Advertisement

“ತನು ಕನ್ನಡ-ಮನ ಕನ್ನಡ ನಿರಂತರವಾಗಿರಲಿ’ 

01:00 AM Mar 15, 2019 | Harsha Rao |

ಹೊಸದುರ್ಗ: ಗಡಿ ಪ್ರದೇಶವಾದ ಕಾಸರಗೋಡಿನಲ್ಲಿ ಕಳೆದ ಹದಿನಾಲ್ಕು ವರ್ಷಗಳಿಂದ ಕನ್ನಡ ನಾಡು-ನುಡಿ, ಸಂಸ್ಕೃತಿಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ರಂಗಚಿನ್ನಾರಿ ಸಂಸ್ಥೆಯು ಇದೇ ಪ್ರಪ್ರಥಮವಾಗಿ ಚಂದ್ರಗಿರಿ ನದಿ ದಾಟಿ ಕಾಂಞಂಗಾಡ್‌ನ‌ಲ್ಲಿ ಕನ್ನಡ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಕಾಂಞಂಗಾಡ್‌ನ‌ ಶ್ರೀ ಲಕ್ಷಿ$¾àವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ, ನಗರಸಭಾ ಸದಸ್ಯ ಗೋಕುಲದಾಸ್‌ ಕಾಮತ್‌ ಅವರು ಹೇಳಿದರು.
ಕಾಸರಗೋಡಿನ ಸಾಂಸ್ಕೃತಿಕ-ಸಾಹಿತ್ಯಿಕ ಸಂಸ್ಥೆ ರಂಗಚಿನ್ನಾರಿ ಹಾಗೂ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಚಂದ್ರಗಿರಿ ಮೇಘರಂಜನಾ ಸಂಸ್ಥೆಗಳ ಸಹಯೋಗದೊಂದಿಗೆ ಕಾಂಞಂಗಾಡಿನ ಕೃಷ್ಣ ಮಂದಿರದಲ್ಲಿ ಏರ್ಪಡಿಸಿದ ಕನ್ನಡ ಸಾಂಸ್ಕೃತಿಕ ವೈವಿಧ್ಯ “ತನು ಕನ್ನಡ-ಮನ ಕನ್ನಡ’ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಗೋಕುಲದಾಸ್‌ ಕಾಮತ್‌ ಅವರು ಮಾತನಾಡಿದರು.

Advertisement

ಗಡಿ ಪ್ರದೇಶದಲ್ಲಿರುವಷ್ಟು ಕನ್ನಡ ಸಂಸ್ಥೆಗಳು, ಕನ್ನಡ ಸಾಂಸ್ಕೃತಿಕ ವೈವಿಧ್ಯಗಳು ಪ್ರಾಯಶ: ಕರ್ನಾಟಕದ ಯಾವ ಭಾಗದಲ್ಲೂ ಇರಲಾರದು. ಕೇರಳದ ಈ ಪ್ರದೇಶದಲ್ಲಿ ಕನ್ನಡ ಪರ ಕೆಲಸಗಳನ್ನು ನಿರಂತರವಾಗಿ ನಡೆದುಕೊಂಡು ಬರುವುದು ಅಷ್ಟು ಸುಲಭದ ಕೆಲಸವಲ್ಲ. ಆ ನಿಟ್ಟಿನಲ್ಲಿ ರಂಗಚಿನ್ನಾರಿ ಸಂಸ್ಥೆ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.

ಅಧ್ಯಕತೆಯನ್ನು ವಹಿಸಿ ಮಾತನಾಡಿದ ಖ್ಯಾತ ವೈದ್ಯ, ಕನ್ನಡ ಸಾಹಿತ್ಯ ಪರಿಷತ್ತಿನ ಕಾಂಞಂಗಾಡು ಘಟಕದ ಅಧ್ಯಕ್ಷರೂ ಆಗಿರುವ ಡಾ| ಯು.ಬಿ.ಕುಣಿಕುಳ್ಳಾಯ ಅವರು ಮಾತನಾಡುತ್ತಾ ಕಾಸರಗೋಡಿನಲ್ಲಿ ಈ ಹಿಂದೆ ಇದ್ದ ಕನ್ನಡದ ಚಟುವಟಿಕೆಗಳು ಕಾಲಕ್ರಮೇಣ ಕ್ಷೀಣಿಸುತ್ತಿರುವುದರಲ್ಲಿ ಇದ್ದಾಗಲೂ ಇಂತಹ ಕಾರ್ಯಕ್ರಮಗಳು ಮತ್ತಷ್ಟು ಹುರುಪು, ಉತ್ಸಾಹ ನೀಡುತ್ತದೆ ಎಂದರು.
ಗೌರವ ಅತಿಥಿಯಾಗಿ ಮಾತನಾಡಿದ ಹೊಸದುರ್ಗ ಕನ್ನಡ ಸಂಘದ ಅಧ್ಯಕ್ಷರಾದ ಹೆಚ್‌.ಎಸ್‌.ಭಟ್‌ ಅವರು ಕನ್ನಡದ ಕೆಲಸಗಳನ್ನು ಮತ್ತಷ್ಟು ಗಟ್ಟಿಗೊಳಿಸುವುದಕ್ಕಾಗಿ ತಮ್ಮೆಲ್ಲ ಸಹಕಾರವನ್ನು ರಂಗಚಿನ್ನಾರಿ ಸಂಸ್ಥೆಗೆ ನೀಡುವುದಾಗಿ ತಿಳಿಸಿದರು.

ಅತಿಥಿಗಳಾಗಿ ಕಾಂಞಂಗಾಡು ನಗರಸಭಾ ಸದಸ್ಯೆ ಸುಕನ್ಯಾ, ಶ್ರೀಕೃಷ್ಣ ಭಜನಾ ಮಂದಿರದ ಅಧ್ಯಕ್ಷ ಹಾಗೂ ನಗರಸಭಾ ಸದಸ್ಯ  ಎಚ್‌.ಆರ್‌.ಶ್ರೀಧರ ಹೆಗ್ಡೆ, ರಂಗಚಿನ್ನಾರಿ ಸಂಸ್ಥೆಯ ನಿರ್ದೇಶಕ ಕಾಸರಗೋಡು ಚಿನ್ನಾ ಅವರು ಉಪಸ್ಥಿತರಿದ್ದರು.

ಗಾಯಕ ರವೀಂದ್ರ ಪ್ರಭು, ಗಡಿನಾಡಿನ ಅಭಿಮಾನ ಸಂಗೀತ ಕಲಾವಿದ ಕಿಶೋರ್‌ ಪೆರ್ಲ ಹಾಗೂ ಮೇಘನಾ ಕೊಪ್ಪಲ್‌ ಅವರಿಂದ “ಜಯಹೇ ಕನ್ನಡ ತಾಯೇ’ ಭಕ್ತಿಭಾವ ಹಾಗೂ ಜನಪದ ಗೀತೆಗಳ ಕಾರ್ಯಕ್ರಮ ಜರಗಿತು.

Advertisement

ತಬ್ಲಾದಲ್ಲಿ ಅಭಿಜಿತ್‌ ಶೆಣೈ, ರಿದಂ ಪ್ಯಾಡ್‌ನ‌ಲ್ಲಿ ರಾಜೇಶ್‌, ಆರ್ಗನ್‌ನಲ್ಲಿ ಪುರುಷೋತ್ತಮ ಕೊಪ್ಪಲ್‌ ಸಹಕರಿಸಿದ್ದರು. ಪ್ರಾಸ್ತಾವಿಕ ಮಾತನಾಡಿದ ರಂಗಚಿನ್ನಾರಿ ನಿರ್ದೇಶಕ ಕಾಸರಗೋಡು ಚಿನ್ನಾ ಅವರು ಮುಂದಿನ ದಿನಗಳಲ್ಲಿ ಚಂದ್ರಗಿರಿ ಮೇಘ ರಂಜನಾ ಸಂಸ್ಥೆಯ ಸಹಯೋಗದೊಂದಿಗೆ ಹಲವು  ಕನ್ನಡ ಪರ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದೆಂದು ತಿಳಿಸಿ ಸಂಸ್ಥೆಯ ಲೋಗೋವನ್ನು ಬಿಡುಗಡೆಗೊಳಿಸಿದರು. ಅಂಕಿತಾ, ರಿತಿಕಾ, ಸನ್ನಿಧಿ, ವಿಸ್ಮಯಾ, ರಿತಿಕಾ ರಾವ್‌, ಸ್ನೇಹಾ ಹಾಗೂ ಸಮೀಕ್ಷಾ ಅವರಿಂದ ಜಾನಪದ ನೃತ್ಯಗಳು ಪ್ರದರ್ಶಿಸಲ್ಪಟ್ಟವು. ಅಂಕಿತಾ, ಅನುಷಾ ಪ್ರಾರ್ಥನೆ ಹಾಡಿದರು. ಪುರುಷೋತ್ತಮ ಕೊಪ್ಪಲ್‌ ಸ್ವಾಗತಿಸಿದರು. ರೂಪಕಲಾ ಕೊಪ್ಪಲ್‌ ವಂದಿಸಿದರು. ರಂಜನ್‌ ಕೊಪ್ಪಲ್‌ ವಂದಿಸಿದರು.

“ಭಜನಾಂತರಂಗ’
ಇದೇ ಸಂದರ್ಭದಲ್ಲಿ “ಭಜನಾಂತರಂಗ’ವನ್ನು ಖ್ಯಾತ ಹರಿದಾಸ ಜಯಾನಂದ ಕುಮಾರ್‌ ಹೊಸದುರ್ಗ ಅವರು ದೀಪ ಬೆಳಗಿಸಿ ಉದ್ಘಾಟಿಸಿ ಕನ್ನಡ ಭಾಷೆಯ ಬೆಳವಣಿಗೆಗೆ ದಾಸ ಕೀರ್ತನೆ ನೀಡಿರುವ ಕೊಡುಗೆ ಅತ್ಯಂತ ಮಹತ್ತದ್ದು ಎಂದರು. ಶ್ರೀ ಕೃಷ್ಣ ಭಜನಾ ಸಂಘ ಕಾಂಞಂಗಾಡು, ಸರ್ವಮಂಗಳಾ ಮಹಿಳಾ ಭಕ್ತವೃಂದ ಹೊಸದುರ್ಗ, ಶ್ರೀ ಮುತ್ತಪ್ಪ ಮಹಿಳಾ ಭಕ್ತ ವೃಂದ ಪಾರೆಕಟ್ಟೆ ಇವರಿಂದ ದಾಸ ಸಂಕೀರ್ತನೆ ಜರಗಿತು

Advertisement

Udayavani is now on Telegram. Click here to join our channel and stay updated with the latest news.

Next