Advertisement

ಕೆರೆಯಲ್ಲಿ ಮುಳುಗಿ ನಾಲ್ವರು ಸಾವು

11:04 PM Nov 11, 2019 | Team Udayavani |

ಹುಬ್ಬಳ್ಳಿ: ಈದ್‌ ಮಿಲಾದ್‌ ಮರುದಿನ ಸ್ನೇಹಿತರೆಲ್ಲ ಸೇರಿ ಊಟಕ್ಕೆ ಹೋದ ವೇಳೆ ಈಜಲು ಹೋದ ನಾಲ್ವರು ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ದೇವರ ಗುಡಿಹಾಳ ಗ್ರಾಮದಲ್ಲಿ ಸೋಮವಾರ ಸಂಜೆ ಸಂಭವಿಸಿದೆ. ಇಲ್ಲಿನ ಗೂಡ್ಸ್‌ಶೆಡ್‌ ರಸ್ತೆ ಗಣೇಶಪೇಟೆ ಕುಲಕರ್ಣಿ ಹಕ್ಕಲ ನಿವಾಸಿಗಳಾದ ಸೊಹೆಲ್‌ಅಹ್ಮದ ಮುಸ್ತಾಕಅಲಿ ಸಯ್ಯದ (17), ಮಹ್ಮದ ಆಯನ್‌ ಮೌಲಾಸಾಬ ಉಣಕಲ್‌ (17), ಸುಬಾನ್‌ ಅಹ್ಮದ ಹೊನ್ಯಾಳ (18), ಸಯ್ಯದ ಸುಬಾನ್‌ ಬಿಲಾಲ ಬುರಬುರಿ (18) ಮೃತಪಟ್ಟಿದ್ದಾರೆ.

Advertisement

ದೇವರ ಗುಡಿಹಾಳಕ್ಕೆ ಊಟಕ್ಕೆಂದು ಏಳು ಸ್ನೇಹಿತರು ಹೋಗಿದ್ದರು. ಊಟದ ನಂತರ ಮಧ್ಯಾಹ್ನ 3:30ರ ಸುಮಾರಿಗೆ ಸಯ್ಯದ ಸುಬಾನ್‌ ಕೆರೆಗೆ ಇಳಿದಿದ್ದು, ಈಜು ಬಾರದೆ ಒದ್ದಾಡಿದ್ದಾನೆ. ಇದನ್ನು ಕಂಡ ಮೂವರು ಗೆಳೆಯರು ಮೇಲೆಳೆದುಕೊಳ್ಳಲು ಪ್ರಯತ್ನಿಸಿದಾಗ ಅವರೂ ಈಜು ಬಾರದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಇಜಾಸ್‌ ಶೇಖ, ಜುನೇದ ಕದಂಪುರ, ಸೊಹೆಲ್‌ ಶಿಕಾರಿ ಬದುಕುಳಿದಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಹಾಗೂ ಹುಬ್ಬಳ್ಳಿಯಿಂದ ಅಗ್ನಿಶಾಮಕ ದಳ ಸಿಬ್ಬಂದಿ, ಗ್ರಾಮೀಣ ಪೊಲೀಸರು ಸ್ಥಳಕ್ಕೆ ಆಗಮಿಸಿ ಕೆರೆಯಲ್ಲಿ ಮುಳುಗಿದ್ದ ಯುವಕರ ಪತ್ತೆ ಕಾರ್ಯ ಆರಂಭಿಸಿದರು. ಸಂಜೆ 6 ಗಂಟೆ ವೇಳೆ ಒಬ್ಬನ ಶವ, ನಂತರ ಮೂವರ ಶವ ಹೊರತೆಗೆಯಲಾಯಿತು.

ದೇವರಿಗೆ ಹೋಗುತ್ತೇನೆಂದಿದ್ದರು!: ಮನೆಯಲ್ಲಿ ದೇವರಿಗೆ ಹೋಗುತ್ತೇನೆಂದು ಹೇಳಿ ಹೋಗಿದ್ದರು. ಆದರೆ ದೇವರ ಗುಡಿಹಾಳಕ್ಕೆ ಹೋಗಿದ್ದಾರೆ. ಅಲ್ಲಿ ಈಜು ಬಾರದೆ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆಂದು ಮೃತ ಸೊಹೆಲ್‌ನ ಮಾವ ಮಹಮ್ಮದ ರಫಿ ಹೇಳಿದ್ದಾರೆ. ಏಳು ಜನ ಸ್ನೇಹಿತರು ಮಧ್ಯಾಹ್ನ 1 ಗಂಟೆ ಸುಮಾರಿಗೆ ಬಸ್‌ನಲ್ಲಿ ದೇವರ ಗುಡಿಹಾಳಕ್ಕೆ ತೆರಳಿದ್ದರು. ಅವರಲ್ಲಿ ಮೂವರು ಬದುಕುಳಿದಿದ್ದು, ಗ್ರಾಮೀಣ ಠಾಣೆ ಪೊಲೀಸರು ಅವರಿಂದ ಘಟನೆ ಕುರಿತು ಮಾಹಿತಿ ಪಡೆಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next