Advertisement

ನಗರಕ್ಕಿಲ್ಲ ಜನಾಡಳಿತ: ಬಗೆಹರಿಯದ ಮೀಸಲು- ಚುನಾವಣೆಗೆ ಪಡಿಪಾಟಲು

12:38 AM Jul 09, 2023 | Team Udayavani |

ಬೆಂಗಳೂರು: ಮೀಸಲಾತಿ ಗೊಂದಲ ಬಗೆಹರಿಯದ ಕಾರಣ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ನಡೆಯದೆ ರಾಜ್ಯದ 100ಕ್ಕೂ ಅಧಿಕ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಜನಪ್ರತಿನಿಧಿಗಳ ಆಡಳಿತ ಇಲ್ಲದಂತಾಗಿದೆ.

Advertisement

ನಗರ ಸ್ಥಳೀಯ ಸಂಸ್ಥೆಗಳಿಗೆ 9ನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ನಿಗದಿ ಬಳಿಕ ಉಂಟಾದ ಮೀಸಲಾತಿ ಗೊಂದಲ, ಈ ನಡುವೆ ಕೆಲವು ನಗರ ಸ್ಥಳೀಯ ಸಂಸ್ಥೆಗಳು ಮೇಲ್ದರ್ಜೆ ಗೇರಿದ ಪರಿಣಾಮ ಹಾಗೂ ಕೆಲವು ನಗರ ಸ್ಥಳೀಯ ಸಂಸ್ಥೆಗಳಿಗೆ 10ನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸಬೇಕಾಗಿರುವುದಿಂದ 111 ನಗರ ಸ್ಥಳೀಯ ಸಂಸ್ಥೆಗಳು ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ನಡೆದಿಲ್ಲ.

ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಯದ ಕಾರಣಕ್ಕೆ ರಾಜ್ಯದ 30 ನಗರ ಸಭೆ, 51 ಪುರಸಭೆ ಹಾಗೂ 27 ಪಟ್ಟಣ ಪಂಚಾಯತ್‌ಗಳಿಗೆ ಈ ವರ್ಷದ ಎಪ್ರಿಲ್‌-ಮೇ ತಿಂಗಳಿನಿಂದ ಆಡಳಿತಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಆಡಳಿತ ಮತ್ತು ಅಭಿವೃದ್ಧಿ ವಿಚಾರ ನನೆಗುದಿಗೆ ಬಿದ್ದಿದೆ. ಜನಪ್ರತಿನಿಧಿಗಳ ಆಡಳಿತ ವ್ಯವಸ್ಥೆ ಇಲ್ಲದ ಕಾರಣ ಜನಸಾಮಾನ್ಯರು ತೊಂದರೆಗಳನ್ನು ಎದುರಿಸುವಂತಾಗಿದೆ. ಅನೇಕ ಕಡೆ ಒಬ್ಬ ಅಧಿಕಾರಿಗೆ ಒಂದಕ್ಕಿಂತ ಹೆಚ್ಚು ನಗರ ಸ್ಥಳೀಯ ಸಂಸ್ಥೆಗಳ ಹೊಣೆಗಾರಿಕೆ ನೀಡಿರುವುದರಿಂದ ಜನಸಾಮಾನ್ಯರಿಗೆ ಅಧಿಕಾರಿಗಳು ದುರ್ಲಭರಾಗಿದ್ದಾರೆ.

ಅಧ್ಯಕ್ಷ-ಉಪಾಧ್ಯಕ್ಷ ಅವಧಿಗೆ ಮುಗಿದ 276 ನಗರ ಸ್ಥಳೀಯ ಸಂಸ್ಥೆಗಳಿಗೆ 9ನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿಯನ್ನು 2020ರ ಅಕ್ಟೋಬರ್‌ನಲ್ಲಿ ನಿಗದಿಪಡಿಸಲಾಗಿತ್ತು. ಇದರ ಬಳಿಕ 25 ನಗರ ಸ್ಥಳೀಯ ಸಂಸ್ಥೆಗಳನ್ನು ಮೇಲ್ದರ್ಜೆಗೇರಿಸಲಾಯಿತು. ಈ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯದೆ ಇದ್ದುದರಿಂದ ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ನಿಗದಿಪಡಿಸಿಲ್ಲ. ಈ ಮಧ್ಯೆ 9ನೇ ಅವಧಿಗೆ ನಿಗದಿಪಡಿಸಿದ ಮೀಸಲಾತಿಯ ಅವಧಿ ಮುಗಿದಿದ್ದು, ಈಗ 10ನೇ ಅವಧಿಗೆ ಮೀಸಲಾತಿ ನಿಗದಿಪಡಿಸಬೇಕಾಗಿದೆ. ಮೀಸಲಾತಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣ ಇರುವುದರಿಂದ ಮೀಸಲಾತಿ ನಿಗದಿಪಡಿಸಲು ಅವಕಾಶವಿಲ್ಲದಂತಾಗಿದೆ.

ಒಬಿಸಿ ಮೀಸಲಾತಿ ವಿಚಾರ ಅಡ್ಡಿ
ಹಿಂದುಳಿದ ವರ್ಗಗಗಳಿಗೆ ರಾಜಕೀಯ ಪ್ರಾತಿನಿಧ್ಯ ದೊಕಿಸುವ ಸಂಬಂಧ ಹಿಮಾಚಲ ಪ್ರದೇಶ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪಿನ ಹಿನ್ನೆಲೆಯಲ್ಲಿ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆ ಗಳಲ್ಲಿ ಹಿಂದುಳಿದ ವರ್ಗಗಳಿಗೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಲು ಅಧ್ಯಯನ ನಡೆಸುವುದಕ್ಕಾಗಿ ರಾಜ್ಯ ಸರಕಾರವು ನ್ಯಾ| ಭಕ್ತವತ್ಸಲ ಅಧ್ಯಕ್ಷತೆಯ ಆಯೋಗ ನೇಮಕ ಮಾಡಿತ್ತು. ಈ ಆಯೋಗದ ಶಿಫಾರಸುಗಳನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ.

Advertisement

ಈ ಅರ್ಜಿಯ ವಿಚಾರಣೆ ವೇಳೆ ರಾಜ್ಯದಲ್ಲಿರುವ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಿಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ 1ರಿಂದ 10ನೇ ಅವಧಿಗೆ ಮೀಸಲಾತಿಯನ್ನು ಎನ್‌ಐಸಿ ಸಾಫ್ಟ್ ವೇರ್‌ ಮೂಲಕ ಮೂಲಕ ನಿಗದಿಪಡಿಸುವಂತೆ ನಿರ್ದೇಶನ ನೀಡಿದೆ. ಪ್ರಕರಣದ ನ್ಯಾಯಾಲಯದಲ್ಲಿರುವುದರಿಂದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಆಡಳಿತದ ಹಿತದೃಷ್ಟಿಯಿಂದ ಆಡಳಿತಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ರಾಜ್ಯ ಸರಕಾರ ಹೇಳಿದೆ.

ಎಲ್ಲೆಲ್ಲಿ ಆಡಳಿತಾಧಿಕಾರಿಗಳು?

ನಗರಸಭೆ
ಉಡುಪಿ, ಕಾರವಾರ, ಶಿರಸಿ, ದಾಂಡೇಲಿ, ಬಸವಕಲ್ಯಾಣ, ಹೊಸಕೋಟೆ, ಶಹಬಾದ, ಸಿರಗುಪ್ಪ, ಚಾಮರಾಜನಗರ, ಸಿಂಧನೂರು, ಬಾಗಲಕೋಟೆ, ಕನಕಪುರ, ಮಂಡ್ಯ,ಕೊಳ್ಳೆಗಾಲ, ಚಿಕ್ಕಬಳ್ಳಾಪುರ, ಯಾದಗಿರಿ, ಸುರಪುರ, ಚಿಂತಾಮಣಿ, ಗೌರಿಬಿದನೂರು, ಚಿತ್ರದುರ್ಗ, ತಿಪಟೂರು, ಶಹಾಪುರ, ಇಳಕಲ್‌, ಗಂಗಾವತಿ, ಮುಧೋಳ, ಜಮಖಂಡಿ, ಚಳ್ಳಕೆರೆ, ಹಿರಿಯೂರು, ರಬಕವಿ-ಬನಹಟ್ಟಿ, ರಾಯಚೂರು, ಬಸವಕಲ್ಯಾಣ.

ಪುರಸಭೆ
ಕುಶಾಲನಗರ, ಹಳಿಯಾಳ, ಕುಮಟಾ, ಭಟ್ಕಳ, ಗುಂಡ್ಲುಪೇಟೆ, ರೋಣ, ಮಳವಳ್ಳಿ, ಪಾಂಡವಪುರ, ಮದ್ದೂರು, ಸಂಡೂರು, ನವಲಗುಂದ, ವಿರಾಜಪೇಟೆ, ಲಕ್ಷ್ಮೇಶ್ವರ, ಮುಂಡರಗಿ, ನರಗುಂದ, ಕಂಪ್ಲಿ, ಶ್ರೀರಂಗಪಟ್ಟಣ, ನಾಗಮಂಗಲ, ಗಜೇಂದ್ರಗಡ, ಜೇವರ್ಗಿ, ಆಳಂದ, ಸೇಡಂ, ಅಫ‌ಜಲಪುರ, ಚಿತ್ತಾಪೂರ, ಶಿಕಾರಿಪುರ, ಶಿರಾಳಕೊಪ್ಪ, ಹಳ್ಳಿಖೇಡ, ಕುಣಿಗಲ್‌, ದೇವದುರ್ಗ, ಮುದಗಲ್‌, ಬೀರೂರು, ಕುಷ್ಟಗಿ, ಮುದ್ದೇಬಿಹಾಳ, ಇಂಡಿ, ಲಿಂಗಸುಗೂರು, ಹುನಗುಂದ, ಅಂಕೋಲಾ, ಗುರುಮಿಠಕಲ್‌, ಬಸವನಬಾಗೇವಾಡಿ, ಸಿಂದಗಿ, ಬಾಗೇಪಲ್ಲಿ, ಪುರಸಭೆ, ತೆರದಾಳ, ಮಹಾಲಿಂಗಾಪುರ, ಗುಳೇದಗುಡ್ಡ, ಹೊಸದುರ್ಗ, ಮಾನ್ವಿ, ಬಾದಾಮಿ, ತಾಳಿಕೋಟೆ, ಸೇಡಂ, ಚಿತ್ತಾಪುರ, ದೇವನಹಳ್ಳಿ, ಚಿಟಗುಪ್ಪ, ಆನೇಕಲ್‌, ಹಳ್ಳಿಖೇಡ-ಬಿ.

ಪಟ್ಟಣ ಪಂಚಾಯತ್‌
ಕೊಪ್ಪ, ಶೃಂಗೇರಿ, ಯಳಂದೂರು, ಮುಂಡಗೋಡ,ಮೂಡಿಗೆರೆ, ಸಿದ್ದಾಪುರ, ಹೊಸನಗರ, ಜೋಗ-ಕಾರ್ಗಲ್‌, ಮೊಳಕಾಲ್ಮೂರು, ಯಲ್ಲಾಪುರ, ಹೊನ್ನಾವರ, ಕುಡಿತಿನಿ, ಮುಳಗುಂದ, ಅಳ್ನಾವರ, ಬೆಳ್ಳೂರು, ನರೇಗಲ್‌, ಕುಂದಗೋಳ, ಕಲಘಟಗಿ, ತೆಕ್ಕಲಕೋಟೆ, ಶಿರಹಟ್ಟಿ, ಜಗಳೂರು, ಔರಾದ್‌-ಬಿ, ಕೆರೂರು, ಯಲಬುರ್ಗಾ, ಬೀಳಗಿ, ಹನೂರು, ನರಸಿಂಹರಾಜಪುರ, ಹಟ್ಟಿ.

ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next