Advertisement

ನಾಡಿದ್ದು  ಆರೆಸ್ಸೆಸ್‌ ಸಭೆ: ಬಿಎಸ್‌ವೈ, ಈಶ್ವರಪ್ಪ ಭೇಟಿ

03:45 AM Jan 15, 2017 | Team Udayavani |

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿನ ಬಿಕ್ಕಟ್ಟಿನ ನಡುವೆಯೇ ಇದೇ ತಿಂಗಳ 17ರಂದು (ಮಂಗಳವಾರ) ಪಕ್ಷದ ಮಾತೃ ಸಂಸ್ಥೆಯಾಗಿರುವ ಆರ್‌ಎಸ್‌ಎಸ್‌ನ ಅಡಿಯಲ್ಲಿ ಬರುವ ವಿವಿಧ ಸಂಘಟನೆಗಳ ಸಮನ್ವಯ ಸಭೆ ನಿಗದಿಯಾಗಿದೆ. ವಾಸ್ತವವಾಗಿ ಇಂಥ ಸಭೆಯಲ್ಲಿ ಬಿಕ್ಕಟ್ಟಿನ ಬಗ್ಗೆ ಹೆಚ್ಚು ಚರ್ಚೆ ನಡೆಯದಿದ್ದರೂ, ಸಂಘ ಮತ್ತು ಪಕ್ಷದ ಪ್ರಮುಖ ನಾಯಕರು ಪಾಲ್ಗೊಳ್ಳುವುದರಿಂದ ಸಹಜವಾಗಿಯೇ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಮತ್ತು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ ನಡುವಿನ ಭಿನ್ನಾಭಿಪ್ರಾಯದ ಬಗ್ಗೆಯೂ ಪ್ರಸ್ತಾಪವಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

Advertisement

ಚಾಮರಾಜಪೇಟೆಯ ಸಂಘ ಪರಿವಾರದ ಕೇಂದ್ರ ಕಚೇರಿಯಲ್ಲಿ ನಡೆಯಲಿರುವ ಈ ಸಭೆ ಇಡೀ ದಿನ ಮುಂದುವರೆಯಲಿದ್ದು, ವಿವಿಧ ಸಂಘಟನೆಗಳ ಪ್ರಮುಖ ಮುಖಂಡರೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸಲಾಗುತ್ತದೆ. ಬಿಜೆಪಿಯೂ ಒಂದು ಅಂಗ ಸಂಸ್ಥೆಯಾಗಿರುವುದರಿಂದ ಅದರ ಮುಖಂಡರೂ ಭಾಗಿಯಾಗಲಿದ್ದಾರೆ. ಯಡಿಯೂರಪ್ಪ
ಮತ್ತು ಈಶ್ವರಪ್ಪ ಅವರೂ ಇದೇ ಸಭೆಯಲ್ಲಿ ‌ುುಖಾಮುಖೀಯಾಗಲಿದ್ದಾರೆ.

ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಸ್ಥಾಪನೆಯಿಂದಾಗಿ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವಿನ ತಿಕ್ಕಾಟ ಇದೀಗ
ಗಂಭೀರ ಹಂತಕ್ಕೆ ತಲುಪಿದೆ. ಇದರ ನಡುವೆಯೇ ಪಕ್ಷದ 24 ಮುಖಂಡರು ಯಡಿಯೂರಪ್ಪ ಅವರ ಕಾರ್ಯವೈಖರಿಗೆ
ಅಸಮಾಧಾನ ವ್ಯಕ್ತಪಡಿಸಿ ಅವರಿಗೆ ನೇರವಾಗಿ ಪತ್ರ ಬರೆದಿರುವುದು ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ. ಇದು ಪಕ್ಷದ ಪ್ರತಿಷ್ಠೆಗೆ ಧಕ್ಕೆ ಉಂಟಾಗಬಹುದು ಎಂಬ ಮಾತು ಪಕ್ಷದ ಮುಖಂಡರಿಂದಲೇ ಕೇಳಿಬರುತ್ತಿದೆ. ಹೀಗಾಗಿ ಮಂಗಳವಾರದ ಸಭೆಯಲ್ಲಿ ಈ ಬಗ್ಗೆ ಕೂಡ ಚರ್ಚೆಗೆ ಬರಬಹುದು ಎಂಬ ನಿರೀಕ್ಷೆಯಿದೆ.

ಆದರೆ, ಸಾಮಾನ್ಯವಾಗಿ ಇಂಥ ಸಮನ್ವಯ ಸಭೆಗಳಲ್ಲಿ ನಿರ್ದಿಷ್ಟ ವಿಚಾರದ ಬಗ್ಗೆ ಪ್ರಸ್ತಾಪಕ್ಕೆ ಅವಕಾಶವಿರುವುದಿಲ್ಲ. ಪಕ್ಷದ ಸಂಘಟನೆ ಮತ್ತು ಮುಂದಿನ ಕಾರ್ಯಕ್ರಮಗಳ ಬಗ್ಗೆ ರೂಪುರೇಷೆ ಸಿದ್ಧಪಡಿಸುವ ಕುರಿತು ಸಮಾಲೋಚನೆ ನಡೆಸುವ ಸಾಧ್ಯತೆಯೇ ಹೆಚ್ಚು ಎಂದು ಮೂಲಗಳು ಸಮಜಾಯಿಷಿ ನೀಡಿವೆ. ಹೀಗಾಗಿ, ಮಂಗಳವಾರ ಸಭೆ ಮುಗಿದ ನಂತರವೇ ಈ ಬಗ್ಗೆ ಸ್ಪಷ್ಟ ಚಿತ್ರಣ ಹೊರಬೀಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next