Advertisement

ಕೇಂದ್ರದ ಯೋಜನೆ ಸಮರ್ಪಕವಾಗಿ ಜಾರಿಗೊಳಿಸಿ

12:51 PM Sep 29, 2018 | Team Udayavani |

ಚಿಕ್ಕಮಗಳೂರು: ಕೇಂದ್ರ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಮಾಜಿ ಪ್ರಧಾನಿ ಹಾಗೂ ಸಂಸದ ಎಚ್‌.ಡಿ. ದೇವೇಗೌಡ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಶುಕ್ರವಾರ ನಗರದ ಜಿಲ್ಲಾ ಪಂಚಾಯತ್‌ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ (ದಿಶಾ)ಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜನರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದೆ. ಅವುಗಳನ್ನು ಸಮರ್ಪಕವಾಗಿ ಫಲಾನುಭವಿಗಳಿಗೆ ತಲುಪುವಂತಾಗಬೇಕು ಎಂದು ತಿಳಿಸಿದರು. 

ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಮಲೆನಾಡು ಭಾಗದಲ್ಲಿ ಅಪಾರ ಪ್ರಮಾಣದ ಸಾರ್ವಜನಿಕರ ಆಸ್ತಿಪಾಸ್ತಿ ನಷ್ಟವಾಗಿದೆ. ಕೇಂದ್ರ ಸರ್ಕಾರ ನರೇಗಾ ಯೋಜನೆ ಅಡಿಯಲ್ಲಿ ಕೆಲವೊಂದು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬಹುದಾಗಿದೆ. ಆದರೆ ಗ್ರಾಮ ಪಂಚಾಯತ್‌ ಅಧ್ಯಕ್ಷರಿಗೆ ಮತ್ತು  ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳಿಗೆ ಯಾವ ಕಾಮಗಾರಿಗಳು ನರೇಗಾ ಯೋಜನೆ ಅಡಿಯಲ್ಲಿ ಕೈಗೆತ್ತಿಕೊಳ್ಳಬಹುದು ಎಂಬುದರ ಮಾಹಿತಿಯೇ ಇರುವುದಿಲ್ಲ. ಆದ್ದರಿಂದ ನರೇಗಾ ಯೋಜನೆಯ ಒಂಬೂಡ್‌ ಮನ್‌ಗಳು ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಮಾತನಾಡಿ, ಮಳೆಯಿಂದ ಮಲೆನಾಡು ಭಾಗದಲ್ಲಿ ಅಪಾರ ಪ್ರಮಾಣದ ಹಾನಿಯಾಗಿದೆ. ಕೇಂದ್ರ ಸರ್ಕಾರದ ಯೋಜನೆಗಳ ಮೂಲಕ ಅವಶ್ಯಕ ಕಾಮಗಾರಿಗೆ ಅವಕಾಶ ಮಾಡಿಕೊಡಬೇಕು. ಮಳೆಯಿಂದ ನೂರಾರು ಎಕರೆ ಪ್ರದೇಶದಲ್ಲಿ ಭತ್ತದ ಗದ್ದೆಗಳಲ್ಲಿ ಮರಳು ಸಂಗ್ರಹವಾಗಿರುವುದರಿಂದ ಮರಳು ತೆರವು ಮಾಡಲು ನರೇಗಾ ಯೋಜನೆಯಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಶಾಸಕ ಸಿ.ಟಿ. ರವಿ ಮಾತನಾಡಿ, ಸಭೆಗೆ ನೀಡಿರುವ ಅಜೆಂಡಾದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳಾದ ಉಜ್ವಲ ಯೋಜನೆ, ಮುದ್ರಾ ಯೋಜನೆ, ಪಿಂಚಣಿ, ಪ್ರಧಾನಮಂತ್ರಿ ಸುರಕ್ಷಾ ಯೋಜನೆ, ಡಿಜಿಟಲ್‌ ಇಂಡಿಯಾ ಯೋಜನೆಗಳ ಬಗ್ಗೆ ಯಾಕೆ ಮಾಹಿತಿ ನೀಡಿಲ್ಲ ಎಂದು ಪ್ರಶ್ನಿಸಿದ ಅವರು, ಯೋಜನೆ ಅನುಷ್ಠಾನ ಪ್ರಗತಿಯ ಬಗ್ಗೆ ಮಾಹಿತಿಯೇ ಇಲ್ಲದಿದ್ದರೆ ಚರ್ಚೆ ಮಾಡುವುದು ಹೇಗೆ ಎಂದು ಪ್ರಶ್ನಿಸಿದರು. ಇದಕ್ಕೆ ಧ್ವನಿಗೂಡಿಸಿದ ಸಂಸದೆ ಶೋಭಾ ಕರಂದ್ಲಾಜೆ, ಕೇಂದ್ರ ಸರ್ಕಾರದ ಮತ್ತು ಎಂ.ಪಿ. ಗ್ರಾಂಟ್‌ಗಳ ಸರಿಯಾದ ಮಾಹಿತಿ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Advertisement

ಎಚ್‌.ಡಿ.ದೇವೇಗೌಡ ಮಾತನಾಡಿ, ಸಭೆಯ ಅಜೆಂಡಾದಲ್ಲಿ ಯೋಜನೆಗಳ ಅನುಷ್ಠಾನ ಮತ್ತು ಪ್ರಗತಿಯ ಸಂಪೂರ್ಣ ಮಾಹಿತಿ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿ, ಮುಂದೆ ಈ ರೀತಿ ಆಗಬಾರದು ಎಂದು ಎಚ್ಚರಿಸಿದರು.
 
ಮೂಡಿಗೆರೆ ತಾಲೂಕು ಪಂಚಾಯತ್‌ ಅಧ್ಯಕ್ಷ ಸಿ.ರತನ್‌ ಮಾತನಾಡಿ, ಸರ್ಕಾರಿ ಆಸ್ಪತ್ರೆಗಳಲ್ಲಿರುವ ಜನೌಷಧ ಕೇಂದ್ರಗಳು ಬೆಳಿಗ್ಗೆ 8ರಿಂದ ಸಂಜೆ 5ಗಂಟೆಯವರೆಗೆ ಮಾತ್ರ ತೆರೆದಿರುತ್ತದೆ. ಸೀಮಿತ ಅವಧಿಯಲ್ಲಿ ಜನೌಷಧ ಕೇಂದ್ರಗಳು ತೆರೆದಿರುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗುವುದಿಲ್ಲ.

ಆದ್ದರಿಂದ ಜನೌಷಧ ಕೇಂದ್ರಗಳನ್ನು 24ಗಂಟೆಯೂ ತೆರೆಯುವಂತೆ ಸಭೆಯಲ್ಲಿ ತಿಳಿಸಿದರು. ಇದೇ ಸಂದರ್ಭದಲ್ಲಿ
ತರೀಕೆರೆ ಕ್ಷೇತ್ರದ ಶಾಸಕ ಡಿ.ಎಸ್‌.ಸುರೇಶ್‌ ಮಾತನಾಡಿ, ಜನೌಷಧ ಕೇಂದ್ರಗಳಲ್ಲಿ ಡಯಾಬಿಟಿಸ್‌ ಮತ್ತು ಬಿ.ಪಿ ಸಂಬಂಧಿಸಿದ ಔಷಧಿಗಳು ಸಿಗುವುದಿಲ್ಲ. ಸಾರ್ವಜನಿಕರಿಗೆ ಅಗತ್ಯವಾಗ ಔಷಧಿಗಳು ಸಿಗದಿದ್ದರೆ ಏನು ಪ್ರಯೋಜನ ಎಂದು ಪ್ರಶ್ನಿಸಿದರು. 

ಸಂಬಂಧಪಟ್ಟ ಅಧಿಕಾರಿ ಮಾತನಾಡಿ, ಜನೌಷಧ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಕೊರತೆಯಿಂದ ಬೆಳಿಗ್ಗೆ 8ರಿಂದ
ಸಂಜೆ 5ರವರೆಗೂ ತೆರೆದಿರುತ್ತದೆ. ಮುಂದಿನ ದಿನಗಳಲ್ಲಿ 24ಗಂಟೆ ಜನೌಷಧ ಕೇಂದ್ರಗಳು ತೆರೆದಿರುವಂತೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಅವರು, ಸಾರ್ವಜನಿಕರಿಗೆ ಅಗತ್ಯ ಔಷಧಿ ದೊರಕುವಂತೆ ಕ್ರಮಕೈಗೊಳ್ಳುವುದಾಗಿ
ತಿಳಿಸಿದರು.

ಶಾಸಕ ಡಿ.ಎಸ್‌. ಸುರೇಶ್‌ ಮಾತನಾಡಿ, ಶೌಚಾಲಯಗಳ ನಿರ್ಮಾಣಕ್ಕೆ ಮರಳಿನ ಕೊರತೆ ಇದೆ ಎಂದು ಸಭೆಯ ಗಮನಕ್ಕೆ ತಂದರು. ಸದ್ಯದಲ್ಲಿಯೇ ಟೆಂಡರ್‌ ಮರಳು ಸರಬರಾಜಿಗೆ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ ತಿಳಿಸಿದರು.

ಗ್ರಾ.ಪಂ. ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಕಸ ವಿಲೇವಾರಿಗೆ ವಾಹನ ಸೌಲಭ್ಯ ಕಲ್ಪಿಸುವಂತೆ ಮೂಡಿಗೆರೆ ತಾ.ಪಂ.
ಅಧ್ಯಕ್ಷ ಸಿ.ರತನ್‌ ಸಭೆಗೆ ತಿಳಿಸಿದರು. 

ಇದಕ್ಕೆ ಧ್ವನಿಗೂಡಿಸಿದ ಶಾಸಕ ಸಿ.ಟಿ.ರವಿ, ಹೋಮ್‌ ಸ್ಟೇ ಮತ್ತು ರೇಸಾರ್ಟ್‌ಗಳಲ್ಲಿ ಉಪಯೋಗಿಸುವ ನೀರಿನ ಬಾಟಲ್‌, ಮದ್ಯದ ಬಾಟಲ್‌ಗ‌ಳನ್ನು ರಸ್ತೆಬದಿಯಲ್ಲಿ ಎಸೆಯುತ್ತಿದ್ದಾರೆ. ಇದರಿಂದ ಪರಿಸರದ ಮೇಲೆ ಪರಿಣಾಮ ಬೀರುತ್ತಿದೆ. ಇದಕ್ಕೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ ಮಾತನಾಡಿ, ಸದ್ಯದಲ್ಲಿಯೇ ಹೋಮ್‌ ಸ್ಟೇ ಮತ್ತು ರೇಸಾರ್ಟ್‌ ಮಾಲೀಕರ ಸಭೆ ಕರೆದು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. 

ಉಜ್ವಲ ಯೋಜನೆ ಅಡಿಯಲ್ಲಿ ಎಷ್ಟು ಮನೆಗಳಿಗೆ ಗ್ಯಾಸ್‌ ಕನೆಕ್ಷನ್‌ ನೀಡಲಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ
ಸಂಬಂ ಸಿದ ಅಧಿಕಾರಿಗೆ ಪ್ರಶ್ನಿಸಿದರು. ಅಧಿಕಾರಿ ಮಾತನಾಡಿ, 10,331 ಮನೆಗಳಿಗೆ ಗ್ಯಾಸ್‌ ಕನೆಕ್ಷನ್‌ ನೀಡಲಾಗಿದೆ. 3514 ಮನೆಗಳಿಗೆ ಗ್ಯಾಸ್‌ ಕನೆಕ್ಷನ್‌ ನೀಡಬೇಕೆಂದು ಮಾಹಿತಿ ನೀಡಿದರು. 21,347 ಮನೆಗಳಿಗೆ ಗ್ಯಾಸ್‌ ಕನೆಕ್ಷನ್‌ ನೀಡಲಾಗಿದೆ ಎಂದು ಎಜೆಸ್ಸಿಯವರು ಮಾಹಿತಿ ನೀಡಿದ್ದಾರೆ ಎಂದು ಅಧಿಕಾರಿಯನ್ನು ಸಂಸದರು ತರಾಟೆಗೆ ತಗೆದುಕೊಂಡರು.

ಸಭೆಯಲ್ಲಿ ಜಿ.ಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಸಿ. ಸತ್ಯಭಾಮ, ತಾ.ಪಂ. ಅಧ್ಯಕ್ಷರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next