Advertisement

ಶ್ರೀಕಂಠನ ಮಹಾರಥೋತ್ಸವಕ್ಕೆ ರಥಗಳು ಸಜ್ಜು

07:50 AM Mar 13, 2019 | Team Udayavani |

ನಂಜನಗೂಡು: ರಾಜ್ಯದಲ್ಲೇ ಅತಿ ದೊಡ್ಡ ದೇಗುಲ ಎಂಬ ಖ್ಯಾತಿ ಪಡೆದಿರುವ ಶ್ರೀಕಂಠೇಶ್ವರನ ಪಂಚ ಮಹಾರಥೋತ್ಸವಕ್ಕೆ ಒಂದು ವಾರ ಮಾತ್ರ ಬಾಕಿಯಿದ್ದು, ಇದಕ್ಕಾಗಿ ದೇಗುಲದಲ್ಲಿ ಸಿದ್ಧತೆಗಳು ಭರದಿಂದ ಸಾಗುತ್ತಿವೆ.

Advertisement

ಪಂಚ ರಥೋತ್ಸವದ ಪ್ರಮುಖ ಕೇಂದ್ರ ಬಿಂದುವಾದ ಐದು ರಥಗಳು ಶಿಥಿಲಗೊಂಡಿದ್ದು, ಈ ಪೈಕಿ ಮೂರು ರಥಗಳು ಚಲಿಸಲು ಸಾಧ್ಯವಿಲ್ಲದಷ್ಟು ದುಸ್ಥಿತಿಯಲ್ಲಿವೆ. ಈ ಹಿನ್ನೆಲೆಯಲ್ಲಿ ಈ ಮೂರು ರಥಗಳನ್ನು ಜಾತ್ರೆ ಅಂಗವಾಗಿ ತಾತ್ಕಾಲಿಕವಾಗಿ ದುರಸ್ತಿಪಡಿಸಲಾಗುತ್ತಿದೆ. ರಥಗಳ ದುರಸ್ತಿ ಕಾರ್ಯ ಅತ್ಯಂತ ಭರದಿಂದ ಸಾಗಿದೆ. 

ರಾಜ್ಯದಲ್ಲೇ ಅತಿ ಹೆಚ್ಚು ತೂಕದ‌ (110 ಟನ್‌) ತೇರು ಎಂಬ ಹೆಗ್ಗಳಿಕೆ ಪಡೆದಿರುವ ನಂಜುಡೇಶ್ವರನ ಗೌತಮ ರಥವೂ ಸೇರಿದಂತೆ ಪಾರ್ವತಿ ಹಾಗೂ ಚಂಡಿಕೇಶ್ವರನ ರಥಗಳ ದುರಸ್ತಿ ಕಾರ್ಯವನ್ನು ನುರಿತ ಕರಕುಶಲ ಕರ್ಮಿಗಳು ಆರಂಭಿಸಿದ್ದಾರೆ. ಪುರಾತನವಾದ ರಥಗಳು ಸಂಪೂರ್ಣವಾಗಿ ಶಿಥಿಲಗೊಂಡಿದ್ದು,  ಈ ಬಾರಿ ರಥದ ಚಲನೆ ಸುಗಮವಾಗಬಹುದಾದಷ್ಟು ಮಾತ್ರ ದುರಸ್ತಿ ನಡೆಸಲಾಗುತ್ತಿದೆ. ರಥೋತ್ಸವ ಮುಗಿದ ಬಳಿಕ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳಲಿವೆ.

ನುರಿತ ಶಿಲ್ಪಿಗಳು: ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮಂಕಿ ಸಮೀಪದ ದೇವರಗದ್ದೆಯ ಶಿಲ್ಪಿಗಳು ರಥಗಳ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ. ಈ ಮೂರು ರಥಗಳ ದುರಸ್ತಿಯ ಹೊಣೆ ಹೊತ್ತಿದ್ದಾರೆ. ಗಂಗಾಧರ್‌ ಗಜಾನನ ಆಚಾರ್‌ ಅವರು ತಮ್ಮ ಇಬ್ಬರು ಸಹೋದರರಾದ ವೆಂಕಟೇಶ, ರವಿ ಸೇರಿದಂತೆ 10 ಮಂದಿ ನುರಿತ ಕುಶಲಕರ್ಮಿಗಳು ರಥಗಳ ಕೆತ್ತನೆಯಲ್ಲಿ ತೊಡಗಿದ್ದಾರೆ.

ಒಟ್ಟು 5 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದ್ದು, ಈಗ ಮಾಡುತ್ತಿರುವುದು ತಾತ್ಕಾಲಿಕ ದುರಸ್ತಿ ಕೆಲಸವಾಗಿದೆ. ದುರಸ್ತಿ ಮಾಡಿದರೂ ಸಂಪೂರ್ಣ ಸುಸ್ಥಿತಿಯಲ್ಲಿ ಇರುವುದಿಲ್ಲ ಎನ್ನುತ್ತಾರೆ ಶಿಲ್ಪಿ ಗಂಗಾಧರ್‌. ತಮ್ಮ ಕುಟುಂಬವೇ ರಥ ನಿರ್ಮಾಣದ ಕೈಂಕರ್ಯದಲ್ಲಿ ನಿರತವಾಗಿದೆ. ತೇಗ ಹಾಗೂ ಹೊನ್ನೆ ಮರಗಳನ್ನು ಮಾತ್ರ ಬಳಸಲಾಗುತ್ತಿದೆ.

Advertisement

ಇತ್ತೀಚೆಗೆ  ತಿಪಟೂರಿನ ರಂಗಾಪುರ ಮಠದಲ್ಲಿ ಸುಮಾರು 5 ಕೋಟಿ ರೂ. ವೆಚ್ಚದ ಬೆಳ್ಳಿ ಹಾಗೂ ಮರಗಳ ಐದು ರಥ ಹಾಗೂ ಕಾರ್ಕಾಳದ ದೇವಾಲಯಕ್ಕೆ ಪುಷ್ಪರಥ ನಿರ್ಮಿಸಿದ ಹೆಗ್ಗಳಿಕೆ ತಮ್ಮ  ಕುಟುಂಬದ್ದಾಗಿದೆ ಎಂದು ಗಂಗಾಧರ್‌ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ಹೊರರಥಕ್ಕೆ 2 ವರ್ಷ ಸಮಯ: ಈ ರಥದ ಬದಲಾಗಿ ಇದೇ ರೀತಿಯ ವಾಸ್ತು ವಿನ್ಯಾಸದ ಶಿಲ್ಪಕಲೆಯುಳ್ಳ ಇದರ ತದ್ರೂಪದ ನೂತನ ರಥ ನಿರ್ಮಿಸಬೇಕಿದೆ. ಹೊಸ ರಥ ನಿರ್ಮಿಸಲು ಎರಡು ವರ್ಷ ಸಮಯ ಬೇಕಾಗುತ್ತದೆ.

ರಥಕ್ಕೆ ಬೇಕಿದೆ ನೆರಳು: ಪ್ರತಿವರ್ಷ ಪಂಚ ಮಹಾರಥೋತ್ಸವದ ವೈಭವಕ್ಕೆ ಸಾಕ್ಷಿಯಾಗುವ ಈ ಐದು ರಥಗಳು ಸೂಕ್ತ ನೆರಳು ವ್ಯವಸ್ಥೆಯಿಲ್ಲದೇ ಮಳೆ, ಗಾಳಿ, ಬಿಸಿಲುಗೆ ಸಿಲುಕಿ ಸಂಪೂರ್ಣವಾಗಿ ಶಿಥಿಲಗೊಂಡಿವೆ. ದುರಸ್ತಿ ಕಾರ್ಯ ಮುಗಿದ ಬಳಿಕವಾದರೂ ರಥಗಳಿಗೆ ಸಮರ್ಪಕ ನೆರಳಿನ ವ್ಯವಸ್ಥೆ ಕಲ್ಪಿಸಿ ದೀರ್ಘ‌ಕಾಲ ಬಾಳಿಕೆ ಬರುವಂತೆ ಮಾಡಬೇಕು ಎಂದು ಭಕ್ತರು ಆಗ್ರಹಿಸಿದ್ದಾರೆ.

ಮಾ.19ಕ್ಕೆ ಪಂಚ ಮಹಾರಥೋತ್ಸವ: ಮಾ.19ರಂದು ಮಂಗಳವಾರ ಬೆಳಗ್ಗೆ 5.20 ರಿಂದ 6.20ರೊಳಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಪಂಚ ಮಹಾ ರಥೋತ್ಸವ ಜರುಗಲಿದ್ದು, ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಇದಕ್ಕಾಗಿ ಮೂಲಭೂತ ಸೌಲಭ್ಯ ಕಲ್ಪಿಸಲು ದೇಗುಲದ ಆಡಳಿತ ಮಂಡಳಿ ಸಜ್ಜಾಗುತ್ತಿದೆ. ದೇಗುಲದ ಪ್ರಮುಖ ಸ್ಥಳಗಳಲ್ಲಿ ಹಾಗೂ ಕಪಿಲಾ ನದಿ ದಡದಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ. ಭಕ್ತಾದಿಗಳಿಗೆ ಬೃಹತ್‌ ಅನ್ನ ಸಂತರ್ಪಣೆ, ಪಾನಕ ನೀಡಲು ವಿವಿಧ ಸಂಘ ಸಂಸ್ಥೆಗಳು ಸಕಲ ಸಿದ್ಧತೆ ಮಾಡಿಕೊಂಡಿವೆ. 

* ಶ್ರೀಧರ್‌ ಆರ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next