Advertisement

Congress ರಾಜ್ಯದ ಹಗರಣ ಕಳಂಕಕ್ಕೆ ಕಾಂಗ್ರೆಸ್‌ ಹೈಕಮಾಂಡ್‌ ಗರಂ!

01:14 AM Jul 31, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಹಾಗೂ ಅದರಿಂದ ಸರಕಾರಕ್ಕೆ ಉಂಟಾ
ಗುತ್ತಿರುವ ಹಾನಿಯ ಬಗ್ಗೆ ನಿರೀಕ್ಷೆಯಂತೆ ಸಿಎಂ-ಡಿಸಿಎಂ ಮುಂದೆ ಕಾಂಗ್ರೆಸ್‌ ಹೈಕಮಾಂಡ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

Advertisement

ಒಂದೆಡೆ ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ, ಅದಕ್ಕೆ ಸಂಬಂಧಿಸಿ ಸಚಿವರೊಬ್ಬರ ತಲೆದಂಡ, ಬೆನ್ನಲ್ಲೇ ಮುಡಾ ಹಗರಣ ಪಡೆದುಕೊಳ್ಳುತ್ತಿರುವ ತಿರುವು, ಇದರ ಮಧ್ಯೆ ಸಿಎಂ ತವರು ಜಿಲ್ಲೆ ಮೈಸೂರಿಗೆ ವಿಪಕ್ಷಗಳ ಪಾದಯಾತ್ರೆ ತಯಾರಿ; ಈ ಎಲ್ಲ ಬೆಳವಣಿಗೆಗಳ ನಡುವೆ ದಿಲ್ಲಿಗೆ ಬರುವಂತೆ ಸಿಎಂ-ಡಿಸಿಎಂಗೆ ಬುಲಾವ್‌ ಬಂದಿತ್ತು. ಮಂಗಳವಾರ ಇಬ್ಬರೂ ನಾಯಕರು ಹೈಕಮಾಂಡ್‌ ಭೇಟಿಯಾಗಿದ್ದಾರೆ.

ಈ ವೇಳೆ ಸರಕಾರದ ಕಾರ್ಯವೈಖರಿ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭಾ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

5 ಉಚಿತ ಗ್ಯಾರಂಟಿಗಳನ್ನು ನೀಡಲಾಗಿದೆ. ಅದಕ್ಕಾಗಿ 52 ಸಾವಿರ ಕೋಟಿ ರೂ. ಕೊಡಲಾಗಿದೆ. ಲೋಕಸಭಾ ಚುನಾವಣೆಯಲ್ಲಿ ಹೇಳಿದವರಿಗೆ ಟಿಕೆಟ್‌ ಕೊಟ್ಟಿದ್ದು, ಬಹುತೇಕರು ಸಚಿವರ ಸಂಬಂಧಿಕರೇ ಇದ್ದರು. ಆದಾಗ್ಯೂ ನಿರೀಕ್ಷಿತ ಫ‌ಲಿತಾಂಶ ಬರಲಿಲ್ಲ. ಈ ಮಧ್ಯೆ ಅಲ್ಪಾವಧಿಯಲ್ಲಿ ಹಗರಣಗಳ ಆರೋಪ ಕೇಳಿಬರುತ್ತಿದೆ. ಈ ಬೆಳವಣಿಗೆಗಳು ಪಕ್ಷಕ್ಕೂ ಮುಜುಗರ ಉಂಟು ಮಾಡುತ್ತಿವೆ ಎಂದು ರಾಜ್ಯ ನಾಯಕರ ಬಗ್ಗೆ ಬೇಸರ ವ್ಯಕ್ತಪಡಿಸಿದರು ಎನ್ನಲಾಗಿದೆ.

ಒಳ ಏಟು ಕಾರಣ: ಸಮಜಾಯಿಷಿ
ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 15 ಸ್ಥಾನಗಳನ್ನು ಗೆಲ್ಲುವ ಎಲ್ಲ ಅವಕಾಶಗಳಿದ್ದವು. ಆದರೆ 9 ಸ್ಥಾನಕ್ಕೆ ಸೀಮಿತ ಆಗಬೇಕಾಯಿತು. ಪಕ್ಷದಲ್ಲಿ ಒಳ ಏಟು, ಕೊನೆಯ ಕ್ಷಣದಲ್ಲಿ ವಿಪಕ್ಷಗಳ ಮೈತ್ರಿ ಹಾಗೂ ಅವುಗಳ ಸಂಘಟಿತ ಹೋರಾಟ ನಮ್ಮ ನಿರೀಕ್ಷೆಯನ್ನು ಹುಸಿಗೊಳಿಸಿತು. ಹಾಗೆಂದು ಇದೇನೂ ಕಳಪೆ ಅಲ್ಲ. ಕೇವಲ ಒಂದು ಸ್ಥಾನದಿಂದ ಒಂಭತ್ತಕ್ಕೆ ನಾವು ಏರಿಕೆಯಾಗಿದ್ದೇವೆ ಎಂದು ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸಮರ್ಥನೆ ನೀಡಿದರು ಎನ್ನಲಾಗಿದೆ.

Advertisement

ಹಗರಣಗಳೇ ಇಲ್ಲದಿದ್ದರೂ ಸುಳ್ಳು ಆರೋಪಗಳ ಮೂಲಕ ವಿಪಕ್ಷಗಳು ಹುಯಿಲೆಬ್ಬಿಸುತ್ತಿವೆ. ಬಿಜೆಪಿ ಮತ್ತು ಜೆಡಿಎಸ್‌ ನಾಯಕರು ಕೂಡ ಮುಡಾದಲ್ಲಿ ನಿವೇಶನಗಳನ್ನು ಪಡೆದಿರುವ ಬಗ್ಗೆ ದಾಖಲೆಗಳಿವೆ ಎಂದು ಸಮಜಾಯಿಷಿ ನೀಡಿರುವುದಾಗಿ ಮೂಲಗಳು ತಿಳಿಸಿವೆ.

ಇದಕ್ಕೆ ಪ್ರತಿಕ್ರಿಯಿಸಿದ ಹೈಕಮಾಂಡ್‌, ದಿಲ್ಲಿಯಿಂದಲೇ ವಿಪಕ್ಷಗಳಿಗೆ ಸೂಚನೆ ಬಂದಿದೆ. ಅದರಂತೆ ಇಲ್ಲದಿರುವುದನ್ನೂ ಇದೆ ಎಂಬಂತೆ ವ್ಯಾಪಕವಾಗಿ ಬಿಂಬಿಸಲಾಗುತ್ತಿದೆ. ಈಚೆಗೆ ನಡೆದ ಮುಂಗಾರು ಅಧಿವೇಶನದಲ್ಲಿ ವಿಪಕ್ಷಗಳ ಕೊನೆಯ 2 ದಿನಗಳ ಹೋರಾಟ, ಅಹೋರಾತ್ರಿ ಧರಣಿಯಂತಹ ತಂತ್ರಗಳು ಅದರ ಪರಿಣಾಮಗಳೇ ಆಗಿವೆ. ಆದರೂ ನಿರೀಕ್ಷಿತ ತಿರುಗೇಟು ನೀಡಬಹುದಿತ್ತು ಎಂದು ಹೇಳಿದೆ ಎನ್ನಲಾಗಿದೆ.

ಪುನರಾವರ್ತನೆ ಆಗದಿರಲು ತಾಕೀತು
ಮುಂಬರುವ ದಿನಗಳಲ್ಲಿ ಬಿಬಿಎಂಪಿ ಮತ್ತಿತರ ಸ್ಥಳೀಯ ಸಂಸ್ಥೆಗಳ ಚುನಾವಣೆ ಇದೆ. ಅಲ್ಲಿಯೂ ಇದು ಪರಿಣಾಮ ಬೀರುವುದನ್ನು ಅಲ್ಲಗಳೆಯುವಂತಿಲ್ಲ. ಈಗಿನಿಂದಲೇ ಅದಕ್ಕೆ ಸಜ್ಜಾಗಬೇಕು. ಯಾವುದೇ ಕಾರಣಕ್ಕೂ ಅದಕ್ಕೆ ಅವಕಾಶ ಮಾಡಿಕೊಡಬಾರದು. ಅಷ್ಟೇ ಅಲ್ಲ, ಸರಕಾರದಲ್ಲಿ ಈ ಘಟನೆಗಳು ಪುನರಾವರ್ತನೆ ಆಗದಂತೆ ಎಚ್ಚರ ವಹಿಸುವಂತೆ ತಾಕೀತು ಮಾಡಿದ್ದಾರೆ ಎಂದೂ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next