Advertisement

ಕೆಂಪು-ಹಳದಿಯಲ್ಲಿ ಮಿಂದೆದ್ದ ಮಲ್ಲಿಗೆ ನಗರಿ

09:12 AM Nov 25, 2017 | |

ಮೈಸೂರು: ಜೈ ಭುವನೇಶ್ವರಿ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ, ಕನ್ನಡ ಕನ್ನಡ ಬನ್ನಿ ನಮ್ಮ ಸಂಗಡ… -ಹೀಗೆ ಕನ್ನಡಪರ ಘೋಷಣೆಗಳೊಂದಿಗೆ ಮೊಳಗಿದ ಕನ್ನಡದ ಕಹಳೆ. ನಾಡಿನ ವೈಭವವನ್ನು ಬಿಂಬಿಸುವ ಹಳದಿ-ಕೆಂಪು ಬಣ್ಣದ ಧ್ವಜಗಳನ್ನು ಹಿಡಿದು ಸಾಗಿದ ಸಹಸ್ರಾರು ಕನ್ನಡದ ಮನಸ್ಸುಗಳ ನಡುವೆ ಜನಪದ ಕಲಾ ತಂಡಗಳು, ಸ್ತಬ್ಧಚಿತ್ರಗಳ ಭವ್ಯ ಮೆರವಣಿಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕನ್ನಡ ಕಂಪನ್ನು ಚೆಲ್ಲಿತ್ತು.

Advertisement

ಮಲ್ಲಿಗೆ ನಗರಿಯಲ್ಲಿ ಶುಕ್ರವಾರದಿಂದ ಆರಂಭಗೊಂಡ 83ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಗರದೆಲ್ಲೆಡೆ ಕನ್ನಡ ಸಾರ್ವಭೌಮತ್ವವನ್ನು ಪಸರಿಸಿತು. ಮಲ್ಲಿಗೆ ಹೂವಿನಿಂದ ಅಲಂಕೃತಗೊಂಡಿದ್ದ ವಾಹನದಲ್ಲಿ ಸಮ್ಮೇಳನಾಧ್ಯಕ್ಷ ಪ್ರೊ. ಚಂದ್ರಶೇಖರ ಪಾಟೀಲ(ಚಂಪಾ), ಅವರ ಪತ್ನಿ ನೀಲಾ ಪಾಟೀಲ ಮತ್ತು ಕಸಾಪ ಅಧ್ಯಕ್ಷ ಡಾ. ಮನು ಬಳಿಗಾರ್‌ ಅವರು ಮೆರವಣಿಗೆಯಲ್ಲಿ ನಸುನಗುತ್ತಾ ಕೈಬೀಸುತ್ತಿದ್ದರು. ಕಲಾತಂಡಗಳ ಮೆರಗು: ಅಕ್ಷರ ಜಾತ್ರೆಯ ಅಂಗವಾಗಿ ನಡೆದ
ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಸಾಗಿದ ಕಲಾತಂಡಗಳು ಮೆರವಣಿಗೆಯ ಸೊಬಗನ್ನು ಹೆಚ್ಚಿಸಿತು. ಪ್ರಮುಖವಾಗಿ ನಂದಿಧ್ವಜ, ನಗಾರಿ, ನಾದಸ್ವರ, ಕಹಳೆ, ಡೊಳ್ಳುಕುಣಿತ, ಕೋಲಾಟ, ಡೋಲು, ಆದಿವಾಸಿಗಳ ನೃತ್ಯ, ಮರಗಾಲು, ವೀರಭದ್ರ ಕುಣಿತ, ವೀರಗಾಸೆ, ಗೊಂಬೆ ಕುಣಿತ, ಹಲಗೆ ಬಡಿತ ಸೇರಿ 56 ಕಲಾ ತಂಡಗಳು ಮೆರವಣಿಗೆಗೆ ಮೆರಗು ತಂದಿತು. ಇವರೊಂದಿಗೆ ಅಕ್ಕಮಹಾದೇವಿ, ಭುವನೇಶ್ವರಿ, ಕಿತ್ತೂರು ರಾಣಿಚೆನ್ನಮ್ಮ, ರಾವಣ, ರಾಮ, ಆಂಜನೇಯನ ವೇಷಧಾರಿಗಳು ನೋಡುಗರ ಗಮನ ಸೆಳೆದರು. 

ಆಕರ್ಷಕ ಸ್ತಬ್ಧಚಿತ್ರ: ಮೆರವಣಿಗೆಯಲ್ಲಿ 10ಕ್ಕೂ ಹೆಚ್ಚು ಸ್ತಬ್ಧಚಿತ್ರಗಳು ನಾಡಿನ ಜೀವಂತಿಕೆಯನ್ನು ಬಿಂಬಿಸಿದವು. ಅಲ್ಲಿ ಮಲೆ ಮಹದೇಶ್ವರ, ನಾಲ್ವಡಿ ಕೃಷ್ಣರಾಜ ಒಡೆಯರ್‌ ದರ್ಶನ ಕೊಟ್ಟರು. ಕರ್ನಾಟಕ ವಚನ ಪರಂಪರೆ, ಕರ್ನಾಟಕ ಶಿಲ್ಪ ಕಲೆ ವೈಭವ, ದಾಸ ಪರಂಪರೆಯ ದಿಗªರ್ಶನ ಅಲ್ಲಿತ್ತು. ಇದರೊಂದಿಗೆ ಸಮ್ಮೇಳನದ ಪ್ರಚಾರರಥ ಮೆರವಣಿಗೆಯಲ್ಲಿ ರಂಗುತುಂಬಿತ್ತು. ಕಲಾ ತಂಡಗಳ ಹಾಗೂ ಸ್ತಬ್ಧಚಿತ್ರಗಳ ಆಕರ್ಷಣೆಗೆ ಮನಸೋತ ಕನ್ನಡಾಭಿಮಾನಿಗಳು ರಸ್ತೆಯುದ್ದಕ್ಕೂ ಫೋಟೋ ಕ್ಲಿಕ್ಕಿಸಿಕೊಂಡು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು. 

ಐತಿಹಾಸಿಕ ಅಂಬಾವಿಲಾಸ ಅರಮನೆಯ ಬಲರಾಮ ದ್ವಾರದಿಂದ ಹೊರಟ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಜಿಪಂ ಅಧ್ಯಕ್ಷೆ ನಯೀಮಾ ಸುಲ್ತಾನ ಚಾಲನೆ ನೀಡಿದರು. ಇದಕ್ಕೂ ಮುನ್ನ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಸಿ. ಮಹದೇವಪ್ಪ, ಮೇಯರ್‌ ಎಂ.ಜೆ. ರವಿಕುಮಾರ್‌, ಡಾ.ಮನು ಬಳಿಗಾರ್‌ ಮತ್ತಿತರರು ಅರಮನೆ ಆವರಣದಲ್ಲಿರುವ ಭುವನೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಬೆಳಗ್ಗೆ 9.15ಕ್ಕೆ ಆರಂಭವಾದ ಮೆರವಣಿಗೆ ಸತತ 3 ಗಂಟೆಗಳ ಕಾಲ ಸಾಗಿತು. ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ
ಕಲಾತಂಡಗಳು, ವಿದ್ಯಾರ್ಥಿಗಳು ಹಾಗೂ ಕನ್ನಡಾಭಿಮಾನಿಗಳು ಅದ್ಧೂರಿ ಮೆರವಣಿಗೆಯಲ್ಲಿ ಹೆಜ್ಜೆಹಾಕಿದರು. ಪೊಲೀಸ್‌ ಬ್ಯಾಂಡ್‌ ಹಿಮ್ಮೇಳದಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಸಾಗಿತು.

ಕೋಟೆ ಆಂಜನೇಯಸ್ವಾಮಿ ದೇವಾಲಯದ ಆವರಣದಿಂದ ಹೊರಟ ಮೆರವಣಿಗೆ ದೊಡ್ಡ ಗಡಿಯಾರ ವೃತ್ತ, ಗಾಂಧಿಚೌಕ, ಪ್ರಭಾ ಟಾಕೀಸ್‌ ವೃತ್ತ, ಸಯ್ನಾಜಿರಾವ್‌ ರಸ್ತೆ, ಕೆ.ಆರ್‌.ವೃತ್ತ, ರಾಮಸ್ವಾಮಿ ವೃತ್ತದ ಮೂಲಕ ಮಹಾರಾಜ ಕಾಲೇಜು ಮೈದಾನ ತಲುಪಿತು. 5 ಕಿ.ಮೀ. ಉದ್ದದ ಮೆರವಣಿಗೆಯಲ್ಲಿ ಪ್ರತಿ 3 ಕಿ.ಮೀ. ಉದ್ದದಲ್ಲಿ ಒಂದೊಂದು ಕಲಾತಂಡಗಳು, ಸಂಪ್ರಾದಾಯಿಕ ಉಡುಗೆಯಲ್ಲಿ ಕಂಗೊಳಿಸುತ್ತಿದ್ದ 9 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕನ್ನಡ ಧ್ವಜ ಹಾರಿಸುತ್ತ ಕನ್ನಡ ಡಿಂಡಿಮ ಬಾರಿಸಿದರು.

Advertisement

ಮನಸೋತ ಫ್ರಾನ್ಸ್‌ ಪ್ರಜೆಗಳು
ನಗರದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಹೆಜ್ಜೆಹಾಕಿದ ಫ್ರಾನ್ಸ್‌ ಪ್ರಜೆಗಳು ಕಲಾತಂಡಗಳ ಆಕರ್ಷಣೆಗೆ ಮನಸೋತರು. 3 ದಿನಗಳ ಪ್ರವಾಸಕ್ಕೆಂದು ಮೈಸೂರಿಗೆ ಬಂದಿರುವ ಕರಮ್‌ ಹಾಗೂ ಪುಲೀನ್‌ ದಂಪತಿ, ತಾವು ಮೆರವಣಿಗೆಯಲ್ಲಿ ಸಾಗುತ್ತ ಅದರ ಸವಿಯನ್ನು
ಆಸ್ವಾದಿಸಿದ್ದೇವೆ ಎಂದು ಸಂತಸ ಹಂಚಿಕೊಂಡರು.

ಹಿರಿಯಜ್ಜನ ಕನ್ನಡ ಪ್ರೇಮ
ಮೆರವಣಿಗೆಯಲ್ಲಿ ಅನೇಕ ಕನ್ನಡ ಪ್ರೇಮಿಗಳು ನಾಡಿನ ವಿವಿಧ ಭಾಗಗಳಿಂದ ಬಂದಿದ್ದು ವಿಶೇಷ. ಇವರಲ್ಲಿ ದೂರದ ಬೆಳಗಾವಿಯ ನೆಡಬಾಳ ಗ್ರಾಮದಿಂದ ಆಗಮಿಸಿದ್ದ 72ರ ಹರೆಯದ ಎಂ.ಡಿ. ಅಲಾಸೆ ಹಳದಿ ಅಂಗಿ, ಕೆಂಪು ಪೈಜಾಮ ಧರಿಸಿ, ಕೈಯಲ್ಲಿ ಕನ್ನಡ ಬೃಹತ್‌ ಧ್ವಜವನ್ನು ಹಿಡಿದು ಹೆಜ್ಜೆಹಾಕಿ, ಮೆರವಣಿಗೆಯಲ್ಲಿ ಭಾಗವಹಿಸಿದ್ದ ಯುವಜನರು ನಾಚುವಂತೆ ಮಾಡಿದರು. ಗ್ರಂಥಪಾಲಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಎಂ.ಡಿ.ಅಲಾಸೆ ಅವರಿಗೆ ಇದು 53ನೇ ಸಾಹಿತ್ಯ ಸಮ್ಮೇಳನ. ಮೈಸೂರು ನಗರ, ಸಂಸ್ಕೃತಿ-ಪರಂಪರೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವ ಕನ್ನಡದ ಹಿರಿಯಜ್ಜ, ಮುಂದಿನ ಜನ್ಮದಲ್ಲಿ ಮೈಸೂರಿನಲ್ಲೇ ಹುಟ್ಟಬೇಕೆಂಬ ಇಂಗಿತ ವ್ಯಕ್ತಪಡಿಸಿದರು.

ಗಮನ ಸೆಳೆದವರು: ಮೆರವಣಿಗೆಯಲ್ಲಿ ಮೈಸೂರಿನ ವಿದ್ಯಾರಣ್ಯಪುರಂ ಬಾಲಕ ಭುವಂತ್‌ ತನ್ನ ಪುಟಾಣಿ ಸೈಕಲ್‌ಗೆ ಕನ್ನಡ ಧ್ವಜ ಕಟ್ಟಿಕೊಂಡು ಮೆರವಣಿಗೆಯಲ್ಲಿ ಪಾಲ್ಗೊಂಡು ಗಮನಸೆಳೆದ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, 83ನೇ ಕನ್ನಡ ಸಮ್ಮೇಳನದ ಪೋಸ್ಟರ್‌ ಅಂಟಿಸಿಕೊಂಡು ಮಿಂಚಿದ. ಇವರೊಂದಿಗೆ ರಾಯಚೂರಿನ ವಿಶ್ವನಾಥ್‌ ಹಾಗೂ ಅವರ ಪುತ್ರ ನಿಖೀಲ್‌ಗೌಡ, ಕನ್ನಡ ನಾಡು-ನುಡಿ, ಇತಿಹಾಸವನ್ನು ಬಿಂಬಿಸುವ ಘೋಷಣಾ ಫ‌ಲಕವನ್ನು ಹೆಗಲಿಗೆ ಕಟ್ಟಿಕೊಂಡು ಮೆರವಣಿಗೆಯಲ್ಲಿ ಸಾಗಿದರು. ಅಂತೆಯೇ
ವಿಜಯಪುರದಿಂದ ಬಂದಿದ್ದ 48 ವರ್ಷದ ಪ್ರಾಥಮಿಕ ಶಾಲಾ ಶಿಕ್ಷಕ ಶಿವಕುಮಾರ್‌, ಉಸಿರು ನಿಂತರೆ ಸಾವು, ಸೈನಿಕರಿದ್ದರೆ ನಾವು, ಕನ್ನಡಕ್ಕೆ ಕೈಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಎಂಬ ಫ‌ಲಕ ಕಟ್ಟಿಕೊಂಡು ಹೆಜ್ಜೆಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next