Advertisement

ಬಿಜೆಪಿ ವ್ಯಕ್ತಿ ಕೇಂದ್ರಿತ ಪಕ್ಷವಾಗಲ್ಲ

06:08 AM May 11, 2019 | mahesh |

ಬಿಜೆಪಿಯು ತತ್ವಾದರ್ಶಗಳ ತಳಹದಿ ಮೇಲೆ ನಿಂತಿರುವ ಪಕ್ಷವಾಗಿದ್ದು, ಅದು ಎಂದಿಗೂ ವ್ಯಕ್ತಿ ಕೇಂದ್ರಿತ ಪಕ್ಷವಾಗುವುದಿಲ್ಲ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ. ಬಿಜೆಪಿಯು ಇತ್ತೀಚೆಗೆ ಮೋದಿ ಕೇಂದ್ರೀಕೃತ ಪಕ್ಷವಾಗುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಬಿಜೆಪಿಯು ಹಿಂದೆಯೂ ವಾಜಪೇಯಿಯವರ, ಅಡ್ವಾಣಿಯವರ ಪಕ್ಷವಾಗಿರಲಿಲ್ಲ. ಈಗಲೂ ಅದು ಮೋದಿಯವರ ಅಥವಾ ಅಮಿತ್‌ ಶಾ ಅವರ ಪಕ್ಷವಾಗು ವುದಿಲ್ಲ. ಆದರೆ, ಬಿಜೆಪಿ ಹಾಗೂ ಮೋದಿ ಪರಸ್ಪರ ಆಭಾರಿಯಾಗಿದ್ದಾರೆ’ ಎಂದಿದ್ದಾರೆ. ಇದೇ ವೇಳೆ, ನಾನು ಪ್ರಧಾನಿ ಹುದ್ದೆಯ ರೇಸ್‌ನಲ್ಲಿಲ್ಲ. ಪ್ರಧಾನಮಂತ್ರಿಯಾಗುವ ಯಾವುದೇ ಕನಸು, ಅಜೆಂಡಾ ಅಥವಾ ಆಸೆ ನನಗಿಲ್ಲ. ನರೇಂದ್ರ ಮೋದಿಯವರೇ ನಮ್ಮ ನಾಯಕರು. ಅವರೇ ಮುಂದಿನ ಪ್ರಧಾನ ಮಂತ್ರಿ ಎಂದೂ ಗಡ್ಕರಿ ಸ್ಪಷ್ಟಪಡಿಸಿದ್ದಾರೆ. ಕಳೆದ ಚುನಾವಣೆಗಿಂತ ಈ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನಗಳು ಲಭಿಸಲಿವೆ ಎಂಬ ಆಶಾವಾದವನ್ನೂ ವ್ಯಕ್ತಪಡಿಸಿದ್ದಾರೆ. ಒಡಿಶಾ, ಪಶ್ಚಿಮ ಬಂಗಾಲ ಮತ್ತು ಕೇರಳದಲ್ಲಿ ನಾವು ಹೆಚ್ಚಿನ ಸ್ಥಾನಗಳನ್ನು ಗಳಿಸುತ್ತೇವೆ. ಅಷ್ಟೇ ಅಲ್ಲ, ಉತ್ತರಪ್ರದೇಶದಲ್ಲೂ ನೀವಂದುಕೊಂಡಂತೆ ಆಗುವುದಿಲ್ಲ ನೋಡ್ತಾ ಇರಿ ಎಂದಿದ್ದಾರೆ ಗಡ್ಕರಿ.

ಬಿಜೆಪಿ ಅಭ್ಯರ್ಥಿ ಕಾರಲ್ಲಿ 1.13 ಲಕ್ಷ!
ಬಂಗಾಲದಲ್ಲಿ ಗುರುವಾರ ರಾತ್ರಿ ಬಿಜೆಪಿ ಅಭ್ಯರ್ಥಿ ಭಾರತಿ ಘೋಷ್‌ ಅವರ ಕಾರಿನಲ್ಲಿ 1.13 ಲಕ್ಷ ರೂ.ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಾಜಿ ಐಪಿಎಸ್‌ ಅಧಿಕಾರಿಯೂ ಆಗಿರುವ ಭಾರತಿ ಅವರ ಕಾರನ್ನು ರಾತ್ರಿ 11ರ ವೇಳೆಗೆ ಮಂಗಲ್ ಬಾರ್‌ ಬಳಿ ತಡೆಹಿಡಿದ ಪೊಲೀಸರು, ತಪಾಸಣೆ ನಡೆಸಿದಾಗ ನಗದು ಪತ್ತೆಯಾಯಿತು. ಈ ಬಗ್ಗೆ ಸೂಕ್ತ ವಿವರಣೆ ನೀಡಲು ಭಾರತಿ ವಿಫ‌ಲವಾದ ಕಾರಣ, ನಗದನ್ನು ಜಪ್ತಿ ಮಾಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
Advertisement

Udayavani is now on Telegram. Click here to join our channel and stay updated with the latest news.

Next