Advertisement

ಕಾರ್ಮಿಕರ ಹಿಡಿದಿಡುವಿಕೆಯೇ ಕೈಗಾರಿಕೆಗೆ ಸವಾಲು

12:06 PM May 07, 2020 | mahesh |

ಕೋವಿಡ್ ಹಾವಳಿ ನಡುವೆಯೇ ಮೈಕೊಡವಿ ಜನ ಮನೆಗಳಿಂದ ಹೊರಬಿದ್ದಿದ್ದಾರೆ. ಬೆನ್ನಲ್ಲೇ ಮುಂದೇನು ಎಂಬ ಪ್ರಶ್ನೆ ಎದುರಾಗಿದೆ. ಕಳೆದ ಒಂದೂವರೆ ತಿಂಗಳಲ್ಲಿ ಈ
ಲಾಕ್‌ಡೌನ್‌ ಕೊಟ್ಟ “ಆರ್ಥಿಕ ಹೊಡೆತ’ದಿಂದ ಚೇತರಿಸಿಕೊಳ್ಳಲು ಹಲವು ತಿಂಗಳುಗಳೇ ಬೇಕಾಗುತ್ತವೆ. ಕೃಷಿ, ಕೈಗಾರಿಕೆ, ಸಾರಿಗೆ ಸೇರಿದಂತೆ ಎಲ್ಲ ಕ್ಷೇತ್ರಗಳ ಮೇಲೆ ಲಾಕ್‌ಡೌನ್‌ನಿಂದಾದ ಪರಿಣಾಮ ಎಂತಹದ್ದು? ಹೊರಬರುವ ಪ್ರಯತ್ನಗಳಾವುವು? ಆ ನಿಟ್ಟಿನಲ್ಲಿ ಸರ್ಕಾರದ ಪಾತ್ರ ಏನು? ಇವುಗಳಿಗೆ ಉತ್ತರ ಹುಡುಕುವ ಪ್ರಯತ್ನದಲ್ಲಿ ಆಯ್ದ ಪ್ರಮುಖ ವಿಷಯಗಳ ಕುರಿತು “ಉದಯವಾಣಿ’ಯ ಸರಣಿ ಪ್ಯಾಕೇಜ್‌…

Advertisement

ಬೆಂಗಳೂರು: ರಾಜ್ಯದಲ್ಲಿ ಭಾರೀ ಮತ್ತು ಮಧ್ಯಮ ಕೈಗಾರಿಕೆಗಳು ಸೇರಿದಂತೆ ವ್ಯಾಪಾರ- ವಾಣಿಜ್ಯೋದ್ಯಮ ವ್ಯವಹಾರ ಶೇ. 50ರಷ್ಟು ಪುನರಾ ರಂಭವಾಗಿದ್ದರೆ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (ಎಂಎಸ್‌ಎಂಇ) ಪೈಕಿ ಶೇ. 25ರಷ್ಟು ಮಾತ್ರ ಕಾರ್ಯಾ ರಂಭವಾಗಿವೆ. ಕಟ್ಟಡ ನಿರ್ಮಾಣ ಹಾಗೂ ಮೂಲ ಸೌಕರ್ಯ ಕಾಮಗಾರಿಗಳು ಇನ್ನಷ್ಟೇ ಚೇತರಿಸಿಕೊಳ್ಳಬೇಕಿದ್ದು, ವಲಸೆ ಕಾರ್ಮಿಕರ ನಿರ್ಗಮನ ಈ ಮೂರೂ ವಲಯಗಳನ್ನು ತೀವ್ರವಾಗಿ ಬಾಧಿಸುತ್ತಿದೆ.

ರಾಜ್ಯದ ಬಹಳಷ್ಟು ಕಡೆ ಸಡಿಲಿಕೆಯಿದ್ದರೂ ಲಾಕ್‌ಡೌನ್‌ ಮೇ 17ರವರೆಗೆ ಮುಂದುವರಿದಿದೆ. ಬೆಂಗಳೂರಿನಿಂದ ವಲಸಿಗರು ರಾಜ್ಯದ ನಾನಾ ಭಾಗ ಹಾಗೂ ಅನ್ಯ ರಾಜ್ಯಗಳಲ್ಲಿನ
ತಮ್ಮ ಊರುಗಳಿಗೆ ಮರಳುತ್ತಿರುವುದು ಕೈಗಾರಿಕೆ ಹಾಗೂ ಮೂಲ ಸೌಕರ್ಯ ವಲಯವನ್ನು ಕಂಗೆಡಿಸಿದೆ. ಮೇ 17ಕ್ಕೆ ಲಾಕ್‌ಡೌನ್‌ ಸಂಪೂರ್ಣ ತೆರವಾದರೂ ಈ ವಲಯಗಳು ಚೇತರಿಸಿಕೊಳ್ಳಲು ಹಲವು ತಿಂಗಳು, ವರ್ಷಗಳೇ ಬೇಕು ಎಂದು ಆಯಾ ವಲಯದ ಪ್ರಮುಖರು  ಹೇಳುತ್ತಿರುವುದು ಆತಂಕಕ್ಕೆ ಕಾರಣ ವಾಗಿದೆ. ಈ ಮೂರು ಪ್ರಮುಖ ವಲಯಗಳಲ್ಲಿ ಸದ್ಯದ ಚಿತ್ರಣ ಕುರಿತ ವಿವರ ಹೀಗಿದೆ.

ಎಂಎಸ್‌ಎಂಇ ವಲಯ: ಲಾಕ್‌ಡೌನ್‌ ಸಡಿಲಿಕೆ ಹಿನ್ನೆಲೆಯಲ್ಲಿ ಸದ್ಯ ಶೇ.20ರಿಂದ- ಶೇ. 25ರಷ್ಟು ಎಂಎಸ್‌ಎಂಇ ಕೈಗಾರಿಕೆಗಳು ಕಾರ್ಯಾರಂಭ ವಾಗಿವೆ. ಶೇ. 33ರಷ್ಟು ಕಾರ್ಮಿಕರ ಬಳಕೆಗೆ ಅವಕಾಶವಿದ್ದರೂ ಶೇ. 25ರಷ್ಟು ಕಾರ್ಮಿಕರಷ್ಟೇ ಲಭ್ಯರಿದ್ದಾರೆ. ಉತ್ತರ ಕರ್ನಾಟಕ ಹಾಗೂ ಅನ್ಯ ರಾಜ್ಯಗಳ ಕಾರ್ಮಿಕರು ಶೇ. 60ರಷ್ಟಿದ್ದು, ಇದರಲ್ಲಿ ಬಹುತೇಕರು ತಮ್ಮ ಊರುಗಳಿಗೆ ಹಿಂತಿರುಗುತ್ತಿರುವುದು ಉದ್ಯಮಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಕೈಗಾರಿಕೆಗಳನ್ನು ಆರಂಭಿಸಲು ಅನುಮತಿ ನೀಡಿದ ಹೊತ್ತಿನಲ್ಲೇ ವಲಸೆ ಕಾರ್ಮಿಕರು ತೆರಳಲು ಸರ್ಕಾರ ಕೊಟ್ಟಿದೆ.

ಇದರಿಂದ ಉತ್ಪಾದನೆ ಜತೆಗೆ ಅವಲಂಬಿತ ವ್ಯವಹಾರಗಳಿಗೆ ಹೊಡೆತ ಬೀಳಲಿದೆ. ಸದ್ಯಕ್ಕೆ ಲಭ್ಯ ವಿರುವ ಕಚ್ಚಾ ಪದಾರ್ಥಗಳನ್ನೇ ಬಳಸಿ ಉತ್ಪಾದನೆ ಅಲ್ಲಲ್ಲಿ ಆರಂಭವಾಗಿದೆ. ಕಾರ್ಮಿಕರಲ್ಲಿ ವಿಶ್ವಾಸ ಮೂಡಿಸಲು ಕೆಲವೆಡೆ ಕೈಗಾರಿಕೆ ಪುನರಾರಂಭಿಸಲಾಗಿದೆ ಎಂದು ಉದ್ಯಮಿ ಗಳು ಹೇಳುತ್ತಾರೆ. ರಾಜ್ಯದಲ್ಲಿ 6.5 ಲಕ್ಷ ಎಂಎಸ್‌ ಎಂಇ ಉದ್ಯಮಗಳಿದ್ದು, ಸುಮಾರು 70 ಲಕ್ಷ ಕಾರ್ಮಿಕರಿದ್ದಾರೆ. ಎಂಎಸ್‌ಎಂಸಿ ಕ್ಷೇತ್ರದ ನಿತ್ಯದ ವಹಿವಾಟು 7,000 ಕೋಟಿ ರೂ.ನಷ್ಟಿದೆ. ಆದರೆ ಸದ್ಯ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಹಿಂತಿರುಗುತ್ತಿರುವು  ದರಿಂದ ಕಾರ್ಮಿಕರ ಅಭಾವ ತಲೆದೋರಲಾರಂಭಿಸಿದೆ ಎಂದು ಕಾಸಿಯಾ ಅಧ್ಯಕ್ಷ ಆರ್‌. ರಾಜು ತಿಳಿಸಿದರು. ಸದ್ಯ ಎಂಎಸ್‌ಎಂಇ ವಲಯ, ಹಣಕಾಸು, ಕಚ್ಚಾ ಸಾಮಗ್ರಿ ಹಾಗೂ ಕಾರ್ಮಿಕರ ಕೊರತೆ ಎದುರಿಸುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಸರ್ಕಾರ ಇನ್ನಾದರೂ ಉದ್ಯಮಗಳ ರಕ್ಷಣೆಗೆ ಧಾವಿಸಬೇಕು. ಅಂತಾರಾಜ್ಯ ಸರಕು- ಸೇವೆ ಸಾಗಣೆಗೆ ಸುಗಮ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.

Advertisement

ಮಧ್ಯಮ- ಭಾರೀ ಕೈಗಾರಿಕೆ
ರಾಜ್ಯದಲ್ಲಿ ಸುಮಾರು 10000ಕ್ಕೂ ಹೆಚ್ಚು ಮಧ್ಯಮ ಕೈಗಾರಿಕೆ ಹಾಗೂ 1000ಕ್ಕೂ ಅಧಕ ಭಾರೀ ಕೈಗಾರಿಕೆಗಳಿವೆ. ಈ ಕೈಗಾರಿಕೆಗಳ ಉದ್ಯೋಗಿ ಗಳು ಬಹುತೇಕ ಕಡೆ ಆಯಾ ಪ್ರದೇಶದಲ್ಲೇ ನೆಲೆಯೂರಿರುವುರರಿಂದ ಕಾರ್ಮಿಕರ ಸಮಸ್ಯೆ ಹೆಚ್ಚಿಗೆ ಬಾಧಸಿದಂತಿಲ್ಲ. ಆದರೆ ಹೋಟೆಲ್‌, ಆತಿಥ್ಯ ಸೇರಿದಂತೆ ಇತರೆ ವಾಣಿಜ್ಯೋದ್ಯಮಗಳಲ್ಲಿ ವಲಸೆ ಕಾರ್ಮಿಕರ ನಿರ್ಗಮನದಿಂದ ಸಾಕಷ್ಟು ಹೊಡೆತ ಬಿದ್ದಿದೆ. ರಾಜ್ಯದಲ್ಲಿ ಸದ್ಯಕ್ಕೆ ಶೇ. 50ರಷ್ಟು ಕೈಗಾರಿಕೆಗಳು ಪುನರಾರಂಭವಾಗಿವೆ. ಸರ್ಕಾರದ ಸೂಚನೆಯಂತೆ ಶೇ. 33ರಷ್ಟು ಕಾರ್ಮಿಕರು ಬರಲಾರಂಭಿಸಿದ್ದಾರೆ. ಕೋವಿಡ್ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಕೆಲವರು ತಾತ್ಕಾಲಿಕವಾಗಿ ತಮ್ಮ ಊರುಗಳಿಗೆ ತೆರಳಿಬಹುದು. ಪರಿಸ್ಥಿತಿ ಸುಧಾರಿಸುತ್ತಿದ್ದಂತೆ ಹಿಂತಿರುಗುವ ಸಾಧ್ಯತೆ ಹೆಚ್ಚಿದೆ. ವಾರದಲ್ಲಿ ಉದ್ಯಮ ವಲಯ ಇನ್ನಷ್ಟು ಚೇತರಿಸಿಕೊಳ್ಳಲಿದೆ. ಮೇ 17ಕ್ಕೆ ಲಾಕ್‌ಡೌನ್‌ ತೆರವಾದರೆ ಮೂರ್‍ನಾಲ್ಕು ತಿಂಗಳಲ್ಲಿ ಪರಿಸ್ಥಿತಿ ಸುಧಾರಿಸುವ ಆಶಾಭಾವನೆ ಇದೆ.
● ಸಿ.ಆರ್‌.ಜನಾರ್ಧನ್‌, ಎಫ್‌ಕೆಸಿಸಿಐ ಅಧ್ಯಕ್ಷ

ರಿಯಲ್‌ ಎಸ್ಟೇಟ್‌- ಕಟ್ಟಡ ನಿರ್ಮಾಣ
ಸದ್ಯ ಬೆಂಗಳೂರಿನಿಂದ ಕಾರ್ಮಿಕರು ತಮ್ಮ ಊರು, ರಾಜ್ಯಗಳಿಗೆ ಮರಳುತ್ತಿರುವುದು ರಿಯಲ್‌ ಎಸ್ಟೇಟ್‌ ಮತ್ತು ನಿರ್ಮಾಣ ವಲಯದ ಮೇಲೆ ಗಂಭೀರ ಪರಿಣಾಮ ಬೀರಿದೆ. ಕಟ್ಟಡ ನಿರ್ಮಾಣ ಕಾಮಗಾರಿಗೆ ಸ್ಥಳೀಯ, ಸುತ್ತಮುತ್ತಲ ಹಾಗೂ ಇತರೆ ಜಿಲ್ಲೆಗಳ ಕೂಲಿ ಕಾರ್ಮಿಕರು ಸಿಗುತ್ತಾರೆ. ಆದರೆ ಕಟ್ಟಡ ನಿರ್ಮಾಣ ನಂತರದ ವಿದ್ಯುತ್‌, ನೀರಿನ ಸಂಪರ್ಕ ಸಲಕರಣೆ ಅಳವಡಿಕೆ, ಟೈಲ್ಸ್‌, ಮಾರ್ಬಲ್‌, ಒಳಾಂಗಣ ವಿನ್ಯಾಸ ಕಾಮಗಾರಿಗಳಲ್ಲಿ ಹೆಚ್ಚಾಗಿ ಬಿಹಾರ, ರಾಜಸ್ತಾನ ಇತರೆ ರಾಜ್ಯದ ಕಾರ್ಮಿಕರಿದ್ದಾರೆ. ಅವರು ತಮ್ಮ ಊರುಗಳಿಗೆ ತೆರಳಿದರೆ ವಾಪಸ್‌ ಬರುವುದು
ಅನುಮಾನ. ಬಂದರೂ ಹಲವು ತಿಂಗಳ ಬಳಿಕವಷ್ಟೇ ಇತ್ತ ಮುಖ ಮಾಡಬಹುದು. ಅಲ್ಲಿಯವರೆಗೆ ನಿರ್ಮಾಣ ಕಾಮಗಾರಿಗಳಲ್ಲಿ ವ್ಯತ್ಯಯವಾಗುವುದು ಉದ್ಯಮಿಗಳ ಆತಂಕಕ್ಕೆ ಕಾರಣವಾಗಿದೆ.

ಬೆಂಗಳೂರಿನಲ್ಲಿ ನೋಂದಾಯಿತ ಕಾರ್ಮಿಕರೇ 11 ಲಕ್ಷ ಜನರಿದ್ದು, ಒಟ್ಟಾರೆ 20 ಲಕ್ಷಕ್ಕೂ ಹೆಚ್ಚು ಕಾರ್ಮಿಕರಿದ್ದಾರೆ. ಇದರದಲ್ಲಿ ವಲಸಿಗರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬ ಮಾಹಿತಿ ಇದೆ. ನಿರ್ಮಾಣ ಕಾಮಗಾರಿ ಕಾರ್ಮಿಕರಲ್ಲಿ ಶೇ.50ರಷ್ಟು ಮಂದಿ ವಲಸಿಗರಿದ್ದಾರೆ. 40 ದಿನ ವಲಸಿಗ ಕಾರ್ಮಿಕರನ್ನು ನೋಡಿ ಕೊಂಡು ಲಾಕ್‌ಡೌನ್‌ ಸಡಿಲಿಕೆಯಾಗುತ್ತಿದ್ದಂತೆ ಅವರು ತಮ್ಮ ಊರುಗಳಿಗೆ ಹೋಗಲು ಅವಕಾಶ ನೀಡಿದ್ದು ಸೂಕ್ತವೆನಿಸದು. ಸರ್ಕಾರವೇ ಹೋಗುವವರು ಹೋಗಬಹುದು ಎಂದು ಸೂಚಿಸಿದರೆ ಮುಂದೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಬಹುದು ಎಂದು ಆತಂಕದಿಂದ ವಲಸಿಗರಲ್ಲಿ ಹೊರಟಂತಿದೆ. ಹೀಗೆ ಹೋದವರು ಕನಿಷ್ಠ ಐದಾರು ತಿಂಗಳು ಹಿಂತಿರುವುದಿಲ್ಲ. ವಲಸಿಗರ ಕೆಲಸಕ್ಕೆ ಪರ್ಯಾಯವಾಗಿ ಕಾರ್ಮಿಕರನ್ನು ಹೊಂದಿಸುವುದು ಕಷ್ಟ. ಇದು ವ್ಯವಹಾರದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಸದ್ಯಕ್ಕೆ ಹಳೆಯ ಬೇಡಿಕೆಯಂತೆ ಕಚ್ಛಾ ಸಾಮಗ್ರಿ ಪೂರೈಕೆಯಾಗುತ್ತಿದ್ದು, ಹೊಸ ಬೇಡಿಕೆ ಸ್ವೀಕರಿಸುತ್ತಿಲ್ಲ. ಕಚ್ಚಾ ಸಾಮಗ್ರಿ ಪೂರೈಕೆಯಾಗದೆ, ವಲಸಿಗ ಕಾರ್ಮಿಕರು ಕೆಲಸಕ್ಕೆ ಬಾರದಿದ್ದರೆ ಸಾಕಷ್ಟು ಸಮಸ್ಯೆ ಎದುರಾಗಲಿದೆ.
● ಸುರೇಶ್‌ ಹರಿ, “ಕ್ರೆಡಾಯ್‌’ ಕರ್ನಾಟಕ ಶಾಖೆ ಸದಸ್ಯ

ಮೂಲ ಸೌಕರ್ಯ
ರಾಜ್ಯದಲ್ಲಿ ವಾರ್ಷಿಕವಾಗಿ 50,000 ಕೋಟಿ ರೂ.ಗಿಂತಲೂ ಹೆಚ್ಚು ಮೊತ್ತದ ಮೂಲ ಸೌಕರ್ಯ ಕಾಮಗಾರಿಗಳು ನಡೆಯುತ್ತವೆ. ನೀರಾವರಿ, ಲೋಕೋಪಯೋಗಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾಮಗಾರಿಗಳ ಜತೆಗೆ ಪುರಸಭೆ, ನಗರಸಭೆ, ನಗರ ಪಾಲಿಕೆ, ಮಹಾನಗರ ಪಾಲಿಕೆ ಪ್ರದೇಶಗಳಲ್ಲೂ ಕಾಮಗಾರಿ ನಡೆಯುತ್ತವೆ. ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಮರಳುತ್ತಿರುವುದರಿಂದ ಕಾರ್ಮಿಕರ ಕೊರತೆ ತಲೆದೋರಲಿದೆ. ಇನ್ನೊಂದೆಡೆ ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿ ಉತ್ತಮವಾಗಿರದ ಕಾರಣ ಅನುಮೋದನೆಯಾಗಿದ್ದರೂ ಆರಂಭವಾಗದ ಕಾಮಗಾರಿಗಳನ್ನು ಕೈಗೊಳ್ಳುವ ಸಾಧ್ಯತೆ ಕಡಿಮೆ. ಹಳೆಯ ಬಿಲ್‌ ಪಾವತಿಯೂ ವಿಳಂಬವಾಗಬಹುದು. ಇದರಿಂದ ಗುತ್ತಿಗೆದಾರರ ಜತೆಗೆ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕುವಂತಾಗುತ್ತದೆ. ಪರಿಸ್ಥಿತಿ ಸುಧಾರಿಸಲು ಎರಡು ವರ್ಷ ಬೇಕಾಗಬಹುದು.
● ●ಆರ್‌.ಅಂಬಿಕಾಪತಿ, ರಾಜ್ಯ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ

ಲಾಕ್‌ಡೌನ್‌ ಸಡಿಲಿಕೆ ನಂತರ ಕಾರ್ಖಾನೆಗಳು ಆರಂಭವಾಗಿದ್ದರೂ ಕಾರ್ಮಿಕರು ಕೆಲಸಕ್ಕೆ ಮರಳದಿರುವುದು ಆತಂಕಕಾರಿ ಬೆಳವಣಿಗೆ. ಸರ್ಕಾರ ಶೇ. 33ರಷ್ಟು ಕಾರ್ಮಿಕರನ್ನಷ್ಟೇ ಬಳಸುವಂತೆ ಸೂಚಿಸಿದೆ. ಆದರೆ ಅಷ್ಟು ನೌಕರರು ಕೆಲಸಕ್ಕೆ ಬಂದಿಲ್ಲ. ಇನ್ನೊಂದೆಡೆ ಕಚ್ಛಾ ಪದಾರ್ಥ ಗಳು ಪೂರೈಕೆಯಾಗದೆ ಉದ್ದಿಮೆದಾರರು ದಿಕ್ಕು ತೋಚದ ಸ್ಥಿತಿ ಯಲ್ಲಿದ್ದಾರೆ. ಮಳಿಗೆಗಳನ್ನು ತೆರೆದಿದ್ದರೂ ಗ್ರಾಹಕರ ಸುಳಿವಿಲ್ಲ. ಇನ್ನು ಉದ್ದಿಮೆಗಳ ಸ್ಥಿತಿ ಇದ್ದಕ್ಕಿಂತಲೂ ಗಂಭೀರವಾಗಿದೆ. ಉದ್ದಿಮೆಗಳೆಲ್ಲಾ ಮೊದಲಿನ ರೀತಿಯ ವ್ಯವಹಾರ ನಡೆಯುವಂತಾಗಲು ವರ್ಷಗಳೇ ಬೇಕಾಗಬಹುದು.
●ಜೆ.ಕ್ರಾಸ್ಟ, ಅಸೋಚಾಮ್‌ ಮತ್ತು ಫಿಕ್ಕಿ ರಾಷ್ಟ್ರೀಯ ಕಾರ್ಯಕಾರಿ ವ್ಯವಸ್ಥಾಪನಾ ಸಮಿತಿ ಸದಸ್ಯ

- ರಾಜ್ಯದಲ್ಲಿ ವರ್ಷಕ್ಕೆ ಕೈಗೊಳ್ಳುವ ಕಾಮಗಾರಿ ಮೊತ್ತದ ಅಂದಾಜು – 50,000 ಕೋಟಿ ರೂ.
- ರಾಜ್ಯದಲ್ಲಿನ ಎಂಎಸ್‌ಎಂಇ- ಅಂದಾಜು 6.5 ಲಕ್ಷ
- ಎಂಎಸ್‌ಎಂಇ ಅ ಡಿ ಉದ್ಯೋಗ-ಸುಮಾರು 70 ಲಕ್ಷ
- ಮಧ್ಯಮ ಕೈಗಾರಿಕೆ ಸಂಖ್ಯೆ- 10,000 ಉದ್ಯೋಗಿಗಳು- 30,000
- ಬೃಹತ್‌ ಕೈಗಾರಿಕೆಗಳು- 1,000. ಉದ್ಯೋಗಿಗಳು- 20,000
- ರಾಜ್ಯ ಜಿಡಿಪಿಗೆ ಎಂಎಸ್‌ಎಂಇ ಕೊಡುಗೆ- ಶೇ.29 
 – ರಾಜ್ಯ ಜಿಡಿಪಿಗೆ ಮಧ್ಯಮ- ಬೃಹತ್‌ ಕೈಗಾರಿಕೆ ಕೊಡುಗೆ- ಶೇ.19

●ಎಂ. ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next