Advertisement

ಠಾಣೆ ಮೆಟ್ಟಿಲೇರಿದ ಕುರ್ಚಿ ಕಿತ್ತಾಟ!

05:27 PM Jul 14, 2018 | Team Udayavani |

ಹಾವೇರಿ: ನಗರಸಭೆ ಅಧ್ಯಕ್ಷ ಸ್ಥಾನದ ಕುರ್ಚಿಗಾಗಿ ಬಿಜೆಪಿ-ಕಾಂಗ್ರೆಸ್‌ ನಡುವೆ ಸದಸ್ಯರ ನಡುವೆ ಕಚ್ಚಾಟ ಶುರುವಾಗಿದ್ದು ಶುಕ್ರವಾರ ಹಂಗಾಮಿ ಅಧ್ಯಕ್ಷ ತಾನು ಎಂದು ಬಿಜೆಪಿಯ ಇರ್ಫಾನ್‌ಖಾನ್‌ ಪಠಾಣ ಅಧ್ಯಕ್ಷರ ಕುರ್ಚಿಯಲ್ಲಿ ಆಸೀನರಾದರು.

Advertisement

ಬುಧವಾರ ಬಿಜೆಪಿ ಸದಸ್ಯರು ಅವಿಶ್ವಾಸಮಂಡನೆ ನಿರ್ಣಯ ಕೈಗೊಂಡಿದ್ದರು. ಬಳಿಕ ಗುರುವಾರ ನಗರಸಭೆ ಅಧ್ಯಕ್ಷೆ ಪಾರ್ವತಮ್ಮ ಹಲಗಣ್ಣನವರ ತಾವೇ ನಗರಸಭೆ ಅಧ್ಯಕ್ಷೆ; ಬಿಜೆಪಿಯವರು ಮಂಡಿಸಿರುವ ಅವಿಶ್ವಾಸ ಮಂಡನೆ ಸಭೆಯೇ ಅಸಿಂಧು ಎಂದು ಅಧ್ಯಕ್ಷ ಕುರ್ಚಿಯಲ್ಲಿ ಆಸೀನರಾಗಿದ್ದರು. ಶುಕ್ರವಾರ ಮಧ್ಯಾಹ್ನ ದಿಢೀರನೇ ಬಿಜೆಪಿಯವರು ನಿರ್ಣಯ ಕೈಗೊಂಡು ಆಯ್ಕೆಯಾಗಿದ್ದ ಹಂಗಾಮಿ ಅಧ್ಯಕ್ಷ ಇರ್ಫಾನ್‌ಖಾನ್‌ ಪಠಾಣ ನಗರಸಭೆ ಅಧ್ಯಕ್ಷರ ಕಚೇರಿಗೆ ಬಂದು ಅಧ್ಯಕ್ಷರ ಕುರ್ಚಿಯಲ್ಲಿ ಕುಳಿತಿದ್ದರು. ನಂತರ ಬಂದ ಪಾರ್ವತಮ್ಮ ಹಲಗಣ್ಣನವರ ಕುರ್ಚಿ ಬಿಟ್ಟು ಕೊಡುವಂತೆ ವಾಗ್ವಾದ ನಡೆಸಿದರು.

‘ಇಲ್ಲಿ ನಾನು ಅಧ್ಯಕ್ಷೆಯಾಗಿದ್ದೇನೆ. ಕೋರಂ ಇಲ್ಲದೇ ಮಾಡಿರುವ ಸಭೆ, ತೆಗೆದುಕೊಂಡಿರುವ ತೀರ್ಮಾನ ಯಾವುದೂ ಕಾನೂನಾತ್ಮಕವಾಗಿಲ್ಲ. ನಾನು ಕುಳಿತುಕೊಳ್ಳಬೇಕಾದ ಅಧ್ಯಕ್ಷರ ಕುರ್ಚಿ ಬಿಟ್ಟು ಮೇಲೇಳಿ’ ಎಂದು ಪಾರ್ವತಮ್ಮ ಹಲಗಣ್ಣನವರ ಹೇಳಿದರು. ಇದಕ್ಕೆ ಪಠಾಣ ಉತ್ತರಿಸಿ, ಅವರು ‘ನಾನೇ ಹಂಗಾಮಿ ಅಧ್ಯಕ್ಷ’ ಎಂದು ಕುರ್ಚಿ ಬಿಟ್ಟು ಮೇಲೇಳಲಿಲ್ಲ. ಕೊನೆಗೆ ಈ ವಿಷಯವನ್ನು ಜಿಲ್ಲಾಧಿ ಕಾರಿ ಗಮನಕ್ಕೆ ತರುವುದಾಗಿ ಪಾರ್ವತಮ್ಮ ಹಲಗಣ್ಣನವರ ಕಚೇರಿಯಿಂದ ಹೊರನಡೆದರು. ಇವರ ಈ ಕಿತ್ತಾಟದಿಂದಾಗಿ ಜನರಿಗೆ ನಗರಸಭೆಯ ಅಧಿಕೃತ ಅಧ್ಯಕ್ಷರು ಯಾರು ಎಂಬುದು ತಿಳಿಯದಂತಾಗಿದೆ. ನಗರಸಭೆ ಕಾನೂನಿನ ಪ್ರಕಾರ ನಗರಸಭೆಯಲ್ಲಿ ಕೈಗೊಂಡ ಮಹತ್ವದ ನಿರ್ಣಯಗಳಿಗೆ ಜಿಲ್ಲಾಧಿಕಾರಿಯವರ ಅಂಕಿತ ಬಿದ್ದ ನಂತರವೇ ಅದು ಅಧಿಕೃತಗೊಳ್ಳುತ್ತದೆ. ಜಿಲ್ಲಾಧಿಕಾರಿಯವರು ಈವರೆಗೂ ಅವಿಶ್ವಾಸ ನಿರ್ಣಯದ ಬಗ್ಗೆ ಅಂಕಿತ ಹಾಕದೆ ಇರುವುದರಿಂದ ಅಧ್ಯಕ್ಷರ ಕುರ್ಚಿಗಾಗಿ ಈಗ ಕಿತ್ತಾಟ ನಡೆದಿದೆ.

ತಾರಕಕ್ಕೇರಿದ ಕಿತ್ತಾಟ
ಅಧ್ಯಕ್ಷ ಕುರ್ಚಿ ಕಚ್ಚಾಟ ಶುಕ್ರವಾರ ಸಂಜೆ ಪೊಲೀಸ್‌ ಠಾಣೆ ಮೆಟ್ಟಿಲೇರಿದೆ. ಪಾರ್ವತಮ್ಮ ಹಲಗಣ್ಣನವರ ನಾನು ಕಚೇರಿಗೆ ಹೋದಾಗ ಇರ್ಫಾನ್‌ಖಾನ್‌ ಅಧ್ಯಕ್ಷರ ಕುರ್ಚಿಯಲ್ಲಿ ಕುಳಿತಿದ್ದರು. ಇದ್ದನ್ನು ಪ್ರಶ್ನಿಸಿದಾಗ ತಮ್ಮ ಸೊಂಟಕ್ಕೆ ಕೈ ಹಾಕಿ ದೂಡಿ ಅವಮಾನ ಮಾಡಿದ್ದಾರೆ. ಸದಸ್ಯ ನಿರಂಜನ ಹೇರೂರು ಹಾಗೂ ಲಲಿತಾ ಗುಂಡೇನಹಳ್ಳಿ ನಗರಸಭೆಯಲ್ಲಿ ಕೆಲಸ ಮಾಡಬಾರದು. ಇತ್ತ ಬಂದರೆ ಜೀವಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ಮೂವರ ವಿರುದ್ಧ ದೂರು ದಾಖಲಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಇರ್ಫಾನ್‌ಖಾನ್‌ ಪಾರ್ವತಮ್ಮನವರು ಹಾಗೂ ಕಾಂಗ್ರೆಸ್‌ನ ಕೆಲ ಸದಸ್ಯರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಚೇರಿಯಿಂದ ಹೊರಹೋಗದಿದ್ದರೆ ಹೆಣ ಹಾಕುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಅಲ್ಲದೆ ಮಹಿಳಾ ಸದಸ್ಯೆಗೆ ಹೊಡೆದಿದ್ದಾರೆ ಎಂದು ದೂರು ನೀಡಿದ್ದು, ಅಧ್ಯಕ್ಷ ಕುರ್ಚಿ ಕಚ್ಚಾಟ ಅತಿರೇಕಕ್ಕೆ ತಿರುಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next