Advertisement

ಥಟ್‌ ಅಂತ ಹೇಳಿ !

06:36 PM May 23, 2019 | mahesh |

ಕಾಲೇಜಿನ ಗ್ರಂಥಾಲಯದ ಕಡೆ ಹೆಜ್ಜೆ ಹಾಕುತ್ತಿದ್ದ ನನ್ನ ಕಣ್ಣು ಪದೇಪದೇ ಮಿಟುಕುತ್ತಿತ್ತು. ಜೇಬಿನಲ್ಲಿದ್ದ ಮೊಬೈಲ್‌ ವೈಬ್ರೇಷನ್‌ ಮೋಡಿನಲ್ಲಿ ರಿಂಗಣಿಸಿತ್ತು. ತತ್‌ಕ್ಷಣ ಕರೆ ಸ್ವೀಕರಿಸಿದಾಗ ಮನ ಉಲ್ಲಸಿತಗೊಂಡಿತ್ತು. ಕಾರಣ ಆ ಕರೆ ಪ್ರಖ್ಯಾತ ಟಿ. ವಿ. ರಸಪ್ರಶ್ನಾ ಕಾರ್ಯಕ್ರಮ, “ಥಟ್‌ ಅಂತ ಹೇಳಿ’ ಯ ಕಡೆಯಿಂದ ಬಂದಿತ್ತು. ಬಹುದಿನಗಳ ವಾಂಛೆ ಕೈಗೂಡುವ ಕಾಲ ಬಂದೊದಗಿತ್ತು. ಉತ್ಸುಕ ಮನಸ್ಸಿನ, ಉತ್ತುಂಗ ಉತ್ಸಾಹ ಹೊರಗೆ ತೋರ್ಪಡಿಸುವ ಗೋಜಿಗೆ ಹೋಗಲಿಲ್ಲ.. ಆಜುಬಾಜು ಮೂರು ವರ್ಷಗಳ ಹಿಂದೆ ಬರೆದಿದ್ದ ಪತ್ರಕ್ಕೆ ಪ್ರತಿಕ್ರಿಯೆಯಾಗಿ ದೂರದರ್ಶನ ಚಂದನ ವಾಹಿನಿಯ ಜನಪ್ರಿಯ ಕಾರ್ಯಕ್ರಮ “ಥಟ್‌ ಅಂತ ಹೇಳಿ’ ಕಡೆಯಿಂದ ಕರೆ ಬಂದಿತ್ತು.

Advertisement

ಹೊತ್ತಗೆ ಓದುವ ಹವ್ಯಾಸವು ಕಮ್ಮಿ ಆಗೋ ಹೊತ್ತಿಗೆ, ರಸಪ್ರಶ್ನೆ ಕಾರ್ಯಕ್ರಮದ ಮೂಲಕ ಜ್ಞಾನ ದೀವಿಗೆ ಹಚ್ಚಿದ ಶ್ರೇಯ ಗಿನ್ನೆಸ್‌ ದಾಖಲೆಯ “ಥಟ್‌ ಅಂತಾ ಹೇಳಿ’ ಕಾರ್ಯಕ್ರಮದ್ದು. ಇದರಲ್ಲಿ ಭಾಗವಹಿಸಿದ್ದು ನನ್ನ ಜೀವನದಲ್ಲಿನ ಮಹತ್ತಮ ನೆನಪು ಎನ್ನಬಹುದು.

ಕಾಂಕ್ರೀಟ್‌ ಕಾಡಿನ ಅನ್ವೇಷಣಾಯಾನ!
ಅಂದು ಬಂದಿದ್ದ ಕರೆಯಲ್ಲಿ ರೆಕಾರ್ಡಿಂಗ್‌ ದಿನಾಂಕ ಮತ್ತಿತರ ವಿಚಾರಗಳನ್ನು ಉಲ್ಲೇಖ ಮಾಡಿದ್ದರು. ಯಾವ ತರದ ವಸನ, ಸಮಯದ ನೆವನದ ಬಗ್ಗೆ ತಿಳಿಹೇಳಿದ್ದರು. ಆದಾಗ್ಯೂ ಬೆಂದಕಾಳೂರಿನ ಏರಿಯಾಗಳ ಬಗ್ಗೆ ಅರಿಯದ ನಾನು ಗೆಳೆಯನ ರೂಮ್‌ ಒಂದರಲ್ಲಿ ಒಂದು ದಿನ ಮುಂಚಿತವಾಗಿಯೇ ಠಿಕಾಣಿ ಹೂಡಿ, ವೃಥಾ ಹುಡುಕಾಡುವ ಗೊಂದಲಕ್ಕೆ ತೆರೆ ಎಳೆದಿದ್ದೆ. ರೆಕಾರ್ಡಿಂಗ್‌ ದಿನದಂದು ಸ್ವಲ್ಪ ಗತ್ತಿನಿಂದಲೇ, ಕತ್ತೆತ್ತಿ ಚಂದನವನ್ನು ಅರಸುತ್ತ ಹೋದವನಿಗೆ ಬೃಹತ್‌ ಬೆಂಗಳೂರಿನ, ಬೃಹತ್‌ ದೂರದರ್ಶನದ ಟವರ್‌ ಸ್ವಾಗತಿಸಿತ್ತು. ಎನ್‌ಟ್ರಿ ಪಾಸ್‌ ಪಡೆದು, ಕಚೇರಿಯ ಒಳಗೆ ಕುಳಿತಾಗ ರೆಕಾರ್ಡಿಂಗ್‌ ಮಧ್ಯಾಹ್ನ 2 ಗಂಟೆಗೆ ಅಂದುಬಿಟ್ಟಿದ್ದರು. ಆಗಿನ್ನೂ ಸಮಯ 12:30.

ಹಾಟ್‌ಸೀಟ್‌ನ ಮೇಲೆ
ಊಟದ ವಿರಾಮದ ನಂತರ ವೇದಿಕೆಯ ಮೇಲಿನ ಹಾಟ್‌ಸೀಟ್‌ನ ಮೇಲೆ ಜುಮ್ಮನೆ ಕೂರುವ ಕ್ಷಣ. ಭಯದ ಬೆವರು ಒಸರದಷ್ಟು ಕೊರೆವ ಎಮತ್ತಷ್ಟೂ ಥರಗುಟ್ಟಿತ್ತು. ಎದುರುಗಡೆ ಕಾರ್ಯಕ್ರಮದ ದಶಕಗಳ ನಿಸ್ಪೃಹ ರೂವಾರಿ ಡಾ| ನಾ. ಸೋಮೇಶ್ವರರ ಉಪಸ್ಥಿತಿ. ನಗುಮುಖದ ಜತೆಗೆ, ಧೈರ್ಯದಿಂದ ಆಡುವ ಕೃತ್ತಿಮ ಸಲಹೆಗಳನ್ನ ನೀಡಿದರು. ಮನೆಯಲ್ಲಿ ಕುಳಿತು ಟಿ.ವಿ.ಯಲ್ಲಿ ಕಾರ್ಯಕ್ರಮ ನೋಡುತ್ತ sಚಠಿಜಿrಛಿs ಮಾಡುತ್ತಿದ್ದ ನನಗೆ ಅಲ್ಲಿ ನಿಜವಾದ ಬಿಸಿ ಮನದಟ್ಟಾಗಿತ್ತು. ಜವಾಬು ಗೊತ್ತಿದ್ದರೂ, ಜರೂರು ಮಾಡದೆ, ಜತನದಿಂದ ಓದುವಷ್ಟರಲ್ಲಿ ಪ್ರತಿಸ್ಪರ್ಧಿಗಳು ಬಝರ್‌ ಒತ್ತಿಬಿಟ್ಟಿರುತ್ತಿದ್ದರು. ಜಿದ್ದಿಗೆ ಬಿದ್ದು ಆಯ್ಕೆಗಳು ಬರುವ ಮುಂಚೆ ಬಝರ್‌ ಝೇಂಕರಿಸಿದರೆ ಸರಿ ಉತ್ತರ ನೀಡದೆ ವಿಧಿಯಿಲ್ಲ . ಅದರಲ್ಲೂ “ನೇಗಿಲು’ ಎಂಬ ಸಮಾನಾರ್ಥಕ ಪದ ಕೇಳಿದಾಗ “ರಂಟೆ’ ಅನ್ನುವ ಪದ ಹೊಳೆದಿತ್ತಾದರೂ ಹಾಟ್‌ಸೀಟ್‌ನ ಪ್ರಭಾವದಿಂದಲೋ ಏನೋ ಮೊದಲ ಆಯ್ಕೆ ಬಂದಾಗ ಉತ್ತರ ನೀಡಿದ್ದೆ. 2-3 ದಿನಗಳಿಂದ ಸತತ ಪ್ರಯತ್ನ ಪಟ್ಟಿದ್ದ ಲೆಕ್ಕದ ಪ್ರಶ್ನೆ ಸರಿಯಾದ ಉತ್ತರ ನನ್ನ ಕೈಯಿಂದ ಬರಿಸಿತ್ತು. ಪರಿಪೂರ್ಣ ಪ್ರತಿಸ್ಪರ್ಧಿಗಳ ನಡುವೆ ನಡೆದ ಪೈಪೋಟಿ ಕಾರ್ಯಕ್ರಮ ಕಳೆಗಟ್ಟಿಸಿತ್ತು. something is better than nothing ಅನ್ನುವಂತೆ ಮೂರು ಪುಸ್ತಕಗಳು ನನ್ನ ಕೈ ಸೇರಿದವು.

ವರ್ಷಗಳೂ ಕಳೆದರೂ ಎಲ್ಲಿಯೂ ಘನತೆಗೆ ಚ್ಯುತಿ ಬಾರದೆ ಹಳೆಯ ಸೊಗಡನ್ನು ಮುಂದುವರಿಸುತ್ತ ಬಂದ, “ಥಟ್‌ ಅಂತ ಹೇಳಿ’ ಕಾರ್ಯಕ್ರಮಕ್ಕೆ ಹ್ಯಾಟ್ಸ್‌ ಆಪ್‌ ಎನ್ನಲೇ ಬೇಕು. ಅಷ್ಟಕ್ಕೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನಾವು ಮಾಡಬೇಕಾದಿದಿಷ್ಟೆ : producer.thattantaheligmail.com ಮಿಂಚಂಚೆಗೆ ಸ್ವ-ವಿವರಗಳನ್ನ ಇತ್ತರೆ ಸಾಕು.

Advertisement

ಸುಭಾಷ್‌ ಮಂಚಿ, 
ಎಂಬಿಎ, ಪ್ರವಾಸೋದ್ಯಮ ವಿಭಾಗ, ಮಂಗಳಗಂಗೋತ್ರಿ

Advertisement

Udayavani is now on Telegram. Click here to join our channel and stay updated with the latest news.

Next