Advertisement

ದೇವ ಭಕ್ತಿ, ದೇಶ ಭಕ್ತಿಯ ಸಂಗಮವಾದ ಸಾಂಸ್ಕೃತಿಕ ಸಂಜೆ 

06:00 AM Nov 23, 2018 | |

ಬೈಂದೂರಿನ ಶಾರದೋತ್ಸವದ ಅಂಗವಾಗಿ ಮಂಗಳೂರಿನ ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ತಂಡ ಪ್ರಸ್ತುತಪಡಿಸಿದ ನೃತ್ಯ ಕಾರ್ಯಕ್ರಮ ದೇವ ಭಕ್ತಿ-ದೇಶ ಭಕ್ತಿಯ ಸಂಗಮವಾಯಿತು. ರೋಮಾಂಚನಕಾರಿ ಅಭಿನಯದ ಮಹಿಷ ಮರ್ದಿನಿ ನೃತ್ಯ ಮನಸೆಳೆಯಿತು. ದೇವಿಯ ಭೀಬತ್ಸ ಕಣ್ಣುಗಳು, ಹಾವ-ಭಾವ, ಭಯ ಹುಟ್ಟಿಸುವ ರೌದ್ರಾವತಾರ  ರೋಮಾಂಚನಗೊಳಿಸಿತು. ಪೌರಾಣಿಕ ಕಥನವನ್ನು ಪರಿಣಾಮ ಕಾರಿಯಾಗಿ ನೃತ್ಯದ ಮೂಲಕ ಪ್ರಸ್ತುತೀಕರಿಸುವ ಕ್ಲಿಷ್ಟಕರ ಕೆಲಸವನ್ನು ಶ್ವೇತಾ ಅರೆಹೊಳೆ ನೇತೃತ್ವದಲ್ಲಿ ಹದಿಹರೆಯದ ಸದಸ್ಯರು ಕಠಿಣ ಪರಿಶ್ರಮದ ಮೂಲಕ ಸಾಕಾರಗೊಳಿಸಿದರು. 

Advertisement

ದೇವಿಯ ರೂಪದಲ್ಲಿ ರಂಗದ ಮೇಲೆ ಅವತರಿಸಿದ ಶ್ವೇತಾ ಅದ್ಭುತ ಅಭಿನಯದ ಮೂಲಕ ಪ್ರೇಕ್ಷಕರನ್ನು ಭಾವವಿಭೋರಗೊಳಿಸಿದರು. ಅಸತ್ಯ ಮತ್ತು ಅಸುರಿ ಶಕ್ತಿಯ ಮೇಲೆ ಸತ್ಯ ಮತ್ತು ಮಾನವೀಯ ಮೌಲ್ಯಗಳ ವಿಜಯದ ಸಂಕೇತವಾದ ಮಹಿಷಾಸುರನ ವಧೆ ಮತ್ತು ಭಕ್ತರನ್ನು ಅನುಗ್ರಹಿಸುವ ನೃತ್ಯರೂಪಕ ಉತ್ತಮ ಸಮನ್ವಯ, ಪಾತ್ರಗಳ ತಾದಾತ್ಮತೆಯಿಂದ ಚಿರಸ್ಥಾಯಿಯಾಗಿರುವಂತೆ ಮಾಡಿತು. ಇಲೆಕ್ಟ್ರಾನಿಕ್‌ ಮಾಧ್ಯಮದಲ್ಲಿ ತಂತ್ರಜ್ಞಾನದ ಸಹಾಯದಿಂದ ಮಾಡಲಾಗುವ ಅಸುರೀ ಸಂಹಾರದ ವೈಭವೋಪೇತ ದೃಶ್ಯವನ್ನು ಅಷ್ಟೇ ಸಮರ್ಥವಾಗಿ ಮತ್ತು ಆಕರ್ಷಕವಾಗಿ ರಂಗದಲ್ಲಿ ಪ್ರದರ್ಶಿಸಿದ ರೀತಿ ಪ್ರಶಂಸೆಗೆ ಪಾತ್ರವಾಯಿತು. ಅಮೋಘ ರಂಗ ತಂತ್ರದ ಮೂಲಕ ಪ್ರದರ್ಶಿಸಿದ ಜಗಜ್ಜನನಿಯ ವಿರಾಟ್‌ ರೂಪದರ್ಶನವನ್ನು ಪ್ರೇಕ್ಷಕರು ಹರ್ಷಿತರಾಗಿ ಕಣ್ತುಂಬಿಕೊಂಡರು. ಆಕರ್ಷಕ ವೇಷಭೂಷಣ, ಪ್ರಸಾಧನಗಳಿಂದ ಹಾಗೂ ಉತ್ತಮ ಬೆಳಕಿನ ನಿರ್ವಹಣೆಯ ಜತೆಯಲ್ಲಿ ಪ್ರತಿಷ್ಠಾನದ ಮುಖ್ಯಸ್ಥ ಸದಾಶಿವ ರಾವ್‌ ಅವರ ಸಂಕ್ಷಿಪ್ತ ಹಿನ್ನೆಲೆ ವಿವರಣೆ ಕಾರ್ಯಕ್ರಮದ ಯಶಸ್ಸಿಗೆ ಪೂರಕವಾಯಿತು. 

ಹರಿಯಿತು ರಾಷ್ಟ್ರಭಕ್ತಿಯ ಹೊಳೆ 
    ಕಾರ್ಯಕ್ರಮದ ಉತ್ತರಾರ್ಧದಲ್ಲಿ ದೇಶ ರಕ್ಷಣೆಯಲ್ಲಿ ತೊಡಗಿದ ಸೈನಿಕರ ಜೀವನಾಧಾರಿತ ನೃತ್ಯ “ಚಕ್‌ ದೇ ಇಂಡಿಯಾ’ ರಾಷ್ಟ್ರ ಭಕ್ತಿಯನ್ನು ಬಡಿದೆಬ್ಬಿಸಿತು. ಜನಪ್ರಿಯ ಹಿಂದಿ ಹಾಡುಗಳನ್ನಾಧರಿಸಿ ಸಂಯೋಜಿಸಿದ ನೃತ್ಯ ರೂಪಕ ಸೈನಿಕರ ತ್ಯಾಗ,ಬಲಿದಾನದ ಮಹತ್ವವನ್ನು ವಿಷದೀಕರಿಸಿತು. ಭಾರತ-ಚೀನ ಯುದೊœàತ್ತರದಲ್ಲಿ ನೆಹರೂರವರ ಕಣ್ಣುಗಳನ್ನು ತೇವಗೊಳಿಸಿತ್ತೆನ್ನಲಾದ ಲತಾ ಮಂಗೇಶ್ಕರ್‌ ಅವರ ಎ ಮೇರೇ ವತನ್‌ ಕೇ ಲೋಗೋ ಜರಾ ಆಂಖ್‌ ಮೇ ಭರಲೋ ಪಾನೀ, ಜೋ ಶಹೀದ್‌ ಹುಯೆ ಉನಿ ಜರಾ ಯಾದ್‌ ಕರಲೋ ಖುರ್ಬಾನಿ…’ ಕಣ್ಣಾಲಿಗಳು ತುಂಬುವಂತೆ ಮಾಡಿತು. ಸಂದೇಶೇಂ ಆತಾ ಹೈ…ಹಮೇ ತಡಪಾತೇ ಹೈ…ಘರ್‌ ಕಬ್‌ ಆವೋಗೇ…’ ಹಾಡು ತಮ್ಮನ್ನು ಪ್ರೀತಿಸುವ ಜೀವಗಳಿಂದ ಸಹಸ್ರಾರು ಮೈಲಿ ದೂರದ ದೇಶದ ಸೀಮೆಯಲ್ಲಿದ್ದು ಪ್ರಾಣವನ್ನೇ ಪಣವಾಗಿಟ್ಟು ಶತ್ರುಗಳಿಂದ ಅನವರತ ರಾಷ್ಟ್ರವನ್ನು ರಕ್ಷಿಸುವ ಸೈನಿಕರ ಮಾನಸಿಕ ತಳಮಳದ ಚಿತ್ರಣ ಮನತಟ್ಟಿತು.  ಧಾರ್ಮಿಕ ಮಹತ್ವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದೇಶದ ಕುರಿತು ಚಿಂತಿಸುವಂತೆ, ದೇಶ ರಕ್ಷಕರ ಬಲಿದಾನವನ್ನು ಸ್ಮರಿಸುವಂತೆ ಪ್ರೇರೇಪಿಸುವ ಅಪೂರ್ವ ಕಾರ್ಯಕ್ರಮವಾಯಿತು. 

ಬೈಂದೂರು ಚಂದ್ರಶೇಖರ ನಾವಡ

Advertisement

Udayavani is now on Telegram. Click here to join our channel and stay updated with the latest news.

Next