ಸಾಬರೆಡ್ಡಿ ವಡಗೇರಾ, ಶೇಖಸಾ ನದಾಫ,ರಾಜಶೇಖರ ದೇಸಾಯಿ, ಮಲ್ಲು ಸಜ್ಜನ, ಶರಣಗೌಡ ಪಾಟೀಲ್‌, ರಾಜಶೇಖರ ನಗನೂರು, ಚಂದಪ್ಪ ಯಾದವ, ಆರ್‌.ಕೆ. ಕೋಡಿಹಾಳ, ಬಸವರಾಜ ಗೋಗಿ, ಶ್ರೀಶೈಲ್‌ ಯಂಕಂಚಿ, ಶಾಂತಪ್ಪ ಅಗ್ನಿ, ಮಾಳಿಂಗರಾಯ, ಗೋಪಾಲ ನಾಯಕ, ಷಣ್ಮುಖ, ತಿಪ್ಪಣ್ಣ, ಶಿವಾನಂದ, ಚನ್ನಬಸ್ಸಪ್ಪ ಹೂಗಾರ, ವಿರೇಶ ಗೋನಾಲ, ಮಲ್ಲಿಕಾರ್ಜುನ ಕಟ್ಟಿಮನಿ, ಪ್ರಶಾಂತ ಅಕ್ಕ ಸಾಲಿಗರ ಇದ್ದರು.

ಆದೇಶ ಉಲ್ಲಂಘನೆ ಸಂಚಾರಕ್ಕೆ ಅಡತಣೆ ಆಗುತ್ತಿರುವ ಹಿನ್ನಲೆಯಲ್ಲಿ ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸದಂತೆ ಸಂಘ-ಸಂಸ್ಥೆಗಳಿಗೆ ತಾಕೀತು ಮಾಡಿ ತಹಶೀಲ್ದಾರ್‌ ಪ್ರತಿಭಟನೆ ನಿಷೇಧಿಸಿ ಆದೇಶಿಸಿದ್ದರು. ಆದರೆ ಸರಕಾರಿ ನೌಕರರು ಆದೇಶ ಗಾಳಿಗೆ ತೂರಿ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿರುವುದು ಅಕ್ಷಮ್ಯ ಅಪರಾಧವಾಗಿದೆ. ಈ ಕುರಿತು ತಹಶೀಲ್ದಾರ್‌ ಅವರು ಕ್ರಮ ಕೈಗೊಳ್ಳಬೇಕು. 
 ವೆಂಕಟೇಶ ಭಕ್ರಿ, ಮಹಾ ಪ್ರಧಾನ ಕಾರ್ಯದರ್ಶಿ ಜೆಡಿಎಸ್‌

Advertisement

ಪರಿಶೀಲಿಸಿ ಕ್ರಮ ನನ್ನ ಅನುಮತಿ ಪಡೆದಿಲ್ಲ. ಅನುಮತಿ ಕೊಡಲು ಬರುವುದಿಲ್ಲ. ಸಿಎಲ್‌ ಪಡೆದು ಭಾಗವಹಿಸಬಹುದು. ಈ ಬಗ್ಗೆ ಪರಿಶೀಲಿಸಿ ಸಿಎಲ್‌ ನೀಡದೆ ಗೈರಾಗಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
 ಯಲ್ಲಪ್ಪ ಕಾಡ್ಮೂರು, ಕ್ಷೇತ್ರ ಶಿಕ್ಷಣಾಧಿಕಾರಿ 

ಶಹಾಪುರ: ತಹಶೀಲ್ದಾರ್‌ಗೆ ಮನವಿ
ಶಹಾಪುರ:
ನೂತನ ನೌಕರದಾರರಿಗೆ ಸರಕಾರ ಸಮರ್ಪಕ ಪಿಂಚಣಿ ವ್ಯವಸ್ಥೆ ಈ ಮೊದಲಿನಂತೆ ಕಲ್ಪಿಸಬೇಕೆಂದು ಆಗ್ರಹಿಸಿ ನಗರದ ತಹಶೀಲ್ದಾರ್‌ ಕಚೇರಿ ಎದುರು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಮತ್ತು ಹೊಸ ಪಿಂಚಣಿ ಯೋಜನೆ ಸಂಘವು ಎನ್‌ಪಿಎಸ್‌ ವಿರೋಧಿ ಸಿ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಿತು. 

ಈ ಸಂದರ್ಭದಲ್ಲಿ ಮಾತನಾಡಿದ ಎನ್‌ಪಿಎಸ್‌ ತಾಲೂಕು ಸಂಘದ ಅಧ್ಯಕ್ಷ ರಾಮಕೃಷ್ಣ ಕಟ್ಕಾವಲಿ, 2006ರ ನಂತರ ರಾಜ್ಯದಲ್ಲಿ ಸರಕಾರಿ ನೌಕರರಾಗಿ ನೇಮಕಗೊಂಡ ಪ್ರತಿಯೊಬ್ಬರೂ ಪಿಂಚಣಿಯಿಂದ ವಂಚಿತಗೊಂಡಿದ್ದಾರೆ. ಕೂಡಲೇ ರಾಜ್ಯ ಸರಕಾರ ಹೊಸದಾಗಿ ನೇಮಕಗೊಂಡ ನೌಕರರಿಗೂ ಈ ಮೊದಲಿನಂತೆ ಪಿಂಚಣೆ ವ್ಯವಸ್ಥೆ ಜಾರಿಗೊಳಿಸಬೇಕೆಂದು ಆಗ್ರಹಿಸಿದರು. 2006ರ ನಂತರ ರಾಜ್ಯದಲ್ಲಿ ನೇಮಕಗೊಂಡ ಸರಕಾರಿ ನೌಕರರಿಗೆ ಪಿಂಚಿಣಿ
ಸೌಲಭ್ಯದಲ್ಲಿ ಹಲವು ನ್ಯೂನತೆಗಳು ಉಂಟಾಗಿದ್ದು, ಟ್ರಸ್ಟ್‌ ಮ್ಯಾನೇಜಮೆಂಟ್‌ನವರು ನಿರ್ವಹಿಸುವ ಆರ್ಥಿಕ ಕಾರ್ಯನಿರ್ವಹಣೆಯಲ್ಲಿ ಯಾವುದೇ ಬದ್ಧತೆಗಳು ಕಾಣುತ್ತಿಲ್ಲ. ಅಲ್ಲದೆ ಅನಿಶ್ಚಿತ ಪಿಂಚಿಣಿ ಯೋಜನೆ ಇದಾಗಿದ್ದು, ಇದರಿಂದ ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು 1.80 ಲಕ್ಷ ಸರಕಾರಿ ನೌಕರರು ಸೇವಾ ನಿವೃತ್ತಿ ಸಂದರ್ಭದಲ್ಲಿ ಪಿಂಚಣಿ ಮತ್ತು ಇನ್ನಿತರ ಸವಲತ್ತುಗಳಿಂದ ವಂಚಿತರಾಗಲಿದ್ದಾರೆ. ಕಾರಣ ಸಂಘಟಿತ ಹೋರಾಟ ಅಗತ್ಯವಿದ್ದು, ಎಲ್ಲಾ ನೌಕರರು ಕೈ ಜೋಡಿಸಬೇಕಿದೆ ಎಂದರು.

ಸಂಘದ ತಾಲೂಕು ಅಧ್ಯಕ್ಷ ಸುಧಾಕರ ಗುಡಿ ಮಾತನಾಡಿ, ಪಿಂಚಣಿ ಎಂಬುವುದು ಮಾಲೀಕನ ಮರ್ಜಿಯಾಗಲಿ, ದಯಾ ಭಿಕ್ಷೆಯಾಗಲಿ ಅಲ್ಲ. ಅದು ನೌಕರರ ತಾರುಣ್ಯದಲ್ಲಿ ನಿರಂತರವಾಗಿ ಸಲ್ಲಿಸಿದ ಸೇವೆಗೆ ತಾವೇ ಗಳಿಸಿದ ವೇತನವಾಗಿದೆ. 

ನೌಕರರು ಆತ್ಮಗೌರವದಿಂದ ಬಾಳಲು ನಿವೃತ್ತ ಜೀವನ ಸುಖಮಯವಾಗಿರಲು ಹಳೆ ಪಿಂಚಣಿ ಯೋಜನೆ ಜಾರಿಯಾಗವವರಿಗೂ ನಿರಂತರ ಹೋರಾಟ ಮುಂದುವರೆಯಲಿದೆ ಎಂದರು.  ಪ್ರತಿಭಟನೆಯಲ್ಲಿ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಭೀಮನಗೌಡ ತಳೇವಾಡ, ಶಿವಲಿಂಗಪ್ಪ ಸುರಪುರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಯಾಳಗಿ, ವಿವಿಧ ಸಂಘದ ಪದಾಧಿಕಾರಿ ರಾಯಪ್ಪಗೌಡ ಹುಡೇದ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next