Advertisement

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

01:26 PM Apr 19, 2024 | Team Udayavani |

ಶಿವಮೊಗ್ಗ: ನಾಮಪತ್ರ ಸಲ್ಲಿಕೆ ಮೆರವಣಿಗೆ ನೋಡಿದರೆ ರಾಘವೇಂದ್ರ ಮೂರು ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ. ಅವರ ಗೆಲುವು ನೋಡಿ
ಮತ್ತೂಮ್ಮೆ ಚುನಾವಣೆಗೆ ಸ್ಪರ್ಧಿಸಲು ಯಾರೂ ಧೈರ್ಯ ಮಾಡಬಾರದು. ಆ ರೀತಿ ಇರಬೇಕು ಎಂದು ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಕರೆ ನೀಡಿದರು.

Advertisement

ನಾಮಪತ್ರ ಸಲ್ಲಿಕೆ ನಂತರ ನಡೆದ ಬೃಹತ್‌ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನವರಿಗೆ ಪ್ರಧಾನಿ ಅಭ್ಯರ್ಥಿ ಯಾರು ಎಂದು ಹೇಳಿಕೊಳ್ಳಲು
ಸಾಧ್ಯವಾಗಿಲ್ಲ. ರಾಜ್ಯದಲ್ಲಿ 28ಕ್ಕೆ 28 ಕ್ಷೇತ್ರದಲ್ಲೂ ಮೈತ್ರಿ ಅಭ್ಯರ್ಥಿಗಳು ಗೆಲ್ಲುತ್ತಾರೆ. ನೀವೆಲ್ಲರೂ ಮನೆ ಮನೆಗೆ ಹೋಗಿ ಮತದಾರ ಬಳಿ ಮತ ಕೇಳಿ ರಾಘವೇಂದ್ರ ಗೆಲ್ಲಿಸಲು ಶ್ರಮಿಸಬೇಕು ಎಂದರು.

ಮಾಜಿ ಸಿಎಂ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಮಾತನಾಡಿ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ
ಅಭ್ಯರ್ಥಿ ಬಿ.ವೈ.ರಾಘವೇಂದ್ರ ತಂದೆಗೆ ತಕ್ಕ ಮಗ, ಜಗ ಮೆಚ್ಚಿದ ಮಗ. ಕಾಂಗ್ರೆಸ್‌ನವರು ಹೊಸ ಗ್ಯಾರಂಟಿಗಳನ್ನು ಘೊಷಣೆ ಮಾಡಿದ್ದಾರೆ. ಪ್ರತಿ ಮನೆ ಮಹಿಳೆಯರಿಗೆ ಒಂದು ಲಕ್ಷ ರೂ. ಕೊಡುವುದಾಗಿ ಹೇಳುತ್ತಿದ್ದಾರೆ.

ಲೋಕಸಭೆಯಲ್ಲಿ 543 ಸ್ಥಾನಗಳಿವೆ. ಸಂಸತ್ತಿನಲ್ಲಿ ಸ್ಪಷ್ಟ ಬಹುಮತ ಪಡೆಯಲು 272 ಸ್ಥಾನಗಳು ಬೇಕು. ಕಾಂಗ್ರೆಸ್‌ ಲೋಕಸಭೆಗೆ ಸ್ಪರ್ಧೆ ಮಾಡಿರುವುದೇ 230
ಸ್ಥಾನಗಳು. ಅವರು ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಪರೀಕ್ಷೆಯಲ್ಲಿ ಪಾಸ್‌ ಆಗಲು ಕನಿಷ್ಟ 35 ಅಂಕಗಳು ಬೇಕು. ಆದರೆ ಇವರು ಪರೀಕ್ಷೆ
ಬರೆದಿರುವುದೇ 20 ಅಂಕಗಳಿಗೆ. ಹೀಗಾಗಿ ಇವರು ಪಾಸ್‌ ಆಗಲು ಹೇಗೆ ಸಾಧ್ಯ? ಕಾಂಗ್ರೆಸ್‌ ಪಕ್ಷ ಫೇಲ್‌ ಆಗುವ ಬೇಕಾಬಿಟ್ಟಿ ಪಕ್ಷ ಎಂದರು.

ಪ್ರಧಾನಿ ನರೇಂದ್ರ ಮೋದಿ ಕೋವಿಡ್‌ ಸಂದರ್ಭ ದೇಶದ 130 ಕೋಟಿ ಜನರಿಗೆ ಮೂರು ಬಾರಿ ಲಸಿಕೆ ಕೊಡಿಸಿ ಎಲ್ಲರ ಜೀವ ಉಳಿಸಿದ್ದಾರೆ. ಕೋವಿಡ್‌ ಸಂದರ್ಭ 10 ಕೆಜಿ ಅಕ್ಕಿ ಕೊಟ್ಟಿದ್ದಾರೆ. ಈಗಲೂ ಐದು ಕೆಜಿ ಅಕ್ಕಿಯನ್ನು ಮೋದಿ ಉಚಿತವಾಗಿ ನೀಡುತ್ತಿದ್ದಾರೆ. ಪ್ರತಿಯೊಬ್ಬರ ಮನೆಗಳಿಗೂ ಗಂಗೆ ರೂಪದಲ್ಲಿ ಜಲ ಜೀವನ್‌ ಮಿಷನ್‌ ಯೋಜನೆಯಡಿ ನಳದ ನೀರು ಕೊಡುತ್ತಿದ್ದಾರೆ. ಎಲ್ಲರಿಗೂ ಅನ್ನ, ನೀರು, ಲಸಿಕೆ ಕೊಟ್ಟು ಜೀವ ಉಳಿಸಿದ ನರೇಂದ್ರ ಮೋದಿ ಋಣ ತೀರಿಸಬೇಕು.

Advertisement

ಎಲ್ಲರೂ ಕಮಲದ ಗುರುತಿಗೆ ಮತ ಹಾಕಿ ಅವರ ಋಣ ತೀರಿಸುವ ಕೆಲಸ ಮಾಡಬೇಕು. ಮಾಜಿ ಸಿಎಂ ಯಡಿಯೂರಪ್ಪ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ
ನಾಲ್ಕೂವರೆ ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು. ಈ ಬಾರಿ ರಾಘವೇಂದ್ರ ಅವರನ್ನು ಅದಕ್ಕಿಂತಲೂ ಅಧಿಕ ಮತಗಳಿಂದ ಆರಿಸಿ ಕಳುಹಿಸಬೇಕು ಎಂದು ಮನವಿ ಮಾಡಿದರು.

ಪಿಕ್‌ ಪಾಕೆಟ್‌ ಸರಕಾರ: ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಪಿಕ್‌ಪಾಕೆಟ್‌ ಸರ್ಕಾರ ಇದೆ. ಜನರಿಗೆ ಗ್ಯಾರಂಟಿ ಯೋಜನೆಗಳನ್ನು
ನೀಡಲು ಬಡ ಜನರ ಜೇಬಿನಿಂದಲೇ ದುಡ್ಡು ಪಡೆಯುತ್ತಿದೆ. ಇಂತಹ ಸರ್ಕಾರದ ವಿರುದ್ಧ ಮತ ಚಲಾಯಿಸಿ ರೈತರು, ಮಹಿಳೆಯರ ಪರ ಇರುವ ಬಿಜೆಪಿಗೆ ಮತ ನೀಡಿ ಮತ್ತೂಮ್ಮೆ ಮೋದಿಯವರನ್ನು ಪ್ರಧಾನಿಯಾಗಿಸಿ ಎಂದರು. ಗ್ಯಾರಂಟಿ ಯೋಜನೆಯಡಿ ಮಹಿಳೆಯರಿಗೆ ಸರ್ಕಾರ 2 ಸಾವಿರ ರೂ. ನೀಡುತ್ತಿದೆ. ಇದಕ್ಕಾಗಿ ಅವರ ಗಂಡಂದಿರು ಕುಡಿಯುವ ಮದ್ಯದ ಬೆಲೆ ಏರಿಸಿದೆ, ಖರೀದಿಸುವ ಆಸ್ತಿಯ ನೋಂದಣಿ ಶುಲ್ಕ ಹೆಚ್ಚಿಸಿದೆ. ಇದರ ಮೂಲಕವೇ ಪ್ರತಿ ಮನೆಯಿಂದ 5 ರಿಂದ 6
ಸಾವಿರ ರೂ. ಹೆಚ್ಚು ಹಣವನ್ನು ಸರ್ಕಾರ ಪಿಕ್‌ ಪಾಕೆಟ್‌ ಮಾಡುತ್ತಿದೆ ಎಂದು ಟೀಕಿಸಿದರು. ಗ್ಯಾರಂಟಿ ಯೋಜನೆಗಳು ಸಹ ಎಲ್ಲರಿಗೂ ತಲುಪುತ್ತಿಲ್ಲ. ಇದರ
ಹೆಸರಿನಲ್ಲಿ ಅಭಿವೃದ್ಧಿ ನಿಂತಿದೆ, ಬರ ಪರಿಹಾರವೂ ನೀಡುತ್ತಿಲ್ಲ, ಕೇವಲ ರೈತರಿಗೆ 2 ಸಾವಿರ ರೂ. ನೀಡಿದೆ.

ಇದೇ ಯಡಿಯೂರಪ್ಪನವರ ಅವಧಿಯಲ್ಲಿ ರೈತರಿಗೆ 24 ಸಾವಿರ ರೂ. ಪರಿಹಾರ ನೀಡಲಾಗಿತ್ತು. ಇದಲ್ಲದೇ ಈಗ ಲೋಕಸಭೆ ಚುನಾವಣೆಯಲ್ಲಿ ಮಹಿಳೆಯರಿಗೆ ಪ್ರತಿ ವರ್ಷ 1 ಲಕ್ಷ ರೂ. ಕೊಡುವುದಾಗಿ ಕಾಂಗ್ರೆಸ್‌ ಹೇಳುತ್ತಿದೆ. ಆದರೆ ದೇಶದ ಬಜೆಟ್‌ 42ಲಕ್ಷ ಕೋಟಿ ರೂ. ಆಗಿದೆ. ದೇಶದಲ್ಲಿ 75 ಕೋಟಿ ಮಹಿಳೆಯರಿದ್ದಾರೆ,
ಇವರಿಗೆ 75 ಲಕ್ಷ ಕೋಟಿ ನೀಡುವುದಾದರೂ ಹೇಗೆ ಎಂದು ಪ್ರಶ್ನಿಸಿದರು.

ರೈತರು ಹಾಗೂ ಮಹಿಳೆಯರಿಗಾಗಿ ಬಿಜೆಪಿ ಹಾಗೂ ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಅನೇಕ ಕಾರ್ಯಕ್ರಮ ನೀಡಲಾಗಿತ್ತು. ರೈತರಿಗೆ ಕೇವಲ 5 ಸಾವಿರ ರೂ.ಗೆ ಟಿ.ಸಿ. ನೀಡಲಾಗುತ್ತಿತ್ತು. ಈಗ ಅದಕ್ಕೆ ಎರಡು ಲಕ್ಷ ರೂ. ನೀಡಬೇಕು, ಯಡಿಯೂರಪ್ಪನವರ ಭಾಗ್ಯಲಕ್ಷ್ಮಿ ಯೋಜನೆ ಹೆಣ್ಣು ಮಕ್ಕಳಿಗೆ ಸಹಕಾರಿಯಾಗಿತ್ತು. ಪ್ರಸ್ತುತ ಎರಡು ಪಕ್ಷಗಳು ಹಾಲು-ಜೇನಿನಂತೆ ಸೇರಿವೆ. ಮೈತ್ರಿ ಬೆಂಬಲಿಸಿ ರಾಘವೇಂದ್ರ ಅವರನ್ನು ಗೆಲ್ಲಿಸಿ ಎಂದು ಕರೆ ನೀಡಿದರು.

ಕಾಂಗ್ರೆಸ್‌ ಕೊಬ್ಬು ಇಳಿಸಬೇಕಿದೆ: ಮಾಜಿ ಸಚಿವ ಸಿ.ಟಿ.ರವಿ ಮಾತನಾಡಿ, ರಾಷ್ಟ್ರ ಹಿತಕ್ಕಾಗಿ ಹುಟ್ಟಿದ್ದೇ ಜನಸಂಘ ಹಾಗೂ ಬಿಜೆಪಿ. ರಾಷ್ಟ್ರ ಹಿತ ಬಲಿಕೊಟ್ಟು
ನಾವು ಎಂದಿಗೂ ರಾಜಕಾರಣ ಮಾಡುವುದಿಲ್ಲ. ಹಿಂದುತ್ವಕ್ಕೆ ಬದ್ಧತೆ ಇಟ್ಟುಕೊಂಡು ರಾಜಕಾರಣ ಮಾಡುತ್ತೇವೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್‌ ಆಡಳಿತ ಬಂದ ತಕ್ಷಣ ಇದನ್ನೆಲ್ಲ ಬಲಿ ಕೊಡಲಾಗುತ್ತಿದೆ ಎಂದರು. ಈ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕೊಬ್ಬನ್ನು ಇಳಿಸುವ ಕೆಲಸ ಮಾಡಬೇಕು. ನಾಸೀರ್‌ ಹುಸೇನ್‌ ರಾಜ್ಯಸಭೆಗೆ ಆಯ್ಕೆಯಾದಾಗ ವಿಧಾನಸಭೆ ಆವರಣದಲ್ಲೇ ಪಾಕಿಸ್ತಾನ್‌ ಪರ ಘೋಷಣೆ ಕೇಳಿಬಂತು. ಹನುಮಾನ್‌ ಚಾಲೀಸ ಓದಲು ವಿರೋಧ ವ್ಯಕ್ತವಾಗಿದೆ. ಕೋಲಾರದಲ್ಲಿ ಜೈ ಶ್ರೀರಾಮ್‌ ಘೋಷಣೆ ಮಾಡಲು ಬಿಟ್ಟಿಲ್ಲ, ಇಂತಹ ಕಾಂಗ್ರೆಸ್‌ ಸರ್ಕಾರದ ಕೊಬ್ಬು ಇಳಿಸಲು ಹಿಂದುತ್ವದ ರಕ್ಷಣೆ ಮಾಡುವ ಬಿಜೆಪಿಗೆ ಮತ ನೀಡಿ ಎಂದು ಕರೆ ನೀಡಿದರು. ಕಾಂಗ್ರೆಸ್‌ ಕೇವಲ ಹಿಂದುತ್ವದ ವಿರೋಧಿಯಲ್ಲ, ದಲಿತ ವಿರೋಧಿಯೂ ಹೌದು. ಗ್ಯಾರಂಟಿ ಯೋಜನೆಗಳಿಗಾಗಿ ದಲಿತರಿಗೆ ಮೀಸಲಿಟ್ಟಿದ್ದ 11ಸಾವಿರ ಕೋಟಿ ರೂ. ಗಳನ್ನು ಬಳಸಲಾಗುತ್ತಿದೆ.

ಕಾಂಗ್ರೆಸ್‌ಗೆ ಯಾವುದೇ ನೈತಿಕತೆ ಇಲ್ಲ. ಇವರು ರೈತ ಪರವಾಗಿಯೂ ಇಲ್ಲ ಎಂದರು. ಶಿವಮೊಗ್ಗ ಅಭಿವೃದ್ಧಿ ಯಡಿಯೂರಪ್ಪರಿಂದ ಆಗಿದೆ. ಜಿಲ್ಲೆಗೆ ಕಾಂಗ್ರೆಸ್‌
ಯಾವುದೇ ವಿಶೇಷ ಕೊಡುಗೆ ನೀಡಿಲ್ಲ, ಆದ್ದರಿಂದ ಬಿಜೆಪಿಗೆ ಮತ ನೀಡಿ ಮತ್ತೂಮ್ಮೆ ಮೋದಿಯನ್ನು ದೇಶದ ಪ್ರಧಾನಿಯಾಗಿಸಿ ಎಂದರು.

ಅಭಿವೃದ್ಧಿ ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತೇನೆ. ಎದುರಾಳಿಗಳ ಅಪಪ್ರಚಾರಕ್ಕೆ ಕಿವಿಗೊಡುವುದಿಲ್ಲ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ
ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಹೇಳಿದರು. “ಕಾಂಗ್ರೆಸ್‌ ಮುಳುಗುತ್ತಿರುವ ಹಡಗು. ಹೀಗಾಗಿ ಆ ಪಕ್ಷದ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಬಿಜೆಪಿ
ಸೇರ್ಪಡೆ ಆಗುತ್ತಿದ್ದಾರೆ. ವಿರೋಧಿ ಗಳ ಅಪಪ್ರಚಾರವೇ ನನಗೆ ಆಶೀರ್ವಾದ ಎಂದು ಭಾವಿಸುತ್ತೇನೆ. ನಾಮಪತ್ರ ಸಲ್ಲಿಕೆಯ ಮೆರವಣಿಗೆಯಲ್ಲಿ ಅಪಾರ ಪ್ರಮಾಣದಲ್ಲಿ ಜನಸ್ತೋಮ ಭಾಗವಹಿಸಿದೆ. ಜನರ ಉತ್ಸಾಹ ನೋಡಿದರೆ ನೂರಕ್ಕೆ ನೂರು ಶಿವಮೊಗ್ಗ ಕ್ಷೇತ್ರವನ್ನು ನರೇಂದ್ರ ಮೋದಿ ಅವರಿಗೆ ಅರ್ಪಣೆ ಮಾಡಲಿದ್ದಾರೆ’ ಎಂದರು.

ಮಾಜಿ ಸಚಿವರಾದ ಹರತಾಳು ಹಾಲಪ್ಪ, ಕುಮಾರ ಬಂಗಾರಪ್ಪ, ಭೈರತಿ ಬಸವರಾಜ್‌, ಆರಗ ಜ್ಞಾನೇಂದ್ರ , ಶಾಸಕ ಚೆನ್ನಬಸಪ್ಪ, ಮೇಲ್ಮನೆ ಸದಸ್ಯರಾದ ರುದ್ರೇಗೌಡ, ಅರುಣ್‌ ಡಿಎಸ್‌, ಭಾರತಿ ಶೆಟ್ಟಿ, ಎಸ್‌.ಎಲ್‌. ಭೋಜೇಗೌಡ, ಮಾಜಿ ಶಾಸಕ ಕೆ.ಬಿ. ಪ್ರಸನ್ನ ಕುಮಾರ್‌. ಎಂ.ಡಿ.ಲಕ್ಷ್ಮಿನಾರಾಯಣ್‌, ದತ್ತಾತ್ರಿ,
ಎಂ.ಬಿ. ಭಾನುಪ್ರಕಾಶ್‌, ಶಾರದಾ ಅಪ್ಪಾಜಿ, ಬಿಜೆಪಿ ಜಿಲ್ಲಾಧ್ಯಕ್ಷ ಮೇಘರಾಜ್‌ ಇತರರು ಇದ್ದರು.

ಹಕ್ರೆ ಬಿಜೆಪಿ ಸೇರ್ಪಡೆ
ಸಾಗರ ತಾಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಅವರು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದರು. ಸಾಗರ ತಾಲೂಕು ಕಾಂಗ್ರೆಸ್‌ ನಾಯಕರಾಗಿದ್ದ ಹಕ್ರೆ
ಅವರು ಕಾಗೋಡು ತಿಮ್ಮಪ್ಪ ಅವರ ಅನುಯಾಯಿಯಾಗಿದ್ದು, ಶಾಸಕ ಬೇಳೂರು ಗೋಪಾಲಕೃಷ್ಣ ಮತ್ತು ಸಚಿವ ಮಧು ಬಂಗಾರಪ್ಪ ಅವರು ತಮ್ಮನ್ನು ಗುರುತಿಸಲಿಲ್ಲ. ಕಾಂಗ್ರೆಸ್‌ನಲ್ಲಿ ವಲಸೆ ಮುಖಂಡರ ಪಾರುಪತ್ಯಕ್ಕೆ ಬೇಸತ್ತು ಬಿಜೆಪಿ ಸೇರಿರುವುದಾಗಿ ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next