Advertisement

ಬಳ್ಳಾರಿಯಲ್ಲಿ ಅಭ್ಯರ್ಥಿ ಆಯ್ಕೆಯೇ ಕಗ್ಗಂಟು

06:15 AM Oct 07, 2018 | |

ಬಳಾರಿ: ಲೋಕಸಭಾ ಉಪಚುನಾವಣೆ ಘೋಷಣೆಯಾಗುತ್ತಿದ್ದಂತೆ ಹೈ ವೋಲ್ಟೇಜ್ ಕ್ಷೇತ್ರ ಎಂದೇ ಗುರುತಿಸಿಕೊಂಡಿರುವ ಬಳ್ಳಾರಿ ಜಿಲ್ಲೆಯಲ್ಲಿ ರಾಜಕೀಯ ಪಕ್ಷಗಳು ತರಾತುರಿಯ ತಯಾರಿ ಆರಂಭಿಸಿವೆ. ಕಾಂಗ್ರೆಸ್‌ ಮತ್ತು ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು ಆರಂಭಿಸಿವೆ.

Advertisement

ಕಾಂಗ್ರೆಸ್‌ ನಲ್ಲಿ ಟಿಕೆಟ್‌ಗಾಗಿ ಜಿಲ್ಲೆಯ ಪೂರ್ವ ಮತ್ತು ಪಶ್ಚಿಮ ತಾಲೂಕುಗಳಲ್ಲಿ ಪೈಪೋಟಿ ಏರ್ಪಟ್ಟಿದೆ. ಪಶ್ಚಿಮ ತಾಲೂಕುಗಳ ಪೈಕಿ ಹೊಸಪೇಟೆಯ ಗುಜ್ಜಲ ನಾಗರಾಜ್‌ ಮತ್ತು ಬಳ್ಳಾರಿ ಗ್ರಾಮೀಣ ಕ್ಷೇತ್ರದ ಬಿ.ನಾಗೇಂದ್ರ ಅವರ ಸಹೋದರ ಪ್ರಸಾದ್‌ ಅವರ ಹೆಸರು ಬಲವಾಗಿ ಕೇಳಿ ಬರುತ್ತಿದೆ. ಮತ್ತೂಬ್ಬ ಟಿಕೆಟ್‌ ಆಕಾಂಕ್ಷಿಯಾದ ಶಾಸಕ ನಾಗೇಂದ್ರ ಅವರ ಸಹೋದರ ಪ್ರಸಾದ್‌ ಅವರು ತಮ್ಮ ಸರ್ಕಾರಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ಪ್ರಸಾದ್‌ ಅವರ ರಾಜಕೀಯ ಪ್ರವೇಶಕ್ಕೆ ಪುಷ್ಠಿ ನೀಡುತ್ತಿದೆ. ಆದರೆ, 5 ವರ್ಷ ಅವಧಿಯುಳ್ಳ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಇಂಗಿತ ವ್ಯಕ್ತಪಡಿಸಿರುವ ಅವರು, ಉಪಚುನಾವಣೆಯಿಂದ ಹಿಂದೆ ಸರಿದಿದ್ದಾರೆಂದು ಹೇಳಲಾಗುತ್ತಿದ್ದು, ಕಾಂಗ್ರೆಸ್‌ ಪಕ್ಷದಲ್ಲಿ ಮೂರನೇ ವ್ಯಕ್ತಿಗೆ ಟಿಕೆಟ್‌ ಧಕ್ಕಿದರೂ ಅಚ್ಚರಿ ಪಡುವಂತಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.

ಇನ್ನು ಬಿಜೆಪಿಯಿಂದ ಮಾಜಿ ಶಾಸಕ ಟಿ.ಎಚ್‌. ಸುರೇಶ್‌ಬಾಬು, ಮಾಜಿ ಸಂಸದರಾದ ಜೆ.ಶಾಂತಾ, ಸಣ್ಣ ಫಕ್ಕೀರಪ್ಪ, ಎನ್‌.ವೈ.ಕುಟುಂಬ ಮತ್ತು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಂಡೂರು ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಡಿ.ರಾಘವೇಂದ್ರ ಅವರ ಹೆಸರಿರುವ  ಪಟ್ಟಿಯನ್ನು ಪಕ್ಷದ ರಾಜ್ಯ ವರಿಷ್ಠರಿಗೆ ಕಳುಹಿಸಿಕೊಡಲಾಗಿದೆ. ಮಾಜಿ ಸಂಸದ ಎನ್‌.ವೈ.ಹನುಮಂತಪ್ಪ ಅವರ ಪುತ್ರನ ಹೆಸರು ಕೇಳಿ ಬರುತ್ತಿತ್ತು. ಆದರೆ, ಅವರ ಕುಟುಂಬದಲ್ಲೊಬ್ಬರು ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ ಹೊರತು ಯಾರಿಗೆ ಎಂಬುದು ಇನ್ನು ಖಚಿತವಾಗಿಲ್ಲ ಎಂದು ಹೇಳಲಾಗುತ್ತಿದೆ. ಬಿಜೆಪಿಯ ಈ ಪಟ್ಟಿಯನ್ನು 2019ರಲ್ಲಿ ಲೋಕಸಭೆಗೆ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆಂದು ಸಿದ್ಧಪಡಿಸಲಾಗಿದ್ದು, ಈಗಿನ ಉಪ ಚುನಾವಣೆಗೆ ಬದಲಾದರೂ ಅಚ್ಚರಿಯಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next