ಬೆಳಗಾವಿ: ಹಲಗಾ-ಮಚ್ಛೆ ಬೈಪಾಸ್ ರಸ್ತೆ 9.5 ಕಿ.ಮೀ. ನಿರ್ಮಾಣಗೊಳ್ಳಲಿದೆ. ಕಾಮಗಾರಿ ನಿಲ್ಲಿಸುವುದಿಲ್ಲ. ಈಗಾಗಲೇ ಜಾಗ ಮಾರ್ಕಿಂಗ್ ಆಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು. ಸಭೆಯ ಬಳಿಕ ಮಾಧ್ಯಮದವರೊಂದಿಗೆ ಗುರುವಾರ ಮಾತನಾಡಿದ ಅವರು, ಕಾಮಗಾರಿ ನಿಲ್ಲಿಸುವುದಿಲ್ಲ. ರೈತರು ಪರಿಹಾರ ಪಡೆದ ಬಗ್ಗೆ ಮಾಹಿತಿ ನೀಡಿದ್ದೇವೆ ಎಂದರು.
ರೈತರೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಬಗ್ಗೆ ತನಿಖೆ ಮಾಡಿಸುತ್ತೇವೆ. ಕಾಮಗಾರಿ ಆರಂಭದ ಕುರಿತು ಬುಧವಾರ ತಿಳಿಸಲಾಗಿತ್ತು. ಕೆಲವು ಅಹಿತಕರ ಘಟನೆ ನಡೆದಿದ್ದು, ಅದು ಆಗಬಾರದಿತ್ತು. ಆತ್ಮಹತ್ಯೆಗೆ ಯತ್ನಿಸಿದ ರೈತ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಂತಹ ಘಟನೆ ನಡೆಯಬಾರದು ಎಂದರು. ಭತ್ತ ಬೆಳೆ ಕಟಾವು ಮಾಡುವವರೆಗೂ ಕಾಮಗಾರಿ ನಡೆಸುವುದಿಲ್ಲ ಇಲ್ಲದಿದ್ದ ಕಡೆ ಕಾಮಗಾರಿ ನಡೆಸಲಾಗುವುದು ಡಿಸಿ ಎಂದು ತಿಳಿಸಿದರು.
ರೈತರ ಪ್ರತಿಭಟನೆ: ಸಭೆಗೂ ಮುನ್ನ ಹಲಗಾ-ಮಚ್ಛೆ ಬೈಪಾಸ್ ರಸ್ತೆ ಕಾಮಗಾರಿ ಆರಂಭಿಸಲು ಮುಂದಾದ ಎನ್ಎಚ್ಎಐ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು. ಫಲವತ್ತಾದ ಜಮೀನು ಸ್ವಾ ಧೀನ ಪಡಿಸಿಕೊಂಡು ರೈತರ ಮೆಲೆ ದಬ್ಟಾಳಿಕೆ ನಡೆಸುತ್ತಿದ್ದಾರೆ. ಬೆಳೆದ ಬೆಳೆಗಳ ಮೇಲೆ ಜೆಸಿಬಿ ಹಾಯಿಸಿ ಬೆಳೆ ಹಾನಿ ಮಾಡಿ ಅಭಿವೃದ್ಧಿ ಮಾಡಲು ಹೊರಟಿದ್ದಾರೆ ಎಂದು ರೈತರು ಆರೋಪಿಸಿದರು.
ನಮ್ಮ ಕಣ್ಣ ಮುಂದೆಯೇ ಫಲವತ್ತಾದ ಜಮೀನು ರಸ್ತೆ ಆಗುತ್ತಿರುವುದನ್ನು ಕಂಡು ವೃದ್ಧೆ ಗೋಳಾಡಿದಳು. ಕಣ್ಣೀರು ಹಾಕುತ್ತ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದಳು. ರಸ್ತೆ ನಿರ್ಮಾಣಕ್ಕೆ ಈ ಮೊದಲು ಸರ್ವೇ ಮಾಡಿದ ಜಮೀನು ಅಲ್ಲದೇ ಫಲವತ್ತಾದ ಕೃಷಿ ಭೂಮಿಯನ್ನೂ ವಶಕ್ಕೆ ಪಡೆಯಲಾಗಿದೆ. ಹೀಗಾದರೆ ರೈತರು ಬದುಕುವುದಾದರೂ ಹೇಗೆ. ಇದ್ದ ಜಮೀನೆಲ್ಲವನ್ನೂ ಕಸಿದುಕೊಂಡು ಸರ್ಕಾರ ರಸ್ತೆ ನಿರ್ಮಿಸುತ್ತಿದೆ ಎಂದು ದೂರಿದರು. ಕೂಡಲೇ ಇದನ್ನು ಕೈ ಬಿಟ್ಟು ನಮ್ಮ ಜಮೀನು ನಮಗೆ ನೀಡಬೇಕು ಎಂದು ರೈತರು ಪ್ರತಿಭಟನೆ ನಡೆಸಿ ಪಟ್ಟು ಹಿಡಿದರು.