Advertisement

ದಾರಿ ತಪ್ಪಿದ 3 ಮಂದಿ, 13 ಯಾಕ್ಸ್‌ ಮತ್ತು 4 ಕರುಗಳನ್ನು ಚೀನಕ್ಕೆ ಹಸ್ತಾಂತರಿಸಿದ ಸೇನೆ

06:53 PM Sep 08, 2020 | Karthik A |

ಮಣಿಪಾಲ: ಲಡಾಖ್‌ ಗಡಿಯಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಹೊರತಾಗಿಯೂ, ಭಾರತೀಯ ಸೇನೆಯು ಸಂದರ್ಭ ಬಂದಾಗ ಚೀನಕ್ಕೆ ಮಾನವೀಯ ನೆಲೆಯಲ್ಲಿ ಸಹಾಯ ಮಾಡುತ್ತಿದೆ. ಈ ಮೂಲಕ ಭಾರತೀಯ ಸೇನೆ ಜಗತ್ತಿಗೆ ತನ್ನ ಹಿರಿಮೆಯನ್ನು ಎತ್ತಿ ತೋರಿಸಿದೆ.

Advertisement

ಚೀನ-ಭಾರತ ಗಡಿಯಲ್ಲಿ ಮೇಯುತ್ತಿದ್ದ ಚೀನೀ ಯಾಕ್ಸ್‌ ಮತ್ತು ಅದರ ಕರುಗಳನ್ನು ಸೋಮವಾರ ಲೈನ್‌ ಆಫ್ ಆಕ್ಚುವಲ್‌ ಕಂಟ್ರೋಲ್‌ (ಎಲ್‌ಎಸಿ) ಬಳಿ ಪತ್ತೆಯಾಗಿತ್ತು. ಇದನ್ನು ನೋಡಿದ ಭಾರತೀಯ ಸೈನಿಕರು ಅದನ್ನು ಚೀನಕ್ಕೆ ಹಸ್ತಾಂತರಿಸಿದೆ. ಸೇನೆಯ ಪೂರ್ವ ಕಮಾಂಡ್‌ ಈ ಬಗ್ಗೆ ಮಾಹಿತಿ ನೀಡಿದ್ದು, ಭಾರತೀಯ ಸೈನಿಕರ ಈ ಕಾರ್ಯಕ್ಕೆ ಚೀನದ ಅಧಿಕಾರಿಗಳೂ ಧನ್ಯವಾದಗಳನ್ನು ಅರ್ಪಿಸಿದ್ದಾಗಿ ತಿಳಿದುಬಂದಿದೆ.

ಈ ಕುರಿತಂತೆ ಚೀನದ ಸೇನೆ ಟ್ವೀಟ್‌ ಮಾಡಿದ್ದು, ಮಾನವೀಯತೆಯ ದೃಷ್ಟಿಯಿಂದ ಭಾರತೀಯ ಸೈನ್ಯವು ಸೆಪ್ಟೆಂಬರ್‌ 7ರಂದು 13 ಯಾಕ್‌ ಮತ್ತು ನಾಲ್ಕು ಕರುಗಳನ್ನು ಚೀನದ ಸೈನ್ಯಕ್ಕೆ ಹಸ್ತಾಂತರಿಸಿದೆ. ಈ ಯಾಕ್‌ಗಳು ಆಗಸ್ಟ್‌ 31ರಂದು ಎಲ್‌ಎಸಿ ದಾಟಿ ಅರುಣಾಚಲ ಪ್ರದೇಶದ ಪೂರ್ವಕ್ಕೆ ಬಂದಿದ್ದವು. ಸೈನಿಕರಿಗೆ ನಾವು ಕೃತಜ್ಞತೆ ಅರ್ಪಿಸುವುದಾಗಿ ಅವರು ಹೇಳಿದ್ದಾರೆ.

ಚೀನದ 3 ನಾಗರಿಕರಿಗೆ ಸಹಾಯ ಮಾಡಿದ ಭಾರತ
ಮತ್ತೂಂದು ಉದಾಹರಣೆಯಲ್ಲಿ ಹಾದಿ ತಪ್ಪಿದ 3 ಚೀನೀ ನಾಗರಿಕರಿಗೆ ಭಾರತೀಯ ಸೇನೆಯು ಸಹಾಯ ಮಾಡಿದೆ. ಈ ಘಟನೆ ಸೆಪ್ಟೆಂಬರ್‌ 3 ರಂದು ನಡೆದಿತ್ತು. ಚೀನದ ನಾಗರಿಕರು ಸಿಕ್ಕಿಂನ ಉತ್ತರ ಭಾಗದಲ್ಲಿ ದಾರಿ ತಪ್ಪಿದ್ದರು. ಪರಿಣಾಮವಾಗಿ ಅವರು 17,500 ಅಡಿ ಎತ್ತರದಲ್ಲಿರುವ ಪ್ರದೇಶದತ್ತ ತೆರಳಬೇಕಾಯಿತು. ಇದು ಅತೀ ಎತ್ತರದಲ್ಲಿರುವ ಪ್ರದೇಶವಾಗಿದೆ. ಇಲ್ಲಿ ಉಸಿರಾಡಲು ಆಮ್ಲಜನಕದ ಕೊರತೆ ಕಂಡುಬರುತ್ತದೆ. ಚೀನದ ನಾಗರಿಕರ ಜೀವಕ್ಕೆ ಅಪಾಯವಿದೆ ಎಂಬುದನ್ನು ಅರಿತ ಭಾರತೀಯ ಸೇನೆಯು ತತ್‌ಕ್ಷಣ ಅಲ್ಲಿಗೆ ತೆರಳಿ ಆಮ್ಲಜನಕ ಮತ್ತು ಇತರ ವೈದ್ಯಕೀಯ ನೆರವುಗಳನ್ನು ನೀಡಿದೆ. ಪರಿಸ್ಥಿತಿಯ ತೀವ್ರತೆಗಾಗಿ ಅವರಿಗೆ ಆಹಾರ ಮತ್ತು ಬೆಚ್ಚಗಿನ ಬಟ್ಟೆಗಳನ್ನು ಸಹ ನೀಡಲಾಯಿತು.

Advertisement

ಐದು ಹುಡುಗರನ್ನು ಅಪಹರಿಸಿದ ಆರೋಪದಲ್ಲಿ ಚೀನ
ಸೆಪ್ಟೆಂಬರ್‌ 5ರಂದು ಅರುಣಾಚಲ ಪ್ರದೇಶದ ಐದು ಹುಡುಗರನ್ನು ಚೀನ ಅಪಹರಿಸಿದೆ ಎಂದು ಸ್ಥಳಿಯ ಕಾಂಗ್ರೆಸ್‌ ಶಾಸಕ ನಿನೊಂಗ್‌ ಎರಿಂಗ್‌ ಟ್ವಿಟ್ಟರ್‌ನಲ್ಲಿ ಹೇಳಿಕೊಂಡಿದ್ದಾರೆ. ಅಪಹರಣಕ್ಕೆ ಒಳಗಾಗಿದ್ದಾರೆ ಎಂದು ಹೇಳಲಾಗುವ 5 ಹುಡುಗರ ಹೆಸರನ್ನೂ ಬಹಿರಂಗಪಡಿಸಲಾಗಿದೆ. ಐವರು ಬಾಲಕರನ್ನು ಸುರಕ್ಷಿತವಾಗಿ ಹಿಂದಿರುಗಿಸಬೇಕು ಎಂದು ಅವರು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರಿಗೆ ಮನವಿ ಮಾಡಿದ್ದಾರೆ. ಈ ಪ್ರಕರಣದಲ್ಲಿ ಅರುಣಾಚಲ ಪೊಲೀಸರು ಸಹ ತನಿಖೆ ಆರಂಭಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next