Advertisement

ಸ್ನೇಹಿತನ ಕೊಂದ ಆರೋಪಿ ಬಂಧನ

06:03 AM Mar 14, 2019 | |

ಬೆಂಗಳೂರು: ಇತ್ತೀಚೆಗೆ ಬೊಮ್ಮನಹಳ್ಳಿಯ ಹಿಂದೂ ರುದ್ರಭೂಮಿಯಲ್ಲಿ ಸೆಕ್ಯೂರಿಟಿ ಗಾರ್ಡ್‌ ಮಂಜುನಾಥ (48) ಎಂಬುವವರನ್ನು ಹತ್ಯೆಗೈದಿದ್ದ ಆರೋಪಿಯನ್ನು ಎಚ್‌ ಎಸ್‌ಆರ್‌ ಲೇಔಟ್‌ ಪೊಲೀಸರು ಬಂಧಿಸಿದ್ದಾರೆ.

Advertisement

ಮಂತ್ರಾಲಯ ಮೂಲದ ಶೇಖರಪ್ಪ (46) ಬಂಧಿತ. ಆರೋಪಿ ಮಾ.9ರಂದು ಗೋವಿಂದಶೆಟ್ಟಿ ಪಾಳ್ಯ ನಿವಾಸಿ ಮಂಜುನಾಥನನ್ನು ಕಲ್ಲು ಎತ್ತಿಹಾಕಿ ಹತ್ಯೆಗೈದು, ಪರಾರಿಯಾಗಿದ್ದ. ಘಟನಾ ಸ್ಥಳದ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಕೆಲ ವರ್ಷಗಳ ಹಿಂದೆ ನಗರಕ್ಕೆ ಬಂದಿರುವ ಆರೋಪಿ ಮಂಗಮ್ಮನಪಾಳ್ಯದಲ್ಲಿ ವಾಸವಾಗಿದ್ದು, ಗಾರೆ ಕೆಲಸ ಮಾಡುತ್ತಿದ್ದ. ಈ ಮಧ್ಯೆ ಮದ್ಯದ ಅಂಗಡಿಯಲ್ಲಿ ಪರಿಚಯವಾದ ಮಂಜುನಾಥನಿಗೆ ಆಗಾಗ ಮದ್ಯ ಸೇವಿಸಲು ಹಣ ಕೊಡುತ್ತಿದ್ದ. ಆದರೆ, ಮಂಜುನಾಥ ಹಣ ಹಿಂದಿರುಗಿಸುತ್ತಿರಲಿಲ್ಲ. ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು.

ಈ ಮಧ್ಯೆ ಮಾ.6ರಂದು ತಡರಾತ್ರಿ ಇಬ್ಬರೂ ಬೊಮ್ಮನ ಹಳ್ಳಿಯ ಬಾರ್‌ವೊಂದರಲ್ಲಿ ಮದ್ಯ ಖರೀದಿಸಿ ಕುಡಿಯಲು ರುದ್ರಭೂಮಿ ಒಳಗೆ ಹೋಗಿದ್ದಾರೆ. ಈ ವೇಳೆ ಇಬ್ಬರ ನಡುವೆ ಹಣಕಾಸಿನ ವಿಚಾರಕ್ಕೆ ವಾಗ್ವಾದ ನಡೆದಿದ್ದು, ಕೋಪಗೊಂಡ ಶೇಖರಪ್ಪ, ಮದ್ಯದ ಬಾಟಲಿಯಲ್ಲಿ ಮಂಜುನಾಥನ ತಲೆಗೆ ಹೊಡೆದಿದ್ದು, ಆತ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಗಾಬರಿಗೊಂಡ ಆರೋಪಿ ಅಲ್ಲೇ ಇದ್ದ ನಾಲ್ಕೈದು ಕಲ್ಲುಗಳನ್ನು ಮಂಜುನಾಥನ ಮೇಲೆ ಎತ್ತಿ ಹಾಕಿ ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next