Advertisement

ತೆಂಕು ಬಡಗಿನ ಸಮ್ಮಿಲನದಲ್ಲಿ ರಂಜಿಸಿದ ತಲಪಾಡಿ ಯಕ್ಷೋತ್ಸವ

06:00 AM Dec 07, 2018 | Team Udayavani |

ತಲಪಾಡಿ ಯಕ್ಷೋತ್ಸವ ಕೇವಲ ಅದ್ದೂರಿಯ ಆಟ ಮಾತ್ರವಾಗಿರದೆ, ಕಲಾವಿದರಲ್ಲಿ ಆತ್ಮಾವಲೋಕನ, ಜಿಜ್ಞಾಸುಗಳಿಗೆ  ಅನುಭವ, ಸಂಶೋಧಕರಿಗೆ ಕುತೂಹಲ, ಅಧ್ಯಯನಶೀಲರಿಗೆ ವಿಪುಲ ಗ್ರಾಸ ಒದಗಿಸಿದ ಈ ಯಕ್ಷೊàತ್ಸವ ಅನೇಕ ವಿಚಾರಗಳಿಗೆ ಪ್ರೇರಕ ಪ್ರದರ್ಶನವಾಯಿತು. 

Advertisement

ತಲಪಾಡಿ ಯಕ್ಷೋತ್ಸವ ನವೆಂಬರ್‌ 10ರಂದು ಐದನೇ ವರುಷದ ಸಂಭ್ರಮವನ್ನು ಆಚರಿಸಿತು. ಸುದೀರ್ಘ‌ ಕಾಲ ಪ್ರವಾಹದಲ್ಲಿ ಐದು ವರುಷಗಳ ಕಾಲಖಂಡದ ಅವಧಿ ತೀರಾ ಕಿರಿದೆನಿಸಿದರೂ ಸಂಘಟನೆಯ ಸಂಕಷ್ಟವನ್ನು ಅರಿತವರಿಗೆ ಇದರ ಹಿಂದೆ ಇರುವ ಪರಿಶ್ರಮವೆಷ್ಟೆಂದು ತಿಳಿದಿದೆ. ಇದರ ಸಂಪೂರ್ಣ ನೇತೃತ್ವ ವಹಿಸಿ ಯಕ್ಷೊàತ್ಸವವನ್ನು ಸಾಕಾರಗೊಳಿಸುವವರು ಯಕ್ಷಮಿತ್ರ ಸೇವಾಬಳಗದ ನೇತಾರ ಸಂತೋಷ ಅಲಂಕಾರಗುಡ್ಡೆ. 

 ಈ ವರುಷ ತೆಂಕು-ಬಡಗಿನ ಕಲಾವಿದರಿಂದ ಕೀಚಕವಧೆ ಮತ್ತು ಕರ್ಣಪರ್ವ ಪ್ರಸಂಗಗಳು ಪ್ರದರ್ಶನಗೊಂಡಿತು. ತೆಂಕುತಿಟ್ಟು ಕಲಾವಿದರಿಂದ ಪ್ರದರ್ಶನವಾದ ಪ್ರಸಂಗ “ಕುಮಾರ ವಿಜಯ’ ಒಟ್ಟು 62 ಮಂದಿ ತೆಂಕು-ಬಡಗಿನ ಕಲಾವಿದರ ಸಮ್ಮಿಲನದಿಂದ ನಡೆದ ಹದಿಮೂರು ತಾಸಿನ ಯಕ್ಷೋತ್ಸವ ರಂಜನೆ ಒದಗಿಸಿತು. 

 ಪ್ರಸನ್ನ ಶೆಟ್ಟಿಗಾರ್‌ ಕೀಚಕನಾಗಿ ತಾವೊಬ್ಬ ಭರವಸೆಯ ಕಲಾವಿದ ಎನ್ನುವುದನ್ನು ಸ್ಥಾಪಿಸಿದರು. ಸುದೇಷ್ಣೆಯಾಗಿ ಶಂಕರ ನೀಲ್ಕೋಡು ಅವರು ಸ್ತ್ರೀತ್ವವನ್ನು ಆವಾಹಿಸಿಕೊಂಡ ಬಗೆ ಅನನ್ಯ. ಕೀಚಕನಲ್ಲಿಗೆ ಸೈರಂಧ್ರಿಯನ್ನು ಕಳುಹಿಸುವಾಗ ವಾಚಿಕ ಮತ್ತು ಆಂಗಿಕಾಭಿನಯಗಳಲ್ಲಿ ಸುದೇಷ್ಣೆಯ ಭಯ, ಆತಂಕ, ಸಂಕಟ, ಸೆಡವು ಮುಂತಾದ ಭಾವಗಳನ್ನು ಪ್ರಕಟಿಸಿದ ರೀತಿ  ಪುಳಕಗೊಳಿಸಿತು. ಹೆಣ್ಣೇ ಹೆಣ್ಣಿಗೆ ಶತ್ರುವಾಗುವ ಸಂದರ್ಭದ ಆಕೆಯ ಅಸಹಾಯಕತೆ, ತುಮುಲ ವರ್ಣನಾತೀತ. ಸುದೇಷ್ಣೆಯನ್ನು ರಂಗಸ್ಥಳದಲ್ಲಿ ಸಾûಾತ್ಕರಿಸಿದ ನೀಲ್ಕೋಡು ತಾವೊಬ್ಬ ಮಹಾನ್‌ ಕಲಾವಿದ ಎಂಬುದನ್ನು ಸಾಬೀತುಪಡಿಸಿದರು. 

 ತೋಟಿಮನೆ ಗಣಪತಿ ಹೆಗಡೆಯವರ ಕೃಷ್ಣ. ಕೊಂಡದಕುಳಿ ರಾಮಚಂದ್ರ ಹೆಗಡೆಯವರ ಶಲ್ಯ ಉತ್ತಮ ಧ್ವನಿಪೂರ್ಣ ಸಂವಾದದಲ್ಲಿ ಪ್ರೇಕ್ಷಕರನ್ನು ಸೆರೆಹಿಡಿದರು. ಮಿತಭಾಷಿ ಯಾಜಿ ತಮ್ಮ ಗಾಂಭೀರ್ಯದಿಂದ ಉತ್ತಮ ಅಭಿನಯ ನೀಡಿದರು. ಕರ್ಣಾರ್ಜುನ ಪ್ರಸಂಗ ಪ್ರದರ್ಶನಕ್ಕೆ ಗೇರುಸೊಪ್ಪೆ ಶಾಂತಪ್ಪಯ್ಯ ಮತ್ತು ಪಾಂಡೇಶ್ವರ ವೆಂಕಟ ಅವರ ಎರಡು ಕೃತಿಗಳ ಪದ್ಯಗಳನ್ನು ಬಳಸಿಕೊಂಡರೂ ತೆಂಕುತಿಟ್ಟಿನ ಪಾತ್ರ ಕಾಣಿಸಿಕೊಂಡದ್ದು ಅರ್ಜುನ ಮಾತ್ರ. ಆದುದರಿಂದ ಬಡಗಿನ ಕಲಾವಿದರೇ ಈ ಪ್ರಸಂಗದಲ್ಲಿ ಯಶಸ್ವಿಗಳಾದರು.

Advertisement

 ತೆಂಕುತಿಟ್ಟಿಗೆ ಮೀಸಲಾದ ಪ್ರಸಂಗ “ಕುಮಾರ ವಿಜಯ’. ಈ ಪ್ರಸಂಗದಲ್ಲಿ ಕವಿಮುದ್ದಣನ ಕಾವ್ಯಶಿಲ್ಪಕ್ಕೆ ಜೀವತುಂಬಿದವರು ಬಲಿಪ ಪ್ರಸಾದ ಭಾಗವತರು. ಮುದ್ದಣನ ಹೊಸತನದ ಕಾವ್ಯಗಳಿಗೆ ಹಳೆಯ ದೇಸಿಗಾನದಲ್ಲಿ ಪದ್ಯವನ್ನು ಹೃದ್ಯವಾಗಿಸಿದ ಬಲಿಪರು “ಓಲ್ಡ್‌ ಈಸ್‌ ಗೋಲ್ಡ್‌’ ಎನ್ನುವ ಮಾತಿಗೆ ನಿದರ್ಶನವಾದರು. ಮಟ್ಟುಗಳ ಸೊಬಗನ್ನು ಉಳಿಸಿ ಹಾಡುವುದೇ ಯಕ್ಷಗಾನದ ಜೀವಬಿಂದು ಎಂಬುದನ್ನು ತೋರಿಸಿಕೊಟ್ಟ ಬಲಿಪರು ಅಭಿನಂದನೀಯರು. 

 ಯಾವುದೇ ಪಾತ್ರದಲ್ಲಿ ತನ್ನದೇ ಹೆಜ್ಜೆ ಗುರುತುಗಳನ್ನು ಮೂಡಿಸುವ ಸುಣ್ಣಂಬಳ ವಿಶ್ವೇಶ್ವರ ಭಟ್‌ ಅವರ “ಋಷಿ ಶೃಂಗಾರ’ ಚೇತೋಹಾರಿ. ಅಜಮುಖೀಯೊಡನೆ ನಡೆಸಿದ ಶೃಂಗಾರ ಸಂವಾದದಲ್ಲಿ ಯಾವುದೇ ಅಶ್ಲೀಲ ನುಸುಳದಂತೆ ಪಾತ್ರಗೌರವವನ್ನು ಕಾಪಾಡಿಕೊಂಡು ಸಭಾರಂಜನೆ ಮಾಡಿದ ರೀತಿ ಪಂಡಿತ ಪಾಮರರನ್ನೂ ರಂಜಿಸಿತು. ಅವರದು ಮಾದರಿ ದೂರ್ವಾಸ. ಉಳಿದ ಪಾತ್ರಧಾರಿಗಳು ತಮ್ಮ ಪಾತ್ರಗಳನ್ನು ಹುರುಪಿನಿಂದ ನಿರ್ವಹಿಸಿದರು. 

 ತೆಂಕು-ಬಡಗಿನ ಪ್ರದರ್ಶನಗಳು ಒಂದೇ ವೇದಿಕೆಯಲ್ಲಿ ಮೊದಲು ನಡೆಸಿದ್ದು ವಿಠಲ ಶೆಟ್ಟಿ ಅವರ ರಾಜರಾಜೇಶ್ವರೀ ಮೇಳದಲ್ಲಿ ಎಂದು ಕೇಳಿಬಲ್ಲೆ. ಆ ಪ್ರದರ್ಶನಗಳಿದ್ದದ್ದು ಪ್ರತ್ಯೇಕ ಪ್ರತ್ಯೇಕವಾಗಿ. ಪ್ರಾಯಃ ಕರ್ನೂರು ಕೊರಗಪ್ಪ ರೈಗಳು ಒಂದೇ ಪ್ರಸಂಗದೊಳಗೆ ಎರಡೂ ತಿಟ್ಟಿನ ಪಾತ್ರಗಳನ್ನು ತಂದರು. ಇದು ಕೇವಲ ಪ್ರಯೋಗಾತ್ಮಕವಾಗಿ. 

ಕರ್ಣಾವಸಾನದಂತಹ ಪ್ರಸಂಗಗಳಲ್ಲಿ ಎರಡೂ ತಿಟ್ಟಿನಲ್ಲಿ ಪ್ರದರ್ಶನದ ಒಳವಿನ್ಯಾಸವೇ ಬೇರೆ. ಎರಡೂ ತಿಟ್ಟುಗಳು ತಮ್ಮ ಅನನ್ಯತೆಗಳಿಂದ ಭಿನ್ನವಾಗಿರುವಾಗ ರಂಗಸ್ಥಳದಲ್ಲಿ ಅವುಗಳ ಸಾಂಕರ್ಯ ಸಮುಚಿತವೆ? ಸಹೃದಯಿಗಳಿಗೆ ರಸಾಸ್ವಾದನೀಯವೆ? ಹಿಮ್ಮೇಳದವರು ಏಕ ವಸ್ತ್ರಸಂಹಿತೆ ಪಾಲಿಸದಿದ್ದರೆ ರಂಗಸ್ಥಳದ ಶಿಲ್ಪಸೌಂದರ್ಯಕ್ಕೆ ಚ್ಯುತಿಯಲ್ಲವೆ? ಮುಂತಾದ ಪ್ರಶ್ನೆಗಳು ಕಾಡಿದರೂ  ಮೂರು ಪ್ರಸಂಗಗಳೂ ರಂಜಿಸುವಲ್ಲಿ ಯಶಸ್ವಿಯಾದವು. 

ತಾರಾನಾಥ ವರ್ಕಾಡಿ 

Advertisement

Udayavani is now on Telegram. Click here to join our channel and stay updated with the latest news.

Next