Advertisement

ಬಿಯರ್ ಬಾಟಲ್‌ನಿಂದ ತಲೆಗೆ ಹೊಡೆದು ಯುವಕನ ಕೊಲೆ

12:37 PM Oct 20, 2018 | Team Udayavani |

ಬೆಂಗಳೂರು: ಮೂವರು ದುಷ್ಕರ್ಮಿಗಳು ಬಿಯರ್‌ ಬಾಟೆಲ್‌ನಿಂದ ಯುವಕನ ತಲೆಗೆ ಹೊಡೆದು ಕೊಲೆಗೈದ ಘಟನೆ ಮತ್ತಿಕೆರೆಯ ಎಲ್‌ಆರ್‌ಸಿ ರಸ್ತೆಯಲ್ಲಿ ಗುರುವಾರ ತಡರಾತ್ರಿ ನಡೆದಿದೆ. ಉತ್ತರಾಖಂಡ ಮೂಲದ ಜಗದೀಶ್‌ ಸಿಂಗ್‌ (21) ಕೊಲೆಯಾದ ಯುವಕ.

Advertisement

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಾದ ಪ್ರವೀಣ್‌, ಚಿಟ್ಟಿಬಾಬು, ಕಿಶೋರ್‌ ಎಂಬುವವರನ್ನು ಬಂಧಿಸಿದ್ದಾರೆ. ಮೃತ ಜಗದೀಶ್‌ ಸಿಂಗ್‌ ಹೋಟೆಲ್‌ವೊಂದರಲ್ಲಿ ಅಡುಗೆ ತಯಾರಕನಾಗಿ ಕೆಲಸ ಮಾಡಿಕೊಂಡಿದ್ದು ಬಾಡಿಗೆ ಕೊಠಡಿಯಲ್ಲಿ  ನೆಲೆಸಿದ್ದ.

ಗುರುವಾರ ರಾತ್ರಿ ಸ್ನೇಹಿತ, ಮಂಗಳೂರು ಸುಹಾಸ್‌ ಹಾಗೂ ಇಬ್ಬರು ಪರಿಚಯಸ್ಥ ಯುವತಿಯರ ಜತೆ ಹೋಟೆಲ್‌ವೊಂದರಲ್ಲಿ ಊಟ ಮುಗಿಸಿಕೊಂಡು ಎಲ್‌ಆರ್‌ಸಿ ರಸ್ತೆಯಲ್ಲಿ ಮಾತನಾಡುತ್ತಾ ನಿಂತಿದ್ದರು. ಆಗ ಮೂವರು ಆರೋಪಿಗಳು ಯುವತಿಯರಿಗೆ ಚುಡಾಯಿಸಿದ್ದಾರೆ. ಅಶ್ಲೀಲವಾಗಿ ಸನ್ನೆ ಮಾಡಿದ್ದಾರೆ. ಇದನ್ನು ಗಮನಿಸಿದ ಜಗದೀಶ್‌ ಸಿಂಗ್‌ ಆರೋಪಿಗಳನ್ನು ಪ್ರಶ್ನಿಸಿದ್ದಾನೆ.

ಈ ವೇಳೆ ಪರಸ್ಪರ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿಕೊಳ್ಳುವ ಹಂತ ತಲುಪಿದೆ. ಕಡೆಗೆ ಜಗಳ ವಿಕೋಪಕ್ಕೆ ತಿರುಗಿ ಆರೋಪಿಗಳು ತಮ್ಮ ಬಳಿಯಿದ್ದ ಬಿಯರ್‌ ಬಾಟೆಲ್‌ನಿಂದ ಜಗದೀಶ್‌ ತಲೆಗೆ ಬಲವಾಗಿ ಹೊಡೆದು, ಇರಿದಿದ್ದಾರೆ. ತಡೆಯಲು ಹೋದ ಸುಹಾಸ್‌ ಮೇಲೂ ಹಲ್ಲೆಗೆ ಮುಂದಾಗಿದ್ದಾರೆ. ಅವರಿಂದ ತಪ್ಪಿಸಿಕೊಂಡು ಸುಹಾಸ್‌ ಹಾಗೂ ಯುವತಿಯರು ಅಲ್ಲಿಂದ ಓಡಿದ್ದಾರೆ.

ಬಿಯರ್‌ ಬಾಟೆಲ್‌ ಹೊಡೆತದಿಂದ ತಲೆಗೆ ಗಂಭೀರ ಪೆಟ್ಟಾಗಿದ್ದರಿಂದ ರಕ್ತಸ್ರಾವದಿಂದ ನರಳಾಡುತ್ತಿದ್ದ ಜಗದೀಶ್‌ ನೆರವಿಗೆ ಸ್ಥಳೀಯರು ಹಾಗೂ ಮಾಹಿತಿ ತಿಳಿದ ಕೂಡಲೇ ಗಸ್ತು ಪೊಲೀಸರು ಆಗಮಿಸಿ ಆತನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಆತ ಮೃತಪಟ್ಟಿದ್ದಾನೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು. 

Advertisement

ಆರೋಪಿಗಳೆಲ್ಲರೂ ಸ್ಥಳೀಯ ಯುವಕರಾಗಿದ್ದು, ಲೇತ್‌ ವರ್ಕಿಂಕ್‌ ಕೆಲಸ ಮಾಡಿಕೊಂಡಿದ್ದಾರೆ. ಘಟನಾ ಸ್ಥಳದಲ್ಲಿ ಮೃತ ಜಗದೀಶ್‌ ಸಿಂಗ್‌ ಜತೆ ಇಬ್ಬರು ಯುವತಿಯರಿದ್ದರು ಎಂಬ ಮಾಹಿತಿಯಿದ್ದು, ಅವರಿಂದ ಹೇಳಿಕೆ ಪಡೆಯಬೇಕಿದೆ ಎಂದು ಉತ್ತರ ವಿಭಾಗದ ಡಿಸಿಪಿ ಚೇತನ್‌ ಸಿಂಗ್‌ ರಾಥೋಡ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next