Advertisement

ಉಗ್ರ ದಮನ; ಬದಲಾವಣೆಯ ಹಾದಿಯಲ್ಲಿ

11:41 AM Jun 10, 2020 | mahesh |

ಕಾಶ್ಮೀರದಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ನಮ್ಮ ಭದ್ರತಾಪಡೆಗಳಿಗೆ ಅಭೂತಪೂರ್ವ ಯಶಸ್ಸು ದೊರೆಯುತ್ತಿದೆ. ಶೋಪಿಯಾ ಪ್ರದೇಶದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಹಿಜ್ಬುಲ್‌ ಮುಜಾಹಿದ್ದೀನ್‌ ಉಗ್ರ ಸಂಘಟನೆಯ 9 ಉಗ್ರರು ಹತರಾಗಿದ್ದಾರೆ. ಅದರಲ್ಲೂ ಮೋಸ್ಟ್‌ ವಾಂಟೆಡ್‌ ಉಗ್ರ, ಹಿಜ್ಬುಲ್‌ನ ಕಮಾಂಡರ್‌ ಫಾರೂಕ್‌ ಅಹ್ಮದ್‌ ಭಟ್‌ನ ಸಾವು ನಮ್ಮ ಭದ್ರತಾಪಡೆಗಳ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದ್ದರೆ, ಉಗ್ರವಾದಿ ಸಂಘಟನೆಗಳ ಹಾಗೂ ಅವುಗಳ ಪೋಷಕ ದೇಶವಾದ ಪಾಕಿಸ್ಥಾನದ ಮನೋಬಲ ಕುಸಿದಿರಲಿಕ್ಕೂ ಸಾಕು.

Advertisement

ಕಳೆದ ಕೆಲವು ಸಮಯದಿಂದ ಭಾರತೀಯ ಸೈನಿಕರು ಹಾಗೂ ಗುಪ್ತಚರ ಇಲಾಖೆಗಳ ಸಕ್ಷಮ ಸಹಭಾಗಿತ್ವದಿಂದಾಗಿ ಕಣಿವೆಯಲ್ಲಿ ಆತಂಕವಾದದ ವಿರುದ್ಧ ಭಾರೀ ಯಶಸ್ಸು ಪ್ರಾಪ್ತವಾಗುತ್ತಿದೆ. ಗಮನಾರ್ಹ ಸಂಗತಿಯೇನೆಂದರೆ, ಉಗ್ರ ಬುರ್ಹಾನ್‌ ವಾನಿಯನ್ನು ಹೊಡೆದುರುಳಿಸಿದ ಅನಂತರ ಕಾಶ್ಮೀರದಲ್ಲಿ ಅನೇಕ ಉಗ್ರ ಸಂಘಟನೆಗಳು ತಮ್ಮ ಬಾಹುಗಳನ್ನು ವಿಸ್ತರಿಸಲು ಪ್ರಯತ್ನಿಸುತ್ತಲೇ ಇವೆಯಾದರೂ ಭಾರತೀಯ ಸೇನೆ ಅವುಗಳ ಪ್ರಯತ್ನವನ್ನು ಕತ್ತರಿಸಿಹಾಕುತ್ತಿದೆ. ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದು, ಅದನ್ನು ಕೇಂದ್ರಾಡಳಿತ ಪ್ರದೇಶವಾಗಿಸಿದ ಅನಂತರದಿಂದ ಅಲ್ಲಿ ಸ್ಥಿತಿ ಬಹಳಷ್ಟು ಸುಧಾರಿಸಿದೆ.

ಬಹುದಿನಗಳ ಕಾಲ ಕರ್ಫ್ಯೂ ಜಾರಿಯಲ್ಲಿದ್ದ ಕಾರಣ ಭದ್ರತಾ ಪಡೆ, ಪೊಲೀಸರು, ಗುಪ್ತಚರ ಸಂಸ್ಥೆಗಳಿಗೆ ಪ್ರಬಲ ಉಗ್ರ ವಿರೋಧಿ ಕಾರ್ಯಾಚರಣೆಗಳನ್ನು ನಡೆಸಲು, ತಂತ್ರ ರೂಪಿಸಲು ಸಾಧ್ಯವಾಗಿದೆ. ಇನ್ನು ಅನೇಕ ಪ್ರತ್ಯೇಕತಾವಾದಿ ನಾಯಕರ ಚಲನವಲನಕ್ಕೂ ಬ್ರೇಕ್‌ ಬಿದ್ದಿರುವುದರಿಂದಾಗಿ ಕಣಿವೆ ಪ್ರಾಂತ್ಯದಲ್ಲಿ  ಪ್ರತ್ಯೇಕತೆಯ ಕೂಗೂ ತಗ್ಗುತ್ತಿದೆ. ಪ್ರತ್ಯೇಕತಾವಾದಿಗಳು ಹಾಗೂ ಉಗ್ರರಿಂದ ಬ್ರೇನ್‌ವಾಶ್‌ ಆಗಿ ಬಂದೂಕು ಕೈಗೆತ್ತಿಕೊಳ್ಳುತ್ತಿದ್ದ ಯುವಕರನ್ನು ಸರಿದಾರಿಗೆ ತರುವ ಕೆಲಸಕ್ಕೂ ಕೇಂದ್ರ ಸರಕಾರ ವೇಗ ನೀಡಿದೆ.

ಅಭಿವೃದ್ಧಿ, ಉದ್ಯೋಗ ಸೃಷ್ಟಿಯ ಮೂಲಕ ಜನರಿಗೆ ಬದುಕಿನ ದಾರಿ ಕಲ್ಪಿಸುವ ಮಹತ್ತರ ಉದ್ದೇಶದೊಂದಿಗೆ ನಮ್ಮ ವ್ಯವಸ್ಥೆ ಪ್ರಬಲ ಹೆಜ್ಜೆ ಇಡುತ್ತಿದೆ. ಇದೇನೇ ಇದ್ದರೂ, ಆರ್ಟಿಕಲ್‌ 370 ಹಿಂಪಡೆದು ಜಮ್ಮು- ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವಾಗಿಸಿದ ನಂತರದಿಂದ ಪಾಕಿಸ್ಥಾನ ಸರಕಾರ ಹಾಗೂ ಪಾಕ್‌ ಸೇನೆಯು ಭಾರತದ ವಿರುದ್ಧ ಭುಸುಗುಡುತ್ತಿವೆ. ಈ ಕಾರಣದಿಂದಾಗಿಯೇ ಅವು ನಿರಂತರವಾಗಿ ಉಗ್ರರನ್ನು ಒಳನುಸುಳಿಸುವ ಪ್ರಯತ್ನದಲ್ಲಿ ತೊಡಗಿವೆ. ಗಡಿಯಾಚೆಯಿಂದ ಪ್ರತಿನಿತ್ಯ ಅಪ್ರಚೋದಿತ ಗುಂಡಿನ ದಾಳಿಗಳು ವರದಿಯಾಗುತ್ತಲೇ ಇವೆ. ಆದರೆ ಈ ದಾಳಿಗಳು ಹಾಗೂ ತಂತ್ರಗಳೆಲ್ಲ ಪಾಕಿಸ್ಥಾನದ ಪರದಾಟದ ಪ್ರತಿಫ‌ಲನವಷ್ಟೇ.

ಜಮ್ಮು-ಕಾಶ್ಮೀರದಲ್ಲಿ ದಶಕಗಳಿಂದ ನಿರ್ವಿಘ್ನವಾಗಿ ತಮ್ಮ ಕುಕೃತ್ಯಗಳನ್ನು ಮೆರೆಯುತ್ತಾ ಬಂದಿದ್ದ ಪಾಕಿಸ್ಥಾನಕ್ಕೆ ಭಾರತ ಬಹುದೊಡ್ಡ ಆಘಾತವನ್ನೇ ನೀಡುತ್ತಿದೆ. ಈಗ ಭಾರತ ಸರಕಾರ ಆ ಪ್ರದೇಶದಲ್ಲಿ ವೇಗವಾಗಿ ಕೈಗೊಳ್ಳುತ್ತಿರುವ ಸುಧಾರಣಾ ಕಾರ್ಯಗಳು ಹಾಗೂ ನಮ್ಮ ಭದ್ರತಾಪಡೆಗಳು ಮೆರೆಯುತ್ತಿರುವ ಪರಾಕ್ರಮಗಳನ್ನು ಪರಿಗಣಿಸಿದಾಗ ಕೆಲವೇ ದಿನಗಳಲ್ಲೇ ಕಾಶ್ಮೀರದಲ್ಲಿ ಪಾಕ್‌ನ ಕಳ್ಳಾಟಗಳೆಲ್ಲ ನಿಲ್ಲುವ ಆಶಾದಾಯಕ ಸಂದೇಶ ಸಿಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next