Advertisement

Test Series: ಭಾರತ-ಬಾಂಗ್ಲಾ ತಂಡಗಳಿಗೆ ರಿಯಲ್‌ ಟೆಸ್ಟ್‌

11:08 PM Sep 18, 2024 | Team Udayavani |

ಚೆನ್ನೈ: ಸಾಮಾನ್ಯವಾಗಿ ಭಾರತ- ಬಾಂಗ್ಲಾದೇಶ ನಡುವಿನ ಟೆಸ್ಟ್‌ ಸರಣಿಯೆಂದರೆ ಅದು ಏಕಪಕ್ಷೀಯವಾಗಿರುತ್ತದೆ, ಭಾರತವೇ ಇಲ್ಲಿ ಮೇಲುಗೈ ಸಾಧಿಸುತ್ತದೆ ಎಂಬ ನಂಬಿಕೆ ಇದ್ದ ಕಾಲವೊಂದಿತ್ತು. ಇದಕ್ಕೆ ಇತಿಹಾಸ, ಅಂಕಿಅಂಶಗಳೆಲ್ಲವೂ ಸಾಕ್ಷಿ ಆಗಿರುತ್ತಿದ್ದವು. ಈಗಲೂ ಅಂಕಿಅಂಶಗಳೆಲ್ಲ ಟೀಮ್‌ ಇಂಡಿಯಾ ಪರವಾಗಿಯೇ ಇದೆ. ಆದರೂ ಗುರುವಾರ ಚೆನ್ನೈಯಲ್ಲಿ ಆರಂಭವಾಗಲಿರುವ ಟೆಸ್ಟ್‌ ಪಂದ್ಯದಲ್ಲಿ ಬಾಂಗ್ಲಾವನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಕಾರಣ, ಅದು ಪಾಕಿಸ್ಥಾನಕ್ಕೆ ಅವರದೇ ನೆಲದಲ್ಲಿ 2-0 ವೈಟ್‌ವಾಶ್‌ ಮಾಡಿ ಬಂದಿದೆ!

Advertisement

ಇದು 2 ಟೆಸ್ಟ್‌ ಹಾಗೂ 3 ಟಿ20 ಪಂದ್ಯಗಳ ಕಿರು ಸರಣಿ. ದ್ವಿತೀಯ ಟೆಸ್ಟ್‌ ಸೆ. 27ರಂದು ಕಾನ್ಪುರದಲ್ಲಿ ಆರಂಭವಾಗಲಿದೆ. ಚೆನ್ನೈ ಮತ್ತು ಕಾನ್ಪುರಗಳೆರಡೂ ಭಾರತದ ನೆಚ್ಚಿನ ಅಂಗಳಗಳು. ಆದರೆ ಕೇವಲ ಬಾಂಗ್ಲಾದೆದುರಿನ ಇತಿಹಾಸವನ್ನು ನಂಬಿ ಕೂರು ವಂತಿಲ್ಲ. ಈ ಟೈಗರ್‌ಗಳನ್ನು ಎಂದಿಗಿಂತ ಹೆಚ್ಚು ಎಚ್ಚರಿಕೆಯಿಂದ ನಿಭಾಯಿಸಬೇಕಾದುದು ಅಗತ್ಯ.

ಭಾರತದೆದುರಿನ ಈವರೆಗಿನ 13 ಟೆಸ್ಟ್‌ಗಳಲ್ಲಿ ಬಾಂಗ್ಲಾಕ್ಕೆ ಒಂದನ್ನೂ ಗೆಲ್ಲಲಾಗಿಲ್ಲ. 11ರಲ್ಲಿ ಅದು ಮುಗ್ಗರಿಸಿದೆ. 2 ಪಂದ್ಯಗಳು ಡ್ರಾಗೊಂಡಿವೆ. ಭಾರತದ ವಿರುದ್ಧ ಮೊದಲ ಸಲ ಗೆಲುವು ಸಾಧಿಸುವ ಗುರಿಯೊಂದಿಗೆ ಅದು ಹೋರಾಟ ಆರಂಭಿಸಲಿದೆ. ಹೀಗಾಗಿ ರೋಹಿತ್‌ ಪಡೆ ಹೆಚ್ಚು ಎಚ್ಚರದಿಂದ ಇರಬೇಕಿದೆ. ಹಾಗೆಯೇ ಕೋಚ್‌ ಗೌತಮ್‌ ಗಂಭೀರ್‌ ಪಾಲಿಗೂ ಇದು ಮೊದಲ “ಟೆಸ್ಟ್‌’ ಎಂಬುದನ್ನು ಮರೆಯುವಂತಿಲ್ಲ.

ನಿಂತು ಆಡಬೇಕಾದ ಸವಾಲು
ಭಾರತ ತನ್ನ ಕೊನೆಯ ಟೆಸ್ಟ್‌ ಸರಣಿಯನ್ನಾಡಿದ್ದು ವರ್ಷಾರಂಭದಲ್ಲಿ. ಪ್ರವಾಸಿ ಇಂಗ್ಲೆಂಡ್‌ ಎದುರಿನ ಮೊದಲ ಪಂದ್ಯವನ್ನು ಸೋತ ಬಳಿಕ ಸತತ 4 ಟೆಸ್ಟ್‌ ಗಳನ್ನು ಗೆದ್ದು ಮೆರೆದದ್ದು ಟೀಮ್‌ ಇಂಡಿಯಾ ಸಾಹಸಕ್ಕೊಂದು ಶ್ರೇಷ್ಠ ನಿದರ್ಶನವಾಗಿತ್ತು. ಅನಂತರ ಭಾರತ ಟಿ20 ಪಂದ್ಯಗಳನ್ನೇ ಹೆಚ್ಚೆಚ್ಚು ಆಡುತ್ತ ಬಂದಿತ್ತು. ಟಿ20ಯಲ್ಲಿ ವಿಶ್ವ ಚಾಂಪಿಯನ್‌ ಕೂಡ ಆಯಿತು. ಇದೀಗ ಟೆಸ್ಟ್‌ ಪಂದ್ಯಕ್ಕೆ ಹೊಂದಿಕೊಳ್ಳುವ, ನಿಂತು ಆಡುವ ಆಟದಲ್ಲಿ ತೊಡಗಿಸಿಕೊಳ್ಳುವ ಸಮಯ ಎದುರಾಗಿದೆ.

ಹಾಗೆಯೇ ಭಾರತದ ಪಾಲಿನ 10 ಟೆಸ್ಟ್‌ ಪಂದ್ಯಗಳ ಮ್ಯಾರಥಾನ್‌ಗೆ ಈ ಸರಣಿಯೇ ಮುನ್ನುಡಿಯಾಗಲಿದೆ. ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಅಗ್ರಸ್ಥಾನ ಅಲಂಕರಿಸಿರುವ ಟೀಮ್‌ ಇಂಡಿಯಾ, ಇದನ್ನು ಕಾಯ್ದುಕೊಂಡು ಮುನ್ನಡೆಯಬೇಕಾದ ಅಗತ್ಯವೂ ಇದೆ.

Advertisement

ತ್ರಿವಳಿ ಸ್ಪಿನ್‌ ದಾಳಿ
ಭಾರತ ಸ್ಪಿನ್‌ ತ್ರಿವಳಿಗಳನ್ನು ನೆಚ್ಚಿಕೊಂಡಿರುವ ತಂಡ. ಸ್ಥಳೀಯ ಹೀರೋ ಆರ್‌. ಅಶ್ವಿ‌ನ್‌, ರವೀಂದ್ರ ಜಡೇಜ, ಅಕ್ಷರ್‌ ಪಟೇಲ್‌ ಅಥವಾ ಕುಲದೀಪ್‌ ಯಾದವ್‌ ಈ ಜವಾಬ್ದಾರಿಯನ್ನು ನಿಭಾಯಿಸಲಿದ್ದಾರೆ. ವೇಗಕ್ಕೆ ಜಸ್‌ಪ್ರೀತ್‌ ಬುಮ್ರಾ ಇದ್ದಾರೆ. ಇವರಿಗೆ ಆಕಾಶ್‌ ದೀಪ್‌ ಜತೆಯಾಗಬಹುದು.

ಭಾರತದ ಬ್ಯಾಟಿಂಗ್‌ ಸರದಿ ರೋಹಿತ್‌, ಜೈಸ್ವಾಲ್‌, ಗಿಲ್‌, ಕೊಹ್ಲಿ, ರಾಹುಲ್‌ ಮತ್ತು ಪಂತ್‌ ಅವರನ್ನು ಒಳಗೊಂಡಿರುವ ಸಾಧ್ಯತೆ ಹೆಚ್ಚು. ಇವರಲ್ಲಿ ಪಂತ್‌ 632 ದಿನಗಳ ಬಳಿಕ ಟೆಸ್ಟ್‌ ಆಡಲಿಳಿಯುತ್ತಿದ್ದಾರೆ.

ಬ್ಯಾಟರ್‌ಗಳ ಫಾರ್ಮ್, ಅದರಲ್ಲೂ ಕೊಹ್ಲಿ ಫಾರ್ಮ್ ಭಾರತದ ಪಾಲಿಗೆ ನಿರ್ಣಾಯಕ ವಾಗಲಿದೆ. ಹಾಗೆಯೇ ಕ್ರೀಸ್‌ ಆಕ್ರಮಿಸಿಕೊಳ್ಳುವ ಜಾಣ್ಮೆಯೂ ಮುಖ್ಯವಾಗುತ್ತದೆ. ಚೆನ್ನೈ ಟ್ರ್ಯಾಕ್‌ ತಿರುವು ಪಡೆದದ್ದೇ ಆದಲ್ಲಿ ಅದು ಭಾರತಕ್ಕೂ ಸವಾಲಾಗಿ ಪರಿಣಮಿಸಬಹುದು.

ಏಕೆಂದರೆ, ಬಾಂಗ್ಲಾ ಕೂಡ ಮೇಲ್ದರ್ಜೆಯ ಸ್ಪಿನ್ನರ್‌ಗಳನ್ನು ಹೊಂದಿದೆ. ಶಕಿಬ್‌ ಅಲ್‌ ಹಸನ್‌, ತೈಜುಲ್‌ ಇಸ್ಲಾಮ್‌, ಮೆಹಿದಿ ಹಸನ್‌ ಮಿರಾಜ್‌ ಇವರಲ್ಲಿ ಪ್ರಮುಖರು. ಪಾಕಿಸ್ಥಾನವನ್ನು ಬಗ್ಗುಬಡಿಯುವಲ್ಲಿ ಇವರ ಪಾತ್ರ ಪ್ರಮುಖವಾಗಿತ್ತು. ಹಾಗೆಯೇ ನಾಹಿದ್‌ ರಾಣಾ ಮತ್ತು ಹಸನ್‌ ಮಹ್ಮದ್‌ ಅವರಂಥ ಎಕ್ಸ್‌ಪ್ರೆಸ್‌ ವೇಗಿಗಳಿದ್ದಾರೆ. ಬಾಂಗ್ಲಾ ಬೌಲಿಂಗ್‌ ಈ ಬಾರಿ ಹೆಚ್ಚು ಘಾತಕ.

ಬಾಂಗ್ಲಾದೇಶ ತನ್ನ “ವಿನ್ನಿಂಗ್‌ ಕಾಂಬಿನೇಶನ್‌’ ಬದಲಿಸುವ ಯಾವುದೇ ಸಾಧ್ಯತೆ ಇಲ್ಲ. ಪಾಕಿಸ್ಥಾನವನ್ನು ಮಣಿಸಿದ ಹನ್ನೊಂದರ ಬಳಗವೇ ಇಲ್ಲಿ ಕಣಕ್ಕಿಳಿಯುವುದು ಖಚಿತ. ಆರಂಭಕಾರ ಶದ್ಮಾನ್‌, ಅನುಭವಿ ಮುಶ್ಫಿಕರ್‌, ಲಿಟನ್‌ ದಾಸ್‌, ಮೊಮಿನುಲ್‌ ಜತೆಗೆ ಆಲ್‌ರೌಂಡರ್‌ ಮಿರಾಜ್‌ ಪ್ರಚಂಡ ಫಾರ್ಮ್ನಲ್ಲಿದ್ದಾರೆ.

ಇದು ಕೇವಲ 2 ಪಂದ್ಯಗಳ ಪುಟ್ಟ ಸರಣಿ ಯಾದರೂ ಕುತೂಹಲ ಮಾತ್ರ ಬೆಟ್ಟದಷ್ಟಿದೆ.

ತಂಡಗಳು
ಭಾರತ: ರೋಹಿತ್‌ ಶರ್ಮ (ನಾಯಕ), ಯಶಸ್ವಿ ಜೈಸ್ವಾಲ್‌, ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ, ಕೆ.ಎಲ್‌. ರಾಹುಲ್‌, ಸಫ‌ìರಾಜ್‌ ಖಾನ್‌, ರಿಷಭ್‌ ಪಂತ್‌, ಧ್ರುವ ಜುರೆಲ್‌, ಆರ್‌. ಅಶ್ವಿ‌ನ್‌, ರವೀಂದ್ರ ಜಡೇಜ, ಅಕ್ಷರ್‌ ಪಟೇಲ್‌, ಕುಲದೀಪ್‌ ಯಾದವ್‌, ಮೊಹಮ್ಮದ್‌ ಸಿರಾಜ್‌, ಆಕಾಶ್‌ ದೀಪ್‌, ಜಸ್‌ಪ್ರೀತ್‌ ಬುಮ್ರಾ, ಯಶ್‌ ದಯಾಳ್‌.

ಬಾಂಗ್ಲಾದೇಶ: ನಜ್ಮುಲ್‌ ಹುಸೇನ್‌ ಶಾಂತೊ (ನಾಯಕ), ಮಮಹ್ಮದುಲ್ಲ ಹಸನ್‌ ಜಾಯ್‌, ಝಾಕಿರ್‌ ಹಸನ್‌, ಶದ್ಮನ್‌ ಇಸ್ಲಾಮ್‌, ಮೊಮಿನುಲ್‌ ಹಕ್‌, ಮುಶ್ಫಿಕರ್‌ ರಹೀಂ, ಶಕಿಬ್‌ ಅಲ್‌ ಹಸನ್‌, ಲಿಟನ್‌ ಕುಮಾರ್‌ ದಾಸ್‌, ಮೆಹಿದಿ ಹಸನ್‌ ಮಿರಾಜ್‌, ತೈಜುಲ್‌ ಇಸ್ಲಾಮ್‌, ನಯೀಮ್‌ ಹಸನ್‌, ನಾಹಿದ್‌ ರಾಣಾ, ಹಸನ್‌ ಮಹ್ಮದ್‌, ತಸ್ಕೀನ್‌ ಅಹ್ಮದ್‌, ಸಯ್ಯದ್‌ ಖಲೀದ್‌ ಅಹ್ಮದ್‌, ಜಾಕರ್‌ ಅಲಿ ಅನಿಕ್‌.

Advertisement

Udayavani is now on Telegram. Click here to join our channel and stay updated with the latest news.

Next