Advertisement

Terdal: ಎಲ್ಲದಕ್ಕೂ ಶಿಕ್ಷಣ ಪ್ರಗತಿಯೆ ಮೂಲಾಧಾರ-ಸವದಿ

04:30 PM Dec 19, 2023 | Team Udayavani |

ತೇರದಾಳ: ಸರ್ವ ಪ್ರಗತಿಗೂ ಶಿಕ್ಷಣವೇ ಮೂಲಾಧಾರ ಎಂದರಿತಿರುವ ಇಂದಿನ ಪಾಲಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವತ್ತ ಎಂಥದೇ ಬಡತನದ ನಡುವೆಯೂ ಶ್ರಮಿಸುತ್ತಿದ್ದಾರೆ ಎಂದು ಶಾಸಕ ಸಿದ್ದು
ಸವದಿ ಹೇಳಿದರು.

Advertisement

ಪಟ್ಟಣದ ಜಿನಸೇನಾಚಾರ್ಯ ಸಭಾಭವನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ, ಕ್ಷೇತ್ರ ಸಮನ್ವಯಾಧಿಕಾರಿ ಕಾರ್ಯಾಲಯ, ಶ್ರೀ ಜಿನಸೇನಾಚಾರ್ಯ ವಿದ್ಯಾಮಂಡಳ ತೇರದಾಳ ಮತ್ತು ಕನ್ನಡ ಸಾಹಿತ್ಯ ಪರಿಷತ್‌ ಆಶ್ರಯದಲ್ಲಿ ಆಯೋಜಿಸಿದ್ದ ಕನ್ನಡ ಸಾಧಕರ ಅಭಿನಂದನಾ ಸಮಾರಂಭದಲ್ಲಿ ಎಸ್‌ಎಸ್‌ ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕ ಪಡೆದ ವಿದ್ಯಾರ್ಥಿಗಳಿಗೆ, ಕನ್ನಡ ಬೋಧಕರಿಗೆ ಕ್ರಮವಾಗಿ ಕನ್ನಡ ಕಣ್ಮಣಿ, ಕನ್ನಡ ರತ್ನ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಾಗಿದ್ದಾಗ ಇದ್ದ ಶಿಕ್ಷಣ ಕ್ಷೇತ್ರದಲ್ಲಿನ ಗುಣಮಟ್ಟತೆ ಇಂದು ಉನ್ನತ ದರ್ಜೆಗೇರಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗುಣಮಟ್ಟದ ವಿಶ್ವದರ್ಜೆಯ ಶಿಕ್ಷಣ ನೀಡಿ ನಮ್ಮ ಪ್ರತಿಭೆಗಳು ಪ್ರಪಂಚದ ಯಾವುದೇ ಮಕ್ಕಳಿಗೂ ಕಡಿಮೆಯಿಲ್ಲದಂತೆ ನೋಡಿಕೊಳ್ಳುತ್ತಿವೆ. ಅರ್ಹತಾ ಪರೀಕ್ಷೆಗಳ ಮೂಲಕ ನೇಮಕವಾಗುತ್ತಿರುವ ಪ್ರತಿಭಾವಂತ ಶಿಕ್ಷಕರಿಂದಲೂ ಇಂದು ಶಿಕ್ಷಣ ಕ್ಷೇತ್ರದಲ್ಲಿ ದಾಖಲೆಯ ಸಾಧನೆ ಮೂಡಲು ಕಾರಣವಾಗುತ್ತಿದೆ ಎಂದರು.

ಭಾರತ ವಿಶ್ವಗುರುವಾಗುವತ್ತ ಸದೃಢ ಹೆಜ್ಜೆಗಳನ್ನಿಡಲು ನಮ್ಮಲ್ಲಿನ ಶಿಕ್ಷಣದ ಪ್ರಸರಣತೆಯೇ ಕಾರಣವಾಗಿದೆ. ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ಇಲಾಖೆ, ಶಿಕ್ಷಕರು ನೋಡಿಕೊಳ್ಳಬೇಕು. ಶಿಕ್ಷಕರು ರಾಜಕೀಯ ಮಾಡದೇ ಪ್ರಾಮಾಣಿಕವಾಗಿ ಬೋಧನೆಯತ್ತ ತೊಡಗಬೇಕು. ದೇಶ ಇಂದು ಸಂಪೂರ್ಣ ಸಾಕ್ಷರತೆ ಸಾಧಿಸುವತ್ತ ದಾಪುಗಾಲಿಡುತ್ತಿದೆ. ಸರ್ಕಾರದ ಸೌಲಭ್ಯಗಳು ಬಡವರಿಗೆ ದೊರೆತು ಅವರೂ ಮುಖ್ಯ ಪ್ರವಾಹಿನಿಯಲ್ಲಿ ತೊಡಗುವತ್ತ ಎಲ್ಲರೂ ಶ್ರಮಿಸಬೇಕು ಎಂದು ಶಾಸಕರು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ರಬಕವಿಯ ಶ್ರೀ ಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ದೇಶ್ವರ ಶ್ರೀ ಮಾತನಾಡಿ, ದೇಶದೆಲ್ಲೆಡೆ ಶಿಕ್ಷಣಕ್ಕೆ ಪ್ರಾತಿನಿಧ್ಯತೆ ಸಿಗುತ್ತಿದೆ. ವಿಶ್ವಮಟ್ಟದಲ್ಲಿ ಸಾಧನೆ ಮೆರೆಯುವ ಪ್ರತಿಭೆಗಳನ್ನು ಭಾರತ ನಿರಂತರವಾಗಿ ನೀಡುತ್ತಲೇ ಬಂದಿದೆ. ಜ್ಞಾನದ ಬರ ಈ ದೇಶಕ್ಕೆ ಎಂದಿಗೂ ಬಂದಿಲ್ಲ. ಜ್ಞಾನ, ವಿಜ್ಞಾನಗಳ ಮಿಶ್ರಣವೇ ಭಾರತೀಯರ ಪ್ರಾಚೀನ ಶಿಕ್ಷಣದ ಮೂಲದ್ರವ್ಯವಾಗಿದೆ. ಆಧುನಿಕತೆಯ ಸ್ಪರ್ಶದಲ್ಲಿ ಮತ್ತು ಮೂಲಭೂತ ಸೌಕರ್ಯಗಳ ಹೆಚ್ಚಳದಿಂದ ಇಂದಿನ ಮಕ್ಕಳು ಕಲಿಕೆಯಲ್ಲಿ ಮುಂದಿದ್ದಾರೆ. ನಾವು ಎಷ್ಟೇ ವಿದ್ಯಾವಂತರಾದರೂ ಭಾರತಮಾತೆಯ ಅಭಿಮಾನವನ್ನು ವಿಶ್ವದೆಲ್ಲೆಡೆ ಪ್ರದರ್ಶಿಸಬೇಕೇ ಹೊರತು ದೇಶಕ್ಕೆ ಮಾರಕರಾಗುವತ್ತ ಜ್ಞಾನ ಬಳಸಬಾರದು ಎಂದರು.

Advertisement

ಮಾತೃಭಾಷೆಯಲ್ಲಿ ಗರಿಷ್ಠ ಅಂಕ ಪಡೆದ ಮಕ್ಕಳನ್ನು ಮತ್ತು ಶಿಕ್ಷಕರನ್ನು ಸನ್ಮಾನಿಸುವ ಪರಂಪರೆಗೆ ನಾಂದಿ ಹಾಡಿದ್ದು, ಮುಂದೆಯೂ ಇದೇ ಸಾಧನೆ ಮಕ್ಕಳಿಂದ ಮೂಡಿ ಬರಲೆಂದು ಆಶೀರ್ವಚನ ನೀಡಿದರು. ಬಿಇಒ ಅಶೋಕ ಬಸಣ್ಣವರ ಮಾತನಾಡಿ, ಕಳೆದ ವರ್ಷದ ಸಾಧನೆ ಮೆಚ್ಚುವಂತದ್ದಾಗಿದೆ. ಈ ಬಾರಿಯೂ 625ಕ್ಕೆ 625 ಅಂಕ ಪಡೆಯುವ ನಿಟ್ಟಿನಲ್ಲಿ ಮಕ್ಕಳಿಗೆ ಶಿಕ್ಷಕರು ಮಾರ್ಗದರ್ಶನ ನೀಡುತ್ತಿದ್ದಾರೆ.

ಉತ್ಸಾಹದಿಂದ ಕಾರ್ಯ ನಿರ್ವಹಿಸಿದರೆ ಎಲ್ಲವೂ ಸಾಧ್ಯ ಎಂದರು. ಶಿಕ್ಷಣ ಸಂಯೋಜಕ, ಎಸ್‌ಎಸ್‌ಎಲ್‌ಸಿ ನೋಡಲ್‌ ಅ ಧಿಕಾರಿ ಶ್ರೀಶೈಲ ಬುರ್ಲಿ ಪ್ರಾಸ್ತಾವಿಕ ಮಾತುಗಳಾಡಿ, ಅವಿಭಜಿತ ಜಮಖಂಡಿ ತಾಲೂಕಲ್ಲಿ ಒಟ್ಟು 229 ಮಕ್ಕಳು ಗರಿಷ್ಠ ಅಂಕ ಪಡೆದುಕೊಂಡಿದ್ದರೆ, ರಬಕವಿ-ಬನಹಟ್ಟಿ ಹಾಗೂ ತೇರದಾಳ ತಾಲೂಕಿನ 121 ಮಕ್ಕಳು ಗರಿಷ್ಠ ಸಾಧನೆ ಮೆರೆದಿದ್ದಾರೆ. ಒಟ್ಟು 31 ಶಾಲೆಗಳ 34 ಕನ್ನಡ ವಿಷಯ ಬೋಧಕರಿಗೆ ಗುರುಮಾತೆ ಡಾ| ಶಾರದಾ ಮುಳ್ಳೂರ ತಲಾ ಒಂದು ಸಾವಿರ ನಗದು ಬಹುಮಾನ ನೀಡಿ ಮುಂದಿನ ಬಾರಿಯೂ ಇನ್ನಷ್ಟು ಶೈಕ್ಷಣಿಕ ಸಾಧನೆ ಮೆರೆಯಲೆಂದು ಉತ್ತೇಜಿಸಿದ್ದಾರೆಂದರು.

ಜೆವ್ಹಿ ಮಂಡಳದ ಡಿ.ಆರ್‌. ಪಾಟೀಲ, ಡಾ| ಜೆ.ಬಿ. ಆಲಗೂರ, ಸುರೇಶ ಅಕಿವಾಟ, ಮಹಾವೀರ ಕೊಕಟನೂರ, ರಮೇಶ ಅವಟಿ, ಪ್ರವೀಣ ನಾಡಗೌಡ, ಎಂ.ಪಿ. ಅಸ್ಕಿ, ಪಿ.ಜಿ. ಹಟ್ಟಿ, ಪಿ.ಡಿ. ಬದನಿಕಾಯಿ, ಬಿ.ಎಸ್‌. ಕಡಕೋಳ, ಬಾಬಾಗೌಡ ಪಾಟೀಲ, ಎಸ್‌. ಎಂ. ಹರಗೆ, ಡಿ.ಬಿ. ಪಾಟೀಲ ಮುಂತಾದವರಿದ್ದರು.ಇದೇ ಸಂದರ್ಭದಲ್ಲಿ ಶಿಕ್ಷಕ-ಸಾಹಿತಿ ಡಾ.ರೇವಣಸಿದ್ದಪ್ಪ ಗೌಡರ ಬರೆದ ಬ್ರಾಂಡೆಡ್‌
ಆತ್ಮಗಳು, ಲೋಕಲ್‌ ಆತ್ಮಗಳು ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಎಸ್‌.ಎನ್‌.ಹೆಬ್ಟಾಳೆ ಗುರುಮಾತೆ ಸ್ವಾಗತಿಸಿದರು. ಕೆ.ಎ. ಸಾವಂತನವರ ನಿರೂಪಿಸಿದರು. ಎಂ.ಬಿ.ಯಾತಗಿರಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next