Advertisement

ಎಸೆಸೆಲ್ಸಿ , ಪಿಯುಸಿ ಇಂಗ್ಲಿಷ್‌ ಪರೀಕ್ಷೆ ನಡೆಸುವುದೇ ಸವಾಲು

12:48 AM Apr 27, 2020 | Sriram |

ಬೆಂಗಳೂರು: ಕೋವಿಡ್- 19 ಮಹಾಮಾರಿಯ ಎದುರು ಎಸೆಸೆಲ್ಸಿ ಮತ್ತು ಪಿಯುಸಿ ಇಂಗ್ಲಿಷ್‌ ಪರೀಕ್ಷೆ ಹೇಗೆ ನಡೆಸಬೇಕು ಎಂಬುದೇ ಇದೀಗ ಸರಕಾರಕ್ಕೆ ಸವಾಲಾಗಿ ಪರಿಣಮಿಸಿದೆ.

Advertisement

ದ್ವಿತೀಯ ಪಿಯುಸಿ ಇಂಗ್ಲಿಷ್‌ ಪರೀಕ್ಷೆ ಹೊತುಪಡಿಸಿ ಬೇರೆಲ್ಲ ಪರೀಕ್ಷೆ ಪೂರ್ಣಗೊಂಡಿದೆ. ಆದರೆ ಮೌಲ್ಯಮಾಪನ ಕಾರ್ಯ ನಡೆದಿಲ್ಲ. ಇಂಗ್ಲಿಷ್‌ ಪರೀಕ್ಷೆ ನಡೆಸಿಯೇ ಮೌಲ್ಯಮಾಪನ ಆರಂಭಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ. ಮೌಲ್ಯಮಾಪನ ಕಾರ್ಯವನ್ನು ಇನ್ನಷ್ಟು ವಿಕೇಂದ್ರೀಕರಣಗೊಳಿಸುವ ವ್ಯವಸ್ಥೆಯೂ ಆರಂಭವಾಗಿದೆ.

ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕಿರುವುದರಿಂದ ಮೌಲ್ಯಮಾಪನ ವಿಕೇಂದ್ರೀಕರಣ ಗೊಳಿಸುವ ಬಗ್ಗೆಯೂ ಅಧಿಕಾರಿಗಳು ಈಗಾಗಲೇ ಚರ್ಚೆ ನಡೆಸಿದ್ದಾರೆ. ಆದರೆ ಇಂಗ್ಲಿಷ್‌ ಪರೀಕ್ಷೆ ಯಾವಾಗ ನಡೆಸಬೇಕು ಎಂಬುದೇ ಪಿಯು ಇಲಾಖೆಯ ಮುಂದಿರುವ ದೊಡ್ಡ ಸವಾಲಾಗಿದೆ. ಪರಿಸ್ಥಿತಿ ತಿಳಿಯಾಗದೇ ಯಾವುದನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂದು ಪಿಯು ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಎಸೆಸೆಲ್ಸಿ ಪರೀಕ್ಷೆ ನಡೆಸುವ ಬಗ್ಗೆ ಇಲಾಖೆಯ ಅಧಿಕಾರಿಗಳು ಮತ್ತು ಸಚಿವರು ಈಗಾಗಲೇ ಅನೇಕ ಬಾರಿ ಚರ್ಚೆ ನಡೆಸಿದ್ದಾರೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಇದಕ್ಕೆ ಬೇಕಾದ ಸಿದ್ಧತೆಯನ್ನು ಮಾಡಿಕೊಂಡಿದೆ. ಆದರೆ ಕೋವಿಡ್- 19 ಮಹಾಮಾರಿ ಪರೀಕ್ಷೆ ನಡೆಸಲು ಅವಕಾಶ ಮಾಡಿಕೊಟ್ಟಿಲ್ಲ. ಹೀಗಾಗಿ ಮೇ 3ರ ಅನಂತರ ವೇಳಾಪಟ್ಟಿ ತಯಾರಿಸುವ ಬಗ್ಗೆಯೂ ಮಂಡಳಿ ಮತ್ತು ಇಲಾಖೆ ನಿರ್ಧಾರ ಮಾಡಿದೆ. ಅಲ್ಲದೆ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಆಕಾಶವಾಣಿ ಮತ್ತು ದೂರದರ್ಶನದ ಮೂಲಕ ಪುನರ್‌ಮನನ ಆರಂಭಿಸಿದೆ.

ಕೋವಿಡ್- 19 ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಹೋದರೆ ಮೇ 3ರ ಅನಂತರವೂ ಎಸೆಸೆಲ್ಸಿ ಪರೀಕ್ಷೆ ನಡೆಸುವುದು ದೊಡ್ಡ ಸವಾಲಾಗಿಯೇ ಪರಿಣಮಿಸಬಹುದು ಎಂದು ಅಂದಾಜಿಸಲಾಗಿದೆ.

Advertisement

ಕೇಂದ್ರೀಯ ಮಂಡಳಿಗಳತ್ತ ಚಿತ್ತ
ಐಸಿಎಸ್‌ಇ, ಸಿಬಿಎಸ್‌ಇ ಸಹಿತವಾಗಿ ವಿವಿಧ ಬೋರ್ಡ್‌ಗಳು ಕೂಡ 10 ಮತ್ತು 12ನೇ ತರಗತಿಯ ಪರೀಕ್ಷೆಗಳನ್ನು ಮುಂದೂಡಿವೆ. ಈ ಬೋರ್ಡ್‌ಗಳು ಕೂಡ ಪರೀಕ್ಷೆಗೆ ಸಂಬಂಧಿಸಿದಂತೆ ಯಾವ ನಿರ್ಧಾರ ತೆಗೆದುಕೊಳ್ಳಲಿವೆ ಎಂಬುದನ್ನು ವಿದ್ಯಾರ್ಥಿಗಳು ಮತ್ತವರ ಹೆತ್ತವರು ಕಾಯುತ್ತಿದ್ದಾರೆ.

ಸಾಮಾಜಿಕ ಅಂತರ ಮುಖ್ಯ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಎಸೆಸೆಲ್ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಇದರ ಬಗ್ಗೆ ಸಚಿವರು ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ಲಾಕ್‌ಡೌನ್‌ ತೆರವಾದ ಬಳಿಕ ಪರೀಕ್ಷೆ ನಡೆಸುವಾಗ ಸಾಮಾಜಿಕ ಅಂತರ ಅತೀ ಆವಶ್ಯಕವಾಗಿರುತ್ತದೆ. ಹೀಗಾಗಿ ಇನ್ನುಷ್ಟು ಹೆಚ್ಚು ಪರೀಕ್ಷಾ ಕೇಂದ್ರಗಳ ವ್ಯವಸ್ಥೆ ಮಾಡಬೇಕಾಗುತ್ತದೆ. ಈ ಬಗ್ಗೆಯೂ ಚಿಂತನೆ ನಡೆದಿದೆ ಎಂದು ಮಂಡಳಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಆನ್‌ಲೈನ್‌ ಮೂಲಕ ಕಷ್ಟ
ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳನ್ನು ಆನ್‌ಲೈನ್‌ ಮೂಲಕ ನಡೆಸಬಹುದಾದ ಸೌಲಭ್ಯವೂ ನಮ್ಮಲ್ಲಿಲ್ಲ ಮತ್ತು ಗ್ರಾಮೀಣ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವುದರಿಂದ ಅನುಷ್ಠಾನ ಅತ್ಯಂತ ಕಷ್ಟಸಾಧ್ಯ. ಹೀಗಾಗಿ ಸಾಂಪ್ರದಾಯಿಕ (ಈಗ ಇರುವ ಪದ್ಧತಿ) ವಿಧಾನದಲ್ಲೇ ಪರೀಕ್ಷೆ ನಡೆಸಬೇಕಾಗುತ್ತದೆ ಅಥವಾ ಪರ್ಯಾಯ ಮಾರ್ಗ ಹುಡುಕಬೇಕಾಗುತ್ತದೆ ಎಂದು ಶಿಕ್ಷಣ ತಜ್ಞರೊಬ್ಬರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next