Advertisement

ರೈತರ ಸಮಸ್ಯೆಗೆ ಕೇಂದ್ರ ಸ್ಪಂದಿಸುತ್ತಿಲ್ಲ : ಟಿಕಾಯತ್ ಟೀಕೆ

01:11 PM Mar 31, 2021 | Team Udayavani |

ಧಾರವಾಡ: ದೇಶದಲ್ಲಿನ ರೈತರ ಮತ್ತು ಜನಸಾಮಾನ್ಯರ ಸಂಕಷ್ಟಗಳಿಗೆ ಕೇಂದ್ರ ಸರಕಾರ ಸ್ಪಂದಿಸುತ್ತಿಲ್ಲ ಎಂದು ಸಂಯುಕ್ತ ಕಿಸಾನ್ ಮೋರ್ಚಾ ನಾಯಕ ರಾಕೇಶ್ ಸಿಂಗ್ ಟಿಕಾಯತ್ ಹೇಳಿಕೆ ನೀಡಿದ್ದಾರೆ.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ರೈತ ಹಿತರಕ್ಷಣಾ ಪರಿವಾರದ ವತಿಯಿಂದ ಕೇಂದ್ರ ಸರಕಾರದ ರೈತ ವಿರೋಧಿ ನೀತಿ ಖಂಡಿಸಿ ಮತ್ತು ದೆಹಲಿಯಲ್ಲಿನ ರೈತ ಹೋರಾಟ ಬೆಂಬಲಿಸಿ ಹಮ್ಮಿಕೊಂಡಿದ್ದ ಸರದಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪ್ರಸ್ತುತ ರೈತರು, ಕೂಲಿಕಾರ್ಮಿಕರು, ಬಡವರು ತೀವ್ರ ಸಂಕಷ್ಟದಲ್ಲಿದ್ದಾರೆ. ಆದರೆ, ಜನರ ಸಮಸ್ಯೆಗಳನ್ನು ಸರಕಾರ ಕೇಳುತ್ತಿಲ್ಲ. ಮತ್ತೊಂದೆಡೆ ಸರಕಾರಿ ಸ್ವಾಮ್ಯದ ವ್ಯವಸ್ಥೆಯನ್ನು ಖಾಸಗಿಯವರಿಗೆ ವಹಿಸುವ ಹುನ್ನಾರ ನಡೆಸುತ್ತಿದೆ ಎಂದರು.

ರೈತ ವಿರೋಧಿ ಕಾನೂನುಗಳನ್ನು ವಿರೋಧಿಸಿ ದೀರ್ಘ ಕಾಲದಿಂದ ರೈತರು ಹೋರಾಟ ನಡೆಸುತ್ತಿದ್ದರೂ ಸರಕಾರ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಸರಕಾರದ ಇಂತ ಕುತಂತ್ರಗಳನ್ನು ಮೆಟ್ಟಿ ನಿಲ್ಲಬೇಕಿದೆ ಎಂದು ಅವರು ಮನವಿ ಮಾಡಿದರು.

ಕಳೆದ 60 ದಿನಗಳಿಂದ ರೈತ ಹಿತರಕ್ಷಣಾ ಪರಿವಾರದ ಸಂಚಾಲಕ ಪಿ.ಎಚ್.ನೀರಲಕೇರಿ ಅವರ ನೇತೃತ್ವದಲ್ಲಿ ರೈತರು ಸರದಿ ಸತ್ಯಾಗ್ರಹ ನಡೆಸುವ ಮೂಲಕ ಇಡೀ ದೇಶದ ಗಮನಸೆಳೆಯಲಾಗಿದೆ ಎಂದು ಶ್ಲಾಘಿಸಿದರು.

Advertisement

ರೈತ ನಾಯಕ ಯುದವೀರಸಿಂಗ್ ಮಾತನಾಡಿ, ರೈತರು, ಕಾರ್ಮಿಕರಿಂದ ದೇಶದ ಪ್ರಗತಿ ಸಾಧ್ಯ. ಆದರೆ, ಇದನ್ನು ಸರಕಾರ ಮರೆತು ಜನವಿರೋಧಿ ಆಡಳಿತ ನಡೆಸುತ್ತಿದೆ. ಚೌಧರಿ ಚರಣಸಿಂಗ್, ಮಹೀಂದ್ರಸಿಂಗ್ ಟಿಕಾಯತ್, ಪ್ರೊ.ಎಂ.ಡಿ.ನಂಜುಂಡಸ್ವಾಮಿ, ಬಾಬಾಗೌಡ ಪಾಟೀಲ, ಎನ್.ಡಿ.ಸುಂದರೇಶ ಮುಂತಾದವರಿಂದ ರೈತ ಹೋರಾಟ ನಡೆಯತ್ತಾ ಬಂದಿದ್ದು, ರೈತರು ಒಗ್ಗಟ್ಟಾದರೆ ಸರಕಾರ ಮಣಿಸುವುದು ಸುಲಭ ಎಂದು ಹೇಳಿದರು.

ಇದನ್ನೂ ಓದಿ:ಕೇರಳ ಅಖಾಡ: ಕೋನ್ನಿ ಕ್ಷೇತ್ರ-ಐಕ್ಯರಂಗ, ಎಡರಂಗ ಕೋಟೆಯೊಳಗೆ ಕಮಲ ಅರಳುತ್ತಾ?

ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ ಮಾತನಾಡಿ, ಸರಕಾರ ರೈತರ ತಾಳ್ಮೆ ಪರೀಕ್ಷಿಸುವ ಹುಂಬತನ ಮಾಡಬಾರದು. ಸರಕಾರ ರೈತ ವಿರೋಧಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯದಿದ್ದರೆ, ದೇಶದ ಎಲ್ಲ ಭಾಗಗಳ ರೈತರು ದೆಹಲಿ ಚಲೋ ಹಮ್ಮಿಕೊಳ್ಳಬೇಕಾಗುತ್ತದೆ ಎಂದರು.

ಸಭೆಯಲ್ಲಿ ರೈತ ಮುಖಂಡರಾದ ಚುಕ್ಕಿ ನಂಜುಂಡಸ್ವಾಮಿ, ಕೆ.ಟಿ.ಗಂಗಾಧರ, ಚುಕ್ಕಿ ನಂಜುಂಡಸ್ವಾಮಿ, ಕುರುಬೂರ ಶಾಂತಕುಮಾರ, ಮಂಜೇಗೌಡ, ಡಾ.ಜಿ.ಎನ್.ಗಣೇಶದೇವಿ, ಮಾಜಿ ಶಾಸಕರಾದ ಬಿ.ಆರ್.ಪಾಟೀಲ. ಶ್ರೀಶೈಲಪ್ಪ ಬಿದರೂರ, ಶ್ರೀಶೈಲಗೌಡ ಕಮತರ, ಗುರುರಾಜ ಹುಣಸಿಮರದ, ಶಿವಾನಂದ ಹೊಳೆಹಡಗಲಿ, ಮಲ್ಲನಗೌಡ ಪಾಟೀಲ, ಮಂಜುನಾಥ ಮುಗ್ಗನವರ, ಭೀಮಪ್ಪ ಕಾಸಾಯಿ ಸೇರಿದಂತೆ ವಿವಿಧ ಜಿಲ್ಲೆಗಳ ರೈತ ಮುಖಂಡರು ಉಪಸ್ಥಿತರಿದ್ದರು.

ರೈತ ಹಿತರಕ್ಷಣಾ ಪರಿವಾರದ ಸಂಚಾಲಕ ಪಿ.ಎಚ್.ನೀರಲಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿದ್ದಣ್ಣ ಕಂಬಾರ ನಿರೂಪಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next