Advertisement

ಮಕ್ಕಳ ಭವಿಷ್ಯ ರೂಪಿಸಲು ಪುಸ್ತಕ ಸಹಕಾರಿ

06:10 PM Jan 25, 2022 | Team Udayavani |

ಬೆಳಗಾವಿ: ಜಿಲ್ಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಓದಿಗೆ ಅನುಕೂಲ ಆಗಲಿ ಎಂಬ ಉದ್ದೇಶದಿಂದ ಪುಸ್ತಕ ನೀಡಲಾಗುತ್ತಿದ್ದು, ಮಕ್ಕಳ ಭವಿಷ್ಯ ರೂಪಿಸಲು ಇವು ಸಹಕಾರಿಯಾಗಿವೆ ಎಂದು ಕೆಪಿಸಿಸಿ ಕಾಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

Advertisement

ನಗರದಲ್ಲಿ ಸತೀಶ ಜಾರಕಿಹೊಳಿ ಫೌಂಡೇಶನ್‌ ವತಿಯಿಂದ ಸೋಮವಾರ ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಪರೀಕ್ಷಾ ಸಿದ್ಧತೆಗಾಗಿ ಗೆಲುವಿನತ್ತ ನಮ್ಮ ಪಯಣ ಅಭ್ಯಾಸ ಪುಸ್ತಕ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

915 ಪ್ರೌಢಶಾಲೆಗಳ 56,856 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ 13 ಲಕ್ಷ ರೂ. ಮೊತ್ತದಲ್ಲಿ 15 ಸಾವಿರ ಪ್ರತಿ ಪುಸ್ತಕಗಳನ್ನು ನೀಡಲಾಗುತ್ತಿದೆ. ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ರಾಜ್ಯದಲ್ಲಿ ಮೂಡಲಗಿ 2ನೇ ಮತ್ತು 3ನೇ ಸ್ಥಾನದಲ್ಲಿ ಬರುತ್ತಿದ್ದು, ಇದಕ್ಕೆ ಅಲ್ಲಿಯ ಶಿಕ್ಷಕರು ಪ್ರಯತ್ನ ಕಾರಣ. ಅದೇ ಶಿಕ್ಷಕರಿಂದ ಈ ಪುಸ್ತಕಗಳನ್ನು ತಯಾರಿಸಿದ್ದೇವೆ. ರಾಜ್ಯದಲ್ಲಿಯೇ ಬೆಳಗಾವಿ ಜಿಲ್ಲೆ ಶೈಕ್ಷಣಿಕ ಸ್ಥಾನದಲ್ಲಿ ಪ್ರಥಮ ಸ್ಥಾನದಲ್ಲಿ ಇರಬೇಕೆಂದು ನಾವು ಶ್ರಮಿಸುತ್ತಿದ್ದು, ವಿದ್ಯಾರ್ಥಿಗಳು ಈ ಪುಸ್ತಕಗಳನ್ನು ಸದ್ಬಳಕೆ ಮಾಡಿಕೊಂಡು ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆಯಬೇಕು ಎಂದರು.

ಮಾಜಿ ಸಚಿವ ಎಂ.ಬಿ. ಪಾಟೀಲ ಮಾತನಾಡಿ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸುತ್ತಿರುವುದು ಅರ್ಥಪೂರ್ಣ. ಈಗಾಗಲೇ ಆರ್ಮಿ, ಪೊಲೀಸ್‌ ಆಕಾಂಕ್ಷಿ ಗಳಿಗೆ ತರಬೇತಿ ನೀಡುತ್ತಿದ್ದು, ಬಡ ವಿದ್ಯಾರ್ಥಿಗಳಿಗೆ ಕೆಎಎಸ್‌, ಯುಪಿಎಸಿ ತರಬೇತಿ ನೀಡಲು ಮುಂದಾಗಲಿ. ಆ ಸಾಮರ್ಥ್ಯ ಅವರಿಗಿದೆ. ಪುಸ್ತಕ ವಿತರಣೆ ಸತೀಶ ಬೆಳಗಾವಿಯಲ್ಲಿ ಮಾಡುತ್ತಿದ್ದು, ಇದನ್ನು ರಾಜ್ಯದೆಲ್ಲೆಡೆ ಸರ್ಕಾರ ವಿಸ್ತರಿಸಬೇಕು ಎಂದು ಹೇಳಿದರು.

ಮಾಜಿ ಸಂಸದ ಡಿ.ಎಂ. ಚಂದ್ರಪ್ಪ ಮಾತನಾಡಿ, 12ನೇ ಶತಮಾನದ ಪರಿಕಲ್ಪನೆ ಇಂದು ಶಾಸಕ ಸತೀಶ ಜಾರಕಿಹೊಳಿ ಅವರಲ್ಲಿ ನಾವು ಕಾಣುತ್ತಿದ್ದೇವೆ. ಅವರ ಬಡವರ, ಹಿಂದುಳಿದವರ ಪರ ಕಾಳಜಿ ನಮಗೂ ಅನುಕರಣೀಯ. ಪ್ರಚಾರಕ್ಕೆ ಅವಕಾಶ ನೀಡದೇ ಸಾಮಾಜಿಕ ಕಾರ್ಯದಲ್ಲಿ ತೊಡಗಿದ್ದಾರೆ. ಮುಂದಿನ ದಿನಗಳಲ್ಲಿ ಪ್ರಚಾರಕ್ಕೆ ಆದ್ಯತೆ ನೀಡುವಂತೆ ಸಲಹೆ ನೀಡಿದರು.

Advertisement

ಶಾಸಕಿ ಲಕ್ಷ್ಮೀ ಹೆಬ್ಟಾಳಕರ ಮಾತನಾಡಿ, ರಾಜ್ಯದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಏಕೈಕ ರಾಜಕಾರಣಿ ಸತೀಶ. ಅವರ ಕಾರ್ಯಕ್ರಮಗಳು ಅರ್ಥಪೂರ್ಣವಾಗಿರುತ್ತವೆ. ಅವರ ನಡೆಯಲ್ಲಿ ನಾವು ಸಾಗೋಣ. ಅವರ ಜೀವನ ಸರಳತೆಯಿಂದ ಹಾಗೂ ವಿಚಾರಗಳು ಎತ್ತರದ ಸ್ಥಾನದಲ್ಲಿ ಇರುತ್ತವೆ. ಅವರ ದೂರದೃಷ್ಟಿ, ಮುಂದಾಲೋಚನೆಯಲ್ಲಿ ಸಮಾಜದ ಕಳಕಳಿ ಎದ್ದುಕಾಣುತ್ತದೆ ಎಂದರು.

ಶಾಸಕರಾದ ಪ್ರಸಾದ ಅಬ್ಬಯ್ಯ, ಗಣೇಶ ಹುಕ್ಕೇರಿ, ಟಿ. ರಘುಮೂರ್ತಿ, ಡಾ| ಅಂಜಲಿ ನಿಂಬಾಳಕರ್‌, ವಿಧಾನ ಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮಾಜಿ ಶಾಸಕರಾದ ಅಶೋಕ ಪಟ್ಟಣ, ಎಸ್‌.ಬಿ. ಘಾಟಗೆ, ರಮೇಶ ಕುಡಚಿ, ಕಾಕಾಸಾಹೇಬ ಪಾಟೀಲ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಮಾಜಿ ಸಚಿವ ವೀರಕುಮಾರ ಪಾಟೀಲ, ಬೆಳಗಾವಿ ಡಿಡಿಪಿಐ ಬಸವರಾಜ ನಾಲವತವಾಡ, ಚಿಕ್ಕೋಡಿ ಡಿಡಿಪಿಐ ಮೋಹನ ಹಂಚಾಟೆ, ಯುವ ನಾಯಕ ರಾಹುಲ್‌ ಜಾರಕಿಹೊಳಿ, ಯುವ ನಾಯಕಿ ಪ್ರಿಯಾಂಕ ಜಾರಕಿಹೊಳಿ, ಗಜಾನನ ಮಂಗಸೂಳಿ, ಬಿ. ಸೋಮಶೇಖರ್‌, ಅಶೋಕ ಪೂಜಾರಿ, ಇಸ್ಮಾಯಿಲ್‌ ತಮಟಗಾರ, ಮಹಾವೀರ ಮೋಹಿತೆ, ಬಾಬಾಸಾಹೇಬ ಪಾಟೀಲ, ವಿಶ್ವಾಸ ವೈದ್ಯ, ಬಸವರಾಜ ಕೌಜಲಗಿ ಇತರರು ಇದ್ದರು. ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಲಕ್ಷ್ಮಣರಾವ್‌ ಚಿಂಗಳೆ ಸ್ವಾಗತಿಸಿದರು.

ಕೆಲವು ರಾಜಕಾರಣಿಗಳು ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಕಳುಹಿಸುತ್ತಾರೆ. ಆದರೆ ನನ್ನ ಮಕ್ಕಳಾದ ರಾಹುಲ್‌ ಮತ್ತು ಪ್ರಿಯಾಂಕ ಅವರಿಗೆ ಸ್ಥಳೀಯವಾಗಿ ಶಿಕ್ಷಣ ನೀಡಿ, ಸಾಮಾಜಿಕ ಕೆಲಸದಲ್ಲಿ ತೊಡಗಲು ಸಲಹೆ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಮಾಜ ಸೇವೆಯಲ್ಲಿ ತೊಡಗಿಕೊಳ್ಳಲಿದ್ದಾರೆ.
ಸತೀಶ ಜಾರಕಿಹೊಳಿ,
ಕೆಪಿಸಿಸಿ ಕಾರ್ಯಾಧ್ಯಕ್ಷರು, ಶಾಸಕರು

ಬುದ್ಧ, ಬಸವ, ಅಂಬೇಡ್ಕರ್‌ ದಾರಿಯಲ್ಲಿ ಸಾಗುತ್ತಿರುವ ಸತೀಶ ಜಾರಕಿಹೊಳಿ ನಡೆಯಲ್ಲಿ ನಾವು ಸಾಗೋಣ. ಕೇವಲ ರಾಜಕೀಯ ಮಾಡುವುದು ಅಲ್ಲ. ರಾಜಕೀಯದ ಜತೆ ಸಾಮಾಜಿಕ ಕಾರ್ಯದಲ್ಲಿ ತೊಡಗಲು ನಾವು ಸತೀಶ ಅವರನ್ನು ಅನುಸರಿಸೋಣ. ಇವರ ಸಾಮಾಜಿಕ ಸೇವೆ ರಾಜ್ಯದಲ್ಲಿಯೇ ಮಾದರಿಯಾಗಿದೆ.
ಎಂ.ಬಿ. ಪಾಟೀಲ, ಮಾಜಿ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next