Advertisement

ಶಬರಿಮಲೆಯಲ್ಲಿ “ಸಹಾಯವಾಣಿ’ಸ್ಥಾಪನೆಗೆ ನಿರ್ಧಾರ

09:20 AM Dec 09, 2017 | Team Udayavani |

ಬೆಂಗಳೂರು: ಶಬರಿಮಲೆಯಲ್ಲಿ ಕರ್ನಾಟಕದಿಂದ ಹೋಗುವ ಅಯ್ಯಪ್ಪಸ್ವಾಮಿ ಭಕ್ತರಿಗೆ ಆರೋಗ್ಯ ಸೇವೆ ಸೇರಿ ತುರ್ತು ಸಂದರ್ಭದಲ್ಲಿ ನೆರವು ಕಲ್ಪಿಸಲು ತತ್‌ ಕ್ಷಣದಿಂದಲೇ “ಸಹಾಯವಾಣಿ’ ಸ್ಥಾಪಿಸಲು ಧಾರ್ಮಿಕ ಪರಿಷತ್‌ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

Advertisement

ಮುಜರಾಯಿ ಸಚಿವ ರುದ್ರಪ್ಪ ಲಮಾಣಿ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ, ಸಹಾಯವಾಣಿ ಕೇಂದ್ರ ಸ್ಥಾಪನೆ ಹಾಗೂ ವೈದ್ಯಕೀಯ ನೆರವು ಕಲ್ಪಿಸಲು ಮೊಬೈಲ್‌ ಕ್ಲಿನಿಕ್‌ ಹಾಗೂ ತಜ್ಞ ವೈದ್ಯರ ತಂಡ ಕಳುಹಿಸಲು ನಿರ್ಧರಿಸಲಾಯಿತು. ಇದಕ್ಕಾಗಿ 25 ಲಕ್ಷ ರೂ. ಅನುದಾನ ಸಹ ಬಿಡುಗಡೆ ಮಾಡಲು ಆದೇಶ ಹೊರಡಿಸಲಾಯಿತು. ವೈದ್ಯರ ತಂಡವು ಶನಿವಾರವೇ ಶಬರಿಮಲೆಗೆ ತೆರಳಿ
ಪಂಪದಿಂದ ಸನ್ನಿಧಾನಕ್ಕೆ ಹೋಗುವ ಮಾರ್ಗದಲ್ಲಿ ಮೊಬೈಲ್‌ ಕ್ಲಿನಿಕ್‌ ತೆರೆದು ಕರ್ನಾಟಕದಿಂದ ಆಗಮಿಸುವ ಭಕ್ತರಿಗೆ ಆರೋಗ್ಯ ಸೇವೆ ಕಲ್ಪಿಸುವಂತೆ ತಿಳಿಸಲಾಗಿದೆ. ಅದೇ ರೀತಿ ತುರ್ತು ಸಂದರ್ಭಗಳಲ್ಲಿ ಅಯ್ಯಪ್ಪಸ್ವಾಮಿ ಭಕ್ತರಿಗೆ ಮಾಹಿತಿ ನೀಡಲು
ಸಹಾಯವಾಣಿ ಕೇಂದ್ರ ಸ್ಥಾಪನೆಗೂ ಸೂಚಿಸಲಾಗಿದೆ ಎಂದು ಧಾರ್ಮಿಕ ಪರಿಷತ್‌ ಸದಸ್ಯ ಪದ್ಮನಾಭ ಕೋಟ್ಯನ್‌ ತಿಳಿಸಿದರು.

ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಿಗೆ ಸಹಾಯವಾಣಿ ಕೇಂದ್ರ ಹಾಗೂ ವೈದ್ಯಕೀಯ ತಂಡ, ಮೊಬೈಲ್‌ ಕ್ಲಿನಿಕ್‌ ಸೇವೆಯ ಉಸ್ತುವಾರಿ ವಹಿಸಲು ತಿಳಿಸಲಾಗಿದೆ. ಕೇರಳ ಸರ್ಕಾರದ ಜತೆ ಸಮನ್ವಯ ಸಾಧಿಸಿ ರಾಜ್ಯದಿಂದ ಹೋಗುವ ಭಕ್ತರಿಗೆ ಹೆಚ್ಚು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಅಯ್ಯಪ್ಪಸ್ವಾಮಿ ಭಕ್ತರಿಗೆ ಶಬರಿಮಲೆಯಲ್ಲಿನ ಸೌಲಭ್ಯ, ಬಸ್‌, ರೈಲು, ಪೂಜಾ ಕಾರ್ಯಕ್ರಮಗಳ
ಬಗ್ಗೆ ಸಹಾಯವಾಣಿ ಮೂಲಕ ಮಾಹಿತಿ ನೀಡಲು ತಿಳಿಸಲಾಗಿದೆ. ಅಲ್ಲಿ ಉಪ ಕಚೇರಿ ಸ್ಥಾಪಿಸಲು ಸೂಚಿಸಲಾಗಿದೆ ಎಂದು ಹೇಳಿದರು.

ನೀಲಕಲ್‌ ಬಳಿ ಕರ್ನಾಟಕ ಭವನ ಸ್ಥಾಪನೆಗೆ ನೀಡಲಾಗಿರುವ ನಾಲ್ಕೂವರೆ ಎಕರೆ ಜಾಗ ಹಾಗೂ ಭಕ್ತರ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು ಎಂದು ತಿಳಿಸಿದರು. ಶಬರಿಮಲೆಗೆ ಕರ್ನಾಟಕದಿಂದ ಹೋಗುವ ಭಕ್ತರಿಗೆ ಆರೋಗ್ಯ ಸೇವೆ ಹಾಗೂ ಸಹಾಯವಾಣಿ ಕೇಂದ್ರ ಇಲ್ಲದೆ ಪರದಾಡುತ್ತಿರುವ ಬಗ್ಗೆ “ಉದಯವಾಣಿ’ ಗುರುವಾರ
ವಿಶೇಷ ವರದಿ ಮಾಡಿತ್ತು. ಶುಕ್ರವಾರ ನಡೆದ ಧಾರ್ಮಿಕ ಪರಿಷತ್‌ ಸಭೆಯಲ್ಲಿ ಈ ಬಗ್ಗೆ ಸುದೀರ್ಘ‌ ಚರ್ಚೆ ನಡೆದು ಶಬರಿಮಲೆ ಯಾತ್ರೆ ಆರಂಭದಲ್ಲೇ ಸಹಾಯವಾಣಿ ಸ್ಥಾಪಿಸಬೇಕಿತ್ತು. ಅಲ್ಲಿನ ಸಮಸ್ಯೆಗಳ ಬಗ್ಗೆ “ಉದಯವಾಣಿ’ ಪತ್ರಿಕೆಯಲ್ಲಿ ವರದಿ ಬಂದಿದೆ. 
ರಾಜ್ಯದಿಂದ ಪ್ರತಿವರ್ಷ ಲಕ್ಷಾಂತರ ಭಕ್ತರು ಶಬರಿಮಲೆಗೆ ಹೋಗುತ್ತಾರೆ. ಈ ಬಗ್ಗೆ ಅಧಿಕಾರಿಗಳು ಮುಂಚಿತವಾಗಿಯೇ ಕ್ರಮ ಕೈಗೊಳ್ಳಬೇಕು. ಈಗಲಾದರೂ ತತ್‌ಕ್ಷಣ ಕಾರ್ಯಪ್ರವೃತ್ತರಾಗುವಂತೆ ಅಧಿಕಾರಿಗಳಿಗೆ ಸಚಿವ ರುದ್ರಪ್ಪ ಲಮಾಣಿ ಸೂಚನೆ
ನೀಡಿದರು ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next