Advertisement

ರೈತರ ಸಮಸ್ಯೆ ಪರಿಹರಿಸಲು ಬಿಜೆಪಿ ಬದ್ಧ

12:18 PM May 04, 2018 | |

ಚಿಕ್ಕಮಗಳೂರು: ಅನ್ನದಾತ ರೈತರು ಯಾವುದೇ ಕಾರಣಕ್ಕೂ ಎದೆಗುಂದುವುದು ಬೇಡ. ಅವರ ಸಮಸ್ಯೆಯನ್ನು ಪರಿಹರಿಸಲು ಬಿಜೆಪಿ ಸದಾ ಸಿದ್ದ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌ .ಯಡಿಯೂರಪ್ಪ ಹೇಳಿದರು. ಕಡೂರು ತಾಲೂಕು ಸಖರಾಯಪಟ್ಟಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಚುನಾವಣಾ ಪ್ರಚಾರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಅನ್ನದಾತ ರೈತರು ಸಾಕಷ್ಟು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ರೈತರ ಸಮಸ್ಯೆಗಳನ್ನು ಪರಿಹರಿಸಲಾಗುವುದು. ಸಮಗ್ರ ನೀರಾವರಿ ಯೋಜನೆ ಜಾರಿಗೆ ತರಲಾಗುವುದು. ನೀರಾವರಿ ಯೋಜನೆಗಳಿಗಾಗಿಯೇ 1 ಲಕ್ಷ ಕೋಟಿ ರೂ.ಗೂ ಹೆಚ್ಚು ಅನುದಾನ ಮೀಸಲಿಡಲಾಗುವುದು ಎಂದರು.

ರೈತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಪ್ರತಿನಿತ್ಯ 10 ಗಂಟೆ 3 ಫೇಸ್‌ ವಿದ್ಯುತ್‌ ನೀಡಲಾಗುವುದು. ಮೆಕ್ಕೆ ಜೋಳಕ್ಕೆ ಕ್ವಿಂಟಲ್‌ಗೆ 1500 ರೂ. ಬೆಂಬಲ ಬೆಲೆ ನಿಗದಿಪಡಿಸಲಾಗುವುದು. ರೈತರು ಬೆಳೆದ ಯಾವುದೇ ಬೆಳೆಗೆ ಬೆಲೆ ಇಳಿಕೆಯಾದಲ್ಲಿ ಅದಕ್ಕೆ ಬೆಂಬಲ ಬೆಲೆ ನೀಡಲು 5 ಸಾವಿರ ಕೋಟಿ ರೂ. ಆವರ್ತನ ನಿಧಿ ಇಡಲಾಗುವುದು ಎಂದರು. 

ಪಕ್ಷದ ಚುನಾವಣಾ ಪ್ರಣಾಳಿಕೆ ಸಿದ್ಧಪಡಿಸಲಾಗಿದೆ. ಪ್ರಣಾಳಿಕೆಯಲ್ಲಿ ಎಲ್ಲ ವರ್ಗದ ಜನರಿಗೆ ಆದ್ಯತೆ ನೀಡಲಾಗಿದೆ. ಭಾಗ್ಯಲಕ್ಷ್ಮೀ ಯೋಜನೆಯಡಿ ಈಗ 1 ಲಕ್ಷ ರೂ. ನೀಡಲಾಗುತ್ತಿದೆ. ಅದನ್ನು ಹೆಚ್ಚಿಸಲಾಗುವುದು. ಹಿಂದುಳಿದ ವರ್ಗದವರ ಅಭಿವೃದ್ಧಿಗೆ ಯೋಜನೆ, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು. ನಾಳೆ ಪಕ್ಷದ ಪ್ರಣಾಳಿಕೆ ಬಿಡುಗಡೆಯಾಗಲಿದೆ. ರಾಜ್ಯದ ಎಲ್ಲ ವರ್ಗದ ಜನರು ಪ್ರಣಾಳಿಕೆ ನೋಡಿ ವಿಜಯೋತ್ಸವ ಆಚರಿಸುವುದು ಖಚಿತ ಎಂದರು.

ಈ ಭಾಗದ 63 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಶಾಸಕ ಸಿ.ಟಿ.ರವಿ ಈಗಾಗಲೆ ಡಿ.ಪಿ.ಆರ್‌. ಸಿದ್ಧಪಡಿಸಿದ್ದಾರೆ. ಈ ಬಗ್ಗೆ ತಮ್ಮೊಡನೆ ಅವರು ಚರ್ಚಿಸಿದ್ದಾರೆ. ತಾವು ಮುಖ್ಯಮಂತ್ರಿಯಾದ ಕೂಡಲೆ ಈ ಕಾಮಗಾರಿಗೆ ಚಾಲನೆ ನೀಡುವುದಾಗಿ ಘೋಷಿಸಿದರು.

Advertisement

ಸಚಿವರಾಗುವುದು ಖಚಿತ: ತಾವು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿ ತಮ್ಮ ಪಕ್ಕದಲ್ಲಿ
ಸಿ.ಟಿ.ರವಿ ಸಹ ಇರುತ್ತಾರೆ. ಆ ಬಗ್ಗೆ ಯಾವುದೇ ಅನುಮಾನ ಬೇಡ. 3 ಬಾರಿ ಶಾಸಕರಾಗಿ ಸಿ.ಟಿ.ರವಿ ಒಳ್ಳೆಯ ಕೆಲಸ ಮಾಡಿದ್ದಾರೆ. ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿ. ಜಾತಿ ವಿಷ ಬೀಜ ಬಿತ್ತುವವರಿಗೆ ತಕ್ಕ ಪಾಠ ಕಲಿಸಿ ಎಂದು ಕರೆ ನೀಡಿದರು.

ನೀರಾವರಿ ಯೋಜನೆಗೆ ಪ್ರಥಮ ಆದ ನೀರಾವರಿ ಯೋಜನೆಗೆ ಪ್ರಥಮ ಆದ್ಯತೆ  
ಅಜ್ಜಂಪುರ: ರಾಜ್ಯದ ರೈತರ ಹಿತ 1ಒಂದು ಲಕ್ಷ ಕೋಟಿ ರೂ. ವೆಚ್ಚದಲ್ಲಿ ರಾಜ್ಯದ ನೀರಾವರಿ ಯೋಜನೆ ಪೂರ್ಣಗೊಳಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.  ಅಜ್ಜಂಪುರದಲ್ಲಿ ಬಿಜೆಪಿ ಅಭ್ಯರ್ಥಿ ಪರ ನಡೆದ ಸಾರ್ವಜನಿಕ
ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.  ರಾಜ್ಯದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್‌ ಪಕ್ಷ ಬಿಜೆಪಿಯ ಜನಪರ ಯೋಜನೆಗಳನ್ನು ಸ್ಥಗಿತಗೊಳಿಸಿದೆ. ನಾನು ಅಧಿಕಾರಕ್ಕೆ ಬಂದ ಮೇಲೆ ಭಾಗ್ಯಲಕ್ಷ್ಮೀ ಯೋಜನೆಯಡಿ ನೀಡುತ್ತಿರುವ ಸಹಾಯ ಧನದ ಮೊತ್ತವನ್ನು 3 ಲಕ್ಷ ರೂ.ಗೇರಿಸಲಾಗುವುದು. ಬಡ ಕುಟುಂದ ಹೆಣ್ಣು ಮಕ್ಕಳ ಮದುವೆಗೆ ಮೂರು ಗ್ರಾಂ ತೂಕದ ತಾಳಿ ಮತ್ತು ಮದುವೆ ಖರ್ಚಿಗೆ ಧನಸಹಾಯ, ಪದವಿವರೆಗಿನ ಶಿಕ್ಷಣವನ್ನು ಸಂಪೂರ್ಣವಾಗಿ ಉಚಿತಗೊಳಿಸಲಾಗುವುದು ಎಂದರು.

ಅಧಿಕಾರ ಪಡೆದ 24 ಗಂಟೆಯೊಳಗೆ ಸಹಕಾರಿ ಸಂಘಗಳ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳ ರೈತರ ಸಾಲ ಮನ್ನಾ ಮಾಡಲಾಗುವುದು. ನನಗೆ ರೈತರ ಹಿತ ಮುಖ್ಯ. ರೈತರಿಗಾಗಿ ಏನು ಬೇಕಾದರೂ ಮಾಡಲು ಸಿದ್ಧ ಎಂದು ಹೇಳಿದರು. ಸಂಸದೆ ಶೋಭಾ ಕಂರಂದ್ಲಾಜೆ ಮಾತನಾಡಿ, ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತುತ್ತಿರುವ ಹಾಗೂ ಧರ್ಮ ಒಡೆಯುವ ಕೆಲಸಕ್ಕೆ ಕೈಹಾಕಿರುವ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್‌ ಸರ್ಕಾರಕ್ಕೆ ಉಳಿಗಾಲವಿಲ್ಲ. ರಾಜ್ಯದಲ್ಲಿ ಲಿಂಗಾಯಿತರು ಒಂದಾಗಿದ್ದಾರೆ. ರಾಜಕೀಯ ಅಧಿಕಾರಕ್ಕಾಗಿ ನೀವು ನಡೆಸಿದ ಕುತಂತ್ರದ ಬಗ್ಗೆ ಎಚ್ಚರಗೊಂಡಿದ್ದಾರೆ. ಮುಂಬರುವ ಚುನಾವಣೆಯಲ್ಲಿ ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಕೇವಲ ಓಟಿಗಾಗಿ ಹಿಂದೂ ಕಾರ್ಯಕರ್ತರ ಹತ್ಯೆಯನ್ನು ಮುಚ್ಚಿ ಹಾಕಿದ್ದೀರಿ. ಸಾವಿಗೊಂದು ಬಣ್ಣ ಕಟ್ಟಿ ಸಾವಿಗೆ ಕಾರಣ ಆದವರನ್ನು ತಪ್ಪಿಸಿಕೊಳ್ಳುವಂತೆ ಮಾಡಿದ್ದೀರಿ. ಪಿಎಫ್‌ಐ ನಂತಹ ಉಗ್ರ ಸಂಘಟನೆಯೊಂದಿಗೆ ಕೈಜೋಡಿಸಿದ್ದೀರಿ. ಎಲ್ಲಕ್ಕೂ ಉತ್ತರ ಕೊಡುವ ಸಮಯ ಬಂದಿದೆ. ಉತ್ತರ ಕೊಡುವ ಕೆಲಸವನ್ನು ರಾಜ್ಯದ ಜನ ಮಾಡಲಿದ್ದಾರೆ. ನಿಮ್ಮನ್ನು ಮನೆಗೆ ಕಳುಹಿಸಲಿದ್ದಾರೆ ಎಂದರು. 

ಬಿಜೆಪಿ ಅಭ್ಯರ್ಥಿ ಡಿ.ಎಸ್‌. ಸುರೇಶ್‌ ಮಾತನಾಡಿ, ತಾಲೂಕಿನ ನೀರಾವರಿ ಯೋಜನೆಗಳನ್ನು ಕಾಂಗ್ರೆಸ್‌ ಸ್ಥಗಿತಗೊಳಿಸಿದೆ. ಕುಡಿಯುವ ನೀರಿನ ಯೋಜನೆ ಪೂರ್ಣಗೊಳಿಸುವಲ್ಲಿಯೂ ವಿಫಲವಾಗಿದೆ. ಹೀಗಾಗಿ ತಾಲ್ಲೂಕಿನ ಬಹುತೇಕ ಗ್ರಾಮಗಳ ಜನ-ಜಾನುವಾರುಗಳು
ನೀರಿಲ್ಲದೇ ಪರದಾಡುತ್ತಿವೆ. ತಾವು ಗೆದ್ದ ಕೂಡಲೇ ತಾಲೂಕಿನ ನೀರಾವರಿ ಯೋಜನೆ ಅನುಷ್ಠಾನ ಜತೆಗೆ ಮಾದರಿ ತಾಲೂಕಾಗಿ ರೂಪಿಸಲಾಗುವುದು ಎಂದು ಭರವಸೆ ನೀಡಿದರು.

ಮಾಜಿ ಸಂಸದ ಜಯಪ್ರಕಾಶ್‌ ಹೆಗಡೆ, ಜಿಪಂ ಮಾಜಿ ಅಧ್ಯಕ್ಷೆ ಚೈತ್ರಶ್ರೀ, ಸದಸ್ಯ ಮಹೇಂದ್ರ, ಶಶಿಕಲಾ, ತಾಪಂ ಅಧ್ಯಕ್ಷೆ ಪದ್ಮಾವತಿ ಸಂಜೀವ್‌ ಕುಮಾರ್‌, ಬಿಜೆಪಿ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ದೇವಾನಂದ್‌, ಮಂಡಲಾಧ್ಯಕ್ಷ ಶಂಬೈನೂರು ಆನಂದಪ್ಪ, ಶಕ್ತಿ ಕೇಂದ್ರ ಅಧ್ಯಕ್ಷ ಮಲ್ಲಿಕಾರ್ಜುನ ಅಡವಿ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next