Advertisement

ಸಿಎಎ ನೈತಿಕವೂ ಹೌದು, ಸಂವಿಧಾನ ಬದ್ಧವೂ ಹೌದು

10:17 AM Jan 10, 2020 | mahesh |

ವದಂತಿಗಳ ನಡುವೆ ಅನೇಕ ಪ್ರಶ್ನೆಗಳನ್ನು ಕಡೆಗಣಿಸಲಾಗುತ್ತಿದೆ. ಕೆಲವು ದೇಶಗಳಲ್ಲಿ ಧರ್ಮದ ಕಾರಣಕ್ಕಾಗಿ ದೌರ್ಜನ್ಯಗಳು ನಡೆಯುತ್ತಿರುವುದು ವಾಸ್ತವವಲ್ಲವೇ? ಸಿಎಎ ಅಡಿಯಲ್ಲಿ ತೆಗೆದುಕೊಳ್ಳಲಾಗಿರುವ ಕ್ರಮಗಳು ಸಂವಿಧಾನ ಬದ್ಧವಾಗಿದೆಯೋ ಇಲ್ಲವೋ? ಈ ಪ್ರಶ್ನೆಗಳಿಗೆ “ಹೌದು’ ಎನ್ನುವುದೇ ಉತ್ತರವಾದರೆ, ಗದ್ದಲ ಖಂಡಿತವಾಗಿಯೂ ರಾಜಕೀಯ ಪ್ರೇರಿತವಾಗಿದೆ ಎಂದರ್ಥ.

Advertisement

ಉತ್ತರ ದಿಲ್ಲಿಯ ಯಮುನಾ ದಂಡೆಯ ಮೇಲೆ ಶಿಥಿಲಾವಸ್ಥೆಯಲ್ಲಿರುವ ನಿರಾಶ್ರಿತರ ಕ್ಯಾಂಪಿನಲ್ಲಿ, ಪುಟ್ಟ “ನಾಗರಿಕತಾ’ ಜನಿಸಿದ್ದಾಳೆ. ನಾಗರಿಕತಾಳ ಅಪ್ಪ-ಅಮ್ಮ ಪಾಕಿಸ್ಥಾನದಲ್ಲಿ ನಡೆಯುತ್ತಿದ್ದ ದೌರ್ಜನ್ಯಗಳಿಂದ ಬಚಾವಾಗಲು ದೆಹಲಿಗೆ ಓಡಿಬಂದವರು. ತಮಗೆ ಗೌರವಯುತ ಜೀವನ ನಡೆಸಲು ಅವಕಾಶ ಕೊಡುವ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಬಂದದ್ದೇ, ಅವರು ತಮ್ಮ ಮಗಳ ಹೆಸರನ್ನು “ನಾಗರಿಕತಾ’ ಎಂದು ಇಟ್ಟಿದ್ದಾರೆ. ತಮ್ಮ ಮೂಲ ದೇಶಗಳಲ್ಲಿ ಯಾವ ನಾಗರಿಕತೆಯನ್ನು ಪಡೆಯಲು ಇವರೆಲ್ಲ ವಂಚಿತರಾಗಿದ್ದರೋ, ಅಂಥ ನಾಗರಿಕತೆಯನ್ನು ಭಾರತದಲ್ಲಿ ಪಡೆಯುವ ಅವರ ಆಸೆಗೆ ರೆಕ್ಕೆ ನೀಡಿದೆ ಸಿಎಎ.

ಪೌರತ್ವ ತಿದ್ದುಪಡಿ ಕಾನೂನಿನ ನಂತರ ದೇಶದಲ್ಲಿ ವದಂತಿಗಳನ್ನು ಹರಡುವ ಮತ್ತು ಉನ್ಮಾದ ಹುಟ್ಟಿಸುವ ಕೆಲಸ ಆರಂಭವಾಗಿದೆ. ಆದರೆ ಈ ಗದ್ದಲಗಳ ನಡುವೆ ಅನೇಕ ಪ್ರಶ್ನೆಗಳನ್ನು ಕಡೆಗಣಿಸಲಾಗುತ್ತಿದೆ. ಮೊದಲನೆಯದಾಗಿ, ದೌರ್ಜನ್ಯಗಳು, ಅದರಲ್ಲೂ ಮುಖ್ಯವಾಗಿ ಕೆಲವು ದೇಶಗಳಲ್ಲಿ ಧರ್ಮದ ಕಾರಣಕ್ಕಾಗಿ ದೌರ್ಜನ್ಯಗಳು ನಡೆಯುತ್ತವೆ ಎನ್ನುವುದು ವಾಸ್ತವವೋ ಅಲ್ಲವೋ? ಎರಡನೆಯದಾಗಿ, ಈ ರೀತಿ ಭೇದಭಾವವನ್ನು ಎದುರಿಸಿ ಆಶ್ರಯ ಅರಸುವವರ ನೋವನ್ನು ಭಾರತದಂಥ ಶ್ರೀಮಂತ ಸಾಂಸ್ಕೃತಿಕ ಮೌಲ್ಯಗಳನ್ನು ಹೊಂದಿರುವ ದೇಶವು ಶಮನಗೊಳಿಸಬೇಕಲ್ಲವೇ? ಮತ್ತು ಕೊನೆಯದಾಗಿ, ಸಿಎಎ ಅಡಿಯಲ್ಲಿ ತೆಗೆದುಕೊಳ್ಳಲಾಗಿರುವ ಕ್ರಮಗಳು ಸಂವಿಧಾನ ಬದ್ಧವಾಗಿವೆಯೇ? . ಈ ಎಲ್ಲಾ ಪ್ರಶ್ನೆಗಳಿಗೂ “ಹೌದು’ ಎನ್ನುವುದೇ ಉತ್ತರವಾಗಿದ್ದರೆ, ಸಿಎಎ ವಿಷಯದಲ್ಲಿ ಎಬ್ಬಿಸಲಾಗುತ್ತಿರುವ ಗದ್ದಲ ಖಂಡಿತವಾಗಿಯೂ ರಾಜಕೀಯ ಪ್ರೇರಿತವಾಗಿದೆ ಎಂದೇ ಅರ್ಥ.

ಇತ್ತ ಯಾವಾಗ ಭಾರತೀಯ ಸಂಸತ್ತಿನಲ್ಲಿ ಸಿಎಎ ಮೇಲೆ ಚರ್ಚೆ ನಡೆದಿತ್ತೋ, ಅದೇ ಸಮಯದಲ್ಲೇ ಅತ್ತ ಅಮೆರಿಕದ ವಿದೇಶಾಂಗ ವಿಭಾಗವು ಒಂದು ವರದಿಯನ್ನು ಬಿಡುಗಡೆ ಮಾಡಿತು. ಆ ವರದಿಯು “ಪಾಕಿಸ್ಥಾನ ಧಾರ್ಮಿಕ ಸ್ವಾತಂತ್ರ್ಯದ ಘೋರ ಉಲ್ಲಂಘನೆ ಮಾಡುವ ದೇಶ’ ಎಂದು ಹೇಳಿತು. ನಮ್ಮಲ್ಲಿ ಪೌರತ್ವ ಸಂಬಂಧಿ ಜಂಟಿ ಸಂಸದೀಯ ಸಮಿತಿಗೆ ಎದುರಾದ ಕತೆಗಳಲ್ಲಿ ಹೃದಯ ವಿದ್ರಾವಕ ವಿವರಗಳು ಇವೆ. ಇದರ ಹೊರತಾಗಿ, ಐರೋಪ್ಯ ಸಂಸತ್ತು ಇತ್ತೀಚೆಗಷ್ಟೇ ಬಿಡುಗಡೆಗೊಳಿಸಿರುವ ವರದಿಯಲ್ಲೂ ಪಾಕಿಸ್ಥಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ಹಾಗೂ ಮಹಿಳೆಯರು ಎದುರಿಸುವ ದೌರ್ಜನ್ಯಗಳ ಬಗ್ಗೆ ವಿವರಿಸಲಾಗಿದೆ. ಈ ಅಲ್ಪಸಂಖ್ಯಾತರಲ್ಲಿ ಅಧಿಕಪಾಲು ಹಿಂದೂಗಳೇ ಇದ್ದು, ಅವರೆಲ್ಲ ಆಶ್ರಯ ಕೋರಿ ಭಾರತಕ್ಕೆ ಬಂದಿದ್ದಾರೆ. ಸಿಎಎಯಲ್ಲಿ ಹೆಸರಿಸಲಾಗಿರುವ ಮೂರೂ ದೇಶಗಳು(ಅಫ್ಘಾನಿಸ್ಥಾನ, ಪಾಕಿಸ್ಥಾನ, ಬಾಂಗ್ಲಾದೇಶ) ಧರ್ಮಶಾಸನವಿರುವ ರಾಷ್ಟ್ರಗಳು ಎನ್ನುವ ಸತ್ಯವನ್ನು ನಿರ್ಲಕ್ಷಿಸಬಾರದು.

ಇನ್ನು ಎರಡನೆಯ ಪ್ರಶ್ನೆಯ ವಿಚಾರಕ್ಕೆ ಬರೋಣ. ಜನರು, ಧಾರ್ಮಿಕ ಹಿಂಸೆಗೆ ತುತ್ತಾಗಿ ನಮ್ಮ ದೇಶಕ್ಕೆ ಆಶ್ರಯ ಕೋರಿ ಬಂದರೆ, ಅವರ ವಿಷಯದಲ್ಲಿ ಭಾರತದ ಮುಂದೆ ಬೇರಾವ ಆಯ್ಕೆಗಳಿವೆ? “Life for minorities in Pakistan has become nasty, brutish and short”ಎಂದು 1950ರಲ್ಲಿ ಶಾಮಪ್ರಸಾದ್‌ ಮುಖರ್ಜಿಯವರು ಹೋಬ್ಸ್ನ ಸಮರೂಪತಾ ಸಿದ್ಧಾಂತವನ್ನು ಬಳಸಿ ಹೇಳಿದ್ದರು. ಅಂಥ ಸ್ಥಿತಿಯನ್ನು ಸರಿಪಡಿಸಲು, ಸುಧಾರಿಸಲು ಬಯಸುತ್ತದೆ ಸಿಎಎ. ಭಾರತವು ಸಿಖ್‌, ಜೈನ ಮತ್ತು ಬೌದ್ಧ ಧರ್ಮದಂಥ ಕೆಲವು ಮಹಾನ್‌ ಧರ್ಮಗಳ ಜನ್ಮಸ್ಥಳವಾಗಿದೆ. ಭಾರತೀಯ ಮೌಲ್ಯಗಳಲ್ಲಿ, ರೂಢಿಯಲ್ಲಿ ವಿವಿಧ ಧರ್ಮಗಳು, ಸಂಪ್ರದಾಯಗಳು ಹಾಗೂ ಪರಂಪರೆಗಳ ಸಮ್ಮಿಶ್ರಣವಿದೆ.

Advertisement

ಈಗ ಏಳುವ ಪ್ರಶ್ನೆಯೆಂದರೆ, ಪೌರತ್ವ ತಿದ್ದುಪಡಿ ಕಾಯ್ದೆಯು ಸಂವಿಧಾನದ 14ನೇ ಪರಿಚ್ಛೇದದಲ್ಲಿ  ಪ್ರತಿಪಾದಿಸಲಾದ ಸಮಾನತೆಯ ಹಕ್ಕಿನ ನಿಬಂಧನೆಗಳಿಗೆ ಬದ್ಧವಾಗಿದೆಯೇ ಎಂಬುದು. ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಪರಿಚ್ಛೇದ 14ರಲ್ಲಿ “”ಭಾರತವು ತನ್ನ ಭೂಪ್ರದೇಶದೊಳಗಿನ ಯಾವುದೇ ವ್ಯಕ್ತಿಯನ್ನು ಸಮಾನ ರಕ್ಷಣೆ ಮತ್ತು ಸಮಾನತೆಯಿಂದ ವಂಚಿಸಬಾರದು” ಎಂದು ಹೇಳುತ್ತದೆ. ಗೃಹ ಸಚಿವ ಅಮಿತ್‌ ಶಾ ಅವರೂ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಯ ಉದ್ದೇಶ ಮತ್ತು ಕಾರಣಗಳನ್ನು ಸ್ಪಷ್ಟವಾಗಿ ವಿವರಿಸಿದ್ದಾರೆ.

ಇತಿಹಾಸವನ್ನು ನೋಡಿದರೆ, ಭಾರತ, ಆಫ್ಘಾನಿಸ್ಥಾನ, ಪಾಕಿಸ್ಥಾನ ಮತ್ತು ಬಾಂಗ್ಲಾದೇಶದ ಗಡಿಯುದ್ದಕ್ಕೂ ವಲಸೆ ನಡೆದಿರುವುದು ತಿಳಿಯುತ್ತದೆ. ಧರ್ಮದ ಕಾರಣಕ್ಕಾಗಿ ದೌರ್ಜನ್ಯಕ್ಕೆ ಒಳಗಾಗಿ ಭಾರತಕ್ಕೆ ಆಶ್ರಯ ಕೋರಿ ಬಂದಿರುವ ಸಮುದಾಯಗಳಲ್ಲಿ ಅನೇಕರ ಟ್ರಾವೆಲ್‌ ಡಾಕ್ಯುಮೆಂಟ್‌ಗಳ ಅವಧಿ ಮುಗಿದಿದೆ ಅಥವಾ ಅಪೂರ್ಣ ದಾಖಲೆಗಳನ್ನು ಹೊಂದಿದ್ದಾರೆ, ಅಥವಾ ಅವರ ಬಳಿ ದಾಖಲೆಗಳೇ ಇಲ್ಲ. ಮೋದಿ ಸರ್ಕಾರವು ತನ್ನ ಮೊದಲನೇ ಅವಧಿಯಲ್ಲಿ ಈ ರೀತಿಯ ವಲಸಿಗರಿಗೆ ಪಾಸ್‌ಪೋರ್ಟ್‌ ಅಧಿನಿಯಮ(ಭಾರತ ಪ್ರವೇಶಕ್ಕೆ) 1920ರ ಹಾಗೂ ವಿದೇಶಿ ಅಧಿನಿಯಮ 1946ರ ಪ್ರತಿಕೂಲ ದಂಡನಾರ್ಹ ಅಂಶಗಳಿಂದಲೂ ವಿನಾಯಿತಿ ನೀಡಿದೆ. ಇದಷ್ಟೇ ಅಲ್ಲದೇ 2016ರಲ್ಲಿ ಮೋದಿ ಸರ್ಕಾರ ಈ ನಿರಾಶ್ರಿತರಿಗೆ ದೀರ್ಘ‌ಕಾಲಿಕ ವೀಸಾ ಪಡೆಯಲೂ ಅರ್ಹರನ್ನಾಗಿಸಿದೆ. ಪೌರತ್ವ ತಿದ್ದುಪಡಿ ಕಾಯ್ದೆಯು ಒಟ್ಟಲ್ಲಿ, ಧಾರ್ಮಿಕ ಹಿಂಸೆಗೆ ತುತ್ತಾಗಿರುವವರಿಗೆ ನಾಗರಿಕತೆ ದೊರಕುವಂತೆ ಮಾಡಲು ಸಶಕ್ತಗೊಳಿಸುತ್ತದೆ.

ಸಿಎಎ, ಸಂವಿಧಾನದ ಅನುಚ್ಛೇದ 25ರ ಉಲ್ಲಂಘನೆ ಮಾಡುತ್ತಿದೆಯೇ ಎನ್ನುವ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ. ಅನುಚ್ಛೇದ 25, ಪ್ರತಿಯೊಬ್ಬ ವ್ಯಕ್ತಿಗೂ ತನಗೆ ಇಷ್ಟವಾದ ಧರ್ಮವನ್ನು ಮುಕ್ತವಾಗಿ ಅನುಸರಿಸಲು, ಆಚರಿಸಲು ಸಮಾನ ಹಕ್ಕನ್ನು ನೀಡುತ್ತದೆ. ಪೌರತ್ವ ತಿದ್ದುಪಡಿ ಕಾಯ್ದೆಯು ಯಾವುದೇ ರೀತಿಯಲ್ಲೂ ಈ ಅಂಶಗಳನ್ನು ಉಲ್ಲಂ ಸಿಲ್ಲ. ಈ ಸತ್ಯವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರೂ ಸ್ಪಷ್ಟವಾಗಿ ಹೇಳಿದ್ದಾರೆ. “”ಸಿಎಬಿಯಿಂದಾಗಿ ಭಾರತೀಯ ಅಲ್ಪಸಂಖ್ಯಾತರ ಹಕ್ಕುಗಳ, ಭಾರತೀಯ ಜಾತ್ಯಾತೀತ ಮೌಲ್ಯಗಳ ಮತ್ತು ಸಂಪ್ರದಾಯಗಳ ಹನನವಾಗುವುದಿಲ್ಲ” ಎಂದವರು ಸ್ಪಷ್ಟಪಡಿಸಿದ್ದಾರೆ.

ಸಿಎಎ ಎನ್ನುವುದು ಅನ್ಯಾಯವನ್ನು ಎದುರಿಸುತ್ತಿರುವ ಸಾವಿರಾರು ನಿರ್ವಸಿತ ಕುಟುಂಬಗಳನ್ನು ಸಬಲೀಕರಣಗೊಳಿಸುವ ಐತಿಹಾಸಿಕ ಹೆಜ್ಜೆಯಾಗಿದೆ. ಬಾಯಲ್ಲಿ ಚಿನ್ನದ ಚಮಚ ಇಟ್ಟುಕೊಂಡು ಹುಟ್ಟಿರುವ ಕೆಲವು ನಾಯಕರು ಇಂದು ದೇಶದಲ್ಲಿ ಹಿಂಸೆ ಮತ್ತು ಅಶಾಂತಿಯನ್ನು ಹಬ್ಬಿಸುತ್ತಿದ್ದಾರೆ. ಅವರಿಗೆ ನಮ್ಮ ವಿನಂತಿಯಿಷ್ಟೇ- ಸ್ವಾಮಿ ವಿವೇಕಾನಂದರು 1893ರಲ್ಲಿ ಧರ್ಮಸಂಸತ್ತಿನಲ್ಲಿ ಮಾಡಿದ ಭಾಷಣವನ್ನು ಒಮ್ಮೆ ನೆನಪುಮಾಡಿಕೊಳ್ಳಿ: “”ಎಲ್ಲಾ ದೇಶಗಳ ಹಾಗೂ ಎಲ್ಲಾ ಧರ್ಮಗಳ ನಿರಾಶ್ರಿತರಿಗೆ, ಧಾರ್ಮಿಕ ಹಿಂಸಾ ಪೀಡಿತರಿಗೆ ನೆಲೆ ಒದಗಿಸಿದ ರಾಷ್ಟ್ರ ನನ್ನದು ಎನ್ನುವುದಕ್ಕೆ ನನಗೆ ಹೆಮ್ಮೆಯಾಗುತ್ತದೆ” ಎಂದಿದ್ದರು ವಿವೇಕಾನಂದರು. ಸಿಎಎ ಹಲವು ರೀತಿಯಲ್ಲಿ ಇದೇ ಆಕಾಂಕ್ಷೆಗಳನ್ನೇ ಪೂರ್ಣಗೊಳಿಸುತ್ತದೆ.
(ಮೂಲ: ಟಿಒಐ)

– ಧರ್ಮೇಂದ್ರ ಪ್ರಧಾನ್‌, ಕೇಂದ್ರ ಇಂಧನ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next