Advertisement

ಮೈತ್ರಿಕೂಟ ಒಂದಂಕಿ ದಾಟುವುದೂ ಕಷ್ಟ : “ಉದಯವಾಣಿ’ಸಂವಾದದಲ್ಲಿ ಬಿಎಸ್‌ವೈ ಭವಿಷ್ಯ

09:16 AM Apr 16, 2019 | Team Udayavani |

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟ ಒಂದಂಕಿ ದಾಟುವುದಿಲ್ಲ. ಅನಂತರ ಸಮ್ಮಿಶ್ರ ಸರಕಾರವೂ ಇರುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

Advertisement

“ಉದಯವಾಣಿ’ ಕಚೇರಿಯಲ್ಲಿ ರವಿವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿ 22 ಸ್ಥಾನಗಳನ್ನು ಗೆಲ್ಲುವುದು ಖಚಿತ. ಸಮ್ಮಿಶ್ರ ಸರಕಾರ ತನ್ನಿಂತಾನೇ ಪತನವಾಗುವುದು ನಿಶ್ಚಿತ ಎಂದು ತಿಳಿಸಿದರು. ರಾಜ್ಯದಲ್ಲಿ 20ಕ್ಕೂ ಹೆಚ್ಚು ಕಾಂಗ್ರೆಸ್‌ ಶಾಸಕರು ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಆದೇಶದ ವಿರುದ್ಧ ಕೆಲಸ ಮಾಡುತ್ತಿದ್ದಾರೆ. ಹೀಗಿರುವಾಗಿ ಕಾಂಗ್ರೆಸ್‌-ಜೆಡಿಎಸ್‌ 20 ಸ್ಥಾನಗಳನ್ನು ಗೆಲ್ಲವುದು ತಿರುಕನ ಕನಸು ಎಂದು ಲೇವಡಿ ಮಾಡಿದರು.

ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಪತನಗೊಂಡರೆ ಯಾವುದೇ ಕಾರಣಕ್ಕೂ ಜೆಡಿಎಸ್‌ ಜತೆ ಸೇರಿ ನಾವು ಸರಕಾರ ಮಾಡುವ ಪ್ರಮೇಯ ಅಥವಾ ಪರಿಸ್ಥಿತಿಯೇ ಉದ್ಭವಿಸುವುದಿಲ್ಲ. ಬಿಜೆಪಿ ಸ್ವಂತ ಬಲದ ಮೇಲೆ ಸರಕಾರ ರಚಿಸಲಿದೆ ಎಂಬ ವಿಶ್ವಾಸ ನನಗಿದೆ ಎಂದು ತಿಳಿಸಿದರು.

ಈ ಹಿಂದೆ ಜೆಡಿಎಸ್‌ ಜತೆ ಸೇರಿ ಸರಕಾರ ರಚನೆ ಮಾಡಿದ್ದಾಗ ಅಪ್ಪ-ಮಕ್ಕಳು ಸೇರಿ ನಮಗೆ ಟೋಪಿ ಹಾಕಿದ್ದು ಗೊತ್ತಿದೆ. ಸ್ವಾಭಿಮಾನಕ್ಕೆ ಧಕ್ಕೆಯಾದಾಗ ರಾಜೀನಾಮೆ ಕೊಟ್ಟು ಬಂದೆ. ಹೀಗಾಗಿಯೇ ರಾಜ್ಯದಲ್ಲಿ ಬಿಜೆಪಿ ಉಳಿದಿದೆ. ಮುಂದಿನ ದಿನಗಳಲ್ಲಿ ಯಾವುದೇ ಪರಿಸ್ಥಿತಿಯಲ್ಲೂ ನಾವು ಜೆಡಿಎಸ್‌ ಜತೆ ಸೇರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಪುನರುತ್ಛರಿಸಿದರು.

ರಾಜ್ಯದಲ್ಲಿ ಜೆಡಿಎಸ್‌ ವಿರುದ್ಧ ತೀವ್ರ ಆಕ್ರೋಶವಿದೆ. ಕುಟುಂಬ ರಾಜಕಾರಣಕ್ಕೆ ಒಂದು ಮಿತಿ ಇರಬೇಕು. ಮಕ್ಕಳು, ಸೊಸೆಯಂದಿರು ಅನಂತರ ಮೊಮ್ಮಕ್ಕಳು ಬಂದಿದ್ದಾರೆ. ರಾಜ್ಯದ ಜನತೆಯಲ್ಲಿ ಇದರ ಬಗ್ಗೆ ಆಕ್ರೋಶವಿದೆ. ಸ್ವತಃ ತುಮಕೂರಿನಲ್ಲಿ ದೇವೇಗೌಡರು ಗೆಲ್ಲುವುದು ಅನುಮಾನವಿದೆ ಎಂದರು.

Advertisement

ವರದಾನ: ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಮಾಡಿಕೊಂಡಿರು ವುದೇ ನಮಗೆ ವರದಾನ. ಮೈಸೂರು, ಮಂಡ್ಯ ಕ್ಷೇತ್ರಗಳೇ ಇದಕ್ಕೆ ಸಾಕ್ಷಿ. ಒಂದೆರಡು ಕ್ಷೇತ್ರಗಳು ಬಿಟ್ಟರೆ ಉಳಿದೆಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಗೆ ವಿರೋಧವಿದೆ. ಹೀಗಾಗಿ ಇವರು ಒಟ್ಟಾಗಿ ಹೋಗುತ್ತಿರುವುದೇ ನಮಗೆ ಲಾಭವಾಗಲಿದೆ. ಇದರಲ್ಲಿ ಯಾವುದೇ ಅನುಮಾನವೇ ಇಲ್ಲ ಎಂದರು.

ಕುಮಾರಸ್ವಾಮಿಯವರು ಅಧಿಕಾರ ದುರುಪಯೋಗಪಡಿಸಿಕೊಂಡು ಚುನಾವಣೆ ನಡೆಸುತ್ತಿದ್ದಾರೆ. 150 ಕೋ. ರೂ. ಮಂಡ್ಯದಲ್ಲಿ ಹಂಚಿಕೆ ಮಾಡಲಾಗುವುದು ಎಂಬ ಬಗ್ಗೆ ಆಡಿಯೋ ವೈರಲ್‌ ಆಗಿದ್ದು ಆ ಬಗ್ಗೆ ಕುಮಾರಸ್ವಾಮಿಯವರೇ ಸ್ಪಷ್ಟನೆ ನೀಡಬೇಕು ಎಂದವರು ಆಗ್ರಹಿಸಿದರು.

ರಾಜ್ಯ ಸರಕಾರ ವರ್ಗಾವಣೆ ದಂಧೆ, ಭ್ರಷ್ಟಾಚಾರ ದಲ್ಲಿ ತೊಡಗಿದೆ. ರಾಜ್ಯದಲ್ಲಿ ಭೀಕರ ಬರಗಾಲ ಇದ್ದರೂ ಸ್ಪಂದನೆ ಮಾಡಿಲ್ಲ. 49 ಸಾವಿರ ಕೋ. ರೂ. ರೈತರ ಸಾಲ ಮನ್ನಾ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಮಾಡುವುದಾಗಿ ಘೋಷಿಸಿದ್ದರೂ ಇದುವರೆಗೂ 4,500 ಕೋ. ರೂ. ಮಾತ್ರ ಮನ್ನಾ ಮಾಡಲಾಗಿದೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ಪಡೆದವರು ದಾರಿ ಕಾಣದಂತಾಗಿದ್ದಾರೆ ಎಂದು ಹೇಳಿದರು.

ಮೋದಿ ವರ್ಚಸ್ಸು ವೃದ್ಧಿ
2014 ರ ಲೋಕಸಭೆ ಚುನಾವಣೆಗೂ 2019ರ ಲೋಕಸಭೆ ಚುನಾವಣೆಗೂ ಹೋಲಿಕೆ ಮಾಡಿದರೆ ನರೇಂದ್ರ ಮೋದಿಯವರ ವರ್ಚಸ್ಸು ಶೇ. 15ರಿಂದ 20ರಷ್ಟು ಹೆಚ್ಚಾಗಿದೆ. ದೇಶದ ಇತಿಹಾಸದಲ್ಲಿ ಐದು ವರ್ಷ ಪ್ರಧಾನಿಯಾಗಿ ಕೆಲಸ ಮಾಡಿದವರು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಜನಪ್ರಿಯತೆ ಪಡೆದಿದ್ದು ಇದೇ ಮೊದಲು. ಹೀಗಾಗಿ ಈ ಬಾರಿ 300 ಸ್ಥಾನಗಳನ್ನು ಗಳಿಸಿ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರರಷ್ಟು ಸತ್ಯ ಎಂದು ಯಡಿಯೂರಪ್ಪ ಹೇಳಿದರು.

ಸಿಎಂ ಬೇಜವಾಬ್ದಾರಿ ಹೇಳಿಕೆ
ಕುಮಾರಸ್ವಾಮಿಯವರು ಬೇಜವಾಬ್ದಾರಿತನದ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಅದಕ್ಕೂ ಒಂದು ಇತಿಮಿತಿ ಇರಬೇಕು. ಪುಲ್ವಾಮಾ ದಾಳಿ ಬಗ್ಗೆ ಎರಡು ವರ್ಷಗಳ ಹಿಂದೆ ಗೊತ್ತಿತ್ತು. ಎರಡು ಹೊತ್ತಿನ ಊಟಕ್ಕೆ ಇಲ್ಲದವರು ಸೇನೆ ಸೇರುತ್ತಾರೆ ಎಂಬ ಹೇಳಿಕೆಗಳು ಅವರ ಹತಾಶೆ ತೋರಿಸುತ್ತದೆ. ರಾಜ್ಯದಲ್ಲಿ ಐಟಿ ದಾಳಿ ಬಗ್ಗೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಬ್ಬ ಮುಖ್ಯಮಂತ್ರಿ ಸಚಿವರ ಸಹಿತ ಬೀದಿಗಿಳಿದು ಧರಣಿ ನಡೆಸಿದರು. ಇದು ಅವರ ವರ್ತನೆಗೆ ಸಾಕ್ಷಿ. ಇಂಥ ವರ್ತನೆಗಳು ಹೆಚ್ಚು ದಿನ ನಡೆಯುವುದಿಲ್ಲ ಎಂದು ಯಡಿಯೂರಪ್ಪ ತಿಳಿಸಿದರು.

ನಲವತ್ತು ವರ್ಷದ ಹೋರಾಟದ ಜೀವನವನ್ನು ಜನರ ಮಧ್ಯೆ ಮತ್ತು ಪ್ರವಾಸದಲ್ಲೇ ಕಳೆದಿದ್ದೇನೆ. ಇದೇ ರಾಜಕೀಯ ಹೋರಾಟದ ಗಟ್ಟಿತನದ ಗುಟ್ಟು. ನನ್ನ ಆರೋಗ್ಯ ಕೆಡಬೇಕು ಎಂದರೆ ಪ್ರವಾಸ ಮಾಡದೇ ರೆಸ್ಟ್‌ ತೆಗೆದುಕೊಳ್ಳಬೇಕು. ರಾಜಕೀಯದಲ್ಲಿ ನಿರಂತರವಾಗಿದ್ದರೆ ಆರೋಗ್ಯವಾಗಿರುತ್ತೇನೆ.
-ಬಿ.ಎಸ್‌.ಯಡಿಯೂರಪ್ಪ

Advertisement

Udayavani is now on Telegram. Click here to join our channel and stay updated with the latest news.

Next