ಶಿವಮೊಗ್ಗ : ಶಾಲಾ ಮಕ್ಕಳಲ್ಲಿ ರಾಷ್ಟ್ರೀಯತೆಯನ್ನು ಬೆಳೆಸುವ ಸಲುವಾಗಿ ದಿಗ್ಗಜರ ಪಾಠ ಸೇರಿಸಿದ್ದೆವು. ಪಠ್ಯವನ್ನು ತೆಗೆಯಲು ಸರ್ಕಾರ ಮುಂದಾದರೆ ಅದಕ್ಕೆ ಅಭ್ಯಂತರವಿಲ್ಲ ಎಂದು ಚಿಂತಕ ರೋಹಿತ್ ಚಕ್ರತೀರ್ಥ ಹೇಳಿಕೆ ನೀಡಿದ್ದಾರೆ.
ಈಗಿನ ಸರ್ಕಾರ ಪಠ್ಯವನ್ನು ತೆಗಿತೇವೆ ಅಂತ ಹೇಳಿದರೆ ನಮ್ಮದು ಯಾವುದೇ ರೀತಿಯ ಆಕ್ಷೇಪ ಇಲ್ಲ.ಪುಸ್ತಕ ಪರೀಕ್ಷರಣೆ ಸಮಿತಿಯ ಸದಸ್ಯರಾಗಿ ನಾವು ಯಾವುದೇ ರೀತಿಯ ಒತ್ತಡವನ್ನು ತರುವುದಿಲ್ಲ.ಅವತ್ತು ಹೇಳಿದ ಹಾಗೆ ಯಾವುದೇ ರೀತಿಯ ಒತ್ತಡ ತರುವುದಿಲ್ಲ. ಮತ್ತೆ ಪುಸ್ತಕದಲ್ಲಿ ಹೊಸ ಪಠ್ಯವನ್ನು ಹಾಕುವುದು, ತೆಗೆಯುವುದಕ್ಕೆ ಅವರು ಸರ್ವ ಸ್ವತಂತ್ರರು ಎಂದು ಹೇಳಿದ್ದಾರೆ.
ಸಾವರ್ಕರ್ ಹಾಗೂ ಆರ್ ಎಸ್ ಎಸ್ ಸಂಸ್ಥಾಪಕ ಹೆಡ್ಗೆವಾರ್ ಪಠ್ಯಕ್ರಮ ವಿಚಾರ ತೆಗೆಯುವ ಕುರಿತು ನೀವು ಸರ್ಕಾರಕ್ಕೆ ಪ್ರಶ್ನೆ ಮಾಡಬೇಕು. ಸಾವರ್ಕರ್ ಮತ್ತು ಹೆಡ್ಗೆವಾರ್ ಸ್ವಾತಂತ್ರ್ಯ ಹೋರಾಟಗಾರರು ಅಲ್ಲ ಅನ್ನಲು ಯಾರಿಗೂ ಸಾಧ್ಯವಿಲ್ಲ. ಅದಕ್ಕೆ ಸೂಕ್ತ ದಾಖಲೆ ಒದಗಿಸಲು ನಾನು ಸಿದ್ದನಿದ್ದೇನೆ ಎಂದರು.
ನಾವು ಪುಸ್ತಕ ಪರೀಕ್ಷಣೆ ಮಾಡುವ ಸಂದರ್ಭದಲ್ಲಿ ಹಿಂದಿನ ಸರ್ಕಾರದಲ್ಲಿದ್ದ ಸದಸ್ಯರನ್ನ ಮುಕ್ತವಾಗಿ ಮಾತನಾಡುವುದಕ್ಕೆ ಕರೆದಿದ್ದೆವು.ಆಗ ಅವರು ನಮ್ಮ ಮನವಿಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿರುವುದಿಲ್ಲ. ನಾನು ಆ ರೀತಿಯ ವ್ಯಕ್ತಿಯಲ್ಲ. ಈಗ ಅವರು ಪುಸ್ತಕದಲ್ಲಿರುವ ಪಾಠವನ್ನು ತೆಗೆಯಲು ಮುಂದಾದರೆ, ಯಾವ ಕಾರಣಕ್ಕೆ ಪಾಠವನ್ನು ತೆಗೆಯುತ್ತಿದ್ದಾರೆ ಅನ್ನೋದನ್ನ ಹೇಳಿದರೆ ಅದರ ಬಗ್ಗೆ ಚರ್ಚೆಗೆ ಕರೆದರೆ ನಾನು ಸಿದ್ಧನಿದ್ದೇನೆ.ನಾವು ಯಾವ ಕಾರಣಕ್ಕಾಗಿ ಪಾಠವನ್ನು ಹಾಕಿದ್ದೇವೆ ಎಂಬುದನ್ನು ಸ್ಪಷ್ಟ ಕಾರಣವನ್ನು ನೀಡಿದ್ದೇವೆ. ಈಗ ತೆಗೆಯುವುದಕ್ಕೆ ಸ್ಪಷ್ಟವಾದ ಕಾರಣವನ್ನ ಕೊಟ್ಟಿದ್ದೇ ಆದರೆ ಅದರ ಬಗ್ಗೆ ನಮ್ಮದೇನು ಆಕ್ಷೇಪ ಇಲ್ಲ ಎಂದರು.
ಯಾವುದೇ ರೀತಿಯ ಚರ್ಚೆಗೆ ನಾನು ಸಿದ್ಧನಿದ್ದೇನೆ. ಇಂದಿನ ಅಧ್ಯಕ್ಷರ ಹಾಗೆ ನಾವು ನುಣಚಿಕೊಳ್ಳುವುದಾಗಲಿ, ಓಡಿಹೋಗುವುದಾಗಲಿ ಮಾಡುವುದಿಲ್ಲ.ಅಥವಾ ಸುಮ್ಮನಿರುವುದಾಗಲಿ, ಮೌನ ವಹಿಸುವುದಾಗಲಿ ಮಾಡುವುದಿಲ್ಲ. ಯಾವುದೇ ವೇದಿಕೆಯಾದರೂ ನಾನು ಚರ್ಚೆಯಲ್ಲಿ ಭಾಗವಹಿಸುತ್ತೇನೆ. ಅದು ಪ್ರಜಾಪ್ರಭುತ್ವದ ರೀತಿಯಲ್ಲಿ ಸರ್ಕಾರದ ಕಡೆಯಿಂದ ನಡೆದರೆ ಯಾವುದೇ ಅಭ್ಯಂತರ ಇಲ್ಲ ಎಂದರು.
ಬಿಜೆಪಿ ಸರಕಾರದ ಅವಧಿಯಲ್ಲಿ ಪಠ್ಯ ಪರಿಷ್ಕರಣೆ ಸಮಿತಿಯಲ್ಲಿ ರೋಹಿತ್ ಚಕ್ರತೀರ್ಥ ಅವರಿದ್ದರು. ಈ ಬಗ್ಗೆ ವ್ಯಾಪಕ ವಿರೋಧವೂ ವ್ಯಕ್ತವಾಗಿತ್ತು.