Advertisement

ಪಂಚಕರ್ಮ ಜತೆಗೆ ಗೌಡರ ಪಂಚತಂತ್ರ

09:44 AM May 06, 2019 | mahesh |

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಫ‌ಲಿತಾಂಶ ಏನಾಗಬಹುದೋ ಎಂದು ಕಾಂಗ್ರೆಸ್‌-ಜೆಡಿಎಸ್‌ನ ನಾಯಕರು ಯೋಚಿಸುತ್ತಿದ್ದರೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಉಡುಪಿ ರೆಸಾರ್ಟ್‌ನಲ್ಲಿ ಪಂಚಕರ್ಮ ಚಿಕಿತ್ಸೆ ನಡುವೆಯೇ ‘ಮಹಾಘಟ್ಬಂಧನ್‌’ ಸರ್ಕಾರ ರಚನೆಗೆ ಪಂಚ’ತಂತ್ರ’ ರೂಪಿಸುತ್ತಿದ್ದಾರೆ. ಜತೆಗೆ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಸಮ್ಮಿಶ್ರ ಸರ್ಕಾರದ ಭವಿಷ್ಯದ ಬಗ್ಗೆಯೂ ನೀಲನಕ್ಷೆ ಸಿದ್ಧ ಮಾಡುತ್ತಿದ್ದಾರೆ.

Advertisement

ಚುನಾವಣೆ ಫ‌ಲಿತಾಂಶದ ನಂತರ ರಾಷ್ಟ್ರ ರಾಜಕಾ ರಣದಲ್ಲಾಗಬಹುದಾದ ಬದಲಾವಣೆ ಅದು ಕರ್ನಾಟ ಕದ ಮೇಲೆ ಬೀರುವ ಪರಿಣಾಮದ ಅಂದಾಜು ಮಾಡಿ ರುವ ಗೌಡರು ಈಗಿನಿಂದಲೇ ಮುಂದೇನು ಮಾಡ ಬೇಕು ಎಂಬ ಕಾರ್ಯತಂತ್ರದಲ್ಲಿ ತೊಡಗಿದ್ದಾರೆ.

ಉಡುಪಿ ಬಳಿಯ ರೆಸಾರ್ಟ್‌ಗೆ ಹೋಗುವ ಮುನ್ನ ದೇವೇಗೌಡರು ದೆಹಲಿಗೆ ಹೋಗಿ ಕೆಲವು ಪ್ರಾದೇಶಿಕ ಪಕ್ಷಗಳ ನಾಯಕರ ಜತೆ ಚರ್ಚಿಸಿ ಬಂದಿದ್ದರು. ಚಿಕಿತ್ಸೆಯ ನಡುವೆಯೇ ಹಲವು ಮುಖಂಡರನ್ನು ಸಂಪರ್ಕಿಸಿ ಅಲ್ಲಿನ ಸ್ಥಿತಿಯ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.

ಉತ್ತರಪ್ರದೇಶ, ದೆಹಲಿ, ಒರಿಸ್ಸಾ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಬಹುತೇಕ ರಾಜ್ಯಗಳ ಪ್ರಾದೇಶಿಕ ನಾಯಕರು ದೇವೇಗೌಡರ ಸಂಪರ್ಕದಲ್ಲಿದ್ದು, ಲೋಕಸಭೆ ಚುನಾವಣೆ ಫ‌ಲಿತಾಂಶದ ನಂತರ ಮಹಾಘಟ್ಬಂಧನ್‌ ಸ್ವರೂಪವೇ ಬದಲಾಗುವ ನಿರೀಕ್ಷೆಯಲ್ಲಿದ್ದಾರೆ. ಕಾಂಗ್ರೆಸ್‌ ಈಗಿರುವ ಸ್ಥಾನಗಳಿಗಿಂತ ಹೆಚ್ಚು ಗಳಿಸಿದರೂ, ಆ ಪಕ್ಷ ಸರ್ಕಾರದಿಂದ ಸರ್ಕಾರ ರಚನೆ ಸಾಧ್ಯವಾಗದಿದ್ದರೆ, ಪ್ರಾದೇಶಿಕ ಪಕ್ಷಗಳ ಒಕ್ಕೂಟಕ್ಕೆ ಅದರ ಬೆಂಬಲ ಪಡೆಯುವ ಸಾಧ್ಯತೆಗಳ ಬಗ್ಗೆಯೂ ಚರ್ಚೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಡ್ಯಾನಿಶ್‌ಗೆ ಹೊಣೆ: ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ ಅನ್ರೋಹ ಕ್ಷೇತ್ರದಿಂದ ಸ್ಪರ್ಧಿಸುವ ಸಲುವಾಗಿಯೇ ಬಿಎಸ್‌ಪಿ ಸೇರಿರುವ ಜೆಡಿಎಸ್‌ ರಾಷ್ಟ್ರೀಯ ಮಹಾಪ್ರಧಾನ ಕಾರ್ಯದರ್ಶಿಯಾಗಿದ್ದ ಡ್ಯಾನಿಶ್‌ ಆಲಿಗೆ ಎಸ್‌ಪಿ-ಬಿಎಸ್‌ಪಿ, ಆರ್‌ಎಲ್ಡಿ ನಾಯಕರನ್ನು ಒಟ್ಟುಗೂಡಿಸುವ ಹೊಣೆಗಾರಿಕೆ ನೀಡಿದ್ದು, ಡ್ಯಾನಿಶ್‌ ಆಲಿ ಅವರು ಆ ಪ್ರಯತ್ನದಲ್ಲಿ ತೊಡಗಿದ್ದಾರೆ .

Advertisement

ಕರ್ನಾಟಕದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಡ್ಯಾನಿಶ್‌ ಅಲಿ ಇದೀಗ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಹೊರತುಪಡಿಸಿದ ಇತರೆ ಪಕ್ಷಗಳ ನಾಯಕರ ಜತೆ ಡ್ಯಾನಿಶ್‌ ಅಲಿ ಒಂದು ಸುತ್ತು ಮಾತುಕತೆ ಸಹ ನಡೆಸಿ ದೇವೇಗೌಡರ ಸಂದೇಶ ರವಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರಾದೇಶಿಕ ಪಕ್ಷಗಳ ನಾಯಕರಿಗೆ ದೇವೇಗೌಡರು ರವಾನಿಸಿರುವ ಸಂದೇಶ ಏನು ಎಂಬುದರ ಬಗ್ಗೆ ಯಾರೂ ಗುಟ್ಟು ಬಿಟ್ಟುಕೊಡುತ್ತಿಲ್ಲ.

ಚಂದ್ರಶೇಖರರಾವ್‌ ಜತೆ ಚರ್ಚೆ
ಗುರುವಾರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತೆಲಂಗಾಣದ ಟಿಆರ್‌ಎಸ್‌ ಮುಖಂಡ ಚಂದ್ರಶೇಖರರಾವ್‌ ಹಾಗೂ ಆಂಧ್ರಪ್ರದೇಶದ ವೈ.ಎಸ್‌.ಆರ್‌. ಪಕ್ಷದ ಜಗನ್‌ಮೋಹನ್‌ರೆಡ್ಡಿ ಅವರ ಜತೆಯೂ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಉತ್ತರಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಛ‌ತ್ತೀಸ್‌ಗಢ, ತಮಿಳುನಾಡು ಹಾಗೂ ಪಶ್ಚಿಮ ಬಂಗಾಳ, ಬಿಹಾರ ರಾಜ್ಯಗಳಲ್ಲಿನ ಲೋಕಸಭೆ ಚುನಾವಣೆ ಫ‌ಲಿತಾಂಶದ ಮೇಲೆ ಎಲ್ಲ ನಾಯಕರು ಚಿತ್ತ ಹರಿಸಿದ್ದು, ಇಲ್ಲಿ ಕಾಂಗ್ರೆಸ್‌ ಹಾಗೂ ಪ್ರಾದೇಶಿಕ ಪಕ್ಷಗಳು ಹೆಚ್ಚು ಸ್ಥಾನ ಗಳಿಸಿ ಬಿಜೆಪಿಯ ಶಕ್ತಿ ಕುಗ್ಗಿಸಬಹುದು ಎಂದು ಲೆಕ್ಕಾಚಾರದಲ್ಲಿ ಪ್ರಾದೇಶಿಕ ಪಕ್ಷಗಳ ನಾಯಕರು ಇದ್ದು, ದೇವೇಗೌಡರ ಜತೆ ಫ‌ಲಿತಾಂಶ ನಂತರದಲ್ಲಿ ಇರಿಸಬೇಕಾದ ಹೆಜ್ಜೆಯ ಬಗ್ಗೆ ಚರ್ಚೆಯಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಪ್ರಾದೇಶಿಕ ಪಕ್ಷದ ನಾಯಕರಿಗೆ ಕ‌ರ್ನಾಟಕದ್ದೇ ಚಿಂತೆಯಾಗಿದೆ. ಕಾಂಗ್ರೆಸ್‌-ಜೆಡಿಎಸ್‌ ಜತೆಗೂಡಿದರೆ 18 ಸ್ಥಾನದವರೆಗೂ ಗೆಲ್ಲುವ ಲೆಕ್ಕಾಚಾರ ಹಾಕಿಕೊಂಡಿದ್ದರಾದರೂ ಮತದಾನದ ನಂತರದ ಬೆಳವಣಿಗೆಗಳು ಕರ್ನಾಟಕದಲ್ಲಿ ನಿರೀಕ್ಷಿಸಿದಷ್ಟು ಸ್ಥಾನ ಬರಲಾರದು. ಆದರೆ, ಕೇರಳದಲ್ಲಿ ಸ್ವಲ್ಪ ಜಾಸ್ತಿ ಸಂಖ್ಯೆಯ ಸೀಟು ಬರುವ ನಿರೀಕ್ಷೆಯಲ್ಲಿದ್ದಾರೆ ಎಂದು ಹೇಳಲಾಗಿದೆ.

ಫ‌ಲಿತಾಂಶದ ನಂತರ ರಂಗಪ್ರವೇಶ

ಕರ್ನಾಟಕದಲ್ಲಿ ಒಂದೊಮ್ಮೆ ಕಾಂಗ್ರೆಸ್‌-ಜೆಡಿಎಸ್‌ ಕಡಿಮೆ ಸ್ಥಾನ ಗಳಿಸಿದರೆ ಏನಾಗಲಿದೆ. ಬಿಜೆಪಿ 18 ಸ್ಥಾನಕ್ಕಿಂತ ಹೆಚ್ಚು ಗಳಿಸಿದರೆ ಸಮ್ಮಿಶ್ರ ಸರ್ಕಾರದ ಭವಿಷ್ಯ ಏನಾಗಬಹುದು ಎಂಬ ಬಗ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಜತೆಯೂ ಎಚ್.ಡಿ.ದೇವೇಗೌಡರು ಚರ್ಚಿಸಿದ್ದು, ಸೂತ್ರ ಸಿದ್ಧಪಡಿಸಿಕೊಂಡಿದ್ದಾರೆ. ಫ‌ಲಿತಾಂಶ ಹೊರ ಬೀಳುತ್ತಲೇ ‘ರಂಗಪ್ರವೇಶ’ ಮಾಡಲಿದ್ದಾರೆ ಎಂದು ಹೇಳಲಾಗಿದೆ.

ದೇವೇಗೌಡರ ಪಂಚ ‘ತಂತ್ರ’
ಟಿಆರ್‌ಎಸ್‌ ಮತ್ತು ವೈಎಸ್‌ಆರ್‌ ಪಕ್ಷಗಳನ್ನು ಸೆಳೆಯುವುದು
ಈ ಹಿಂದೆ ಯುಪಿಎನಲ್ಲಿದ್ದು, ಈಗ ಎನ್‌ಡಿಎ ಜತೆಗಿರುವ ರಾಮ್‌ವಿಲಾಸ್‌ ಪಾಸ್ವಾನ್‌ರಂಥ ನಾಯಕರಿಗೆ ಗಾಳ
ಮಹಾಘಟಬಂಧನ್‌ಗೆ ಹೊಸ ಪ್ರಾದೇಶಿಕ ಪಕ್ಷಗಳ ಸೇರ್ಪಡೆ
ಪ್ರಾದೇಶಿಕ ಪಕ್ಷಗಳ ತಂಡ ರಚನೆ
ರಾಷ್ಟ್ರ ರಾಜಕಾರಣದಲ್ಲಿ ಮುಂಚೂಣಿ ಪಾತ್ರ ವಹಿಸುವುದು (90ರ ದಶಕದಲ್ಲಿ ಹರಿಕಿಶನ್‌ಸಿಂಗ್‌ ಸುರ್ಜಿತ್‌ ವಹಿಸಿದ ಪಾತ್ರ)

ಎಸ್‌. ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next